ಅಜ್ಞಾನದ ಕತ್ತಲೆಯನ್ನು ನಮ್ಮ ಬದುಕಿನಲ್ಲಿ ಹೋಗಲಾಡಿಸಿ, ಜ್ಞಾನದ ಜ್ಯೋತಿ ಬೆಳಗಿಸುವ ಏಕೈಕ ವ್ಯಕ್ತಿ ಎಂದರೆ ‘ಗುರು’. ನಾನು ಹೇಳಲು ಹೊರಟಿರುವ ಜ್ಯೋತಿ ಎಣ್ಣೆಯ ಮಿಣಿ ಮಿಣಿ ದೀಪವಲ್ಲ, ಅದು ಸೂರ್ಯನ ಪ್ರಕಾಶದಷ್ಟು ಪ್ರಖರ, ಅದು ಬೆಳಗಿಸಿದ್ದು ಒಬ್ಬರೋ ಇಬ್ಬರ ಜೀವನವಲ್ಲ, ಇಡಿ ಊರನ್ನ.
1900 ರ ಮಾತು, ಬ್ರಿಟಿಷರ ಆಳ್ವಿಕೆ, ಮುಗ್ಧ ಹಳ್ಳಿಗರು ಶಿಕ್ಷಣದಿಂದ ದೂರವಾಗಿ, ಅನಕ್ಷರಸ್ತರಾಗಿ ಉಳಿದಿದ್ದರು . ಮಹಿಳೆಯರಿಗಂತೂ ಶಾಲೆಗೆ ಹೋಗುವುದು ಒಂದು ಅಪರಾಧ ಎನ್ನುವ ಕಾಲವದು, ಅಂತಹ ಊರಿಗೆ ಸೂರ್ಯನ ಬೆಳಕಿದ್ದರು ಅಜ್ಞಾನದ ಅಂಧಕಾರದಲ್ಲಿ ದಿನದ 24 ಗಂಟೆಯೂ ಕಳೆಯುತ್ತಿದ್ದ ಸನ್ನಿವೇಶದಲ್ಲಿ ಊರಿಗೆ ಒಬ್ಬ ಮಹಾನುಭಾವನ ಪ್ರವೇಶವಾಗುತ್ತದೆ. ಅವನೇ ಇವರ ಬದುಕಿಗೆ ಬೆಳಕಾಗಿ, ಜ್ಞಾನದ ದೀವಿಗೆಯಾಗಿ ಶಿಕ್ಷಣದ ಅರಿವನ್ನು ಮೂಡಿಸಿದ ಸದಾ ಬೆಳುಗುತ್ತಿರುವ ನಂದಾದೀಪವಾಗಿ ನಿಲ್ಲುತ್ತಾನೆ.
ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಆ ಶ್ರೇಷ್ಠ ಶಿಕ್ಷಕನ ಪರಿಚಯ ಮಾಡಿ ಕೊಡಲು ನನಗೆ ಸಂತೋಷವೆನಿಸುತ್ತದೆ.
ಇವರ ಪರಿಚಯದ ಮುನ್ನ ಒಂದು ವಿಸ್ಮಯದ ವಿಚಾರವನ್ನು ಹೇಳಲು ಬಯಸುತ್ತೇನೆ. ಪ್ರಾಯಶ ವಿಶ್ವದಲ್ಲೇ, ಶಾಲಾ ಶಿಕ್ಷಕನಿಗೆ ಒಂದು ದೇಗುಲ ಕಟ್ಟಿಸಿದ್ದು ಇಲ್ಲಿ ಮಾತ್ರ ಎಂದು ಹೇಳಬಹುದು. ಈ ಊರಿನ ಹಾಗು ಸುತ್ತುಮುತ್ತಲಿನವರು ಈ ಮಾಸ್ತ್ರರರನ್ನು ( ಮೇಷ್ಟ್ರು ) ದೇವರಂತೆ ಇಂದಿಗೂ ಪೂಜಿಸುತ್ತಾರೆ. ಪ್ರತಿವರ್ಷ ಅವರ ಸ್ಮರಣಾರ್ಥ ಶಿವರಾತ್ರಿಯಂದು ಜಾತ್ರೆ ನಡೆಯುತ್ತದೆ.
