ಹಿಂದೊಮ್ಮೆ ನಾನು ‘ಪತ್ತೇದಾರಿ ಸಾಹಿತ್ಯ ನಶಿಸಿಹೋಯಿತೆ, ಜನಪ್ರಿಯತೆಯ ಶಿಖರದಿಂದ ಆ ಪ್ರಬೇಧ ಪತನವಾಗಿ, ಪುಸ್ತಕ ಕಪಾಟುಗಳಿಂದ ಅದು ಮಾಯವಾಗಿಬಿಟ್ಟಿತೋ?’ ಎಂದೊಂದು ಲೇಖನದಲ್ಲಿ ಆತಂಕ ವ್ಯಕ್ತಪಡಿಸಿದ್ದೂ ಉಂಟು. ಆದರೆ ಇನ್ನೂ ವಿಸ್ತೃತವಾಗಿ ಅಧ್ಯಯನ ಮಾಡಿ ಕೂಲಂಕಷವಾಗಿ ಪತ್ತೆ ಮಾಡಿದಾಗ ಅದು ಇನ್ನೂ ಒಂದು ಹಂತದಲ್ಲಿ ಜೀವಂತವಾಗಿ ನಳನಳಿಸುತ್ತಾ ಇದೆ ಎಂದು ತೀರ್ಮಾನಕ್ಕೆ ಬರಲು ಕಷ್ಟವಾಗಲಿಲ್ಲ.
ಹಿನ್ನೆಲೆ:
ಕನ್ನಡದಲ್ಲಿ ಸಹ ಆಂಗ್ಲ ಭಾಷೆಯಂತೆಯೆ ಧೀರ್ಘ ಹಾಗೂ ವೈಭವದ ಪತ್ತೇದಾರಿ ಸಾಹಿತ್ಯದ ಪ್ರದರ್ಶನ ೫೦ ರಿಂದ ೭೦ರ ವರೆಗಿನ ದಶಕಗಳಲ್ಲಿ ಮೆರೆದಿದ್ದು, ಕೆಲವು ಪ್ರಸಿದ್ಧ ಲೇಖಕರಲ್ಲಿ ಮೊದಲಿಗರಾದ- ಮ.ರಾಮಮೂರ್ತಿ, ಎನ್ ನರಸಿಂಹಯ್ಯ, ಜಿಂದೆ ನಂಜುಂಡಸ್ವಾಮಿ, ಬಿ.ವಿ. ಅನಂತರಾಮ್, ಕ್ಯಾತ್ಸಂದ್ರ ಚಂದ್ರಶೇಖರ್, ಜಿ ಪ್ರಕಾಶ್ ಅವರ ಪುಸ್ತಕಗಳು ಜನಮನವನ್ನು ಆಕರ್ಷಿಸಿದರೆ, ಎರಡನೇ ಪೀಳಿಗೆಯಲ್ಲಿ ಟಿ.ಕೆ. ರಾಮರಾವ್, ವಿಜಯ ಸಾಸನೂರ, ಎಚ್.ಕೆ. ಅನಂತರಾವ್, ಕೌಂಡಿನ್ಯ, ಸುದರ್ಶನ ದೇಸಾಯಿ ಮುಂತಾದವರು 80-90ರ ದಶಕದವರೆಗೂ ಈ ವರ್ಗದಲ್ಲಿ ಮೇಲುಗೈ ಸಾಧಿಸಿ ಆ ಸಾಹಿತ್ಯ ವರ್ಗಕ್ಕೆ ತನ್ನದೆ ಆದ ಸ್ಥಾನಮಾನ ನೀಡಿ ಬೆಳೆಸಿದ್ದರು.
ಪತ್ತೇದಾರಿ ಕಾದಂಬರಿಯೆಂದರೆ ಕೇವಲ ಹಳಸಲು ಕೊಲೆ-ವಂಚನೆ ಪಿತೂರಿಯ ಹಂದರ, ಅದರಲ್ಲಿ ಲೋಭಿ ಗಂಡುಗಳು, ಬಲೆ ಬೀಸುವ ಕಾಮಿನಿಯರು, ಕೀಳು ಅಭಿರುಚಿಯ ಶೃಂಗಾರ ದೃಶ್ಯಗಳು ಇವೇ ಮಾತ್ರವಲ್ಲ, ಅದೂ ಸಹ ಸಬಲ ಮತ್ತು ಗಂಭೀರ ಕಾದಂಬರಿ ಪ್ರಕಾರವೇ ಎಂದು ಪ್ರತಿಪಾದಿಸಿದವರೂ ಇದ್ದಾರೆ. ಇಂಗ್ಲೀಷಿನ ಅಗಾಥಾ ಕ್ರಿಸ್ಟೀ, ಆರ್ಥರ್ ಕಾನನ್ ಡಾಯಲ್, ಅರ್ಲ್ ಸ್ಟ್ಯಾನ್ಲಿ ಗಾರ್ಡನರ್, ರೇಮಂಡ್ ಚಾಂಡ್ಲರ್, ಜೇಮ್ಸ್ ಹ್ಯಾಡ್ಲಿ ಚೇಸ್ ಮುಂತಾದ ಪ್ರಸಿದ್ಧರ ಕೃತಿಗಳ ಸರಿಸಮನಾಗಿ ನಿಲ್ಲಬಲ್ಲ ಜನಪ್ರಿಯವೂ ಆಗಬಲ್ಲ ಕನ್ನಡ ಪುಸ್ತಕಗಳು ಎಂಬ ಕೀರ್ತಿಯೂ ಕೆಲವಕ್ಕೆ ಸಂದಿತ್ತು. ಪುಸ್ತಕ ಮಾರುಕಟ್ಟೆಯಲ್ಲಿಯೂ ಇವು ಬಿರುಸಾಗಿ ಬಿಕರಿಯಾಗುತ್ತಿದ್ದವು. ಬರೇ ಪಡ್ಡೆ ಹುಡುಗರಲ್ಲದೇ ಕುಟುಂಬಗಳ ಸಾಹಿತ್ಯ ಓದಿನಲ್ಲಿಯೂ ಹಲವು ಕೃತಿಗಳು ಬೆರೆತುಹೋದವು.
ಅಂದು-ಇಂದು
ಅನಂತರದ ದಶಕಗಳಲ್ಲಿ ಹಲವಾರು ಲೇಖಕರು ಪ್ರವರ್ಧಮಾನಕ್ಕೆ ಬಂದು ಆಧುನಿಕ ಪೊಲೀಸ್ ತನಿಖಾ ವಿಧಾನಗಳು, ಹೊಸಬಗೆಯ ತಂತ್ರಜ್ಞಾನವನ್ನು ಅಳವಡಿಸಿದ ಕಥಾವಸ್ತು, ನೂತನ ನಿರೂಪಣಾ ಶೈಲಿಗಳನ್ನು ಬಳಸಿಕೊಂಡು ಸಬಲವಾದ ಹಾಗೂ ನೈಜತೆಗೆ ಸನಿಹವಿರುವ ಥ್ರಿಲಿಂಗ್ ಕೃತಿಗಳನ್ನು ನೀಡಿದ್ದಾರೆ:
ಸಾಧಕರು ಮತ್ತು ಪ್ರಕಟನೆಗಳು
ಅಂತಹವರಲ್ಲಿ ಕೆಲವರ ಸಾಧನೆಯನ್ನು ನೆನೆಸಿಕೊಳ್ಳುವ ಚಿಕ್ಕ (ಅಪೂರ್ಣವೂ ಇರಬಹುದು) ಪ್ರಯತ್ನ ಇಲ್ಲಿದೆ:
೧. ಯತಿರಾಜ್ ವೀರಾಂಬುಧಿ: ಕನ್ನಡದ ಹಲವು ಸಾಹಿತ್ಯ ಪ್ರಕಾರಗಳಲ್ಲಿ ದಶಕಗಳಿಂದ ಸೇವೆ ಸಲ್ಲಿಸಿ ಕಥೆ, ಕಾದಂಬರಿ, ಆಧ್ಯಾತ್ಮಿಕ, ಅನುವಾದ, ವ್ಯಕ್ತಿತ್ವ ವಿಕಸನ ಹೀಗೆ ಎಲ್ಲ ಬಗೆಯ ಕೃತಿಗಳಲ್ಲೂ ವಿಜೃಂಭಿಸಿರುವ ಬಹುಮುಖ ಪ್ರತಿಭೆಯ ಹಿರಿಯ ಲೇಖಕ ಶ್ರೀ ಯತಿರಾಜರು ತೆಲುಗಿನ ಯಂಡಮೂರಿ ವೀರೇಂದ್ರನಾಥರ ಕಾದಂಬರಿ ಮತ್ತಿತರ ಪುಸ್ತಕಗಳನ್ನು ಸಹ ಅನುವಾದ ಮಾಡಿದ್ದಾರೆ. ಪತ್ತೇದಾರಿ ಪ್ರಬೇಧದಲ್ಲಿ ಸ್ವಂತವಾಗಿ ‘ಪರಿಶೋಧ’, ‘ಸಾಬೀತು’, ಹಸ್ತಕ್ಷೇಪ’ ಮತ್ತು ಮನೋವೈಜ್ಞಾನಿಕ ಕಥಾವಸ್ತುವಿನ ರಹಸ್ಯವಿದ್ದ ‘ಕಪ್ಪು ನದಿ’ ಕೃತಿಗಳನ್ನು ನೀಡಿ ಯಶಸ್ವಿಯಾಗಿದ್ದಾರೆ.
