ಹೋಮರನ ‘ಇಲಿಯಡ್’ ಮತ್ತು ‘ಒಡೆಸ್ಸಿ’ ಇವೆರಡೂ ನಮ್ಮ ‘ರಾಮಾಯಣ’ ‘ಮಹಾಭಾರತ’ದಂತೆಯೇ ಪ್ರಸಿದ್ಧವಾದ ಗ್ರೀಕ್ ಮಹಾಕಾವ್ಯಗಳು. ‘ಒಡೆಸ್ಸಿ’ಯಲ್ಲಿ ಈ ಪ್ರಸಂಗ ಬರುತ್ತದೆ. ಯುಲಿಸೆಸ್ ಅಥವಾ ಒಡೆಸ್ಸಿಯಸ್ ಟ್ರೋಜನ್ ಯುದ್ಧ ಮುಗಿಸಿ ಮನೆಗೆ ವಾಪಾಸಾಗಲು ತನ್ನ ಒಂದಿಷ್ಟು ಸೈನಿಕರ ಜತೆ ಸಮುದ್ರದಲ್ಲಿ ಪಯಣಿಸುತ್ತಿರುತ್ತಾನೆ. ದ್ವೀಪವೊಂದರಲ್ಲಿ
ಕೆಲಜೀವಿಗಳು ಮೋಹಗೊಳಿಸುವ ಸಂಗೀತದ ಮೂಲಕ ನಾವಿಕರನ್ನು ಸೆಳೆದು ಅವರನ್ನು ಸಾವಿನ ಬಾಯಿಗೆ ನೂಕುವ ವಿಷಯ ಯುಲಿಸೆಸ್ಗೆ ಗೊತ್ತಿರುತ್ತದೆ. ಹಾಗಾಗಿ ಸಮ್ಮೋಹಗೊಳಿಸುವ ಈ ಸಂಗೀತದಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿ
ಆ ಪ್ರದೇಶವನ್ನು ದಾಟಿ ಹೋಗುವುದು ಹೇಗೆ ಎಂದು ಆತ ಯೋಚನೆ ಮಾಡುತ್ತಾನೆ. ಅದೇ ವೇಳೆಗೆ ಆ ಸಂಗೀತದ ಶಕ್ತಿಯನ್ನು ಪರೀಕ್ಷಿಸುವ ಯೋಚನೆಯೂ ಅವನಿಗೆ ಬರುತ್ತದೆ. ಉಳಿದೆಲ್ಲ ನಾವಿಕರ ಕಿವಿಗಳಿಗೆ ಜೇನುಮೇಣ ತುಂಬಿಕೊಳ್ಳಲು ಹೇಳಿ ತನ್ನನ್ನು ಹಡಗಿನ ಕಂಬಕ್ಕೆ ಕಟ್ಟಿ ಹಾಕುವಂತೆಯೂ ತಾನು ಏನೇ ಆದೇಶಿಸಿದರೂ ಎಷ್ಟೇ ಬೇಡಿಕೊಂಡರೂ ತನ್ನ
ಕಟ್ಟು ಬಿಚ್ಚಬಾರದೆಂದೂ ಆಜ್ಞೆ ಮಾಡುತ್ತಾನೆ.
ಆ ದ್ವೀಪ ಹತ್ತಿರ ಬರುತ್ತದೆ. ಊಹಿಸಿದಂತೆ ಯುಲಿಸೆಸ್ ಸಂಗೀತ ಕೇಳಿ ಮರುಳಾಗುತ್ತಾನೆ, ಸಿಟ್ಟುಗೊಳ್ಳುತ್ತಾನೆ, ಅಳುತ್ತಾನೆ, ತನ್ನನ್ನು ಬಿಟ್ಟು ಬಿಡುವಂತೆ ಬೇಡುತ್ತಾನೆ. ಮೊದಲೇ ಮಾತಾಗಿದ್ದಂತೆ ಸೈನಿಕರು ಅವನನ್ನು ಬಿಡಿಸುವುದಿಲ್ಲ. ಜೋರಾಗಿ ಹಡಗನ್ನು ಚಲಾಯಿಸಿಕೊಂಡು ಸುರಕ್ಷಿತ ಜಾಗಕ್ಕೆ ಬಂದು ತಮ್ಮ ಕಿವಿಯಲ್ಲಿನ ಜೇನುಮೇಣವನ್ನು ತೆಗೆದು ತಮ್ಮ ಕ್ಯಾಪ್ಟನ್ನನ್ನು ಬಂಧನದಿಂದ ಬಿಡುಗಡೆ ಮಾಡುತ್ತಾರೆ.