ಹೌದು ನೀವು ಕೇಳಿರಬಹುದು….ಇವರ ಹೆಸರು ರೇವಣಸಿದ್ದಪ್ಪ ಅವರಸಂಗ ಮಾಸ್ತರ, ವಿಜಯಪುರ ಜೆಲ್ಲೆಯ ಅಥರ್ಗ ಎಂಬ ಊರಿನಲ್ಲಿ ಇವರ ಮೂರ್ತಿ ಪ್ರತಿಷ್ಠಾಪಿಸಿ ಅದಕ್ಕೊಂದು ಗುಡಿ ಕಟ್ಟಿಸಿ, ಇಂದಿಗೂ ದೇವರಂತೆ ಪೂಜೆಗೈಯುತ್ತಾರೆ. ಮನೆ ಮನೆಯಲ್ಲಿ ದೇವರೊಂದಿಗೆ ಇವರ ಪಟವಿಟ್ಟು ಪೂಜಿಸುತ್ತಾರೆ, ತಮ್ಮ ಮಕ್ಕಳಿಗೆ ಇವರ ಹೆಸರು ಇಡುತ್ತಾರೆ.
ಈ ಶಿಕ್ಷಕರ ಪ್ರತಿ ಈ ಊರಿನ ಜನಕ್ಕೆ ಯಾಕಿಷ್ಟು ಭಕ್ತಿ, ಯಾಕಿಷ್ಟು ಆದರ, ಇವರು ಪವಾಡ ಪುರುಷರೆ, ಚಮತ್ಕಾರಿ ಬಾಬಾಗಳೆ???
ಅಲ್ಲ…! ಇವರು ಮಂತ್ರದಿಂದ ಪವಾಡ ಮಾಡಿ ಪ್ರಸಿದ್ಧರಾಗಲಿಲ್ಲ, ಇವರು ಜನರಿಗೆ ಸಾಕ್ಷರತೆಯನ್ನು ಹಂಚಿ, ಜನರ ಕಣ್ಣಲ್ಲಿ ಪವಾಡ ಪುರುಷರಾದರು. ಆ ಊರಿನ ಮಕ್ಕಳಿಗೆ, ಯುವಕರಿಗೆ, ಯುವತಿಯರಿಗೆ, ವಯಸ್ಕರರಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿ, ಶಾಲೆಯ ಕಲಿಕೆಯತ್ತ ಆಸಕ್ತಿ ಬೆಳಿಸಿದ ಜ್ಯೋತಿ ಆದರು.
ಶಿಕ್ಷಕ ವೃತ್ತಿಯಿಂದ, ಜಗತ್ತಿನ ಎಲ್ಲ ವೃತ್ತಿಗಳು ಬೆಳೆಯುತ್ತವೆ. ಶಿಕ್ಷಕನಿಂದ ತಾನೆ ಮಕ್ಕಳು ಕಲಿತು ದೊಡ್ಡವರಾಗಿ ಬೇರೆ ಬೇರೆ ವೃತ್ತಿಯನ್ನು ಆಯ್ದುಕೊಳ್ಳುತ್ತಾರೆ. ಡಾಕ್ಟರ್ ಆಗಲು, ವ್ಯದ್ಯಕೀಯ ಶಿಕ್ಷಣ ಒಬ್ಬ ಶಿಕ್ಷಕನಿಂದಲೇ ಪಡೆಯಬೇಕು, ಅದೆ ರೀತಿ ಇಂಜಿನಿಯರ್, ಪೈಲಟ್, ವಿಜ್ಞಾನಿ. ಆದರಿಂದ ಶಿಕ್ಷಕರ ಸ್ಥಾನ ಅತೀ ಮಹತ್ವದ್ದಾಗಿದೆ, ನಾವು ಭಾರತೀಯರು ಅವರಲ್ಲಿ ದೇವರನ್ನು ಕಾಣುತ್ತೆವೆ.
ರೇವಣಸಿದ್ದಪ್ಪ ಮಾಸ್ತರರಿಂದ ಕಲಿತ ವಿದ್ಯಾರ್ಥಿಗಳು ಉನ್ನತ ಪದವಿ ಅಲಂಕರಿಸಿದರಂತೆ. ಅವರಿರಲಿಲ್ಲವೆಂದರೆ “ನಾವು ದನ ಕಾಯ್ಕೊಂತ ಇರತಿದ್ದ್ವಿ” ಆಂತ ಸ್ಮರಿಸುತ್ತಾರೆ.
