ಅಜ್ಜಿ…..!ಮೊಮ್ಮಕ್ಕಳ ಪೊರೆಯುತ್ತಾ, ತನ್ನದೇ ಬದುಕಿನನುಭವವ ಹೇಳುವ ಹಿರಿಜೀವ. ಯಾವ ಕಾಲಕ್ಕೆ ಯಾವ ಕಥೆ ಹೇಳಿ ಬದುಕ ಸ್ಥಿರವಾಗಿರಿಸಬೇಕೆಂಬಂತೆ, ಅವಳ ಅನುಭವದ ಕಥೆಯ ಪಾತ್ರಗಳ ನಿಡುಸುಯ್ಯುವಿಕೆ, ಅವಳದೇ ನುಡಿಗಟ್ಟು, ಹಾರೈಕೆ, ಪ್ರೀತಿ, ಕಾಳಜಿ, ಮಮತೆ, ಅವಳನ್ನೇ ಕಣ್ತುಂಬಿಕೊಂಡು ಕೇಳುವ ಮನೋಭಾವವನ್ನು ಅವಳೇ ಕಲಿಸಿ ಬಿಡುತ್ತಾಳೆ ಮೊಮ್ಮಕ್ಕಳಿಗೆ.
ಅವಳಿಗೆ ಕುದಿಯುವಿಕೆಯ ಬಗ್ಗೆ ಗೊತ್ತಿತ್ತು, ಹದವಾಗಿ ಒಲೆ ಉರಿಸುವುದು ಕುದಿಯುವಿಕೆಗಷ್ಟೇ, ಹಾಲು ಉಕ್ಕಿದರೆ ಉರಿಯುವ ಒಲೆ ನಂದುತ್ತದೆ ಎಂಬಂತೆ, ಅವಳು ಅದನ್ನು ನಿಭಾಯಿಸುವ ರೀತಿಗೆ ಬೆರಗು ಗಣ್ಣಲ್ಲಿ ನೋಡುತ್ತಿದ್ದದ್ದು, ಹೊಟ್ಟೆಗೆ ದಿನಕ್ಕೊಂದು ರುಚಿಯ ನೈವೇದ್ಯ. ಏನಿಲ್ಲದಿದ್ದರು ಅಟ್ಟದಲ್ಲಿನ ಅವಳ ವರ್ಷದ ಮಿಡಿ ಉಪ್ಪಿನಕಾಯಿ ಸ್ವಾದ ಹದಗೆಟ್ಟಿದ್ದು ಚರಿತ್ರೆಯಲ್ಲಿಯೇ ಇಲ್ಲ.
ತನ್ನಿಂದ ಇತರರಿಗೆ ಸಹಾಯ ಆಗುವಂತ ಎಲ್ಲಾ ಕೆಲಸವನ್ನು ಶ್ರದ್ಧೆಯಿಂದ, ತಾಳ್ಮೆಯಿಂದ ಮಾಡಿ ಮುಗಿಸುವ ಅಜ್ಜಿಯು ತಮ್ಮ ದುಗುಡವನ್ನು ಬತ್ತಿ ಹೊಸೆದು ನಿರಾಳವಾಗಿಸಿಕೊಳ್ಳುವಿಕೆ, ಅವರ ಭಾವ ಸಂಘರ್ಷವನ್ನು ನೀವು ಓದಿಯೇ ತಿಳಿಯಬೇಕು. ಅಜ್ಜಿ ಎಂಬ ಬೆಚ್ಚಗಿನ ಮಡಿಲು ಚಂದವೆಂಬಂತೆ, ಸೂಲುಗಿತ್ತಿಯ ಕಾಯಕವನ್ನು ಅವಳಷ್ಟು ಸಲೀಸಾಗಿ ಯಾವ ಡಾಕ್ಟರ್ ಸಹ ಮಾಡಿಸಲಾಗದು, ಎಂಬುದನ್ನು ಬಾಣಂತನ ಲೇಖನದಲ್ಲಿ ಬಿಂಬಿಸಿರುವ ರೀತಿಯು ಬಲು ಮನೋಜ್ಞವಾಗಿದೆ.
