ಈಕೆಯ ಹೆಸರು ಸೋಫಿಯಾ ವಿಲ್ಲಾನಿ ಸ್ಕಿನ್ಕೊಲೊನೆ. ಆದರೆ ಜಗತ್ತಿಗೆ ಈಕೆ ಸೋಫಿಯಾ ಲೊರೆನ್ ಎನ್ನುವ ಹೆಸರಿನಿಂದ ಪರಿಚಿತರಾಗಿದ್ದಾರೆ. ೨೦ ಸೆಪ್ಟೆಂಬರ್ ೧೯೩೪ರಲ್ಲಿ ಈಕೆ ಇಟಲಿಯ ರೋಮ್ ನಗರದಲ್ಲಿ ಜನಿಸಿದವರು.ಸೋಫಿಯಾಳ ಅಪ್ಪ, ಈಕೆಯ ಅಮ್ಮನನ್ನ ಮದುವೆಯಾಗಲು ನಿರಾಕರಿಸುತ್ತಾನೆ. ಹೀಗಾಗಿ ಇವರಮ್ಮ ತನ್ನಿಬ್ಬರು ಮಕ್ಕಳನ್ನ ಕಷ್ಟಪಟ್ಟು ಸಾಕುತ್ತಾಳೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಒಂದಷ್ಟು ಕಷ್ಟದ ದಿನಗಳನ್ನ ಕೂಡ ಎದುರಿಸಿ ನಿಲ್ಲುತ್ತಾರೆ. ತಮ್ಮ ಊರಿನಲ್ಲಿ ಹೋಂ ಮೇಡ್ ಚೆರ್ರಿ ಲಿಕ್ಕರ್ ಮಾರುವ ಒಂದು ಸಣ್ಣ ಬಾರ್ ನಡೆಸುತ್ತಾರೆ. ಅಲ್ಲಿ ಸೋಫಿಯಾ ಪರಿಚಾರಕಿಯ ಕೆಲಸವನ್ನ ಕೂಡ ಮಾಡುತ್ತಾರೆ.
೧೯೫೦ ರಲ್ಲಿ ‘ಮಿಸ್ ಇಟಾಲಿಯಾ’ ಎನ್ನುವ ಸ್ಪರ್ಧೆಯಲ್ಲಿ ಈಕೆ ಭಾಗವಹಿಸಿದಾಗ ಇವರ ವಯಸ್ಸು ಕೇವಲ ೧೫! ನಂತರ ಈ ಸ್ಪರ್ಧೆಯಲ್ಲಿ ಪ್ರಥಮ ಮೂವರಲ್ಲಿ ಇವರು ಒಬ್ಬರಾಗುತ್ತಾರೆ. ‘ಮಿಸ್ ಎಲಿಗೆನ್ಸ್’ ಎನ್ನುವ ಪಟ್ಟಕ್ಕೆ ಇವರು ಆಯ್ಕೆಯಾಗುತ್ತಾರೆ. ನಂತರ ಇವರು ಸಿನೆಮಾಕ್ಕೆ ಪ್ರವೇಶ ಮಾಡುತ್ತಾರೆ. ಪ್ಯಾರಮೌಂಟ್ ಸಿನಿಮಾದವರ ಜೊತೆಗೆ ಐದು ಸಿನಿಮಾಗಳಿಗೆ ಅಗ್ರಿಮೆಂಟ್ಗೆ ಸಹಿ ಹಾಕುತ್ತಾರೆ. ಅಮೇಲಿನದು ಇತಿಹಾಸ. ಹತ್ತಾರು ಪ್ರಶಸ್ತಿಗಳು, ಪ್ರಸಿದ್ದಿ, ಹಣ ಎಲ್ಲವೂ ಇವರ ಬಳಿಗೆ ಬರುತ್ತದೆ. ಇಂಗ್ಲೀಷ್ ಅಲ್ಲದ ಬೇರೆ ಭಾಷೆಯಲ್ಲಿ ನಟನೆಗೆ ಆಸ್ಕರ್ ಪ್ರಶಸ್ತಿ ಪಡೆದ ಪ್ರಥಮ ವ್ಯಕ್ತಿ ಇವರು. ಟೂ
ವಿಮೆನ್ ಎನ್ನುವ ಇವರ ಚಿತ್ರಕ್ಕೆ ೧೯೬೧ ರಲ್ಲಿ ಈ ಪ್ರಶಸ್ತಿ ಬರುವವರೆಗೆ ಹೆಣ್ಣು ಅಥವಾ ಗಂಡು ಯಾರೊಬ್ಬರೂ ವಿದೇಶಿ ಭಾಷೆಯ ಚಿತ್ರಕ್ಕೆ ಆಸ್ಕರ್ ಪಡೆದ ಉದಾಹರಣೆ ಇರಲಿಲ್ಲ. ಹೀಗೆ ಪ್ರಥಮವೊಂದಕ್ಕೆ ಮುನ್ನುಡಿ ಬರೆದ ಹೆಗ್ಗಳಿಕೆ ಇವರದು.