ಈ ದೈವ ಸ್ವರೂಪ ಶಿಕ್ಷಕರು ಹುಟ್ಟಿದ್ದು, 1889, ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಅವರಸಂಗ ಮನೆತನದ ಶಿವಪ್ಪ ಮತ್ತು ಲಕ್ಷ್ಮಿಬಾಯಿ ದಂಪತಿಗೆ. ಆಗಿನ ಕಾಲದಲ್ಲಿ ಮುಲ್ಕಿ ಪರೀಕ್ಷೆ ಹಾಗು ಟೀಚರ್ಸ್ ಟ್ರೇನಿಂಗ್ ನಲ್ಲಿ ಒಳ್ಳೆಯ ಅಂಕಗಳೊಂದಿಗೆ ಪಾಸುಮಾಡಿ, ಶಿಕ್ಷಕನೇ ಆಗಬೇಕೆಂಬ ಹಂಬಲದಿಂದ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಉಕ್ಕಲಿಯಲ್ಲಿ ನಂತರ ಅಥರ್ಗದಲ್ಲಿ ಸರಕಾರಿ ಶಾಲೆಯ ಉಪ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಇವರು, ನಸುಕಿನಲ್ಲಿ ನಾಲ್ಕು ಗಂಟೆಗೆ ಕಂದಿಲು ಹಿಡಿದುಕೊಂಡು ಮನೆ ಮನೆಗೆ ಅಲೆದು, ಮಕ್ಕಳನ್ನು ಎಬ್ಬಿಸಿ ಶಾಲೆಗೆ ಕರೆದುತರುತ್ತಿದ್ದರು. ಮತ್ತೆ ಸಂಜೆ ಏಳುಗಂಟೆಗೆ ಕಂದಿಲು ಹಿಡಿದುಕೊಂಡು, ಮನೆಗಳಿಂದ ವಯಸ್ಕರನ್ನು ಕರೆದು ತಂದು ಅವರಿಗೂ ಶಿಕ್ಷಣದ ರುಚಿ ಹಚ್ಚುತ್ತಿದ್ದರು. ಓದು ಬರುವ ಯುವಕರಿಂದ, ಅನಕ್ಷರಸ್ಥ ವಯಸ್ಕರರಿಗೆ ಕೆಲವೊಂದು ಪಾಠ ಓದಿ ಹೇಳಿಸುತ್ತಿದ್ದರು. ಓದಲು ಬರಲಿಲ್ಲ ಅಂದರೆ ಏನಾಯಿತು ಕೇಳಿಸಿಕೊಂಡು ಅಂದರೆ ಶ್ರವಣದಿಂದ ಜ್ಞಾನ ಪಡೆಯಬಹುದಲ್ಲವೇ ಎಂಬುದು ಅವರ ವಿಚಾರವಾಗಿತ್ತು.
ಈ ವೈಚಾರಿಕತೆಯಿಂದ ಆ ಊರಿನ ಹೆಣ್ಣು ಮಕ್ಕಳು ಶಾಲೆಗೆ ಬರುವಂತೆ ಹಳ್ಳಿ ಜನರಿಗೆ ಮನವೊಲಿಸುವಲ್ಲಿ ಗೆಲವು ಸಾಧಿಸಿದರು. ಕೂಲಿನಾಲಿ ಮಾಡಿ ಪುಡಿಗಾಸು ಗಳಿಸುವದರಲ್ಲೇ ಸಮಾಧಾನಪಡುವ ಗ್ರಾಮಸ್ಥರಿಗೆ, ಕಲೆಕ್ಟರ್, ಡಾಕ್ಟರ್, ಇಂಜಿನಿಯರ ಆಗಿ ನೋಟುಗಳನ್ನು ಎಣಿಸುವ ಸಂಬಳ ಪಡೆಯಬಹುದು ಎಂಬ ದೊಡ್ಡ ಗುರಿಯನ್ನು ತೋರಿಸಿದರು.
ಬರೀ ಶಾಲಾ ಪುಸ್ತಕಕ್ಕೆ ಜ್ಞಾನ ಸೀಮಿತವಾಗಬಾರದು, ಬೇರೆ ಬೇರೆ ಪುಸ್ತಕಗಳು, ವರ್ತಮಾನ ಪತ್ರಿಕೆಗಳನ್ನು, ಶಾಲಾ ಮಕ್ಕಳು ಹಾಗು ಗ್ರಾಮಸ್ಥರು ಓದಬೇಕು ಎಂದು ವಾಚನಾಲಯವನ್ನು ಪ್ರಾರಂಭಿಸಲು ಶ್ರಮಪಟ್ಟರು.
