ಕೊಪ್ಪಳ: ರೇಷ್ಮೆ ಕೃಷಿಯ ಗುರಿ-ಸಮೃದ್ಧಿಗೆ ದಾರಿ ಎಂಬ ವಿಷಯದಡಿ ಕೊಪ್ಪಳದಲ್ಲಿ ರೇಷ್ಮೆ ಕೃಷಿ ಮೇಳವನ್ನು ಆಯೋಜನೆ ಮಾಡಲಾಗಿದ್ದು, ರೇಷ್ಮೆ ಕೃಷಿಯತ್ತ ಗಮನ ಸೆಳೆಯುವಂತ ಕೆಲಸವಾಗಬೇಕು ಎಂದು ಮೇಳದಲ್ಲಿ ಕರೆ ನೀಡಲಾಯಿತು.
ಭಾರತ ಸರ್ಕಾರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಕೇಂದ್ರ ರೇಷ್ಮೆ ಮಂಡಳಿ, ಜವಳಿ ಸಚಿವಾಲಯ ಮೈಸೂರು ಮತ್ತು ಕರ್ನಾಟಕ ಸರ್ಕಾರದ ರೇಷ್ಮೆ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಒಂದು ದಿನದ ರೇಷ್ಮೆ ಕೃಷಿ ಮೇಳವನ್ನು ಆಯೋಜನೆ ಮಾಡಲಾಗಿತ್ತು.
ರೇಷ್ಮೇ ಮೇಳ ಉದ್ಘಾಟಿಸಿ ಮಾತನಾಡಿದ ಕೊಪ್ಪಳ ನಗರಸಭೆ ಅಧ್ಯಕ್ಷ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ, “ಸುಸ್ಥಿರ ಕೃಷಿಗಳಲ್ಲಿ ಒಂದಾಗಿರುವ ರೇಷ್ಮೆ ಕೃಷಿಯಿಂದ ರೈತರಿಗೆ ನಿಶ್ಚಿತ ಆದಾಯ ದೊರೆಯುತ್ತದೆ. ರೈತರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ರೇಷ್ಮೆ ಕೃಷಿಯು ನೆರವಾಗಲಿದೆ” ಎಂದರು.
ಈ ಮೇಳದಲ್ಲಿ ‘ರೇಷ್ಮೆ ಹುಳುಗಳಲ್ಲಿ ರೋಗ ನಿರ್ವಹಣೆ’, ‘ಮಣ್ಣಿನ ಆರೋಗ್ಯ ಮತ್ತು ಫಲವತ್ತತೆಯ ನಿರ್ವಹಣೆ’ ಸೇರಿದಂತೆ ವಿವಿಧ ಮಾಹಿತಿಯ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಕೃಷಿ ಮೇಳದಲ್ಲಿ ಭಾಗವಹಿಸಿದ ರೇಷ್ಮೆ ಬೆಳೆಗಾರರೊಂದಿಗೆ ವಿಜ್ಞಾನಿಗಳು ಸಂವಾದ ನಡೆಸಿ ಕೃಷಿಯ ಹೊಸ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡಲಾಯಿತು.
ವಸ್ತು ಪ್ರದರ್ಶನ ರೇಷ್ಮೆ ಕೃಷಿಗಾಗಿ ರೈತರ ಅನುಕೂಲಕ್ಕಾಗಿ ಇಲಾಖೆಯಿಂದ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನಗಳ ಬಗ್ಗೆ, ರೇಷ್ಮೆ ಕೃಷಿ ಉತ್ಪನ್ನಗಳು, ಉಪಕರಣಗಳು, ಸಲಕರಣೆಗಳು ಹಾಗೂ ಮಾಹಿತಿ ಫಲಕಗಳನ್ನು ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ವಿವಿಧ ಜಿಲ್ಲೆಯ ರೇಷ್ಮೆ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಮೇಳಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡರು.