ಮುನಿಗಳು ಎಲ್ಲರಲ್ಲೂ ತಮ್ಮನ್ನು ಕಾಣುತ್ತಿದ್ದರು. ಅವರಿಗೆ ಆನೆಯೂ ಒಂದೇ, ಇರುವೆಯೂ ಒಂದೇ. ನಾಯಿ, ಹಂದಿಗಳು ಕೂಡ ಒಂದೇ. ನಮ್ಮಲ್ಲಿ ಇರುವ ಅನೇಕ ತಾರತಮ್ಯಗಳಲ್ಲಿ ವರ್ಣಾಶ್ರಮ ಧರ್ಮವೂ ಒಂದು. ಅದಕ್ಕೇ ಶ್ರೀಕೃಷ್ಣನು ತನ್ನ ಅಸ್ತಿತ್ವದ ಬಗ್ಗೆ ಹೇಳುತ್ತಾ, “ವಿದ್ಯಾವಿನಯ ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ | ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನ ||” ಎನ್ನುತ್ತಾನೆ. ಜ್ಞಾನಿಗಳು ವಿದ್ಯಾಸಂಪನ್ನರಾಗಿ ಬ್ರಾಹ್ಮಣನಲ್ಲಿಯೂ, ಗೋವಿನಲ್ಲಿಯೂ, ಆನೆಯಲ್ಲಿಯೂ, ನಾಯಿಯಲ್ಲಿಯೂ, ಚಂಡಾಲನಲ್ಲಿಯೂ ಆತ್ಮನನ್ನೇ ನೋಡುವರು. ನಾವು ಕೂಡ ನಮಗೆ ಕಾಣಸಿಗುವ, ನಾವು ನೋಡದಿರುವ ಜನರಲ್ಲಿ ಕೂಡ ಒಂದೇ ರೀತಿ ಆತ್ಮನನ್ನು ಗುರುತಿಸಿ ಅವರನ್ನು ನೋಡುವುದರಲ್ಲಿ ತಾರತಮ್ಯ ಮಾಡಕೂಡದು. ಅದರ ಬದಲು ನಾವು ಎಲ್ಲರನ್ನೂ ಗೌರವಿಸಬೇಕು. ನಾನೇನು ನೀನೇನು ಅವನೇನು ಒಂದೇ ಎಲ್ಲರೂ ಎನ್ನುತ್ತಾರೆ ಸಿನಿಮಾಕವಿಯೊಬ್ಬರು.
ಹೌದು, ಎಲ್ಲರ ಒಳಗೂ ಇರುವುದು ಒಂದೇ ಆತ್ಮ. ಕೃಷ್ಣ ಉಪಯೋಗಿಸಿರುವ ಮೂರು ಪ್ರಾಣಿಗಳ ಬಗ್ಗೆ ಒಂದು ಕುತೂಹಲಕಾರಿ ಅಂಶವಿದೆ. ಹಸುವನ್ನು ಸತ್ವಗುಣಕ್ಕೂ, ನಾಯಿಯನ್ನು ರಜೋಗುಣಕ್ಕೂ, ಆನೆಯನ್ನು ತಮೋಗುಣಕ್ಕೂ ಪ್ರತಿನಿಧಿಗಳೆನ್ನುತ್ತಾರೆ ದಾರ್ಶನಿಕರು. ಮುನಿಗಳು ಮನುಷ್ಯರ ದೇಹ, ಬುದ್ಧಿ, ಮನಸ್ಸುಗಳನ್ನು ದಾಟಿ ಅವರೊಳಗಿನ ಆತ್ಮವನ್ನು ಗುರುತಿಸಿ ಗೌರವಿಸುತ್ತಾರೆ. ನಾವು ಕೂಡ ಹಾಗೆ ಮಾಡಿದರೆ ಮುನಿಗಳೆನಿಸಿಕೊಳ್ಳುತ್ತೇವೆ. ಮುಂದಿನ ಶ್ಲೋಕದಲ್ಲಿ ಇದನ್ನು ಇನ್ನಷ್ಟು ಸ್ಪಷ್ಟಪಡಿಸುತ್ತಾನೆ ಯೋಗೇಶ್ವರ. “ಇಹೈವ ತೈರ್ಜಿತಃಸ್ಸರ್ಗೋಯೇಷಾಂ ಸಾಮ್ಯೇ ಸ್ಥಿತಂ ಮನಃ | ನಿರ್ದೋಷಂ ಹಿ ಸಮಂ ಬ್ರಹ್ಮತಸ್ಮಾದ್ಬ್ರಹಣಿತೇ ಸ್ಥಿತಾಃ ||” ಸಮತ್ವ ಭಾವದಲ್ಲಿ ಯಾರ ಮನಸ್ಸು ನೆಲೆಸಿರುವುದೋ, ಅಂತಹವರು ಈ ಲೋಕದಲ್ಲೇ ಜನ್ಮ ಮರಣ ಬಂಧಗಳನ್ನು ಕಳಚಿಹಾಕಿ ನಿಷ್ಕಲ ಬ್ರಹ್ಮನಲ್ಲೇ ನಿಷ್ಠೆಯನ್ನು ಪಡೆದಿರುವರು.