” ಅರಳಿ ಕಟ್ಟಿ ಮ್ಯಾಲೆ, ಬೀಡಿ ಸೆದಕೊಂತ, ಹಾಳ ಹರಟಿ ಹೊಡ್ಕೊಂತ ಖಾಲಿ ಕುಡಬ್ಯಾಡರಿ, ವಾಚನಾಲಯಕ್ಕೆ ಹೋಗಿ ದಿನ ಪತ್ರಿಕೆ ಓದ್ರಿ ” “ಜಗತ್ತಿನಲ್ಲಿ, ದೇಶದಲ್ಲಿ ಏನು ನಡೆಯುತ್ತಿದೆ ಎಂಬದನ್ನು ತಿಳಿದುಕೊಳ್ಳಿ” ಎಂದು ತಿಳುವಳಿಕೆ ಕೊಡುತ್ತಿದ್ದರು. ಇದರಿಂದಾಗಿ ಗ್ರಾಮಸ್ಥರಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಕೂಡ ಹಚ್ಚಿದರಂತೆ. ದೇಶಭಕ್ತಿಯನ್ನುಇದರಿಂದಾಗಿ ಗ್ರಾಮಸ್ಥರಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಕೂಡ ಹಚ್ಚಿದರಂತೆ. ದೇಶಭಕ್ತಿಯನ್ನು ಪಸರಿಸಿದರಂತೆ. ಹೆಣ್ಣೊಂದು ಕಲಿತರೆ ಮನೆಮನೆಗಳಲ್ಲಿ ಶಾಲೆ ಎಂದು ತಿಳಿಸಿಕೊಟ್ಟು, ಬಾಲ್ಯವಿವಾಹವನ್ನು ಹಾಗು ಇನ್ನಿತರ ಮೂಢನಂಬಿಕೆಗಳನ್ನು ತಡೆಯುವಲ್ಲಿ ಯಶಸ್ವಿಯಾದರಂತೆ.
ಇವರ ಕಾರ್ಯವೈಖರಿ ಎಷ್ಟು ಪ್ರಭಾವಿ ಆಗಿತ್ತೆಂದರೆ, ಇವರು ಹಾಯ್ದು ಹೋದರೆ ಜನರು ಎದ್ದು ಕೈಮುಗಿಯುತ್ತಿದ್ದರು. ಅಲ್ಲಿ ಬಂದ ಬ್ರಿಟಿಷ ಕಲೆಕ್ಟರ್ ಕೂಡ, ಊರ ಜನರು ಇವರಿಗೆ ಕೊಡುವ ಮರ್ಯಾದೆಯನ್ನು ನೋಡಿ ಚಕಿತನಾದನಂತೆ.
ಯಶಸ್ವಿ ವಿದ್ಯಾರ್ಥಿಯೊಬ್ಬ ಉಡುಗೊರೆ ಕೊಡಲು ಬಂದರೆ, ಉಡುಗರೆ ಲಂಚವಿದ್ದಂತೆ ನನಗೆ ಬೇಡ ಎಂದು ನಿರಾಕರಿಸಿ ತಮ್ಮ ನಿಸ್ವಾರ್ಥ ಸೇವೆಯ ಪರಿಚಯಮಾಡಿಕೊಟ್ಟರು. ತಮಗೆ ದೊರಕುವ ನಲವತ್ತು ರೂಪಾಯಿ ಸರಕಾರಿ ಸಂಬಳದಲ್ಲಿ ಮುಕ್ಕಾಲು ಭಾಗದಷ್ಟು ಸಮಾಜ ಸೇವೆಗೆ ಮೀಸಲಿಡುತ್ತಿದ್ದರು. ಬಡ ವಿದ್ಯಾರ್ಥಿಗಳಿಗೆ, ಪುಸ್ತಕ, ಊಟ, ಉಡುಗೆಯ ವ್ಯವಸ್ಥೆ ತಮ್ಮ ಹಣದಲ್ಲಿಯೇ ಮಾಡುತ್ತಿದ್ದರು.ಇದರಿಂದಾಗಿ ತಿಂಗಳ ಕೊನೆಯಲ್ಲಿ ಅವರ ಜೇಬು ಮತ್ತೆ ಖಾಲಿ. ಯಾರ ಹತ್ತಿರ ಏನನ್ನು ಬಯಸದೆ, ಬರೀ ಜನರ ಏಳಿಗೆಯನ್ನು ಮಾತ್ರ ಬಯಸುತ್ತಿದ ಅಪರೂಪದ ವ್ಯಕ್ತಿ ನಮ್ಮ ವಿಜಯಪುರ ಜೆಲ್ಲೆಯ ರೇವಣಸಿದ್ದಪ್ಪನವರು.
