1. ಮಾದಕ ದೊರೆ ( ಕಾದಂಬರಿ)
*ಲೇಖಕ: ಸಂತೋಷಕುಮಾರ್ ಮೆಹಂದಳೆ
*ವೀರಲೋಕ ಪ್ರಕಾಶನ
ಮಾರಿಯೋ ಪುಜೋ ಅವರ ದಿ ಗಾಡ್ ಫಾದರ್ ಪುಸ್ತಕ ವಿಶ್ವವಿಖ್ಯಾತ ಮಾಫ಼ಿಯಾ ದೊರೆಯ ಬಗ್ಗೆ ಬರೆದ ಜನಪ್ರಿಯ ಸಾಹಿತ್ಯದ ಅದ್ವಿತೀಯ ಪುಸ್ತಕ. ಅದನ್ನು ಓದುವಾಗ ಡಾನ್ ಕಾರಲಾನ್ ಅಂತಹ ಒಬ್ಬ ವ್ಯಕ್ತಿ ನಿಜ ಜೀವನದಲ್ಲಿ ಇರುವುದು ಸಾಧ್ಯವೆ ಎಂದು ಅಚ್ಚರಿಯಾಗುತ್ತದೆ. ಆದರೆ ಒಬ್ಬ ವ್ಯಕ್ತಿ ಈ ಗಾಡ್ ಫಾದರ್ ಜೀವನವೂ ಸಪ್ಪೆ ಎನಿಸುವ ಹಾಗೆ ತನ್ನ ಬದುಕು ಬದುಕಿ ಸುಮಾರು ದೇಶಗಳ ಜನಜೀವನ ಮತ್ತು ಆರ್ಥಿಕತೆಯನ್ನೇ ತನ್ನ ಕಪಿಮುಷ್ಠಿಯಲ್ಲಿ ಸುಮಾರು ೧೭ ವರ್ಷಗಳ ಕಾಲ ಇಟ್ಟುಕೊಂಡಿದ್ದ ಅಂದರೆ ನಂಬಲು ಕಷ್ಟವಾದರೂ ಅಂತಹ ಒಬ್ಬ ವ್ಯಕ್ತಿ ಇದ್ದ. ಆತ ಬದುಕಿದ್ದು ಕೇವಲ ೪೪ ವರ್ಷಗಳು. ವಿಶ್ವದ ಸೂಪರ್ ಪವರ್ ಅಮೆರಿಕ ದೇಶವನ್ನೇ ಮಂಡಿಯೂರಿಸಿದ ಮಾದಕ ದೊರೆ
ಪಾಬ್ಲೋ ಗವೇರಿಯ ಎಸ್ಕೋಬಾರ್ .
ಇವನ ಬಗ್ಗೆ ಅಂತರ್ಜಾಲದಲ್ಲಿ ಹುಡುಕಿದರೆ ನಿಮಗೆ ಹಸನ್ಮುಖಿ ಸಜ್ಜನನಂತೆ ತೋರುವ ಓರ್ವ ವ್ಯಕ್ತಿಯ ಚಿತ್ರ ಸಿಕ್ಕೀತು. ಆದರೆ ಈ ವ್ಯಕ್ತಿಯೇ ಕೊಲಂಬಿಯಾ ದೇಶದ ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ ಅಪರಾಧ ಜಗತ್ತಿಗೆ ಪ್ರವೇಶ ಪಡೆದು ಮಾದಕ ದ್ರವ್ಯ ಕೊಕೇನ್ ಕಳ್ಳಸಾಗಾಣಿಕೆಯ ಮುಖ್ಯ ರೂವಾರಿ ಆಗಿ , ಅನೇಕ ಶ್ರೀಮಂತ ದೇಶಗಳಲ್ಲಿ ಕೊಕೇನ್ ಮಾರಿ
ಲಕ್ಷಾಂತರ ಜನರು ಮಾದಕ ವ್ಯಸನಿಗಳಾಗಿ ಸಮಾಜ ಪತನದತ್ತ ಸಾಗುವ ಹಾಗೆ ಮಾಡಿದ ಪಾತಕಿ. ಸಹಸ್ರಾರು ಜೀವಗಳನ್ನು ನಿರ್ದಯವಾಗಿ ತನ್ನ ಸ್ವಾರ್ಥಕ್ಕಾಗಿ ಬಲಿ ತೆಗೆದುಕೊಂಡವನು. ಮೇಲಾಗಿ ಮಹಾ ಲಂಪಟ, ಹೆಣ್ಣುಬಾಕ. ಬಟ್ಟೆ ಬದಲಿಸುವಂತೆ ಹೆಣ್ಣನ್ನು ಬಳಸಿಕೊಂಡ ಅಧಮ.
