ಪುತ್ತೂರಿನಲ್ಲಿ ಕಂಬಳದ ವೇಳೆ ಕಿರುತೆರೆ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಸಾನ್ಯಾ ಅಯ್ಯರ್ ಮೇಲೆ ಹಲ್ಲೆ ಆಗಿದೆ ಎನ್ನುವ ವಿಚಾರ ಕಳೆದ ಎರಡು ದಿನಗಳಿಂದ ಭಾರೀ ಸದ್ದು ಮಾಡುತ್ತಿದೆ. ವೇದಿಕೆಯ ಮೇಲೆ ಸಾನ್ಯಾ ಮತ್ತು ಗೆಳೆತಿಯರು ಆಯೋಜಕರ ಜೊತೆ ಗಲಾಟೆ ಮಾಡುವ ವಿಡಿಯೋ ವೈರಲ್ ಆಗಿದ್ದು ಇದೀಗ ಘಟನೆಯ ಕುರಿತು ಸಾನ್ಯಾ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿರುವ ಸಾನ್ಯಾ ಕಪಾಳ ಮೋಕ್ಷೆ ಮಾಡುವಂಥದ್ದು ಏನೂ ನಡೆದೇ ಇಲ್ಲ ಎಂದಿದ್ದಾರೆ.
ಪುತ್ತೂರಿನಲ್ಲಿ ನಡೆದ ಕಂಬಳಕ್ಕೆ ನಾನು ಅತಿಥಿಯಾಗಿ ಹೋಗಿದ್ದೆ. ಅವತ್ತು ಕಂಬಳವನ್ನು ಸರಿಯಾಗಿ ನೋಡಲು ಆಗದೇ ಇರುವ ಕಾರಣಕ್ಕಾಗಿ ಮತ್ತೆ ಸ್ನೇಹಿತೆಯರ ಜೊತೆ ಹೋದೆ. ಆಗ ಒಬ್ಬ ಹುಡುಗ ನನ್ನ ಫ್ರೆಂಡ್ಸ್ ಕೈ ಹಿಡಿದು ಎಳೆದ. ಭಯ ಆಯಿತು. ಆನಂತರ ಇದನ್ನು ಆಯೋಜಕರ ಗಮನಕ್ಕೆ ತಂದೆವು. ಆ ಹುಡುಗ ನಂತರ ಎಲ್ಲಿಗೆ ಹೋದ? ಏನಾದ ಎನ್ನುವ ವಿಚಾರ ಗೊತ್ತಿಲ್ಲ. ಆದರೆ, ಸುದ್ದಿ ಆದಂತೆ ಅವನ ಕಪಾಳಕ್ಕೆ ನಾನು ಹೊಡೆಯಲಿಲ್ಲ, ನನಗೂ ಅವನು ಹೊಡೆಯಲಿಲ್ಲ ಎಂದು ಸಾನ್ಯ ತಿಳಿಸಿದ್ದಾರೆ.
ತಮ್ಮ ಕಪಾಳಕ್ಕೆ ಆ ಹುಡುಗ ಹೊಡೆದಿದ್ದಾನೆ ಎನ್ನುವ ಸುದ್ದಿ ಹೇಗೆ ಹಬ್ಬಿತೋ ಗೊತ್ತಿಲ್ಲ ಎನ್ನುವ ಸಾನ್ಯಾ, ಅಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲವೆಂದು ಹೇಳಿದ್ದಾರೆ. ಆದರೆ, ಕಳೆದ ಎರಡು ದಿನಗಳಿಂದ ಈ ಘಟನೆಯ ಕುರಿತು ಬೇರೆಯೇ ಸುದ್ದಿ ಹಬ್ಬಿತ್ತು. ಮದ್ಯ ಸೇವಿಸಿದ್ದ ಯುವಕನೊಬ್ಬ ಸಾನ್ಯಾ ಜೊತೆ ಸೆಲ್ಫಿ ತಗೆದುಕೊಳ್ಳುವ ವಿಚಾರಕ್ಕೆ ಗಲಾಟೆ ಮಾಡಿದ. ಅವನ ಮೇಲೆ ಸಾನ್ಯಾ ಕೈ ಮಾಡಿದರು. ಅವನೂ ಹೊಡೆದ. ನಂತರ ಅಲ್ಲಿದ್ದವರು ಆ ಹುಡುಗನನ್ನು ಥಳಿಸಿದರು ಎನ್ನುವುದು ವರದಿಯಾಗಿತ್ತು. ಇದೀಗ ಅಂಥದ್ದು ಏನೂ ಆಗಿಲ್ಲ ಎಂದಿದ್ದಾರೆ ಸಾನ್ಯಾ.