ಈ ಕಥೆಯನ್ನು ಏಕೆ ಹೇಳಿದೆ ಎಂದರೆ ಬಹಳಷ್ಟು ಸಂದರ್ಭದಲ್ಲಿ ನಮ್ಮೆದುರಿಗಿರುವ ಸವಾಲುಗಳು ನಮ್ಮನ್ನು ಆವರಿಸಿಬಿಡುತ್ತವೆ. ನಮಗೇ ಗೊತ್ತಿಲ್ಲದೇ ನಾವು ದುರ್ಬಲರಾಗಿಬಿಡುತ್ತೇವೆ. ಉದಾಹರಣೆಗೆ ನಮ್ಮೆದುರೋ, ಪಕ್ಕದಲ್ಲೋ ಅಮಾಯಕವಾಗಿ ಒರಗಿರುವ ಮೊಬೈಲ್ ವಿಷಯಕ್ಕೆ ಬಂದರೆ ಎಂಥದ್ದೇ ದೃಢಮನಸ್ಸಿನವರೂ ಚಂಚಲಗೊಳ್ಳುವುದೇ! ಹೀಗಿರುವಾಗ ಮೊಬೈಲ್ ಪಕ್ಕದಲ್ಲಿಟ್ಟುಕೊಂಡೇ ತಾನು ಓದುತ್ತೇನೆ, ಏಕಾಗ್ರತೆಯಿಂದ ಕೆಲಸ ಮಾಡುತ್ತೇನೆ ಎಂದು ವೃಥಾ ಸವಾಲು ಹಾಕಿಕೊಳ್ಳುವುದಕ್ಕಿಂತ ಅದನ್ನು ದೂರ ಇಟ್ಟುಬಿಡುವುದು ಅಥವಾ ಸ್ವಿಚ್ ಆಫ್ ಮಾಡಿಬಿಡುವುದು ಜಾಣತನದ ಲಕ್ಷಣ. ಯುಲಿಸಸ್ನ ಈ ಘಟನೆಯ ಉದಾಹರಣೆ ಏಕೆ ಕೊಟ್ಟೆ ಎಂದರೆ ಯುಲಿಸೆಸ್ ಬಹುದೊಡ್ಡ ವೀರ. ಸಾಟಿ ಇಲ್ಲದ ಹೋರಾಟಗಾರ. ತಾನಿಷ್ಟು ದೊಡ್ಡ ಶೂರ. ಯಾವುದೋ ಸಂಗೀತ ತನ್ನನ್ನು ಆಕರ್ಷಿಸುವುದೆಂದರೇನು? ತನ್ನನ್ನು ಸಾವಿನ ಬಾಯಿಗೆ ನೂಕುವುದೇನು? ಎಂದು ಆತ ಮುಂಬರುವ ಅಪಾಯವನ್ನು ನಿರ್ಲಕ್ಷö್ಯ ಮಾಡಲಿಲ್ಲ. ತನ್ನ ಮಿತಿಯನ್ನು
