ಗಾಯಗೊಂಡ ಸಾಲುಗಳು ಕವನ ಸಂಕಲನವು ನಮ್ಮನ್ನು ಹಲವು ವಿಭಿನ್ನ ನೆಲೆಗಳಲ್ಲಿ ಒಳಹರಿವುಗಳ ಮೂಲಕ ವಿಚಾರಕ್ಕೆಡೆ ಮಾಡಿಕೊಡುತ್ತವೆ.ಇಲ್ಲಿ ಪ್ರತೀ ಕವನದ ಮೂಲಕ ನೇರವಾಗಿ ಕವಿ ಓದುಗನ ಎದೆಯೊಳಗೆ ಒಂದು ಅರಿವಿನ ಕಿಡಿಯನ್ನು ಬಿತ್ತುತ್ತಾರೆ.ಇಡೀ ಸಂಕಲನವನ್ನು ಓದಿ ಮುಗಿಸಿದಾಗ ಒಂದು ದೀರ್ಘ ನಿಟ್ಟುಸಿರು ಬಾರದೇ ಇರದು.ಒಟ್ಟು ಸಂಕಲನದಲ್ಲಿ 40 ವಿವಿಧ ಆಯಾಮದ ಕವನಗಳಿವೆ.ಪ್ರತೀ ಕವನವೂ ಒಂದಲ್ಲ ಒಂದು ಬದುಕಿನ ತಲ್ಲಣವೇ ಆಗಿದೆ. ಕೆಲವೊಂದು ಕವನಗಳು ಅತೀ ಆಪ್ತವಾದರೆ,ಇನ್ನೊಂದಿಷ್ಟು ನಿಡಿದಾದ ಉಸಿರಿನ ಜೊತೆ ಯೋಚಿಸುವಂತೆ ಮಾಡುತ್ತಾ ನಮ್ಮದೇ ಬದುಕಿನ ಚಿತ್ರಣಗಳನ್ನು ತೆರೆದಿಡುತ್ತದೆ.
ಪ್ರೀತಿಯ ಕನವರಿಕೆ,ಸೋತ ಪ್ರೀತಿ,ಹಸಿವು, ನಿದ್ದೆಗೆಟ್ಟ ರಾತ್ರಿಗಳು,ಬದುಕಿಗಾಗಿ ಹೋರಾಟದ ದುಡಿತ,ಕಾಸಿನ ಕಿಮ್ಮತ್ತು,ನಿರ್ದಯಿ ಜಗತ್ತಿನಲ್ಲಿ ಬದುಕು ಹರಿಸುವ ನೆತ್ತರು,ಉತ್ತರವೇ ಇಲ್ಲದ ದ್ವಂದ್ವ ಪ್ರಶ್ನೆಗಳು,ಹತಾಶೆ-ಭರವಸೆ,ಹೆಣ್ಣು ಹೀಗೆ ಬದುಕಿನ ಹಲವು ಮಜಲುಗಳನ್ನು ಒಂದೇ ಸಂಕಲನದಲ್ಲಿ ಕಟ್ಟಿ ಕೊಟ್ಟು ಕವಿ ಇಲ್ಲಿ ಗೆದ್ದಿದ್ದಾರೆ.
ಕೊಲ್ಲುವ ಅತಿಥಿ ಮುಂದೆ ಕವನದ,
ಹಸಿವಿದೆಯೇ,
ಊಟ ತರಲೇನು?ನೀವು ನಮ್ಮ ಅತಿಥಿ
ಉಂಡ ಮೇಲೂ ಗುಂಡು ನುಗ್ಗಿಸಬಹುದು
ನನ್ನ ಎದೆ ಸಿದ್ಧವಿದೆ.
ಎಂತಹ ನಿರ್ದಯಿಯಾದರೂ ಸೋಲಲೇ ಬೇಕಾದ ಸಾಲುಗಳಿವು.
ಆಸ್ಪತ್ರೆಯ ಚಿತ್ರಣವೊಂದನ್ನು ಕಟ್ಟಿಕೊಡುವ “ನೆತ್ತರಿನಲಿ ಅದ್ದಿದ ಗುಲಾಬಿ ” ಕವನವು ಎರಡೆರಡು ಬಾರಿ ಓದಿಸಿಕೊಳ್ಳುತ್ತದೆ.
ಜನರಲ್ ವಾರ್ಡ್ ನಿಂದ
ಹೆಣವೊಂದನ್ನು ಸಾಗಿಸುವ
ಹೊತ್ತಿನಲ್ಲೇ
ಹೆರಿಗೆಯ ಮನೆಯಿಂದ
ಮಗುವೊಂದು ಕಿಟಾರನೆ ಕಿರುಚಿ
ಜಗತ್ತಿಗೆ ಬಂದಿದ್ದನ್ನು ಸಂಭ್ರಮಿಸುತ್ತದೆ.
