ಮೇರುನಟ- ಪುಸ್ತಕ ವಿಮರ್ಶೆ
*ಡಾ. ಶರಣ ಹುಲ್ಲೂರು ಮತ್ತು ವೀರಕಪುತ್ರ ಶ್ರೀನಿವಾಸ
#ವೀರಲೋಕ ಬುಕ್ಸ್
~~~~~~~~~~~~~
ಡಾ. ರಾಜ್ಕುಮಾರ್ ನಂತರ ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆಯಾಗಿ 38 ವರ್ಷಗಳ ಕಾಲ ಕನ್ನಡ ಜನಮನದ ರಾರಾಜಿಸಿದ ಅತ್ಯಂತ ಪ್ರತಿಭಾವಂತ ಮತ್ತು ಪ್ರಭಾವಶಾಲಿ ನಾಯಕ ನಟ, ಗಾಯಕ ಡಾ ವಿಷ್ಣುವರ್ಧನ್ ಅವರ ಅಭಿನಯ ಜೀವನದ ಏಳುಬೀಳುಗಳು, ಸಾಧನೆ-ಸಂಕಷ್ಟಗಳು, ಸವಾಲು ಮತ್ತು ದಿಗ್ವಿಜಯಗಳು ಇವೆಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಮಾಹಿತಿಭರಿತವಾಗಿ ಕಟ್ಟಿಕೊಡುವ ಪುಸ್ತಕ- ಮೇರುನಟ.
ಈ ಪುಸ್ತಕದ ಲೇಖಕರು ನಮಗೆ ವಿಷ್ಣು ಜೀವನದ ಹಲವು ಖಾಸಗಿ ಮಾಹಿತಿಯ ಜೊತೆ ಈ ಅಧಿಕೃತ ವೃತ್ತಿಪರ ವಿಚಾರಗಳನ್ನೂ ತೆರೆದಿಡುತ್ತಾರೆ: ವಿಷ್ಣುವರ್ಧನ್ ಜೀವನದಲ್ಲಿ ಅವರ ಅಭಿನಯ ಸಾಧನೆ ಮನಗೆದ್ದು ಅವರು ಕೀರ್ತಿಯ ಶಿಖರಗಳನ್ನು ಒಂದರ ನಂತರ ಒಂದನ್ನು ಸರಾಗವಾಗಿ ಏರುತ್ತಾ ಬೆಳೆಯುತ್ತಾ ಹೋದಂತೆ ಅವರನ್ನು ಕಂಡು ಮತ್ಸರದಿಂದ
ಹಲವು ಕಿಡಿಗೇಡಿಗಳು ಅವರ ಚಿತ್ರಗಳ ಬಿಡುಗಡೆ ಮತ್ತು ಸಾಧನೆಗಳನ್ನು ಕಂಡು ಸತತವಾಗಿ ಪುಂಡಾಟಿಕೆ ಮಾಡಿ ಕಾನೂನು ಬಾಹಿರವಾಗಿ ಅವರನ್ನು ಹಲವು ವೈಯಕ್ತಿಕ ಸಂಕಟ, ಸಂಕಷ್ಟ ಮತ್ತು ಸವಾಲುಗಳಿಗೆ ಈಡು ಮಾಡುತ್ತಾರೆ. ಯಾವುದೇ ನಟನ ನಿಜವಾದ ಅಭಿಮಾನಿಗಳು ಅಗಲು ಸಾಧ್ಯವಿರದ ಇವರು ಕನ್ನಡ ಸಿನಿಪ್ರಿಯರೂ ಆಗಿರಲು ಸಾಧ್ಯವಿಲ್ಲ, ಕೆಲವು
ಸಮಾಜದ ದುಷ್ಟಜನರೇ ಸರಿ. ಕನ್ನಡದ ಅಗ್ರಗಣ್ಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಗರಡಿಯಲ್ಲಿ
