ಒಂದೂರಿನಲ್ಲಿ ಕ್ರೂರಿಯಾದ ರಾಜನೊಬ್ಬನಿದ್ದ. ಹಣ ಮತ್ತು ಅಧಿಕಾರದ ಬಲದಿಂದ ತನ್ನನ್ನು ತೊಂದರೆ ವಿರೋಧಿಸಿದವರಿಗೆ ಕೊಡುತ್ತಿದ್ದ. ಮೂರ್ಖನ ಸಹವಾಸ ಯಾರಿಗೆ ಬೇಕೆಂದು ಜನರು ಅವನನ್ನು ಎದುರು ಹಾಕಿಕೊಳ್ಳಲು ಹೋಗುತ್ತಿರಲಿಲ್ಲ. ಅದನ್ನೇ ತಪ್ಪಾಗಿ ತಿಳಿದುಕೊಂಡು ಎಲ್ಲರೂ ತನ್ನನ್ನು ಬಹಳ ಗೌರವಿಸುತ್ತಾರೆಂದು ಗರ್ವ ಪಡುತ್ತಿದ್ದ.
ಆ ರಾಜನ ಹತ್ತಿರ ಒಂದು ನಾಯಿಯಿತ್ತು. ಅದನ್ನು ಕಂಡರೆ ಆತನಿಗೆ ತುಂಬಾ ಪ್ರೀತಿ, ವಿಹಾರಕ್ಕೆ ಹೋಗುವಾಗ ಆ ನಾಯಿಯನ್ನು ಕರೆದುಕೊಂಡು ಹೋಗುತ್ತಿದ್ದ. ಊಟ ಮಾಡುವಾಗಲೂ ಪಕ್ಕದಲ್ಲೇ ದರ್ಬಾರು ನಡೆಸಬೇಕಾದರೂ ಜತೆಯಲ್ಲೇ! ಜನರಿಗೂ ಸಿಕ್ಕದ ವೈಭವ ಆ ನಾಯಿಯದಾಗಿತ್ತು. ಒಂದು ದಿನ ಇದ್ದಕ್ಕಿದ್ದಂತೆ ಖಾಯಿಲೆ ಬಿದ್ದು ಆ ನಾಯಿ ಸತ್ತುಹೋಯಿತು. ದುಃಖಿತನಾದ ರಾಜ ನಾಯಿಯ ಶವಸಂಸ್ಕಾರಕ್ಕೆ ಭರ್ಜರಿ ಏರ್ಪಾಡು ಮಾಡಿದ. ರಾಜಧಾನಿಯ ಎಲ್ಲ ಜನರೂ ಶವಸಂಸ್ಕಾರಕ್ಕೆ ಬಂದರು. ಅದನ್ನು ನೋಡಿ ರಾಜ, ‘ಅಬ್ಬಾ, ಜನರೆಲ್ಲ ನನ್ನನ್ನು ಎಷ್ಟು ಪ್ರೀತಿಸುತ್ತಾರೆ. ನಾನೆಷ್ಟು ಜನಪ್ರಿಯ ಅರಸ’ ಎಂದು ಒಳಗೊಳಗೇ ಹೆಮ್ಮೆಪಟ್ಟ.
ಕೆಲವು ದಿನಗಳ ನಂತರ ಆ ರಾಜನೂ ಅಕಾಸ್ಮಾತ್ ಆಗಿ ಸಾವನ್ನಪ್ಪಿದ. ಆದರೆ ಆ ಊರಿನ ಯಾರೂ ರಾಜನ ಅಂತಿಮ ಸಂಸ್ಕಾರಕ್ಕೆ ಹೋಗಲಿಲ್ಲ. ಕಥೆ ಇಷ್ಟೇ. ಆದರೆ ಅದರ ಅರ್ಥ, ಅದು ತಿಳಿಸುವ ನೀತಿ ಮಾತ್ರ ಮಿದುಳಿನ ಆಳದಲ್ಲಿ ಜಾಗೃತೆಯಿಂದ ಇಟ್ಟುಕೊಳ್ಳಬೇಕಾದದ್ದು.ಗೌರವವೆನ್ನುವುದು ಗಳಿಸಬೇಕಾದುದು. ಅದನ್ನು ಅಧಿಕಾರದಿಂದಲೋ,
ಒತ್ತಾಯದಿಂದಲೋ ಅಥವಾಹಿಂಸೆಯಿಂದಲೋ ಪಡೆಯಲಾಗದು. ಇತರರನ್ನು ಭಯ ಪಡಿಸುವುದು ಬಹು ಸುಲಭವಾದ ಕೆಲಸ, ಯಾಕೆಂದರೆ ಮನುಷ್ಯರಾದ ನಾವೆಲ್ಲರೂ ಯಾವಾಗಲೂ ಒಂದಲ್ಲ ಒಂದು ಆತಂಕದಲ್ಲಿರುತ್ತೇವೆ. ಮನುಷ್ಯನ ಈ ಹೆದರಿಕೆಯೇ ಎಷ್ಟೋ ಜನರ ಬದುಕಿನ ಅನ್ನದ ಮೂಲ. ಇತರರನ್ನು ಹೆದರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ, ಶೋಷಣೆ ನಡೆಸುವ, ಸಂಪತ್ತನ್ನು ಸಂಗ್ರಹಿಸುವ ಮೋಸಗಾರರು ಎಲ್ಲೆಡೆಯೂ ಇದ್ದಾರೆ. ಹೆದರಿಕೆಯಿಂದ ಜನರು ತೋರುವ ಸುಳ್ಳು ಗೌರವವನ್ನೇ ತಪ್ಪಾಗಿ ಅರ್ಥ ಮಾಡಿಕೊಂಡು ತಮ್ಮನ್ನು ತಾವು ಮಹಾನ್ ಎಂದುಕೊಳ್ಳುವ ಮೂರ್ಖ ರಾಜನ ಪಾಡು ಬಹಳ ಮಂದಿ ‘ಗೌರವಾನ್ವಿತ’ರದ್ದು!