ಹೌದು. ಸಮತ್ವ ಭಾವವನ್ನು ನಾವು ಚಿಕ್ಕ ಮಕ್ಕಳಲ್ಲಿಯೇ ಬೆಳೆಸಿಬಿಡಬೇಕು. ಆಗ ಅವರು ಬೆಳೆಯುತ್ತಿದ್ದಂತೆ ಈ ಗುಣವನ್ನೇ ಹೆಚ್ಚಿಸಿಕೊಳ್ಳುತ್ತಾರೆ. ಯಾವಾಗ ತಾರತಮ್ಯ ಭಾವವು ಮಕ್ಕಳಲ್ಲಿ ಬರುವುದಿಲ್ಲವೋ ಆಗ ಅವರು ಒಳ್ಳೆಯ ನಾಗರಿಕರಾಗಿ ಬೆಳೆಯುತ್ತಾರೆ. ದ್ವೈತಮತದ ಸಂಸ್ಥಾಪಕ ಶ್ರೀ ಮಧ್ವಾಚಾರ್ಯರ ವ್ಯಾಖ್ಯೆ ಇದು. ಹೊರಗಿನ ರೂಪಗಳಲ್ಲಿ ವ್ಯತ್ಯಾಸವಿದ್ದರೂ ಅದು ಮನುಷ್ಯನಾಗಿರಲಿ, ಜಲಚರವಾಗಿರಲಿ, ಪ್ರಾಣಿಯಾಗಿರಲಿ, ಸಸ್ಯವಾಗಿರಲಿ, ದೇವದೇವನು ಎಲ್ಲದರಲ್ಲಿಯೂ ಇದ್ದು ಅವರನ್ನು ಚೈತನ್ಯವಂತರನ್ನಾಗಿ ಮಾಡುತ್ತಾನೆ. ಅವನು ಪರಮಾತ್ಮ. ನಮ್ಮ ಆತ್ಮವು ನಮ್ಮ ದೇಹದೊಳಗಿನ ಅತಿಚಿಕ್ಕ ಭಾಗ. ಮನುಷ್ಯರಿಗೆ ಸಮಚಿತ್ತಭಾವ ಇರುವುದು ಬಹಳ ಮುಖ್ಯ. ಸಮಚಿತ್ತ ಭಾವ ಎಂದರೆ ನಾವೆಲ್ಲರೂ ಒಂದೇ, ನಮ್ಮಲ್ಲಿ ಭೇದವಿಲ್ಲ ಎಂದು ಆಲೋಚಿಸಿ, ಅದರಂತೆ ನಡೆದುಕೊಳ್ಳುವುದು. ನಮ್ಮ ಕರ್ಮಗಳ ಮೇಲೆ ನಮ್ಮ ಮುಂದಿನ ಜನ್ಮಗಳ ಬಗ್ಗೆ ನಿರ್ಧಾರವಾಗುತ್ತದೆ.
