ಹೊರಟ ದಾರಿಯಲ್ಲಿ ಒಂದಷ್ಟು ಕಲ್ಲುಗಳು, ಮುಳ್ಳುಗಳು, ತರಗೆಲೆಗಳು, ಹೂವುಗಳೂ ಸಹ ಬಿದ್ದಿರುತ್ತವೆ. ಎಲ್ಲಿ ಹೆಜ್ಜೆ ಇಡಬೇಕು ಎನ್ನುವುದು ಮಾತ್ರ ನಾವೇ ನಿರ್ಧರಿಸಬೇಕು. ಮುಳ್ಳು ಚುಚ್ಚುತ್ತದೆ. ಆ ಮುಳ್ಳನ್ನು ಕಾಲಿನಲ್ಲಿಯೇ ಬಿಟ್ಟರೆ ಕೀವು ತುಂಬಿ ಕಾಲು ಕೊಳೆತು ಕಾಲನ್ನು ಕತ್ತರಿಸಬೇಕಾಗಲೂಬಹುದು. ಮುಳ್ಳು ಚುಚ್ಚುತ್ತದೆ ಎಂದು ದಾರಿಯಲ್ಲಿ
ನಡೆಯದಿದ್ದರೆ ಹೇಗೆ?
ದಾರಿಯಲ್ಲಿ ಹೂವಿನ ಪಕಳೆಯು ಹಾಸಿದೆ. ಮೃದು ಹೂವು ನನಗೇನು ಮಾಡದು ಎಂದುಕೊಂಡು ನಡೆಯುವಾಗ ಅದರ ಕೆಳಗಿದ್ದ ಕಂದಕ ಕಾಣದೆಯೂ ಹೋಗಬಹುದು. ಹಾಗಾಗಿ ಒಂದೊಂದು ಹೆಜ್ಜೆ ಇಡುವಾಗಲೂ ಆ ನೆಲ ಗಟ್ಟಿಯೇ? ಸಮತಟ್ಟಾಗಿದೆಯೇ? ಮುಂದಿನ ಹೆಜ್ಜೆ ಊರಲು ಅವಕಾಶ ಇದೆಯೇ ಎಂದು ಪರೀಕ್ಷಿಸಿ ನೋಡಿ ನಂತರ ಹೆಜ್ಜೆ ಇಡಬೇಕು. ಹೆಜ್ಜೆ ಇಟ್ಟ ಮೇಲೆ ಹಿಂತೆಗೆಯುವ ಹಾಗೆ ಆಗಬಾರದು. ನಿರ್ಧರಿಸಿ ನಡೆದಾಗ ಎಷ್ಟೇ ಕಷ್ಟವಾದರೂ ಮುನ್ನುಗ್ಗಬಹುದು.
ಬೇಡವೇ ಬೇಡ ಎಂಬಷ್ಟು ರೋಸಿ ಹೋದ ಮನಕ್ಕೆ ಒಂದು ಸಣ್ಣ ನೆವ ಸಿಕ್ಕರೆ ಸಾಕು. ಬದುಕು ಮುಗಿದುಹೋಗುತ್ತದೆ. ಆದರೆ ಎದ್ದು ನಿಲ್ಲಬೇಕು ಎನ್ನುವ ಕನಸಿದ್ದವರಿಗೆ ದೊಡ್ಡ ಅವಕಾಶ ಸಿಕ್ಕರೆ, ಖಂಡಿತ ಅದೊಂದು ಅದ್ಬುತದ ಕ್ಷಣವಾಗಿ ಬಿಡುತ್ತದೆ ! ಕಷ್ಟದ ನೋವಿನ ಕೆಲವು ಅನುಭವಗಳು ನಮ್ಮನ್ನು ಗಟ್ಟಿ ಮಾಡುತ್ತವೆ ಅಲ್ಲದೇ ಸೂಕ್ಷ್ಮತೆಯನ್ನು ತುಂಬಿ ಹೊಸತನವನ್ನು ಹುಟ್ಟು ಹಾಕುತ್ತವೆ. ಸಾಧಿಸ ಹೊರಟವನಿಗೆ ಇಂಥಹದ್ದೇ ದಾರಿ ಎಂದಿಲ್ಲ. ಮನಸ್ಸು ತೆರೆದುಕೊಂಡು ಮುಂದುವರೆಯಬೇಕು. ಅಷ್ಟೇ. ಒಂದು ಚೌಕಟ್ಟಿನಲ್ಲಿ ಕುಳಿತು ತಾನೇನೋ ಸಾಧಿಸುತ್ತೇನೆ ಎಂದು ಹೊರಟರೆ ಬಹಳ ಕಷ್ಟವಾಗಬಹುದು. ಅದಕ್ಕಾಗಿ ಸಿಕ್ಕ ಅವಕಾಶದಲ್ಲಿ ಗಟ್ಟಿ ನೆಲೆ ಊರಲು ಸಾಧ್ಯವೇ ಎಂದು ಪರಿಶೀಲಿಸಿ ಯೋಚಿಸಿ ತಿಳಿದುಕೊಂಡ ಕೂಡಲೇ ಕಾರ್ಯಪ್ರವೃತ್ತರಾಗಿ ಬಿಡಬೇಕು.