೨. ಕೆ.ಎನ್. ಗಣೇಶಯ್ಯ: ಕೃಷಿ ವಿಜ್ಞಾನದ ಅಧ್ಯಾಪಕರಾಗಿದ್ದ ಗಣೇಶಯ್ಯನವರು ಈ ಕಳೆದ ದಶಕಗಳಲ್ಲಿ ಅತಿ ಯಶಸ್ವಿಯಾದ ಪುರಾತನ ಐತಿಹಾಸಿಕ ರಹಸ್ಯ, ನಿಧಿ ಶೋಧ, ವೈಜ್ಞಾನಿಕ, ವೈದ್ಯಕೀಯ ಥ್ರಿಲರ್ ಧಾಟಿಯ ೨೫ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಕರಿಸಿರಿಯಾನ, ಕನಕ ಮುಸುಕು, ಕಪಿಲಿಪಿಸಾರ, ರಕ್ತಸಿಕ್ತ ರತ್ನ, ಮೂಕಧಾತು, ಬಳ್ಳಿಕಾಳ ಬೆಳ್ಳಿ, ಜಲ-ಜಾಲ ಇತ್ಯಾದಿ ಬಹುಚರ್ಚಿತ ಹಾಗು ಬಹು ಮುದ್ರಣ ಕಂಡ ಜನಪ್ರಿಯ ಕೃತಿಗಳು.
೩. ರಾಘವೇಂದ್ರ ಬಿ. ರಾವ್ ‘ಅನು ಬೆಳ್ಳೆ’ : ಶ್ರೀಯುತರು ಹಲವು ವರ್ಷಗಳಿಂದ ಪತ್ತೇದಾರಿ ವರ್ಗದ ಸಾಹಿತ್ಯವನ್ನು ಸಮೃದ್ಧಿಗೊಳಿಸಿದ್ದು ಇದುವರೆಗೂ-ಹಾವಿನ ಮನೆ, ಜಿದ್ದು, ಕುಡ್ಪಲ್ ಭೂತ, ರಣರಂಗ, ಚಕ್ರವ್ಯೂಹ, ಅನ್ವೇಷಿಕಾ, ಬ್ಲ್ಯಾಕ್ ಕಾಫಿ ಇತ್ಯಾದಿ ಕಾದಂಬರಿಗಳನ್ನೂ ರಚಿಸಿದ್ದಾರೆ.
೪. ಕೌಶಿಕ್ ಕೂಡುರಸ್ತೆ: ಯುವ ಪ್ರತಿಭಾವಂತ ಲೇಖಕರಾದ ಕೌಶಿಕ್ ಇದುವರೆಗೆ ೮ ಕಾದಂಬರಿಗಳನ್ನು ಬರೆದಿದ್ದು- ಕಾಲಾಯ ತಸ್ಮೈ ನಮಃ, ಸ್ವಪ್ನದ ಬೆನ್ನೇರಿ, ತ್ಯಾಗರಾಜ್ ಕಾಲೋನಿ, ಸುಬ್ರಹ್ಮಣ್ಯಪುರ, ಅರ್ಧ ಸತ್ಯ ಅರ್ಧ ಸುಳ್ಳು, ಒಂದು ಕೋಪಿಯ ಕಥೆ, ಕಪ್ಪು ಕಾದಂಬರಿ ಕೇಸು, ಕೇಸ್ ಆಫ್ ಕಮಲಾಪುರ ಎಸ್ಟೇಟ್ ಇವುಗಳಲ್ಲಿ ಸೇರಿವೆ.