ಪ್ರಾರಬ್ಧಕರ್ಮ ಎಂದರೆ ಈಗಾಗಲೇ ನಾವು ಮಾಡಿರುವ ಕರ್ಮಗಳ ಫಲ. ಇದನ್ನು ಮೊಳಕೆ ಬಂದಿರುವ ಬೀಜಗಳು ಎಂದುಕೊಳ್ಳಬಹುದು. ಅದಲ್ಲದೇ ಆಗಾಮಿ ಕರ್ಮ ಎನ್ನುವುದು ಮೊಳಕೆ ಬರಲು ಸಿದ್ಧವಾಗಿರುವಂತಹದ್ದು. ಮೂರನೆಯದು ಸಂಚಿತಕರ್ಮ. ಇಲ್ಲಿ ನಮ್ಮ ಕರ್ಮದ ಬೀಜಗಳು ಇನ್ನೂ ಮೊಳಕೆ ಒಡೆದಿರುವುದಿಲ್ಲ.
ನಾವು ಎಲ್ಲರನ್ನೂ ಒಂದೇ ರೀತಿ ನೋಡುತ್ತಾ, ಸತ್ಕಾರ್ಯಗಳನ್ನು ಮಾಡುತ್ತಿದ್ದರೆ ಆಗಾಮಿ ಮತ್ತು ಸಂಚಿತ ಕರ್ಮಗಳು ಭಸ್ಮವಾಗುತ್ತವೆ. ಪ್ರಾರಬ್ಧ ಕರ್ಮವನ್ನು ನಾವು ಸಹನೆ, ಸೈರಣೆ, ತಾಳ್ಮೆಗಳಿಂದ ಅನುಭವಿಸಿ ಮತ್ತೆ ತಪ್ಪು ಮಾಡದಿದ್ದರೆ ನಮ್ಮ ಜೀವನದ ಕರ್ಮದ ಕಪ್ಪುಹಲಗೆ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ.
ಈ ವಿಷಯವನ್ನು ನಾವು ಚೆನ್ನಾಗಿ ಮನನ ಮಾಡಬೇಕು. ಆಗ ನಾವು ಎಲ್ಲರನ್ನೂ ಒಂದೇ ರೀತಿ ಕಾಣುತ್ತೇವೆ. ನಮ್ಮ ಜೀವನದಲ್ಲಿ ನಾವು ಎಲ್ಲರನ್ನೂ ಒಂದೇ ರೀತಿ ಕಾಣುವುದರಿಂದ ನಮಗೆ ಇನ್ನೂ ಒಂದು ಪ್ರಯೋಜನವಿದೆ. ಇದನ್ನು ಶ್ರೀಕೃಷ್ಣ ಮತ್ತೊಂದು ಶ್ಲೋಕದಲ್ಲಿ ಹೀಗೆ ಹೇಳುತ್ತಾನೆ. “ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿಯೋರ್ಜುನ | ಸುಖಂ ಯದಿ ವಾ ದುಃಖಂ ಸ ಯೋಗೀ ಪರಮೋ ಮತಃ” || ಎಲೈ ಅರ್ಜುನನೇ, ಸಮದೃಷ್ಟಿಯಿಂದ ಪ್ರಪಂಚವನ್ನು ನೋಡುವ ಈ ಯೋಗಿಗೆ ಸುಖದುಃಖಗಳೆರಡೂ ಸಮವೇ. ಅಂತಹ ಯೋಗಿಯು ಪರಮ ಶ್ರೇಷ್ಠನು.