ಸಂತೋಷಕುಮಾರ್ ಮೆಹೆಂದಳೆ ನಮ್ಮ ನಡುವೆ ಇರುವ ಬಹುಮುಖ ಪ್ರತಿಭೆಯ ಅಧ್ಯಯನಶೀಲ ಕಥೆಗಾರರಲ್ಲಿ ಮೊದಲಿಗರು. ಅವರು ನಿರ್ಭಿಡೆಯಿಂದ ಅಪರಾಧ ದುನಿಯಾದ ಹೆಗ್ಗುರುತುಗಳನ್ನು ಬರೆಯುವಾಗ, ಅಲ್ಲಿನ ಪಾತ್ರಗಳ ನಿಜ ಜೀವನದ ವರ್ಣನೆ ಮಾಡುವಾಗ ಯಾವುದೇ ಮಡಿವಂತಿಕೆ, ಮುಚ್ಚುಮರೆ ಮುಂತಾದ ಮಿತಿಗಳನ್ನು ಇಟ್ಟುಕೊಳ್ಳದೇ
ನೇರಾತಿನೇರವಾಗಿ ದಾಖಲಿಸಬಲ್ಲರು ಎಂದು ಈ ಪುಸ್ತಕದಲ್ಲಿಯೂ ಅದರ ಲೇಖಕರಾಗಿ ರುಜುವಾತು ಮಾಡಿದ್ದಾರೆ.
ಕೊಲಂಬಿಯಾ ದಕ್ಷಿಣ ಅಮೆರಿಕಾದ ಒಂದು ದೊಡ್ಡ ದೇಶ. ಆದರೆ ಶಾಪಗ್ರಸ್ತ ದೇಶ. ವಿಶಾಲ ಕರಾವಳಿ, ನೀರಿನ ಕೊರತೆ ಎಂದೂ ಒಣಗದ ತುಂಬಿ ಹರಿವ ನದಿಗಳು, ವಿಪುಲ ನೈಸರ್ಗಿಕ ಸಂಪತ್ತು ಇದ್ದರೂ ಒಂದರ ನಂತರ ಒಂದು ಭ್ರಷ್ಟ ಸರಕಾರ ಹಾಗೂ ಅಧಿಕಾರ ಶಾಹಿಯ ಕಾರಣದಿಂದ ದೇಶದಲ್ಲಿ ಅರಾಜಕತೆ ಯಾವ ಅಭಿವೃದ್ದಿಯೂ ಸಾಧ್ಯವಾಗಲಿಲ್ಲ. ಮಾದಕ ದ್ರವ್ಯಗಳ ಕಳ್ಳ ಸಾಗಾಣಿಕೆ ಮಾಡಲು ಅನೇಕ ಗ್ಯಾಂಗ್ ಹುಟ್ಟಿಕೊಂಡಿದ್ದವು. ಮ್ಯಾಡಲಿನ್ ಕಾರ್ಟೆಲ್, ಕಾಲಿ ಕಾರ್ಟೆಲ್ ಹೀಗೆ ಕೊಲಂಬಿಯಾದ ಬೇರೆ ಬೇರೆ ನಗರಗಳಿಂದ ಕಾರ್ಯಾಚರಣೆ ಮಾಡಿ ಲ್ಯಾಟಿನ್ ಅಮೆರಿಕಾದ ಇತರ ದೇಶಗಳಾದ ಪನಾಮ, ಗ್ವಾಟೆಮಾಲಾ, ಎಲ್ ಸಾಲ್ವಡಾರ್, ಮೆಕ್ಸಿಕೋ ಮುಖಾಂತರ ಅಮೆರಿಕ ಒಳಗೆ ಮಾದಕ ವಸ್ತು ಕಳ್ಳ ಸಾಗಾಣಿಕೆ ನಡೆಯುತ್ತಿತ್ತು.