ಗೌರವ ಎನ್ನುವುದು ಕ್ಷಮೆಯಿಂದ ಬರುವುದೇ ಹೊರತು ಭಯದಿಂದಲ್ಲ ಎನ್ನುತ್ತಾರೆ ನೆಲ್ಸನ್ ಮಂಡೇಲಾ, ಉದಾಹರಣೆಗೆ ಉಪನ್ಯಾಸಕರು ವಿದ್ಯಾರ್ಥಿಗಳ ಬಗೆಗಿನ ನೈಜ ಕಾಳಜಿಯಿಂದ ತರಗತಿಯಲ್ಲಿ ಶಿಸ್ತನ್ನು ಕಾಯ್ದುಕೊಳ್ಳುವುದು ಬೇರೆ, ತಮ್ಮ ವಿಷಯಜ್ಞಾನದ ಕೊರತೆಯನ್ನು ಮುಚ್ಚಿಟ್ಟುಕೊಳ್ಳಲು ವಿದ್ಯಾರ್ಥಿಗಳಲ್ಲಿ ಭಯ ಹುಟ್ಟಿಸುವುದೇ ಬೇರೆ. ಕ್ಲಾಸಿನಲ್ಲಿ ಥರಥರ ನಡುಗಿದಂತೆ ನಟಿಸುವ ವಿದ್ಯಾರ್ಥಿಗಳು ಅದೇ ಉಪನ್ಯಾಸಕರ ಬಗ್ಗೆ ಗುಂಪಿನಲ್ಲಿ ಮಾತನಾಡುವಾಗ ಏಕವಚನ ಬಳಸಿ, ನಗೆಯುಕ್ಕಿಸುವ ಅಡ್ಡಹೆಸರುಗಳನ್ನಿಟ್ಟು ಉಡಾಫೆಯಾಗಿ ಮಾತನಾಡಿಕೊಳ್ಳುತ್ತಾರೆ. ಮೇಲಾಧಿಕಾರಿಗಳ ಎದುರು ಅವರನ್ನು ವಿಧವಿಧವಾಗಿ ಬಣ್ಣಿಸಿ ಅವರ ಹಿಂದೆ ಅವರನ್ನು ಹೀನಾಯವಾಗಿ ಆಡಿಕೊಳ್ಳುವ ನೌಕರ ವರ್ಗ ಎಲ್ಲಿಲ್ಲ? ಇವಕ್ಕೆಲ್ಲ ಕಾರಣ ಭಯ ಮತ್ತು ಗೌರವಕ್ಕಿರುವ ವ್ಯತ್ಯಾಸ ಗೊತ್ತಿಲ್ಲದೇ ಇರುವುದು. ಹಾಗಾಗಿಯೇ ದರ್ಪದಿಂದ ಕೈಕೆಳಗಿನವರನ್ನೆಲ್ಲ ಹೆದರಿಸಿ ಗೌರವ ಸಂಪಾದಿಸುತ್ತಿದ್ದ ಅಧಿಕಾರಿ ಮಹಾಶಯರಿಗೆ ನಿವೃತ್ತಿಯೆನ್ನುವುದು ಭಯಾನಕ ದುಃಸ್ವಪ್ನವಾಗಿ ಕಾಡುತ್ತದೆ. ಅವರಿಗೆ ಡೊಗ್ಗು ಸಲಾಮು ಹೊಡೆಯುವ ಎಲ್ಲರೂ ನಾಪತ್ತೆಯಾಗಿಬಿಡುತ್ತಾರೆ. ಮಾನಸಿಕವಾಗಿ ಚೇತರಿಸಿಕೊಳ್ಳಲಾಗದಂತಹ ಸ್ಥಿತಿಗೆ ಅಧಿಕಾರಿ ಹೋಗಿಬಿಡಬಹುದು! ಆದರೆ ತಮ್ಮ ಉತ್ತಮ ವ್ಯಕ್ತಿತ್ವದಿಂದ ತಮ್ಮ ಕುರ್ಚಿಗೂ ಬೆಲೆ ತಂದುಕೊಟ್ಟವರಿಗೆ ಆ ಭಯವಿರುವುದಿಲ್ಲ. ನಿವೃತ್ತಿಯೆನ್ನುವುದು ಅವರಿಗೆ ತಮ್ಮ ಹತ್ತು ಹಲವು ಚಟುವಟಿಕೆಗಳನ್ನು ಮುಂದುವರೆಸುವ ಅವಕಾಶವಾಗುತ್ತದೆ. ಹಾಗೂ ಅವರ ವ್ಯಕ್ತಿತ್ವವೇ ಗೌರವ ಹುಟ್ಟಿಸುವುದಾದ್ದರಿಂದ ಕುರ್ಚಿಯ ಜತೆಗೆ ಅದು ಕಳೆದುಹೋಗುವುದಿಲ್ಲ!
