ನದಿಯಂತೆ ಹರಿಯಲಿ
ನಮ್ಮೊಡನೆ ಉಳಿಯಲಿ
ಕನ್ನಡವೇ ಬೆಳೆಯಲಿ
ಜೊತೆಗಿರಲಿ ಕನ್ನಡ
ಎಂದೆoದಿಗೂ ಸಂಗಡ
ಹೊರನಾಡು ಕನ್ನಡಿಗನಾದ ನನಗೆ ಅದೆಂತದೋ ಬಾoಧವ್ಯವೊoದು ಬೆಸೆದುಕೊಂಡಿದೆ ಕನ್ನಡದೊಂದಿಗೆ.
ಕನ್ನಡವೆoದಾಗ ಈ ಮೇಲಿನ ಸಾಲುಗಳಂತೆಯೇ ಆ ಪ್ರೀತಿ ಹೊರಹೊಮ್ಮುತ್ತದೆ. ಮಹಾರಾಷ್ಟçದಲ್ಲೊಂದು ಸಾಂಗಲಿ ಎಂಬ
ಜಿಲ್ಲೆ ಇದೆ. ಸಾಂಗಲಿ ಜಿಲ್ಲೆಯಲ್ಲೊಂದು ಜತ್ತ ಎಂಬ ತಾಲೂಕು. ಈ ತಾಲುಕಿನಲ್ಲಿ ಒಂದಿಷ್ಟು ಹಳ್ಳಿಗಳು. ಮೂಲತಃ
ವiಹಾರಾಷ್ಟçವಾದರೂ ಇಲ್ಲೂ ಕನ್ನಡಿಗರಿದ್ದಾರೆ. ಉದಯವಾಣಿ, ವಿಶ್ವವಾಣಿ, ವಿಜಯವಾಣಿ, ವಿಜಯ ಕರ್ನಾಟಕ ಕನ್ನಡಪ್ರಭ ಪ್ರಜಾವಾಣಿ ದಿನಪತ್ರಿಕೆಗಳು ಸಿಗುವ ಕಾಲವಿತ್ತು. ಕನ್ನಡ ಪತ್ರಿಕೆಯನ್ನು ಕಾದು ಕುಳಿತು ಓದುವ ಓದುಗರಿದ್ದಾರೆ. ನನ್ನಂತೆ ಕನ್ನಡ ಕಥೆ ಕಾದಂಬರಿ ಸಾಹಿತ್ಯದ ಪುಸ್ತಕ ಓದುವ ಮನಸುಗಳು ಅಲ್ಲಲ್ಲಿ ಕಾಣಸಿಗುತ್ತವೆ. ಹೌದ! ಅಂತೇಳಿ ಹುಬ್ಬೇರಿಸಬೇಡಿ ನಮ್ಮಲ್ಲಿ ಕನ್ನಡ ಪ್ರೇಮ ಈಗೀಗ ಹುಟ್ಟಿದ್ದಲ್ಲ! ತಲೆತಲಾಂತರದಿAದ ಮಾತೃಭಾಷೆಯಾಗಿ
ಬಳಸಿಕೊಂಡು ಬಂದ ಕುಟುಂಬಗಳಿವೆ. ನಮ್ಮ ತಾಲುಕಿನ ಯಾವುದೇ ಹಳ್ಳಿಗಳಿಗೆ ಹೋಗಿ ನೀವು. ಬಸವೇಶ್ವರ
ಹೋಟೆಲ್, ರಾಘವೇಂದ್ರ ಕಿರಾಣಿ ಅಂಗಡಿ, ಅಂಕಿತ್ ಪಾನ ಶಾಪ್, ಮಹಾದೇವ ಪಂಚರ್ ದುಖಾನ್, ಅರುಣ ಕ್ಲಾತ್
ಮರ್ಚೆಂಟ್, ಶಿವರಾಮ ಟೈಲರಿಂಗ, ಶಿವಾನಂದ ವಡಾ ಪಾವ್ ಸೆಂಟರ್, ಶಕೀಲ್ ಮೊಬೈಲ್ ಸರ್ವಿಸ್ ಸೆಂಟರ್,
ಅಹ್ಮದ ಪಾವ ಬಜಿ ಧುಖಾನ್, ಕಿರಣ ಬುಕ್ ಸ್ಟಾಲ್ ಎಂಬ ನಾನಾ ಹೆಸರಿನ ಅಪ್ಪಟ ಕನ್ನಡದ ದಪ್ಪಕ್ಷರದ ಬೋರ್ಡುಗಳು
ಸಿಗುತ್ತವೆ. ಇನ್ನೂ ಪ್ರಾಥಮಿಕ್ ಕನ್ನಡ ಶಾಲೆಯಿಂದ ಹಿಡಿದು ಹೈಸ್ಕೂಲ ಕಾಲೇಜುವರೆಗೂ ಕನ್ನಡ ಶಾಲೆಗಳು ಸಿಗುತ್ತವೆ.
ಕನ್ನಡದಲ್ಲಿಯೇ ಹಾಡಬಲ್ಲ, ಬೈದಾಡಿಕೊಳ್ಳಬಲ್ಲ, ಮಾತನಾಡುವ, ಭಾಷಣ ಮಾಡುವ, ಓದುವ, ಬರೆಯುವ ಹುಡಗ ಹುಡಗಿಯರು ಸಿಗುತ್ತಾರೆ. ‘ಏ ಯಾಕ್ರೋ ಸದ್ದು’ ಅಂತ ತನ್ನ ವಿದ್ಯಾರ್ಥಿಗಳಿಗೆ ಗದರುವ ಶಿಕ್ಷಕರು. ಕನ್ನಡದ ಪದ್ಯವೊಂದನ್ನ ತಮ್ಮದೇ ದಾಟಿಯಲ್ಲಿ ಹಾಡಿ ಮಕ್ಕಳ ಮನ ಮುಟ್ಟುವಂತೆ ಹೇಳಿಕೊಡುವ ಶಿಕ್ಷಕರಿದ್ದಾರೆ. ಇನ್ನೂ ದೇವಸ್ಥಾನಗಳಿಗೆ ಹೋದರೆ ಕನ್ನಡದಲ್ಲಿ ಪ್ರಾರ್ಥನೆ ಮಾಡುವ ಪೂಜಾರಿಗಳು ಸಿಗುತ್ತಾರೆ. ನಿಮ್ಮನ್ನ ಪ್ರೀತಿಯಿಂದ ಮಾತನಾಡಿಸಿ ಪ್ರಸಾದ ಕೊಡುವವರಿದ್ದಾರೆ. ಎಲ್ಲರೂ ಇದ್ದಾರೆ ನೀವು ಮಾತ್ರ ಬಂದಿಲ್ಲ ಇಲ್ಲಿ ಒಮ್ಮೆ ಬರಲೇಬೇಕು ನೀವು. ನೀವು ಇಲ್ಲಿನ ಹೋಟೆಲೊಂದಕ್ಕೆ ಹೋಗಿ ಕುಳಿತರೆ ‘ಕಾಯ್ ಫಾಯಿಜೆ’ ಅಂತ ಮರಾಠಿಯಲ್ಲಿ ಕೇಳುವವರು ಕಡಿಮೆ. ‘ಏನ ಬೇಕ್ರಿ?’ ಅಂತ ಉತ್ತರ ಕರ್ನಾಟಕದ ಶೈಲಿಯಲ್ಲಿ ಕೇಳುತ್ತಾರೆ. ನೀವೂ ಕನ್ನಡದವರೇ ಅಂತೇನಾದರೂ ಗೊತ್ತಾದರೆ ನಿಮ್ಮೊಂದಿಗೊoದು ಸಣ್ಣ ಸ್ನೇಹವನ್ನೇ ಬೆಳೆಸುತ್ತಾರೆ. ಊರು ಕೇರಿ ಏನ ಮಾಡ್ತೀರಿ ಏನ
ಇಲ್ಲ ಸಮಗ್ರವಾದ ಕುಶಲೋಪರಿಯ ನಂತರ ನೀವು ಹೊರಟ ಊರಿನ ದಾರಿಯನ್ನ ‘ಹೀಂಗ ಹೋಗ್ರಿ ಒಂದೂರ ಬರ್ತೈತಿ, ಆ ಊರ ದಾಟಿದ ಮ್ಯಾಲ, ನೀವು ಹೋಗಬೇಕು ಅಂದಕೊoಡಿರೋ ಊರೇ ಸಿಗತೈತಿ ಮತ್ತ ಅಲ್ಲಿ ಇವರ ಮನಿ ಎಲ್ಲೈತಂತ ಕೇಳ್ರಿ ಯಾರ ಬೇಕಾದವ್ರ ಹೇಳ್ತಾರ್’ ಅಂತ ಪುಕ್ಕಟೆ ಸಲಹೆ ಕೊಡ್ತಾರೆ. ನಿಮಗೆ ಗೊತ್ತಿರಲಿ ಇಲ್ಲಿ ಕನ್ನಡದ ಹಾಡುಗಾರರಿದ್ದಾರೆ ಸ್ಟೇಜಿನ ಮೇಲಷ್ಟೇ ಅಲ್ಲ! ಬಾತ್ರೂಮ್, ಸ್ಟೇರಾಸ್, ಹಾದಿ ಬೀದಿಯಲ್ಲಿ, ಸಂತೆಯಲ್ಲಿ, ದೇವಸ್ಥಾನದಲ್ಲಿ, ಹೊಲದಲ್ಲಿ, ದನ ಮೇಯಿಸುವ ಅಡವಿಯಲ್ಲಿ, ಕೆಲಸ ಮಾಡುವ ಸಮಯದಲ್ಲಿ, ಶಾಲೆಯಲ್ಲಿ, ಮಠದಲ್ಲಿ, ಮನೆಯಲ್ಲಿ ಎಲ್ಲಿ ಬೇಕಾದರೂ ಗುಣಗುವವರಿದ್ದಾರೆ. ಇಲ್ಲಿಯವರೆಗೆ ಬಂದ ನೀವು ನಂದೊoದೆರಡು ಅನುಭವ ಕೇಳದೆ ಹೋದರೆ ಹೇಗೆ? ಅಲ್ವಾ? ಹಾಡೆಂದಾಗ ನನಗೆ ತಟ್ಟನೆ ನೆನಪಾಗುವುದು ಬಾಲ್ಯ. ಆ ಬಾಲ್ಯದ ಅನುಭೂತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇ ಬೇಕು. ತಡಿರಿ.
“ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು
ಹುಣ್ಣಿಮೆ ಹರಿಸಿದ ಬಾನಿನ ನಡುವೆ ಚಂದಿರ ಬಂದಿತ್ತು”
ಎಪ್ಪತ್ತೆರಡು ಮಕ್ಕಳಿರುವ ನಮ್ಮ ಶಾಲೆಯ ಕೊಠಡಿಯಲ್ಲಿ ದೊಡ್ಡ ಧ್ವನಿಯಲ್ಲಿ ಸುಶ್ರಾವ್ಯವಾಗಿ ಲಿಂಗನವರ್ ಮಾಸ್ತರರು ಹಾಡುತಿದ್ದರೆ ದೇವಸ್ಥಾನದ ಗರ್ಭಗುಡಿಯ ಆಚೆಗೆ ಅರ್ಧ ಕಣ್ತೆರೆದು ಅರ್ಧ ಮುಚ್ಚಿದ ಭಂಗಿಯಲ್ಲಿ ಕೂರುವ ಭಕ್ತನಂತೆ ನಾವೆಲ್ಲ ಅವರು ಹಾಡುವುದನ್ನೇ ತನ್ಮಯರಾಗಿ ಕೇಳುತ್ತಿದ್ದೆವು. ಅಂತಹುದೊAದು ಮಧುರ ಕಂಠ, ಯಾವುದೇ ಭಾವಗೀತೆಯನ್ನ ಹಾಡಿದರೂ ಮೂಲ ಗಾಯಕನಂತೆ ಹಾಡುವ ಗುಣ ಲಿಂಗನವರ್ ಮಾಸ್ತರರದ್ದಾಗಿತ್ತು. ಅದೆಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಪಾಠ ಮಾಡುವ ಅವರ ಪರಿ ಚೆಂದವಾಗಿತ್ತು ಮತ್ತೂ ನಮಗಿರುವ ಕನ್ನಡದ ಮೇಲಿನ ಪ್ರೀತಿ ಅಂತಹ ಚೆಂದದ ಗಳಿಗೆಯನ್ನು ಸೃಷ್ಟಿಸುತಿತ್ತು. ಲಿಂಗನವರ್ ಮಾಸ್ತರರು ಏಳನೆ ತರಗತಿಯ ಪಾಠ ಮುಗಿಸಿಕೊಂಡು ನಮ್ಮ ತರಗತಿಯ ಹೊಸ್ತಿಲು ತುಳಿದರೆ ಸಾಕು “ಸಾರ್ ಒಂದು ಹಾಡು ಹಾಡಿ ಆಮೇಲೆ ಪಾಠ ಮಾಡ್ರಿ” ಎಲ್ಲಾ ಹುಡಗ ಹುಡುಗಿಯರು ವಿನಂತಿಸಿಕೊಳ್ಳಲು; ಮುಖದಲ್ಲಿ ಸಣ್ಣದೊಂದು ನಗು ಬೀರಿ ಗಂಟಲು ಸರಿ ಮಾಡಿಕೊಂಡು ಶುರುಮಾಡುತಿದ್ದರು ಹಾಡಲು. ಅವರ ಹಾಡು ಮುಗಿಯುವ ಹೊತ್ತಿಗೆ ಒಂದೆರಡು ನಿಮಿಷ ಚಪ್ಪಾಳೆಯ ಸುರಿಮಳೆ. ಭಾವಗೀತೆ ತೀರಾ ಭಾವನತ್ಮಕವಾಗಿದ್ದರೆ; ತಮ್ಮ ಎಡಗೈಯನ್ನು ಕನ್ನೆಗೆ ಆಧಾರವಾಗಿಟ್ಟುಕೊಂಡ ಕುಳಿತ ಹುಡಗಿಯರ ಮೊಗದಲ್ಲಿ ಭಾವುಕತೆಯ ಗಾಳಿ. ಅಲ್ಲಿಗೆ ಹಾಡಿದ ಲಿಂಗನವರ್ ಮಾಸ್ತರರಿಗೂ ಹಾಡಿದ್ದಕ್ಕೂ ಸಾರ್ಥಕವಾಯಿತೆಂದು ಪಾಠ ಮಾಡಲು ಮುಂದಾಗುತಿದ್ದರು.
‘ಅಲ್ರೀ, ಎಂದೋ ಯಾವುದೋ ಶಾಲೆಯ, ನಿಮ್ಮ ಬಾಲ್ಯದ ದಿನಗಳಲ್ಲಿ ಹಾಡ್ತಿದ್ದ ಮಾಸ್ತರರ ಹಕೀಕತ್ ತಗೊಂಡ್ ಏನ ಮಾಡೋದು. ಇದೆಲ್ಲಾ ನಮಗ್ಯಾಕೆ ಹೇಳಿಕತ್ತೀರಿ!’ ಅಂತ ನೀವು ಕೇಳಲೂಬಹುದು. ಜರೂರತ್ ಐತಿ ಅಂತಲೇ ಹೇಳ್ತಿದೀನಿ ಕೇಳ್ರೀ. ನೀವು, ನಿಮ್ಮೂರು ಬಿಟ್ಟು ಇನ್ನೂಂದು ಊರಿನಲ್ಲಿ ಓದುತಿರುತ್ತೀರಿ. ಅಥವಾ ಉದ್ಯೂಗದ ನಿಮಿತ್ತವಾಗಿ ಬೇರೊಂದು ಊರಲ್ಲಿ ನೆಲಸಿರುವ ನಿಮಗೆ ಅದೊಂದು ಸಂಜೆ ಗಾಂಧಿ ಬಜಾರ ಕಾಯಿಪಲ್ಯ ಮಾರ್ಕೆಟ್ನಲ್ಲಿ ನಿಮ್ಮೂರಿನ ಸರಸಮ್ಮ ಎದುರಾಗ್ತಾಳೆ. ಓಡೋಡಿ ಹೋಗಿ ಅವಳನ್ನ ಮಾತಾಡಸ್ತೀರಿ. ಊರಕಡೆ ಮಳೆ ಬೆಳೆ ಎಲ್ಲವೂ ವಿಚಾರಿಸ್ತೀರಿ. ಅವಳ ಕುಶಲೋಪರಿ ಕೇಳುತ್ತೀರಿ. ಸಮಯ ಸಿಕ್ಕರೆ ತುಕಾರಾಮ ಕಾಕಾನ ಚಾಯ್ ಅಂಗಡಿಯಲ್ಲಿ ಒಂದು ಹಬೆಯಾಡುವ ಚಹಾ ಕುಡಿಸುತ್ತೀರಿ. ಕೊನೆಗೊಮ್ಮೆ ಅವರು ನಿಮ್ಮೂರಿನ ಬಸ್ಸಿಗೆ ಹೊರಟು ನಿಲ್ಲುತ್ತಾರೆ. ಆಗ ನಿಮಗೆ ಅವರು ಸಿಕ್ಕಾಗ ಆದಷ್ಟು ಖುಷಿಯಷ್ಟೇ ಅವರು ಹೊರಟು ನಿಂತಾಗ ದುಃಖವಾಗುತ್ತದೆ. ಊರಲ್ಲಿರುವಾಗ ಸರಸಮ್ಮ ಆತ್ಮೀಯಳಲ್ಲ, ದಿನಾಲೂ ಸಿಗುವವಳಲ್ಲ, ಕೊನೆಗೆ ಎಂದೂ ಅವಳೊಂದಿಗೆ ಮುಖಕ್ಕೆ ಮುಖಕೊಟ್ಟು ಮಾತಾಡಿಸಿಯೂ ಇಲ್ಲ ಆದರೂ ಈ ದೂರದ ಊರಲ್ಲಿ ನಮ್ಮೂರಿನ ಮುಖವೊಂದು ಅಚಾನಕ್ ಕಂಡರೆ ಆಗುತ್ತದಲ್ಲ ಸಂತಸ ಅಂತಹದೇ ಸಂತಸ ಇಲ್ಲಿರುವವರಿಗೂ ಕನ್ನಡ ಪದ ಕೇಳಿದಾಗಲೂ ಅಂತಹದೇ ಭಾವದ ಕೋಲ್ಮಿಂಚೊoದು ಹೊಳೆದಂತಾಗಿ ಮಾಯವಾಗುತ್ತದೆ.
ಅದು ತೊಂಬತ್ತರ ದಶಕ. ನಾವಿನ್ನೂ ನಾಶಿ ಬಣ್ಣದ ಚೊನ್ನ ತೊಟ್ಟು ಅದೆಂದೋ ಹಬ್ಬಕ್ಕೆಂದು ತಂದ ಕೆಂಪು ಗೆರೆಗಳಿರುವ ಅಂಗಿಯೊoದನ್ನು ಮೂವತ್ತನೇ ಬಾರಿ ತೊಳೆದು; ಅಮ್ಮನ ಕೈಗಳಲ್ಲಿ ಹಿಂಡಿಸಿಕೊoಡ ಮುದುಡಿದ ಅಂಗಿಯನ್ನ ಇಸ್ತ್ರಿ ಮಾಡಿ ತೊಟ್ಟುಕೊಂಡು ತಿರಗಾಡುತ್ತಿದ್ದೆವು. ಆಗಿನ್ನೂ ಕನ್ನಡ ಚಿತ್ರಗೀತೆಗಳು ನಮ್ಮೂರಿಗೆ ತಲುಪಿರಲಿಲ್ಲ. ತಲುಪಿರಲಿಲ್ಲ ಅಂದ್ರೆ ಈಗಿನಂತೆ ಎಲ್ಲರ ಕೈಯಲ್ಲೂ ಮೊಬೈಲ್ ಇರಲಿಲ್ಲ, ಮನೆ ಮನೆಗಳಿಗೆ ಟಿವಿ ಎಂಬ ಪೆಟ್ಟಿಗೆ ಬಂದಿರಲಿಲ್ಲ. ಆದರೂ ಅಪ್ಬನ ಹಳೆಯ ರೇಡಿಯೋದೊಳಗೆ ರಾಜಕುಮಾರರ ಹಾಡು ಆಗಾಗ ಬರುತ್ತಿದ್ದವು. ಅಪ್ಪನಿಗೆ ಮರಾಠಿ ಕನ್ನಡ ಎರಡೂ ಭಾಷೆ ಬರುತ್ತಿತ್ತಾದ್ದರಿಂದ ಅವನು ಮರಾಠಿ ಮತ್ತೂ ಕನ್ನಡ ಎರಡನ್ನೂ ಕೇಳುತಿದ್ದ. ಅದರಲ್ಲಿ ಧಾರವಾಡ ಆಕಾಶವಾಣಿ, ಬಿಜಾಪುರ ಆಕಶವಾಣಿ, ಹುಬ್ಬಳ್ಳಿ ಆಕಾಶವಾಣಿ, ಗುಲಬರ್ಗಾದ ಆಕಾಶವಾಣಿಯಿಂದ ಕನ್ನಡದಲ್ಲಿ ವಾರ್ತೆಗಳು, ಚಿತ್ರಗೀತೆಗಳು, ನಾಟಕಗಳು, ಹಳೆಯ ಕಾಲದ ಸಿನಿಮಾಗಳು, ಅಶ್ವಥ ಅವರ ಭಾವಗೀತೆಗಳು ಪ್ರಸಾರವಾಗುತ್ತಿದ್ದವು. ನಟ್ಟ ನಡುವೆ ಇಟ್ಟ ಚಿಮುನಿ ಬೆಳಕಿನ ಸುತ್ತಲೆಲ್ಲಾ ಮನೆಮಂದಿ ಕೂತು ಊಟ ಮಾಡುತ್ತಿದ್ದರೆ ನಡುಗಂಬಕ್ಕೆ ನೇತುಹಾಕಿದ ರೇಡಿಯೋದಲ್ಲಿ ಹಾಡೊಂದು ಗುಣಗುತಿತ್ತು.