ಐದು ದಿನದ ಹಿಂದೆ ತನ್ನ ೮೭ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡ ಇವರು ನಿನ್ನೆಯಿಂದ ನೆಟ್ಫ್ಲಿಕ್ಸ್ಗಾಗಿ ತಯಾರಾಗುತ್ತಿರುವ ಚಲನಚಿತ್ರ ‘ಲೈಫ್ ಅಹೆಡ್’ ಎನ್ನುವ ಚಿತ್ರದಲ್ಲಿ ನಟಿಸಲು ಶುರು ಮಾಡಿದ್ದಾರೆ. ಬರೋಬ್ಬರಿ ೧೧ ವರ್ಷದ ನಂತರ ಅವರು ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರವನ್ನ ಅವರ ಮಗ ಎದೋಆರ್ದೋ ಪೊಂಟಿ ನಿರ್ದೇಶಿಸುತ್ತಿರುವುದು ವಿಶೇಷ. ಇರಲಿ.
ಕೊರೊನ ಎನ್ನುವುದು ನಮ್ಮಲ್ಲಿ ಒಂದು ತರಹದ ಭಯವನ್ನ ಹುಟ್ಟಿಸಿ ಬಿಟ್ಟಿತ್ತು. ನಿತ್ಯವೂ ಒಂದಲ್ಲ ಒಂದು ಸಾವಿನ ಸುದ್ದಿ ಕೇಳುತ್ತಲೇ ಇದ್ದೆವು. ಕೆಲವರು ಪ್ರಸಿದ್ಧರು ಜಗತ್ತಿಗೆ ಗೊತ್ತಿರುವವರು, ಇನ್ನು ಕೆಲವರು ಅಗಲಿದವರ ಜಗತ್ತಾಗಿದ್ದವರು ! ಒಟ್ಟಿನಲ್ಲಿ ಬಡವ-ಶ್ರೀಮಂತ, ಹೆಣ್ಣು-ಗಂಡು, ಪ್ರಸಿದ್ಧ-ಸಾಮಾನ್ಯ ಇವುಗಳ ಸಂಕೋಲೆ ಇಲ್ಲದೆ ಈ ವೈರಸ್ ಎಲ್ಲರ ಮೇಲೂ ದಾಳಿ ಮಾಡಿತ್ತು. ತೀರಾ ಹೆಚ್ಚಿನ ಜವಾಬ್ದಾರಿ ಇಲ್ಲದವರಲ್ಲಿ ಈ ಭಯ ಕಡಿಮೆಯಿರಬಹದು. ಆದರೆ ಮಧ್ಯವಯಸ್ಕ ಜನರಲ್ಲಿ ಈ ಭಯ ಇನ್ನೂ ಬಹಳವಿದೆ. ನಿತ್ಯ ಕೇಳುವ ಒಂದೊಂದು ಸಾವು ಆ ಭಯವನ್ನ ಉಲ್ಬಣಿಸುತ್ತದೆ. ಕೊನೆಗೂ ಬದುಕಿನಲ್ಲಿ ನಮ್ಮ ಕೈಯಲ್ಲಿ ಏನೂ ಇಲ್ಲ. ನಮ್ಮ ಹಿಡಿತದಲ್ಲಿರದ ‘ಸಾವಿನ’ ಬಗ್ಗೆ ಭಯ ಪಟ್ಟು ಏನು ಪ್ರಯೋಜನ? ಖುಷಿಯಾಗಿರೋಣ
ಎನ್ನುವ ಸಂದೇಶ ಕೊಡುವುದು ಈ ಬರಹದ ಉದ್ದೇಶ. ೮೭ ರ ಸೋಫಿಯಾ ಶೋಟಿಂಗ್ಗೆ ಹೊರಟಿದ್ದಾರೆ…, ನೆನಪಿರಲಿ.