ಇಂತಹ ಮನುಷ್ಯನ ದೇಹ, ಮನಸ್ಸು ಮತ್ತು ಬುದ್ಧಿಗಳು ನೀಡುವ ಸುಖ ದುಃಖಗಳು ಅವನಿಗೆ ಅಂಟುವುದಿಲ್ಲ. ಇಲ್ಲಿ ಒಂದು ಸುಂದರ ಉದಾಹರಣೆ ಇದೆ. ಮಟಮಟ ಮಧ್ಯಾಹ್ನ ನಾವು ಒಂದು ವಿದ್ಯುದ್ದೀಪವನ್ನೋ, ಮೇಣದಬತ್ತಿಯನ್ನೋ ಬೆಳಗಿದರೆ ಅದು ಆ ಸೂರ್ಯನ ಪ್ರಖರ ಬೆಳಕಿಗಿಂತ ಹೆಚ್ಚು ಹೊಳೆಯುವುದೇನು? ಇಲ್ಲ! ಏಕೆಂದರೆ ಸೂರ್ಯನ ಬೆಳಕೇ ಅತ್ಯಂತ ಶಕ್ತಿಯುತ ಬೆಳಕು. ನಮ್ಮ ಜೀವನದಲ್ಲಿ ಕ್ಷಣಿಕ ಸುಖ ಮತ್ತು ತಾತ್ಕಾಲಿಕ ದುಃಖಗಳಿಗೆ ನಾವು ಗುಲಾಮರಾದರೆ, ಎಂದಿಗೂ ಹೊರಬರುವುದಿಲ್ಲ. ಒಂದು ವಿಷಮವೃತ್ತಕ್ಕೆ ಸಿಲುಕಿಕೊಳ್ಳುತ್ತೇವೆ.
ಗಾಳಿಯು ಎಂದಾದರೂ ನೀನು ಮೇಲು; ಅದಕ್ಕೇ ನಿನ್ನ ಮೇಲೆ ಬೀಸುತ್ತೇನೆ. ಸೂರ್ಯ ಎಂದಾದರೂ ನೀನು ಕೀಳು; ನಿನಗೆ ಬೆಳಕು, ಶಾಖ ಕೊಡುವುದಿಲ್ಲ ಎನ್ನುವುವೇನು? ಇಲ್ಲವಲ್ಲ! ಅವರಿಗಿಲ್ಲದ ತಾರತಮ್ಯ ನಮಗೇಕೆ? ಹಣವೆನ್ನುವುದು ತಾರತಮ್ಯ ತರುವುದಾದರೆ ಇಂದಿರುವ ಹಣ ನಾಳೆ ಹೋಗಬಹುದು. ನೆನ್ನೆ ಇರದಿದ್ದ ದುಡ್ಡು ಇಂದು ಬರಬಹುದು. ಇವೆಲ್ಲವೂ ತಾತ್ಕಾಲಿಕ. ಇತ್ತೀಚೆಗೆ ಒಂದು ಕಥೆ ಓದಿದೆ. ಕಳ್ಳನೊಬ್ಬ ಒಂದು ಮನೆಗೆ ಕನ್ನ ಹಾಕಲು ಹೋಗುವಾಗ ಅವನಿಗೆ ಮನೆಯ ಒಳಗೆ ತಾಯಿ ಮಗ ಮಾತಾಡಿಕೊಳ್ಳುವುದು ಕೇಳಿಸುತ್ತದೆ. “ನಾಳೆ ನಾನು ಪರವೂರಿಗೆ ಹೋಗುತ್ತಿದ್ದೇನೆ. ನನ್ನ ಪಾಲಿನ ಊಟ ಮತ್ತು ಮಣ್ಣಿನ ಪಾಲಿನ ಊಟವನ್ನು ಬುತ್ತಿ ಕಟ್ಟಿಕೊಡು” ಎನ್ನುತ್ತಾನೆ ಮಗ. ಕಳ್ಳನಿಗೆ ಕುತೂಹಲ. ಇದೇನು
ಮಣ್ಣಿನ ಪಾಲಿನ ಊಟ? ಅವನು ಸೈರಣೆಯಿಂದ ರಾತ್ರಿಯೆಲ್ಲಾ ಅವರ ಮನೆಯ ಮುಂದೆ ಕಾದಿದ್ದು ಮರುದಿನ ಆ ಮನೆಯ ಮಗ ಹೊರಟಾಗ ಅವನನ್ನು ಹಿಂಬಾಲಿಸುತ್ತಾನೆ. ಆ ಮನೆಯ ಮಗ ಒಂದು ಮರದ ನೆರಳಿನಲ್ಲಿ ಕುಳಿತಾಗ ಈ ಕಳ್ಳನೂ ಅದೇ ಮರದ ಕೆಳಗೆ ಕುಳಿತುಕೊಳ್ಳುತ್ತಾನೆ. ಆ ಮನೆಯ ಮಗ ಆ ಕಳ್ಳನನ್ನು ಕರೆದು ಒಂದು ಬುತ್ತಿ ನೀಡಿ ತಾನೊಂದು
ಬುತ್ತಿ ತೆರೆಯುತ್ತಾನೆ. ಆ ಕಳ್ಳನಿಗೆ ಕುತೂಹಲವಿದ್ದಿದ್ದರಿಂದ, “ಅಯ್ಯಾ, ನಾನು ಕಳ್ಳ. ನಿಮ್ಮ ಮನೆಯಲ್ಲಿ ಕಳ್ಳತನ ಮಾಡಲು ಬಂದಾಗ ನಿಮ್ಮ ಮಾತು ಕೇಳಿಸಿತು” ಎಂದು ಅವನು ಹೇಳಿದ ಮಾತು ಪುನರುಚ್ಚರಿಸಿ, “ಅಯ್ಯಾ, ಅದರ ಅರ್ಥ ಹೇಳಿದರೆ ನಾನು ಊಟ ಮಾಡುತ್ತೇನೆ” ಎನ್ನುತ್ತಾನೆ.