೫. ಡಿ ಎನ್ ಗೀತಾ: ಶ್ರೀಮತಿ ಗೀತಾರವರು ಸಹ ಪತ್ತೇದಾರಿ ಸಾಹಿತ್ಯದ ಕೃಷಿ ಮಾಡಿದವರು. ‘ಸುಳಿಗಾಳಿ’, ‘ಹುಣ್ಣಿಮೆ ನೆರಳು’, ‘ಮೌನ ಮಂಟಪ’ ಮತ್ತು ‘ಶಿವರಾತ್ರಿ ಬೆಟ್ಟ’ ಇವರ ಜನಪ್ರಿಯ ಕೃತಿಗಳಾಗಿವೆ.
೬. ವಾಸುದೇವ ಮೂರ್ತಿ: ಹಲವಾರು ಪತ್ರಿಕೆಗಳಲ್ಲಿ ಇವರ ಕಥೆ ಕಾದಂಬರಿಗಳು ಪ್ರಕಟವಾಗಿದ್ದು ಇವುಗಳಲ್ಲಿ- ದಿ ಪರ್ಫೆಕ್ಟ್ ಮರ್ಡರ್, ಪಾತಾಳ ಗರಡಿ, ಹುಲಿಹೆಜ್ಜೆ (ಬರುತ್ತಿದೆ) ಕೃತಿಗಳು ಸೇರಿವೆ.
೭. ರವಿರಾಜ್ ಬೈಕಂಪಾಡಿ: ಹವ್ಯಾಸಿ ಪತ್ತೇದಾರಿ ಕಥೆಗಾರರಾದ ಇವರು ‘ಅದಲು ಬದಲು’ ಮತ್ತು ‘ಅನಾಮಧೆಯ ಕರೆ’ ಎಂಬ ಎರಡು ಕಾದಂಬರಿಗಳನ್ನೂ ಸುಮಾರು 50ಕ್ಕೂ ಹೆಚ್ಚು ಸಣ್ಣ ಕಥೆಗಳನ್ನೂ ಪತ್ತೇದಾರಿ ಪ್ರಕಾರದಲ್ಲಿ ರಚಿಸಿ ಜನಪ್ರಿಯರಾಗಿದ್ದಾರೆ.
೮. ಪಿ.ವಿ. ಪ್ರದೀಪ್ ಕುಮಾರ್: ಇವರು ಜನಪ್ರಿಯ ಪತ್ತೇದಾರಿ ಕಾದಂಬರಿ ಮತ್ತು ಕಥೆಗಳ ಅನುಭವೀ ಲೇಖಕರಾಗಿದ್ದು ಸುಮಾರು 50 ಕಾದಂಬರಿಗಳನ್ನು ಬರೆದಿದ್ದಾರೆ ಎನ್ನಲಾಗಿದೆ. ಅವುಗಳಲ್ಲಿ ಮಿ.ಟೈಡ್, ರಹಸ್ಯ ಗುಂಪು, ಇನ್ಸ್ಪೆಕ್ಟರ್ ವಿನೋದ್, ಸೂಪರ್ ಶಂಕರ್, ಮರಣ ಶಾಸನ, ಕಾಣದ ನೆರಳು, ಒಳಸುಳಿ, ಚಂಡಮಾರುತ, ರುದ್ರತಾಂಡವ, ವಿಪರ್ಯಾಸ, ಮತ್ತೊಂದು ಅಭೇಧ್ಯ, ಆ ಒಂದು ದಿನ – ಮುಂತಾದ ಹಲವು ಕೃತಿಗಳನ್ನು ತಮ್ಮ ಸ್ವಂತ ಪ್ರಕಾಶನದಲ್ಲಿ ಪ್ರಕಟ ಮಾಡಿದ್ದಾರೆ.