ಸಂಭ್ರಮಗಳ ಜೊತೆಗೆ ಆಸ್ಪತ್ರೆಯಲ್ಲಿ ಬದುಕಿನ ನಶ್ವರತೆ ಹಾಗೂ ಭವಿಷ್ಯದ ಭರವಸೆಗಳು, ಬದುಕಲಾಗದವರ ಸಂಕಟ,ಬದುಕಿರುವವರ ನಿಟ್ಟುಸಿರು,ದುಬಾರಿ ಬಿಲ್ಲುಗಳ ನಡುವೆ ಕವಿಯು ಇಲ್ಲಿ ಮೂಡಿಸಿದ ಆಶಯದ ಸಾಲುಗಳು ಆಪ್ತವಾಗುವುದರ ಜೊತೆ ಒಪ್ಪಿತವೂ ಆಗುತ್ತದೆ.
ನಿತ್ಯ ಆಸ್ಪತ್ರೆಯ ಮುಂಭಾಗದಲ್ಲಿ
ಅರಳುವ
ಕಡು ನೆತ್ತರಿನ ಗುಲಾಬಿ ಬಣ್ಣ
ಒಮ್ಮೆಯಾದರೂ ಬಿಳಿಯಾಗಲಿ
ಹಸುರಾಗಲಿ ನೀಲಿಯಾಗಲಿ
ಎಂದು ಆಶಿಸುತ್ತೇನೆ
ಆದರೆ,
ಮತ್ತೆ ಮತ್ತೆ ನೆತ್ತರಿನಲಿ ಅದ್ದಿದ
ಗುಲಾಬಿ ಅರಳುತ್ತಲೇ ಇರುತ್ತದೆ.
ಕೃತಿಯಲ್ಲಿ ಎರಡು ಮೂರು ಕವನಗಳು ಅಪ್ಪನ ಬದುಕನ್ನು ಕಟ್ಟಿಕೊಡುತ್ತವೆ.ಅಪ್ಪ ನನ್ನ ಬದುಕಿನ ದೊಡ್ಡ ಶಕ್ತಿ.ಅದು ವರ್ಣನಾತೀತ.ಆದರೆ,ಅಪ್ಪನ ನಮಗಾಗಿ ನರನಾಡಿಗಳನ್ನು ಸವೆಸಿಕೊಂಡು ಬದುಕಿದ ರೀತಿ ಮಾತ್ರ ಅನನ್ಯ. ಅಂತಹ ನನ್ನದೇ ಅಪ್ಪನಬದುಕೇನೋ ಎಂಬಂತೆ ಕಂಡ ಸಾಲುಗಳು ಎದೆಯೊಳಗೆ ಇಳಿದವು.
ಹರಿದ ಬನಿಯನ್ನಿನ ಅಪ್ಪ
ಹೊಸ ಬನಿಯನ್ನಿನ ತಂದೆ
ಎರಡರಲ್ಲೂ ಯಾವ
ವ್ಯತ್ಯಾಸ ಇರಲಿಲ್ಲ.
ಅಪ್ಪನ ನರಗಳು
ಟವಲಿನ ಗೀರುಗಳೊಂದಿಗೆ
ಸ್ಪರ್ಧೆಗೆ ಬಿದ್ದಿವೆ.
ಅಕ್ಕನ ಮದುವೆಗೆ
ಊರಿನ ತೇರಿಗೆ ,ಆಸ್ಪತ್ರೆಗೆ
ಅಪ್ಪನೊಂದಿಗೆ
ಸೇಡು ತೀರಿಸಿಕೊಂಡಿದ್ದು ಮಾತ್ರ
ಒಂದು ಬಿಳಿಯ ಅಂಗಿ!
ಬದುಕಿನ ಪ್ರಯಾಣದಲ್ಲಿ ಸೇರಬೇಕಾದ ನಿಲ್ದಾಣ, ತಲುಪಬೇಕಾದ ಗುರಿ ಎಡೆಗೆ ನಮ್ಮ ಪಯಣ ಇರಬೇಕೇ ಹೊರತು ಕಾಣದ ನಿಲ್ದಾಣದ ಕಡೆಗಲ್ಲ ಎಂಬ ಸತ್ಯವನ್ನು ” ಊರು ಸೇರದ ಬಸ್ಸನ್ನು ಯಾರೂ ಹತ್ತುವುದಿಲ್ಲ” ಕವನದಲ್ಲಿ ಬಸ್ ನಿಲ್ದಾಣದಲ್ಲಿ ಕಾದು ಕುಳಿತವರ ಹೃದಯದ ಕೋಣೆಯ ಬಾಗಿಲನ್ನು ತಾನು ಕೂಗಿದ ಹೆಸರಿನಿಂದಲೇ ಬಡಿಯುತ್ತಾನೆ ಕಂಡಕ್ಟರ್. ನೆನಪುಗಳ ತಿಜೋರಿ ಒಡೆಯುತ್ತಾನೆ.ಊರ ಹೆಸರು ಕೇಳಿಸಿಕೊಂಡರ ಮನದೊಳಗೆ ಅಲೆಗಳು ಏಳುತ್ತಲೇ ಇರುತ್ತವೆ.ಎಂಬುದನ್ನು ಎಷ್ಟು ಮಾರ್ಮಿಕವಾಗಿ ಕಟ್ಟಿದ್ದಾರೆ ನೋಡಿ,
” ಬಸ್ಸು ಚೆಂದವಿದೆ ಎಂದ ಮಾತ್ರಕ್ಕೆ
ತನ್ನ ಊರು ಸೇರದ ಬಸ್ಸನ್ನು
ಯಾರೂ ಹತ್ತುವುದಿಲ್ಲ.”