ಅರಿತುಕೊಂಡ. ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡು ಅಪಾಯದಿಂದ ತಾನೂ ಹೊರಬಂದ, ತನ್ನ ಸೈನಿಕರನ್ನೂ ರಕ್ಷಿಸಿದ. ತಮ್ಮ ತೀರ್ಮಾನಗಳ ಬಗ್ಗೆ, ಜ್ಞಾನದ ಬಗ್ಗೆ ನಂಬಿಕೆ ಇರುವುದು ಒಳ್ಳೆಯದೇ ಆದರೂ ತಮ್ಮನ್ನೂ ಸೇರಿದಂತೆ ಯಾರೂ ಪರಿಪೂರ್ಣರಲ್ಲ ಎಂಬ ಸಾಮಾನ್ಯಜ್ಞಾನ ಒಂದಿದ್ದರೆ ಎಂಥ ಸಮಸ್ಯೆಯನ್ನೂ ಕೂಡ ಸರಾಗವಾಗಿ ಸರಿದುಹೋಗುವಂತೆ ಮಾಡಬಹುದು. ಅತಿಯಾದ ಆತ್ಮವಿಶ್ವಾಸ ಅನಾಹುತಕ್ಕೆ ದಾರಿ ಮಾಡಿ ಕೊಡುತ್ತದೆ. ಯುಲಿಸೆಸ್ನ ಈ ಬುದ್ಧಿವಂತಿಕೆಯ ನಡೆಯಂತೆ ನಾವು ಕೆಲವು ಸಂಗತಿಗಳನ್ನು ಬುದ್ಧಿವಂತಿಕೆಯಿಂದ ಪರಿಹರಿಸಿಕೊಳ್ಳಬೇಕು.
ಯುಲಿಸೆಸ್ನ ಈ ಕಥೆಯಿಂದ ನಾವು ಇನ್ನೂ ಒಂದು ವಿಷಯವನ್ನು ತಿಳಿದುಕೊಳ್ಳಬಹುದು. ಅದೆಂದರೆ ಕೆಲವು ಅಪಾಯಗಳು ಭೀಕರವಾಗಿ, ಹೆದರಿಕೆ ಹುಟ್ಟಿಸುವಂತೆ ಇರುವುದಿಲ್ಲ. ಯಾರೋ ಒಬ್ಬ ರಾಕ್ಷಸ ಎದುರಿಗೆ ಬಂದರೆ ಯುಲಿಸಸ್
ಅವನನ್ನು ಒಂದೇಟಿಗೆ ಕೆಳಗುರುಳಿಸಿಬಿಡುತ್ತಿದ್ದ. ಆದರೆ ಇಲ್ಲಿ ಆ ಅಪಾಯ ಮೋಹಕ ಸಂಗೀತದ ರೂಪದಲ್ಲಿದೆ. ಅಪಾಯ ಎಂದು ಗೊತ್ತೇ ಆಗದ ಅಪಾಯಗಳು ಜಾಸ್ತಿ ಅಪಾಯಕಾರಿ! ಮೊಬೈಲ್ ಮಾತ್ರವಲ್ಲ, ಇತರ ದುಶ್ಚಟಗಳೂ ಹಾಗೆಯೇ!