ಪಾಬ್ಲೋ ಗವೇರಿಯಾ ಎಸ್ಕೊಬಾರ್ ಎಂಬ ಈ ದುಷ್ಟ ನಾಯಕ ಹುಟ್ಟಿದಾಗ ಇದ್ದ ದೇಶದ ಪರಿಸ್ಥಿತಿಯಲ್ಲಿ ಆತ ಕಲಿತು ಒಳ್ಳೆ ಡಾಕ್ಟರ್ ಇಲ್ಲವೆ ಎಂಜಿನಿಯರ್ ಆಗುವುದು ಕನಸಿನ ಮಾತು ಆಗಿತ್ತು. ಒಬ್ಬ ಬಡ ರೈತನ ಮನೆಯಲ್ಲಿ ಆತನ ನಾಲ್ಕನೆಯ ಮಗನಾಗಿ ಹುಟ್ಟಿದ ಪಾಬ್ಲೋ ಹದಿಹರೆಯದಲ್ಲಿಯೇ ಮಾದಕ ದ್ರವ್ಯದ ಸಾಗಾಣಿಕೆಗೆ ಇಳಿದ. ೧೯೭೫ ರ ಇಸವಿಯಲ್ಲಿ ಆತ ಕೇವಲ ೨೬ರ ಹರೆಯದಲ್ಲಿ ಇದ್ದಾಗ ಶುರು ಆದ ಆತನ ಮಾದಕ ಜಗತ್ತಿನ ಸಾರ್ವಭೌಮತ್ವ ೧೯೯೩ ಇಸವಿಯಲ್ಲಿ ಆತ ನಿಗೂಢ ರೀತಿಯಲ್ಲಿ ಸಾವನ್ನು ಅಪ್ಪುವ ತನಕ ಮುಂದುವರೆಯಿತು. ಆತ ಸಾಯುವ ಸಮಯದಲ್ಲಿ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿ ಇದ್ದ. ಕಂಡು ಕೇಳರಿಯದ ರೀತಿಯಲ್ಲಿ ಕೊಕೇನ್ ಕಳ್ಳ ಸಾಗಾಣಿಕೆ ಮಾಡಿ ದೇಶದಲ್ಲಿ ಇದ್ದ ಹೆಚ್ಚಿನ ಕಾರ್ಟೆಲು (ಕುಟುಂಬ) ಗಳನ್ನು ಮುಗಿಸಿ ಮೇಡಲೀನ್ ಕಾರ್ಟೆಲಿನ ಮಾಲೀಕ ಆಗಿ ಮೆರೆದ ಕಥೆಯನ್ನು ಈ ಪುಸ್ತಕದಲ್ಲಿ ನೀವು ಓದಬೇಕು. ಪಾಪದಲ್ಲಿ ಗಳಿಸಿದ ಹಣ ಆದರೂ ಆತ ಕೊಲಂಬಿಯಾ ದೇಶದ ಜನರ ಜೀವನ ಬದಲಾಯಿಸಿದ , ಜನರ ಬಡತನ ತಕ್ಕ ಮಟ್ಟಿಗೆ ನಿವಾರಣೆ ಆಯಿತು. ವೇಶ್ಯೆಯಾಗಿ ಜೀವನ ಸಾಗಿಸುವ ಅಧೋಗತಿಗೆ
ಇಳಿದಿದ್ದ ಕೊಲಂಬಿಯಾದ ಹೆಣ್ಣು ಮಕ್ಕಳು ಮರ್ಯಾದೆಯಿಂದ ಜೀವನ ನಡೆಸತೊಡಗಿದರು. ಆದರೆ ಪಾಬ್ಲೋ ಆ ಮಟ್ಟಕ್ಕೆ ಬೆಳೆದಾಗ ಕೊನೆಗೆ ಅಮೆರಿಕ ಆತನ ವಿರುದ್ಧ ಕತ್ತಿ ಮಸೆಯತೊಡಗಿತು. ಆದರೆ ಸುಮಾರು ಒಂದು ದಶಕ ಕಾಲ ಸರ್ವಶಕ್ತ ಅಮೆರಿಕಾಗೆ ಆತನ ಕೂದಲು ಕೊಂಕಿಸಲೂ ಆಗಲಿಲ್ಲ. ಅವರು ಚಾಪೆ ಕೆಳಗೆ ತೂರಿದರೆ ಈತ ರಂಗೋಲಿ ಅಡಿಯಲ್ಲಿ ನುಸುಳಬಲ್ಲವನಾಗಿದ್ದ. ಆತ ಕಳ್ಳಸಾಗಣಿಕೆ ಮಾಡಿದ ವೈವಿಧ್ಯಮಯ ಬಗೆ ತಿಳಿದು ಜಗತ್ತೇ ಬೆಚ್ಚಿ ಬಿದ್ದಿತ್ತು.