ಅನನ್ಯ ಬದುಕಿನ ಗಮ್ಯತೆಯನ್ನು ಒಳಗೊಂಡಂತೆ ಇಲ್ಲಿ ಪ್ರಸ್ತಾಪವಾಗಿರುವ ಒಟ್ಟು 24 ಲೇಖನಗಳು ಲೇಖಕಿಯರ ಅನುಭವಾಗಿರುತ್ತದೆ ಮತ್ತು ಓದುವ ಪ್ರತಿಯೊಬ್ಬರಿಗೂ ಬಾಲ್ಯ ಮರುಕಳಿಸುತ್ತದೆ. ದಿನದಲ್ಲಿ 24 ಗಂಟೆಯಂತೆ ಅಜ್ಜಿ ಮತ್ತು ಮೊಮ್ಮಗಳಲ್ಲಿ ಎಂದರೆ ಲೇಖಕಿಯ ಸಂಭಾಷಣೆ, ಅವರ ಸಂಸ್ಕಾರ, ಆಚಾರ ವಿಚಾರವಂತಿಕೆಯು ಮಲೆನಾಡಿನ ಪರಿಸರ ರೂಪಕತೆಯನ್ನು ಬಿಂಬಿಸುತ್ತದೆ. ಸಮಯದೊಳಗಿನ ಅವಳ ನಿರಂತರತೆಯ ಬಗ್ಗೆ ಅಚ್ಚರಿ ಉಂಟಾಗುತ್ತದೆ.
ಇಲ್ಲಿ ನಂಬಿಕೆ, ಆಚರಣೆ ಪೂಜೆ ಪುನಸ್ಕಾರ ವ್ರತ ರಾಮನಾಮ ಪಠಣ ಎಲ್ಲವನ್ನು ವಿವರಿಸುವ ರೀತಿಯ ಬಗೆಯಲ್ಲಿ ಮನಸ್ಸು ನಿರುಮ್ಮತೆಯಿಂದ ನಿರ್ಮಲಗೊಳ್ಳುತ್ತದೆ. ಅಸಹಾಯಕತೆಯಲ್ಲಿ ನಿಡುಸುಯ್ಯತ್ತಿದ್ದ ಅಜ್ಜಮ್ಮನ ಬದುಕಿನ ಚಹರೆಯನ್ನು ತಮ್ಮ ಅನುಭವದಲ್ಲಿ ಲೇಖಕಿಯು ಅಜ್ಜಮ್ಮನನ್ನು ಜೀವಿಸಿ ವ್ಯಾಖ್ಯಾನಿಸಿದ್ದಾರೆ. ಇದೊಂದು ಅನುಭೂತಿಗೆ ದೊರೆಯುವ, ಪ್ರತಿಯೊಂದು ಅಜ್ಜಿ ಮತ್ತು ಮೊಮ್ಮಗಳ ಅನುಭವದ ಸಾರವಾಗಿ ಒಡಮೂಡುತ್ತದೆ.
ಇದು ಕೇವಲ ಮಲೆನಾಡಿಗೆ ಸೀಮಿತವಾಗದೆ, ಬಯಲು ಸೀಮೆಯಲ್ಲೂ ಅಜ್ಜಿ ಮೊಮ್ಮಕ್ಕಳ ಬಹುತೇಕ ಕಥೆಗಳು ಜೀವಿಸುವುದೇ ಹೀಗೆ. ಇದರ ಪ್ರತಿಯೊಂದು ಅನುಭವವು, ಅಟ್ಟದಲ್ಲಿ ಅಡಗಿಸಿಟ್ಟ ವಸ್ತುವಿನಂತೆ ಎದೆಯಲ್ಲಿ ಅಚ್ಚಾಗಿ ಯಾವ ಕಾಲಕ್ಕೆ ಏನು ಬೇಕು, ಆಗ ಬದುಕಿನ ತಿರುವಲ್ಲಿ ಸಿಕ್ಕುತ್ತಾ ದಕ್ಕುತ್ತಾ ಹೋಗುತ್ತದೆ, ಎಂಬಂತಹ ಬಾಹ್ಯ ವಿಚಾರಧಾರೆಯ ಸಮಗ್ರ ಚಿತ್ರಣ ಈ ಮಲೆನಾಡ ಅಜ್ಜಿ ಕೃತಿಯಲ್ಲಿ ಮೂಡಿ ಬಂದಿದೆ.
– ದೀಪಿಕಾ ಬಾಬು
ಮಾರಘಟ್ಟ