ಎಷ್ಟೊಂದು ಯೋಚಿಸಬೇಕಾದ ವಿಷಯ ಇದು.ನಮ್ಮನ್ನು ಚಿಂತನೆಗೆ ಎಡೆಮಾಡಿಕೊಡುತ್ತದೆ.ಅಬ್ಬಾ! ಎಂತಹ ಸಾಲುಗಳು ಎಂದು ಉದ್ಗಾರವೂ ಹೊರಬರುತ್ತದೆ.
ಸೊರಟೂರು ಅವರ ಈ ಕೃತಿಯಲ್ಲಿ ಲಂಕೇಶ್ ಅವರ ” ಅವ್ವ” ಕವನವನ್ನು ನೆನಪಿಸುವ ಹಾಗೂ ಅಷ್ಟೇ ಸೊಗಸಾದ “ಅವ್ವ ಹಾಡದ ಹಾಡು” ಕಣ್ಣಂಚನ್ನು ತೇವಗೊಳಿಸುತ್ತದೆ.ಹಾಗೆಯೇ ಅಮ್ಮ ಬಳಿಯಲ್ಲೇ ಇದ್ದರೆ ತಬ್ಬಿಕೊಳ್ಳೋಣ ಅನಿಸುವ ಭಾವ ತುಂಬುವ ಕವನವಿದು.
“ದಯಿಸುವ ಎದೆಯಲಿ
ಬದುಕು ಬೇಯಿಸಿದ ಅಡುಗೆಗೆ
ನೆಂಚಿಕೊಳ್ಳಲು
ನೆನೆಹಾಕಿಟ್ಟಿದ್ದ ಕನಸುಗಳನ್ನು ಒಂದೊಂದು
ಬಡಿಸುತ್ತಿದ್ದಳು”
“ಅವ್ವನ ಎದೆಯೊಳಗೊಂದು
ಬಚಿಚಿಟ್ಟುಕೊಂಡ ಹಾಡಿತ್ತು
ಅದನ್ನವಳು ಹಾಡುತ್ತಿರಲಿಲ್ಲ
ಸುಮ್ಮನೆ ರೊಟ್ಟಿ ಬಡಿಯುತ್ತಿದ್ದಳು
ಅದಕ್ಕೆ ಎಷ್ಟೊಂದು ಇಂಪಿತ್ತು
ಆಗಾಗ ರೊಟ್ಟಿ ಬಡಿಬಡಿದು ಹಗುರಾಗುತ್ತಿದ್ದಳು
ಹಾಡನ್ನು ಮತ್ತೆ ಮತ್ತೆ ನುಂಗಿಕೊಂಡು”
ಇಂತಹುದೇ ಇನ್ನೊಂದು ಕವನ “ಅವ್ವ ಹಾಕಿದ ಕಸೂತಿ” ನಿಮ್ಮ ಎದೆಯನ್ನು ಕಲಕದೇ ಇರದು.
ಗೋರಿ ಅಲ್ಲ ರೆಂಜೆಗಿಡ,ಜಾತ್ರೆ ಮುಗಿದ ಮಾರನೆಯ ದಿನ,ಯಾರು ಯಾರನ್ನು ಕಾಯಬೇಕು,ದಯವಿಟ್ಟು ಕ್ಷಮಿಸಿ,ಹೊಂದಿಸಿಬರೆಯಿರಿ ಕವನಗಳು ಓದಿ ಮುಗಿದ ಮೇಲೂ ಕಾಡುತ್ತಲೇ ಇರುತ್ತವೆ.
ಇಲ್ಲಿ ಗಾಯಗೊಂಡಿದ್ದು ಕವಿತೆಯ ಸಾಲುಗಳೋ?,ಕವಿಯೋ?,ಓದುಗನ ಮನಸ್ಸೋ? ಎಂದು ತಿಳಿಯಬೇಕು ಎಂದರೆ ಈ ಕೃತಿಯನ್ನು ಕೈಗೆತ್ತಿಕೊಳ್ಳಲೇ ಬೇಕು.ಬದುಕನ್ನು ಹಾಗೂ ನಮ್ಮ ಯೋಚನಾ ಲಹರಿಯನ್ನೇ ಬದಲಾಯಿಸಬಲ್ಲ ಶಕ್ತಿಯನ್ನು 8-10 ಸಾಲುಗಳನ್ನು ಒಳಗೊಂಡ ಕವನಗಳು ಹೊಂದಿದೆ ಎಂದರೆ ಅದು ಕಾವ್ಯಕ್ಕಿರುವ ,ಕವಿಗಿರುವ ತಾಕತ್ತು.ಸಾಲುಗಳೆಲ್ಲ ಎದೆಯೊಳಗೆ ಇಳಿದು ಸಾರ್ಥಕಗೊಂಡಿವೆ.
– ರೇಖಾಪ್ರಭಾಕರ್