ಒಬ್ಬ ಹುಡುಗನಿಗೆ ಅತಿಯಾದ ಸಂಗೀತದ ಗೀಳು. ಹೇಗಾದರೂ ಮಾಡಿ ತಾನು ಸಂಗೀತವನ್ನು ಕಲಿಯಲೇ ಬೇಕು ಎನ್ನುವ
ಹಠ. ಹನ್ನೊಂದನೇ ವಯಸ್ಸಿಗೆ ತನ್ನ ಊರನ್ನು ಬಿಟ್ಟು ಮುಂಬಾಯಿ ಎನ್ನುವ ದೊಡ್ಡ ನಗರಕ್ಕೆ ಹೋಗುತ್ತಾನೆ. ಆ ವಯಸ್ಸಿನಲ್ಲಿ ಪರವೂರಿನಲ್ಲಿ ಯಾರು ಅನ್ನ ಕೊಡುತ್ತಾರೆ? ಕೂಲಿನಾಲಿ ಮಾಡಿ ಪುಟ್ಬಾತ್ನಲ್ಲಿ ಮಲಗಿ ದಿನ ಕಳೆಯಬೇಕಾಗುತ್ತದೆ. ಆದರೆ ಅಲ್ಲಿ ಆ ಹುಡುಗನಿಗೆ ಸಂಗೀತ ಕಲಿಯಲು ಆಗದೇ ತಿರುಗಿ ತನ್ನ ಊರಿಗೆ ಬರುತ್ತಾನೆ.
ಸ್ವಲ್ಪ ದಿನ ಬಿಟ್ಟು ಮತ್ತೆ ಅವನೊಳಗಿದ್ದ ಹಠ ಚಿಗುರುತ್ತದೆ. ಹೇಗಾದರೂ ತಾನು ಸಂಗಿತವನ್ನು ಕಲಿಯಲೇ ಬೇಕು ಎನ್ನುವ
ಪಟ್ಟು ಹಿಡಿದುಕೊಳ್ಳುತ್ತಾನೆ. ಮತ್ತೆ ಮನೆ ಬಿಟ್ಟು ಗ್ವಾಲಿಯರ್ಗೆ ಹೋಗುತ್ತಾನೆ. ಅಲ್ಲಿ ಗಾಯಕ ವಿನಾಯಕ್ ರಾವ್ ಎನ್ನುವವರ ಪರಿಚಯವಾಗಿ ಸವಾಯಿ ಗಂಧರ್ವರಲ್ಲಿ ಸAಗೀತಾಭ್ಯಾಸಕ್ಕೆ ಕುಳಿತುಕೊಳ್ಳುತ್ತಾರೆ. ಸವಾಯಿ ಗಂಧರ್ವರ ಅಪ್ಪಟ ಶಿಷ್ಯರಾಗಿ ಬೆಳೆಯುತ್ತಾರೆ. ಹಿಂದೂಸ್ಥಾನಿ ಸಂಗೀತದಲ್ಲಿ ಭಾರತೀಯರಲ್ಲಿ ಪ್ರಥಮರಾಗಿ ಬೆಳೆದು ನಿಲ್ಲುತ್ತಾರೆ. ಅವರೇ ಭೀಮಸೇನ ಜೋಶಿ.
ಸಾಮಾನ್ಯರೇ ಅಸಾಮಾನ್ಯರಾಗಿ ಬೆಳೆಯುವುದು. ಅದನ್ನು ಮರೆತಿದ್ದೇವೇನೋ ಅನ್ನಿಸುವುದು ನಾವು ಸೋತಾಗ. ಕೆಲವೊಮ್ಮೆ ನಮ್ಮನ್ನು ಎಚ್ಚರಿಸಲು ಮುಳ್ಳಿನಿಂದ ಕೂಡಿದ ದಾರಿ ಬೇಕು. ನಮ್ಮ ಸರಿತಪ್ಪುಗಳನ್ನು ಎಚ್ಚರಿಸಲು ಒಬ್ಬ ಗುರು ಬೇಕು. ಹರ ಮುನಿದರೆ ಗುರು ಕಾಯ್ವನು, ಗುರು ಮುನಿದರೆ ಹರ ಕಾಯಲಾರನು ಎನ್ನುವ ಮಾತಿದೆ. ನಮ್ಮ ಗುರಿ ತಲುಪಲು ನಾವೇ ಬೇಡಬೇಡ ಎಂದು ಕುಳಿತರೆ ಯಾರು ಏನು ಮಾಡಲು ಸಾಧ್ಯ? ನಮಗಾಗಿ ಒಂದು ಕಿಂಡಿ ಇದೆ. ಅದರಿಂದ ಬೆಳಕು ಬರುತ್ತಿದೆ. ಆದರೂ ಅದರತ್ತ ದಿವ್ಯ ಮೌನ. ಅದುವೇ ನಿರಾಸಕ್ತಿ. ಆ ಕಿಂಡಿಯಿಂದ ಬಂದ ಬೆಳಕನ್ನು ಕಂಡು ಆ ಬೆಳಕಿನಲ್ಲಿಯೇ ನಮ್ಮ ಕೈ ಕಾಲುಗಳನ್ನು ನೋಡಿಕೊಳ್ಳಲು ಇರುವ ಅವಕಾಶ ಎಂದು ಅತ್ತ ಸಾಗಿದರೆ ಕಿಂಡಿ ಬಾಗಿಲಾಗಿ ತೆರೆದುಕೊಳ್ಳಬಹುದು ಅಲ್ಲವೇ…?