ನಾಯಕನಾಗಿ ಪಾದಾರ್ಪಣೆ ಮಾಡಿ ಹೊರಹೊಮ್ಮಿದ ನಾಗರಹಾವು ಚಿತ್ರದ ರಾಮಾಚಾರಿ ತಮ್ಮ ಪ್ರತಿಭೆ ಮತ್ತು ಅವಿರತ ಸಾಧನೆಯ ಬಲದಿಂದ ವೃತ್ತಿ ಜೀವನದಲ್ಲಿ ಸುಮಾರು 220 ಚಿತ್ರಗಳನ್ನು ಕನ್ನಡ ಅಲ್ಲದೇ ತಮಿಳು, ತೆಲುಗು, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲಿ ಸಹ ನಾಯಕನಟನಾಗಿ ಸಾಧನೆಗೈದು ಚಿತ್ರರಂಗದ ಮತ್ತು ಜನಮನದ ಕಣ್ಮಣಿಯಾಗಿ
ಮೆರೆಯುತ್ತಾರೆ. ಅಬಾಲ ವೃದ್ಧರೂ, ಮಹಿಳೆಯರೆನ್ನದೇ ಎಲ್ಲರೂ ವಿಷ್ಣುವರ್ಧನರ ಅಭಿಮಾನಿಯಾಗಿ ಅವರ ವ್ಯಕ್ತಿತ್ವವನ್ನು
ಕೊಂಡಾಡತೊಡಗುತ್ತಾರೆ. ಯಶಸ್ವಿ ಚಿತ್ರಗಳ ಹರಿಕಾರನಾಗಿ ತಮ್ಮ ಚಿತ್ರ ತಂಡದವರಿಗೆಲ್ಲ ಸೌಜನ್ಯ, ಹೃದಯವಂತಿಕೆ, ಸ್ನೇಹಪರತೆ, ಧಾರಾಳ ಬುದ್ದಿಯಿಂದ ಅತ್ಯಂತ ಆಪ್ತರಾಗುತ್ತಾರೆ. ಅವರ ಅಬಾಧಿತವಾದ ಕೀರ್ತಿಯ ಓಟವನ್ನು ಕಂಡು ಸಹಿಸಲಾಗದ ಆ ದುಷ್ಟ ಶಕ್ತಿಗಳು ಮತ್ತು ಸಮಾಜದ ಫ್ರಿಂಜ್ ಎಲಿಮೆಂಟ್ಸ್ ಎನ್ನುವ ಅಪರಾಧಿ ಮನೋಭಾವದ ಪುಂಡರು
ಅವರ ಚಿತ್ರಗಳ ಪೋಸ್ಟರುಗಳ ಧ್ವಂಸ ಮಾಡಿ, ಪ್ರಚಾರ ಮತ್ತು ಬಿಡುಗಡೆ ಮತ್ತು ವಿಜಯೋತ್ಸವದಲ್ಲಿ ಪುಂಡಾಟವಾಡಿ ವಿಕೃತ ಆನಂದ ಪಡೆಯುತ್ತಾರೆ. ಆದರೆ ನಿಶ್ಚಲ ಮತ್ತು ನಿರ್ಮಲ ಮನಸ್ಸಿನ ವಿಷ್ಣು ಅವುಗಳಿಂದ ನೊಂದರೂ ಗಣನೆಗೇ ತೆಗೆದುಕೊಳ್ಳದೆ ತನಗೆ ಬಂದ, ಚಿತ್ರ ನಿರ್ದೇಶಕರು ಅಣತಿ ಮಾಡಿದ್ದ ವೈವಿಧ್ಯಮಯ ಸಾಹಸ, ರೋಮಾನ್ಸ್, ಸಾಮಾಜಿಕ ಕಳಕಳಿಯ ನಾಯಕ ಇತ್ಯಾದಿ ಸಿನಿ ಪಾತ್ರಗಳ ಮೂಲಕ ಜನಮನದಲ್ಲಿ ಚಿರಸ್ಥಾಯಿಯಾಗುತ್ತಲೇ ಹೋಗುತ್ತಾರೆ. ಯಾವುದಕ್ಕೂ ಕುಪಿತರಾಗದೆ, ಯಾರ ವಿರುದ್ಧವೂ ಪ್ರತಿಭಟಿಸದೆ, ಯಾವ ಅಭಿಮಾನಿಗಳನ್ನೂ ಎದುರು ಹಾಕಿಕೊಳ್ಳದೇ ತಮ್ಮ ಹೃದಯ ವೈಶಾಲ್ಯತೆಯನ್ನು ಮೆರೆಯುತ್ತಾರೆ. ಅವರು ಚಿತ್ರರಂಗದ ಸಹೋದ್ಯೋಗಿಗಳಾದ- ನಟಸಾರ್ವಭೌಮ ಡಾ. ರಾಜ್ಕುಮಾರ್ ಆಗಲಿ, ಯಶ್ವಸಿ ನಟ ನಿರ್ಮಾಪಕ ‘ಕುಳ್ಳ’ – ದ್ವಾರಕೀಶ್ ಆಗಲಿ, ಜನಪ್ರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಆಗಲಿ – ಎಲ್ಲರನ್ನೂ ತಮ್ಮ ಸರಳ ಸಜ್ಜನ ನಡೆನುಡಿಯಿಂದ ಗೌರವಿಸುತ್ತಾ ಹೋಗುತ್ತಾರೆ, ಸಮಯ ಕಳೆದಂತೆ
ಮರೆಯಲಾಗದಂತ ಹಲವಾರು ಯಶಸ್ವಿ ಚಿತ್ರಗಳ ಯಜಮಾನರಾಗುತ್ತಾರೆ. ಅವರ ಪ್ರತಿಭೆ ಮತ್ತು ಸ್ಟಾರ್ ಪಟ್ಟದಿಂದ ತಂತಮ್ಮ ವೃತ್ತಿಯಲ್ಲಿ ಮತ್ತು ವಾಣಿಜ್ಯವಾಗಿಯೂ ಲಾಭ ಪಡೆದವರೇ ಹೆಚ್ಚಾಗುತ್ತಾರೆ. ಅವರ ವಿವಾಹ ಸಮಯದ ಸಂಕಷ್ಟಗಳು, ತಂದೆಯ ಶವಯಾತ್ರೆಯ ಸಮಯದ ಖಂಡನೀಯ ಘಟನೆಗಳು ಓದುಗರಾದ ನಮ್ಮ ಮನಸ್ಸನ್ನು
ಕಲಕದೇ ಇರದು. ಸದಾ ನಮ್ಮ ಮನ ರಂಜಿಸುತ್ತಲೇ ಮರೆಯಾದ ಸ್ಪುರದ್ರೂಪಿ ನಟ ವಿಷ್ಣುವರ್ಧನ್ ತಮ್ಮ ನಗುಮುಖದ ಹಿಂದೆ ಎಷ್ಟು ಕಣ್ಣೀರನ್ನೂ ದುಗುಡವನ್ನೂ ಅಸಾಧಾರಣ ಸಹನೆಯಿಂದ ತಮ್ಮೊಳಗೇ ಕಟ್ಟಿಹಾಕಿಕೊಂಡಿದ್ದರು ಎಂದು ಈ ಪುಸ್ತಕ ಓದಿದಾಗ ನಮ್ಮ ಅರಿವಿಗೆ ಬರುತ್ತದೆ.
ಈ ರೀತಿ ಈ ಪುಸ್ತಕವು ವಿಷ್ಣುವರ್ಧನ್ ಅವರ ಅನಧಿಕೃತ ಜೀವನ ಚರಿತ್ರೆಯೂ ಹೌದು, ಅವರ ಸಾಧನೆಗಳ ಹಿಂದಿನ ಹೋರಾಟವೂ ಹೌದು . ಇಬ್ಬರು ಲೇಖಕರು ಸಾಕಷ್ಟು ಅಧ್ಯಯನ ಮತ್ತು ಸಂಶೋಧನೆ ಮಾಡಿ ಮಾಹಿತಿಯನ್ನು ಕಲೆಹಾಕಿ ಸರಳವಾದ ಭಾಷಾಶೈಲಿಯಲ್ಲಿ ಅದನ್ನು ಪ್ರಸ್ತುತ ಪಡಿಸಿ ಪ್ರಕಟಿಸಿರುವುದು ಶ್ಲಾಘನೀಯ. ಚಿತ್ರರಂಗದ ಕಣ್ಮಣಿಯಾಗಿದ್ದ ಸಾಹಸಸಿಂಹ, ಅಭಿನಯ ಭಾರ್ಗವ ಬಿರುದಾಂಕಿತ ವಿಷ್ಣುವರ್ಧನ್ ಬಗ್ಗೆ ಯ ಈ ಪುಸ್ತಕ ಕನ್ನಡಿಗ ಓದುಗರು
ಕೊಂಡು ಓದುವಂತದ್ದು.