ಅಚ್ಚುಕಟ್ಟಾಗಿ ಅಲಂಕರಿಸಿಟ್ಟ ಜಂಕ್ ಆಹಾರ ಮತ್ತು ಪಾನೀಯಗಳನ್ನು ಬಾಯಲ್ಲಿ ನೀರೂರಿಸಿಕೊಳ್ಳುತ್ತ ತಿನ್ನುವಾಗ ಅವು ಉಂಟುಮಾಡುವ ಅಪಾಯದ ಅರಿವಾದರೂ ಆ ಕ್ಷಣಕ್ಕೆ ಯಾರಿಗಾದರೂ ಆಗುತ್ತದೆಯೇ? ಇಲ್ಲ ತಾನೇ? ನಮ್ಮ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದಲೇ ಪರಿಹರಿಸಿಕೊಳ್ಳಬೇಕು. ತಾನು ಎಂತಹ ಆಕರ್ಷಣೆಯನ್ನೂ ನಿಭಾಯಿಸಬಲ್ಲೆ
ಎಂದುಕೊAಡವರು ಗಂಟೆಗಟ್ಟಲೆ ಸಾಮಾಜಿಕ ಜಾಲತಾಣದಲ್ಲಿ ಸಮಯ ವ್ಯರ್ಥಗೊಳಿಸುತ್ತಾರೆ. ಒಂದೇ ಒಂದು ಧಮ್ ಎಳೆದು ನೋಡುವ ಎಂದು ಸಿಗರೇಟಿಗೆ ಕೈ ಹಚ್ಚಿದವರು ಚೈನ್ ಸ್ಮೋಕರ್ಗಳಾಗಿದ್ದಾರೆ. ದಿನಕ್ಕಿಷ್ಟೇ ಕುಡಿಯುವುದೆಂದು ಶುರುಮಾಡಿದವರನ್ನು ಕುಡಿತವೇ ಆಪೋಶನ ತೆಗೆದುಕೊಂಡುಬಿಟ್ಟಿದೆ! ನಮ್ಮ ಸಮಸ್ಯೆ ಪರಿಹಾರ ಮಾಡಿಕೊಳ್ಳಲು
ಬೇರೆಯವರ ಸಹಾಯ ತೆಗೆದುಕೊಳ್ಳಬಹುದು. ಯೂಲಿಸೆಸ್ ಹೇಗೆ ತನ್ನ ಸೈನಿಕರ ಸಹಾಯ ಪಡೆದನೋ ಹಾಗೆ ನಾವೂ ಕೂಡ ನಮ್ಮ ಸ್ನೇಹಿತರು, ಕುಟುಂಬದವರ ಸಹಾಯ ಪಡೆದುಕೊಳ್ಳಬಹುದು.
ಕೆಲವರು ದೌರ್ಬಲ್ಯ ಹೊಂದಿರುವುದು ಎಂದರೆ ಅವಮಾನ ಎಂದುಕೊಳ್ಳುತ್ತಾರೆ. ಅದನ್ನು ಹೊರಗೆ ತೋರಿಸಿಕೊಳ್ಳುವುದಿಲ್ಲ. ಗಂಡಸರು ಅಳಬಾರದು ಎನ್ನುವ ಹಿಂದಿನ ನಂಬಿಕೆ ಇಂದಿನವರೆಗೂ
ದೇಶಕಾಲಗಳನ್ನು ಮೀರಿ ಹೇಗೆ ಚಾಲ್ತಿಯಲ್ಲಿದೆ ಎಂಬುದನ್ನು ನಾವು ನೋಡುತ್ತಲೇ ಇದ್ದೇವೆ. ದುರ್ಬಲತೆ ಮಾನವ ಸಹಜವಾದದ್ದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಮ್ಮ ದುರ್ಬಲತೆಯನ್ನು ಮೊದಲು ಒಪ್ಪಿಕೊಳ್ಳಬೇಕು.
ನಂತರ ಅದನ್ನು ಮೀರುವ ಪ್ರಯತ್ನ ಮಾಡಬೇಕು. ಸತತ ಪ್ರಯತ್ನದಿಂದ ಯಾವ ದೌರ್ಬಲ್ಯವನ್ನಾದರೂ ಮೀರಬಹುದು.
ನಾವು ಮನುಷ್ಯರು, ರೋಬೋಟ್ಗಳಲ್ಲ. ನಮ್ಮೆಲ್ಲರೊಳಗೆ ನಮ್ಮದೇ ಆದ ಸಾಮರ್ಥ್ಯಗಳಿವೆ, ಬಲಹೀನತೆಗಳಿವೆ. ಅದನ್ನು ಒಪ್ಪಿಕೊಂಡು ಬಲವನ್ನು ಹೆಚ್ಚಿಸಿಕೊಳ್ಳುವತ್ತ, ದೌರ್ಬಲ್ಯವನ್ನು ಕಡಿಮೆ ಮಾಡುವತ್ತ ಗಮನ ಹರಿಸಿದರೆ… ಬದುಕು
ಬಂಗಾರ.