ಮಹಾನ್ ವ್ಯಕ್ತಿಗಳು ಜನರಿಗೆ ಹೇಗೆ ಬೇಕಾದವರೋ ಹಾಗೆ ದೇವರಿಗೆ ಕೂಡ ಬೇಕಾದವರು. ಸಣ್ಣವಯಸ್ಸಿನಲ್ಲಿ ಅಂದರೆ 36 ವರ್ಷ ವಯಸ್ಸಿನಲ್ಲಿ (1925) ತಮ್ಮ ಇಹಲೋಕದ ಯಾತ್ರೆ ಮುಗಿಸಿದರು. ತಮ್ಮ ಜೀವಿತಾವಧಿಯಲ್ಲಿ, ಪ್ರತಿ ನಿಮಿಷವನ್ನು ಅಥರ್ಗ ಊರಿನ ಜನರ ಸರ್ವತೋಮುಖ ಪ್ರಗತಿಯತ್ತ ಮಾತ್ರ ಗಮನವಹಿಸಿದರು. ತಮ್ಮ ಆರೋಗ್ಯ, ಸಂಪತ್ತು, ಮನೆ ಮಕ್ಕಳ ಬಗ್ಗೆ ಯೋಚಿಸಲು ಅವರಿಗೆ ಸಮಯವೇ ಸಿಗಲಿಲ್ಲವೆನಿಸುತ್ತದೆ. ಅವರಿಗೆ ಇದ್ದ ಆಯುಷ್ಯದಲ್ಲಿ ಇಷ್ಟೆಲ್ಲಾ ಸಾಧಿಸುವ ತವಕವಿರಬಹುದು. ಅದಕ್ಕೆ ಆವರು ಹಗಲು ರಾತ್ರಿ ಒಂದು ಮಾಡಿ ಶಿಕ್ಷಣದ ಕ್ರಾಂತಿಯ ಬೀಜ ಬಿತ್ತಿದರು. ಆ ಬೀಜ ಬೆಳದು ಹೆಮ್ಮರವಾಗಿದೆ, ಈಗಲು ಅಥರ್ಗ ಗ್ರಾಮದಲ್ಲಿ, ಆವರು ಪಾಠ ಮಾಡಿದ ಶಾಲೆಯಲ್ಲಿ ವಿದ್ಯಾರ್ಥಿಗಳು ಪಾಠ ಕಲಿಯುತ್ತಿದ್ದಾರೆ, ಆವರು ತೋರಿಸಿದ ಗುರಿಯನ್ನು ತಲುಪಲು ಪರಿಶ್ರಮಪಡುತ್ತಿದ್ದಾರೆ. ಅವರ ಮೂರ್ತಿಗೆ, ಆ ಶಾಲೆಯ ವಿದ್ಯಾರ್ಥಿನಿಯರು ಕರ್ಪೂರದ ದೀಪ ಹಚ್ಚಿ ಆರತಿ ಮಾಡುತ್ತಿದ್ದಾರೆ. ರೇವಣಸಿದ್ದಪ್ಪ ಗುರುಗಳು, ಪೂಜೆ ಇಂದಿಗೂ ಅದೇ ಭಕ್ತಿಯಿಂದ ನಡೆಯುತ್ತಿದೆ.
ನಮ್ಮ ನಾಡಿನ ಇಂತಹ ಶ್ರೇಷ್ಠ ದೃಷ್ಟಾಂತಗಳ ಅರಿವು ಮೂಡಿಸಲು ಪೋಷಕರಿಗೆ ಇದರ ಮಾಹಿತಿ ಇರಬೇಕು. ಕನಿಷ್ಠ ಪಕ್ಷ ನಮ್ಮ ಕರ್ನಾಟಕದ ರಾಜ್ಯದ ರೇವಣಸಿದ್ದಪ್ಪರಂತ ಹಲವು ಅನರ್ಘ್ಯ ರತ್ನಗಳ ಪರಿಚಯ ನಮಗೆ ಹಾಗು ನಮ್ಮ ಮಕ್ಕಳಿಗಿರಬೇಕಲ್ಲವೇ?
ಆದರಿಂದ ಈ ಅರಿವಿನೊಂದಿಗೆ ನಮ್ಮ ಹೆಮ್ಮೆಯ ಕನ್ನಡ ಶಿಕ್ಷಕರನ್ನು, ಶಿಕ್ಷಕ ದಿನಾಚರಣೆಯಂದು ಸ್ಮರಿಸಬೇಕು, ನಮಿಸಿಬೇಕು ಹಾಗು ಅವರ ಆದರ್ಶಗಳನ್ನು ಕೈಲಾದಷ್ಟು ಪಾಲಿಸಬೇಕು.
– ಮೃಣಾಲಿನಿ. ಪಿ. ಅಗರಖೇಡ್