ಇಂತಹ ಸೋಫಿಯಾ ಅಚಾನಕ್ಕಾಗಿ ಆ ಮಟ್ಟಕ್ಕೆ ಏರಲಿಲ್ಲ. ಆಕೆಗೂ ಬದುಕು ನೂರು ಕೆರೆಯ ನೀರನ್ನ ಕುಡಿಸಿದೆ. ಬದುಕು ನಾವಂದುಕೊಂಡಂತೆ ಎಂದೂ ಸಾಗುವುದಿಲ್ಲ. ಅದು ನಮ್ಮನ್ನ ಆಶ್ಚರ್ಯಗೊಳಿಸುತ್ತಲೇ ಇರುತ್ತದೆ. ಗೆಲುವು ನಮ್ಮನ್ನ ಜಗತ್ತಿಗೆ ಪರಿಚಯಿಸುತ್ತದೆ, ಆದರೆ ಸೋಲು ಇದೆಯಲ್ಲ ಅದು ಜಗತ್ತಿನ ಪರಿಚಯ ನಮಗೆ ಮಾಡಿಕೊಡುತ್ತದೆ ಎನ್ನುವುದು ಈಕೆಯ ಉವಾಚ. ನಾವು ವಿಶ್ವಾಸವಿಟ್ಟ ವಿಷಯ ಸೋಲಬಹದು, ಅಯ್ಯೋ ಇನ್ನೇನು ಮುಗಿಯಿತು ಎನ್ನುವ ಭಾವನೆಯಲ್ಲಿದ್ದಾಗ ದೇವರು ‘ಮಗು ಹೆದರಬೇಡ ಇದು ಕೇವಲ ಸಣ್ಣ ಸೋಲು, ಆದರೆ ಕೊನೆಯಲ್ಲ’ ಎಂದು
ಕೈ ಹಿಡಿಯುತ್ತಾನೆ ಎನ್ನುವುದು ಕೂಡ ಇವರ ಅನುಭವದ ಮಾತುಗಳು. ನಾಳೆ ನಮ್ಮದು ಎನ್ನುವ ವಿಶ್ವಾಸ-ನಂಬಿಕೆ ಇಮ್ಮ್ಯೂನಿಟಿ ಗುಳಿಗೆಗಳು. ಹಣ ಬೇಕಿಲ್ಲ, ಸೈಡ್ ಎಫೆಕ್ಟ್ ಇಲ್ಲವೇ ಇಲ್ಲ. ಹೀಗಾಗಿ ಈ ಗುಳಿಗೆಗಳನ್ನ ಹೆಚ್ಚಾಗಿ ತೆಗೆದುಕೊಳ್ಳುವುದು, ಎಲ್ಲಾ ಸನ್ನಿವೇಶದಲ್ಲಿ ಅತ್ಯಂತ ಅವಶ್ಯಕ.