ಆ ಮನೆಯ ಮಗ ಮುಗುಳ್ನಕ್ಕು, “ಮಣ್ಣಿನ ಪಾಲಿನ ಊಟ ಎಂದರೆ ನಾನೀಗ ತಿನ್ನುವುದು. ಅದು ನಾಳೆ ಮಣ್ಣು ಸೇರಿಬಿಡುತ್ತದೆ. ನಿನಗೆ ಕೊಟ್ಟ ಊಟ ನನ್ನ ಪಾಲಿನ ಊಟ. ಅಂದರೆ ನಿನಗೆ ಊಟ ಕೊಟ್ಟ ಪುಣ್ಯ ಸಂಪಾದನೆ ನನ್ನದಾಗುತ್ತದೆ” ಎನ್ನುತ್ತಾನೆ. ಕಳ್ಳನೂ ತನ್ನ ದುಷ್ಟಕಾರ್ಯ ಬಿಟ್ಟು ಒಳ್ಳೆಯವನಾಗುತ್ತಾನೆ.
ಇಲ್ಲಿ ನಾವು ನೋಡಬೇಕಾದ ಎರಡು ವಿಷಯಗಳಿವೆ. ಕಳ್ಳನೆಂದು ತಿಳಿದ ನಂತರವೂ ಆ ಮನೆಯ ಮಗ ಅವನ
ಊಟವನ್ನು ಕಿತ್ತುಕೊಳ್ಳಲಿಲ್ಲ. ತನ್ನಂತೆಯೇ ಅವನೂ ಒಬ್ಬ ಎಂದು ನೋಡಿದ. ಇನ್ನು ಪುಣ್ಯ ಸಂಪಾದನೆಯ ಬಗ್ಗೆ ಅವನ
ವಿವರಣೆ ಬಹಳ ಚೆನ್ನಾಗಿತ್ತು. ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು, ಸುಡುವಗ್ನಿಯೊಂದೇ ಇರುತಿರಲು
ಕುಲಗೋತ್ರ ನಡುವೆ ಎತ್ತಣದು ಸರ್ವಜ್ಞ ಎನ್ನುತ್ತಾನೆ ಸರ್ವಜ್ಞಮೂರ್ತಿ.