ಅಮ್ಮನ ಮಡಿಲಲ್ಲಿ ಲಾಲಿ ಹಾಡು ಕೇಳುತ್ತಾ ಮಲಗುವ ಕಂದಮ್ಮನ ಹಾಗೆ ರೇಡಿಯೋದಲ್ಲಿ ಬರುವ ಕನ್ನಡ ಹಾಡು ಕೇಳುತ್ತಾ ಮಲಗುತ್ತಿದ್ದೆವು. ಇಲ್ಲಿಯ ಮನೆಗಳಲ್ಲಿ ಕನ್ನಡ ಮಾತಾಡುವದು ಮತ್ತು ಶಾಲೆಯ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಿದ್ದ ನಮ್ಮ ಕನ್ನಡ ಪ್ರೇಮ ಹಾಡುಗಳೊಂದಿಗೆ ಬೆಳೆಯಲಾರoಬಿಸಿತು. ಇದೆಲ್ಲದರಾಚೆ ಅಪ್ಪನ ಹಳೆಯದೊಂದು ಟೇಪ್ ರೆಕಾರ್ಡರ್ನಲ್ಲಿ ಕ್ಯಾಸೆಟ್ ಹಾಕಿ ಇಬ್ರಾಹೀಂ ಸುತಾರ್ ಎಂಬ ಆಧ್ಯಾತ್ಮ ಚಿಂತಕರ ಪ್ರವಚನ ಕೇಳುತಿದ್ದೆವು. ಅದೆಷ್ಟು ತನ್ಮಯರಾಗಿ ಕೇಳುತ್ತಿದ್ದೆವೆಂದರೆ ಒoದೊoದು ಸಾರಿ ಪ್ರವಚನ ಮುಗಿಯುವವರೆಗೂ ಕಾದು ನಂತರ ಊಟ ಮಾಡುತ್ತಿದ್ದ ದಿನಗಳವು. ಇಬ್ರಾಹೀಂ ಸುತಾರರ ಬಾಯಲ್ಲಿ ಕನ್ನಡ ಉಚ್ಚಾರಣೆ ಅದೆಷ್ಟು ಸುದ್ಧವಾಗಿ ಸ್ಪಟಿಕದಂತಿರುತ್ತಿತ್ತು. ಅವರಂತೆ ಉಚ್ಚಾರಣೆ ಮಾಡಲು ಪ್ರಯತ್ನಿಸಿದ ಎಷ್ಟೋ ಜನ ವಿಫಲರಾಗಿ ತಮಗೆ ಬಂದoತೆ ಮಾತಾಡುವವರು ಇದ್ದಾರೆ. ಒಮ್ಮೊಮ್ಮೆ ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ವಿಜಯಪುರ ಆಶ್ರಮದ ಸಿದ್ದೇಶ್ವರ ಸ್ವಾಮಿಗಳವರ ಪ್ರವಚನವೂ ಅಷ್ಟೇ ಹಿತವಾಗಿರುತ್ತಿತ್ತು. ಎಲ್ಲೆಲ್ಲಿಂದಲೋ ತರಂಗಗಳ ಮುಖಾಂತರ ಬಂದು ನಮ್ಮ ಶ್ರವಣಗಳಿಗೆ ಇಂಪಾದ ಹಾಡುಗಳು ಕೇಳಿಸುತ್ತಿದ್ದ ರೇಡಿಯೋಗಳೇ ಅವತ್ತಿನ ನಮ್ಮ ಗೆಳೆಯರು.
ಇನ್ನೂ ಹೇಳಾದೈತಿ ತಡಿರಿ.