೯. ಎಂ.ವಿ. ನಾಗರಾಜರಾವ್: ಶ್ರೀಯುತರು ಕನ್ನಡದ ಹಿರಿಯ ಲೇಖಕರಾಗಿದ್ದು ವಿಶೇಷವಾಗಿ ಜೇಮ್ಸ್ ಹ್ಯಾಡ್ಲಿ ಚೇಸ್ ಕಾದಂಬರಿಗಳನ್ನು ಇಂಗ್ಲೀಷಿನಿಂದ ಕನ್ನಡ ಅನುವಾದ ಮಾಡಿದ್ದಾರೆ. ಅದರಲ್ಲಿ ಸುಮಾರು ೨೦ ಕಾದಂಬರಿಗಳು ಸೇರಿವೆ. ಪ್ರಮುಖವಾಗಿ ಈ ಪುಸ್ತಕಗಳು ಕಂಡುಬಂದಿವೆ- ನೆಲವೆಲ್ಲಾ ಕಿವಿ, ದಿಡೀರ್ ಹಣ ಬದಿಗೆ ಹೆಣ, ಹಣ ಹಣ ಝಣ ಝಣ, ಚೆಲುವೆ ರಣಹದ್ದುಗಳಿವೆ ಜೋಕೆ, ಮೃತ್ಯು ಬಂಧನ , ಹೈಜಾಕ್, ಬಿಸಿ ಮೈ ಬಿಸಿ ರಕ್ತ , ನೇಣುಗಂಬದ ನೆರಳು , ಅಪಹರಣ ಜಾಲ, ಮೃತ್ಯು ಚುಂಬನ, ಸಾವಿನ ಸುಳಿ, ಸಾವಿನ ಅಲೆ ಮೋಹದ ಬಲೆ, ನಲ್ಲೆ ನಿನ್ನ ನಾ ಬಲ್ಲೆ.
೧೦. ನಾಗೇಶ್ ಕುಮಾರ್ ಸಿಎಸ್ (ಲೇಖಕರ ಪರಿಚಯ): ಇವರ ಪತ್ತೇದಾರಿ, ವೈಜ್ಞಾನಿಕ ಕಥೆ ಕಾದಂಬರಿಗಳು ನಾಡಿನ ಪ್ರಸಿದ್ಧ ವಾರಪತ್ರಿಕೆಗಳು, ಮಾಸಿಕಗಳಲ್ಲಿ ಎಂಟು ಕಾದಂಬರಿ ಕಥಾ ಸಂಕಲನಗಳು ಪ್ರಕಟವಾಗಿದ್ದು ಇದರಲ್ಲಿ- , ಕರಾಳ ಗರ್ಭ, ಮುಳುಗುವ ಕೊಳ, ನಾಳೆಯನ್ನು ಗೆದ್ದವನು, ಸುವರ್ಣ ಕರಾವಳಿ, ಅಬಲೆಯ ಬಲೆ, ಹಿಮಜಾಲ, ಕೊನೆಗಾಣದ ರಾತ್ರಿ ಮುಂತಾದ ಕಾದಂಬರಿಗಳೂ, ರಕ್ತಚಂದನ, ರೋಚಕಥೆ ಮತ್ತು ರಹಸ್ಯಾಯನ ಕಥಾಸಂಕಲನಗಳೂ ಸೇರಿವೆ.
ಕೊನೆಯ ಮಾತು:
ಪತ್ತೇದಾರಿ ಸಾಹಿತ್ಯ ಮೂಲೆಗುಂಪಾಗಿಲ್ಲ, ಹೊಸ ನೀರು ಬಂದಿದೆ, ಬರುತ್ತಿದೆ. ಹೀಗೆ ಇನ್ನೂ ಹಲವರು ಪತ್ತೇದಾರಿ ಕಥೆ, ಕಾದಂಬರಿಗಳನ್ನು ಬರೆದಿರಬಹುದು, ಇಲ್ಲಿ ಎಲ್ಲರನ್ನೂ ಉಲ್ಲೇಖ ಮಾಡಲು ಸಾಧ್ಯವಾಗಿಲ್ಲ. ಆಧುನಿಕ ಕನ್ನಡದಲ್ಲಿ ಹೀಗೆ ಹೊಸಬರ ಸೇರ್ಪಡೆ ಮತ್ತು ಸಾಧನೆಯಿಂದ ಪತ್ತೇದಾರಿ ಸಾಹಿತ್ಯವೂ ಬೆಳೆದು ಕೆಲವರ್ಗದ ಓದುಗರನ್ನು ತಲುಪುತ್ತಲೂ ಇದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಈ ವರ್ಗಕ್ಕೆ ಜನಮನ್ನಣೆ ಮತ್ತು ಪ್ರೋತ್ಸಾಹ ಕಂಡುಬಂದಲ್ಲಿ ಪತ್ತೇದಾರಿ ಸಾಹಿತ್ಯವೂ ಕೀರ್ತಿಯ ಸ್ಥಾನವನ್ನು ಪಡೆಯುವುದರಲ್ಲಿ ಸಂಶಯವಿಲ್ಲ.
-ನಾಗೇಶ್ ಕುಮಾರ್ ಸಿ ಎಸ್