ನಡೆಯುವ ಭೂಮಿ ಒಂದು, ಕುಡಿಯುವ ನೀರು ಒಂದು, ಸುಡುವ ಅಗ್ನಿ ಒಂದೇ ಆಗಿರುವಾಗ ನಮ್ಮ ನಡುವೆ ಭೇದವೇಕೆ? ತಾರತಮ್ಯವೇಕೆ? ಪಕ್ಷಪಾತವೇಕೆ? ಕೃಷ್ಣನು ಕೇವಲ ಇತರರಿಗೆ ಉಪದೇಶ ಮಾತ್ರ ಮಾಡುವವನಾಗಿರಲಿಲ್ಲ. ಸ್ವತಃ ಅದನ್ನು ಪಾಲಿಸುತ್ತಿದ್ದ. ಸಮೋಽಹಂ ಸರ್ವಭೂತೇಷು ನ ಮೇ ದ್ವೇಷ್ಯೋಽಸ್ತಿ ನ ಪ್ರಿಯಃ| ಯೇ ಭಜಂತಿತು ಮಾಂ ಭಕ್ತ್ಯಾ ಮಯಿ ತೇತೇಷುಚಾಪ್ಯಹಮ್|| ಎಲ್ಲ ಜೀವರಾಶಿಗಳಲ್ಲಿ ನಾನು ಸಮಾನವಾಗಿದ್ದೇನೆ. ನನಗೆ ಯಾರ ಮೇಲೂ ದ್ವೇಷವೂ ಇಲ್ಲ ಪ್ರೀತಿಯೂ ಇಲ್ಲ. ಭಕ್ತಿಪೂರ್ವಕವಾಗಿ ಯಾರು ನನ್ನನ್ನು ಭಜಿಸುವರೋ ಅವರಲ್ಲಿ ನಾನಿರುತ್ತೇನೆ. ನನ್ನಲ್ಲಿ ಅವರಿರುತ್ತಾರೆ. ಅಂದರೆ ನಾವು ಶ್ರೀಕೃಷ್ಣನನ್ನು ಅನುಸರಿಸಿದರೆ ನಾವೂ ಕೂಡ ದ್ವೇಷ ಮತ್ತು ಪ್ರೀತಿಗಳಿಗೆ ಅತೀತರಾಗಿರುತ್ತೇವೆ. ಅವನೇ ಹೇಳುವಂತೆ ನಾವು ಹಾಗಿದ್ದರೆ ಅವನಲ್ಲಿ ಇರುತ್ತೇವೆ. ಅವನು ನಮ್ಮಲ್ಲಿ ಇರುತ್ತಾನೆ. ದಾರ್ಶನಿಕರೊಬ್ಬರ ಈ ಮಾತುಗಳನ್ನು ನೋಡೋಣ. ಚಳಿಗಾಲದಲ್ಲಿ ಕೊಠಡಿಯ ಒಳಗಿದ್ದಾಗ ನಾವು ಚಳಿಯಿಂದ ನಡುಗುತ್ತೇವೆ. ಅದೇ ಸಮಯದಲ್ಲಿ ಕೊಠಡಿಯ ಹೊರಗೆ ಸಾಕಷ್ಟು ಬಿಸಿಲಿರುತ್ತದೆ. ಯಾರು ಕೊಠಡಿಯಿಂದ ಹೊರಗೆ ಬರುವರೋ ಅವರಿಗೆ ಬಿಸಿಲಿನ ಲಾಭ ಉಂಟಾಗುವುದು. ಒಳಗೇ ಕುಳಿತುಕೊಳ್ಳುವವನಿಗೆ ಚಳಿಯಿಂದ ನಡುಕ ,ಉಂಟಾಗುತ್ತಿರುತ್ತದೆ. ಸೂರ್ಯನಿಗೆ ಇಬ್ಬರ ಮೇಲೂ ದ್ವೇಷವಾಗಲೀ, ಪ್ರೀತಿಯಾಗಲೀ ಇಲ್ಲ. ಯಾರು ಕೊಠಡಿಯಿಂದ ಹೊರಗೆ ಬರುವ ಪ್ರಯತ್ನ ಮಾಡುವರೋ ಅವರಿಗೆ ಸೂರ್ಯನ ಬಿಸಿಲೆಂಬ ಆಶೀರ್ವಾದ ದೊರಕುತ್ತದೆ. ಯಾರು ಹೊರಗೆ ಬರುವುದಿಲ್ಲವೋ ಅವರು ಸೂರ್ಯನ ಶಾಖದಿಂದ ವಂಚಿತರಾಗುತ್ತಾರೆ. ನಾವು ಕೂಡ ಸೂರ್ಯನಂತೆ, ಗಾಳಿಯಂತೆ, ಬೆಂಕಿಯಂತೆ ಬದುಕಬೇಕು. ಆಗ ನಮ್ಮಲ್ಲಿನ ತಾರತಮ್ಯದ ಭಾವವು ಕಿತ್ತೊಗೆಯಲ್ಪಡುತ್ತದೆ.