ಈ ಪುಸ್ತಕ ಓದಿದಾಗ ನಿಮಗೆ ತ.ರಾ.ಸು.ರವರ ನಾಗರಹಾವು ನಾಯಕ ರಾಮಾಚಾರಿ ಆಗಾಗ ನೆನೆಪಿಗೆ ಬರಬಹುದು. ಯಾವುದೋ ಸಾಮಾಜಿಕ ಒತ್ತಡ ಮತ್ತು ಜೀವನದ ಕೆಟ್ಟ ಆಯ್ಕೆಗಳಿಗೆ ಸಿಲುಕಿದ ರಾಮಾಚಾರಿಯ ಹಾಗೆ ಪಾಬ್ಲೋ ಬದುಕು ಕೂಡ ದುರಂತದಲ್ಲಿ ಮುಗಿಯುತ್ತದೆ. ಆತನ ಓರ್ವ ಪ್ರೇಯಸಿ ಅರಿಯದೇ ಅವನ ಅಂತ್ಯಕ್ಕೆ ಕಾರಣವಾಗುತ್ತಾಳೆ. ಸ್ತ್ರೀಲೋಲನಾದರೂ ಪಾಬ್ಲೋ ಕೊನೆಯವರೆಗೂ ಪತ್ನಿ ಮಾರಿಯ ಹನಾವೋ, ಮಗ ಸೆಬಾಸ್ಟಿಯನ್ ಹಾಗೂ
ಮಗಳು ಮ್ಯಾನುಯೇಲರ ಕೈ ಬಿಡಲಿಲ್ಲ. ಇಲ್ಲಿ ಲೇಖಕರು ಹೇಳುವ ಮಾದಕ ದೊರೆಯ ಕಥೆ ಒಬ್ಬ ಥೇಟ್ ಪಾತಕಿಯ ಕಥೆ. ಆತನ ಬದುಕಿನಲ್ಲಿ ನೈತಿಕತೆ , ಅನೈತಿಕತೆ ನಡುವಿನ ವ್ಯತ್ಯಾಸ ಬಹಳ ಅಲ್ಪ. ಇಲ್ಲಿ ಮಹಿಳೆಯ ಯೋಗ್ಯತೆಯನ್ನು ಆಕೆಯ ಮೈಮಾಟ ಆಧರಿಸಿ ಅಳೆಯಲಾಗುತ್ತದೆ, ಗುಣವನ್ನು ಅಲ್ಲ. ಆ ಕಾರಣದಿಂದ ಪುಸ್ತಕದಲ್ಲಿ ಕೆಲವು ಕಡೆ ಮುಜುಗರಗೊಳಿಸುವ ಶೃಂಗಾರದ ವಿವರಗಳೂ ಸಹಜವಾಗಿಯೇ ಇವೆ. ಅದು ಈ ಪುಸ್ತಕದ ಬಗ್ಗೆ ದೂರೇನೂ ಅಲ್ಲ, ಸಹಜವೂ ಆಗಿದೆ. ಈ ಪುಸ್ತಕ ಓದಿದಾಗ ನಮಗೆ ಕೊಲಂಬಿಯಾ ದೇಶದ ಅಪರಾಧ ಲೋಕದ ರಕ್ತಸಿಕ್ತ ಚರಿತ್ರೆಯ ವಿವರಗಳು ಸಿಗುತ್ತವೆ. ಕೊಕೇನ್ ಕಳ್ಳ ಸಾಗಾಣಿಕೆ ಕುರಿತಾದ ಅನೇಕ ವಿವರಗಳೂ ಸಿಗುತ್ತವೆ. ಆದರೆ ಕೆಲವೊಮ್ಮೆ ನಗರಗಳ ಹೆಸರೂ ಮತ್ತು ದೇಶಗಳ ಹೆಸರೂ (ಉದಾಹರಣೆಗೆ ಎಲ್ ಸಾಲ್ವಡಾರ್ ಮತ್ತು ಈಕ್ವೆಡಾರ್) ತಪ್ಪಾಗಿ ದಾಖಲಿತವಾಗಿದೆ. ಆದರೂ ಇಂತಹ
ಮಾಹಿತಿಭರಿತ ನೈಜ ಚಿತ್ರಣದಲ್ಲಿ ಅದು ನಗಣ್ಯವಾಗುತ್ತದೆ.
ಖಂಡಿತಾ ಒಬ್ಬ ಮಾಫ಼ಿಯಾ ದೊರೆಯ ಜೀವನ ಚಿತ್ರ ಓದಬೇಕಾದರೆ ಓದುಗರಿಗೆ ಇದಕ್ಕಿಂತಾ ಅಧಿಕೃತ ದಾಖಲೆ ಕಾದಂಬರಿ ಪ್ರಬೇಧದಲ್ಲಿ ಸಿಗಲಾರದು ಎಂದು ಧೈರ್ಯವಾಗಿ ಹೇಳಬಹುದು. ಈ ವೀರಲೋಕದ ಪುಸ್ತಕದ ಮುದ್ರಣ, ಮತ್ತು ಮುಖಪಟ ಗುಣಮಟ್ಟ ಅತ್ಯುತ್ತಮವಾಗಿದ್ದು ಓದುಗರಿಗೆ ಖುಷಿ ನೀಡುವುದು ಖಚಿತ.
– ನಾಗೇಶ್ ಕುಮಾರ್ ಸಿ ಎಸ್