ತಮಾಷೆಯೆಂದರೆ ಈಗ ಹಣಬಲದಿಂದ, ಅಧಿಕಾರದಿಂದ ಗೌರವವನ್ನು ಡಿಮ್ಯಾಂಡ್ ಮಾಡಲಾಗುತ್ತದೆ. ಎಲ್ಲದಕ್ಕೂ ವಿದೇಶವನ್ನು ಮಾದರಿಯಾಗಿಟ್ಟುಕೊಳ್ಳುವ, ಗುಂಪುಗುಂಪಾಗಿ ವಿದೇಶ ಪ್ರವಾಸಕ್ಕೆ ಗೌರವಿಸುವುದಿಲ್ಲ! ಅಧ್ಯಯನಕ್ಕಾಗಿ ಹೋಗುವ ನಮ್ಮ ರಾಜಕಾರಣಿಗಳು ಅಲ್ಲಿನ ರಾಜಕಾರಣಿಗಳ ಸರಳತೆಯನ್ನೇಕೆ ಮೈಗೂಡಿಸಿಕೊಳ್ಳುವುದಿಲ್ಲವೋ ಅರ್ಥವಾಗುವುದಿಲ್ಲ. ಕೆಲವು ವರ್ಷಗಳ ಹಿಂದೆ ಸಂಸದೆಯೊಬ್ಬರು ತಮ್ಮ ಕ್ಷೇತ್ರದ ಶಾಸಕರೊಬ್ಬರ ಜತೆ ಸೇರಿ ಸರಿಯಾದ ಸಮಯಕ್ಕೆ ಸ್ವಾಗತಿಸಲು ಬರಲಿಲ್ಲವೆಂಬ ಯಕಶ್ಚಿತ್ ಕಾರಣಕ್ಕೆ ಎಂಜಿನಿಯರ್ ಒಬ್ಬರನ್ನು ಎಷ್ಟು ಕೆಟ್ಟದಾಗಿ ಅಸಹ್ಯ ಪದಗಳನ್ನು ಬಳಸಿ ಬಯ್ಯುತ್ತಿದ್ದರೆಂದರೆ ಕೇಳುವವರಿಗೇ ನಾಚಿಕೆಯಾಗುತ್ತಿತ್ತು! ಪಕ್ಕದಲ್ಲಿದ್ದ ಯಾರೋ ಅದನ್ನು ವೀಡಿಯೋ ಮಾಡಿ ವಾಟ್ಸಾಪ್ ನಲ್ಲಿ ತೇಲಿಬಿಟ್ಟ ಕಾರಣ ಅದು ಎಲ್ಲರಿಗೂ ಗೊತ್ತಾಯಿತಷ್ಟೇ!
ಮೊನ್ನೆ ಶಿಕ್ಷಕರೊಬ್ಬರು ಪತ್ರಿಕೆಯ ವಾಚಕರ ವಾಣಿಯಲ್ಲಿ ಪಂಚಾಯತಿ ಪ್ರತಿನಿಧಿಗಳು ಶಿಕ್ಷಕರನ್ನು ಮಕ್ಕಳೆದುರೇ ಬಯ್ಯುವುದರ ಬಗ್ಗೆ ಖೇದ ವ್ಯಕ್ತಪಡಿಸಿದ್ದರು. ಕೆಲವು ಜನಪ್ರತಿನಿಧಿಗಳಂತೂ ವೈದ್ಯರು, ಶಿಕ್ಷಕರು. ಅಧಿಕಾರಿಗಳು ಯಾರೇ ಇರಲಿ ಅವರನ್ನು ಹೀನವಾಗಿ ಬಯ್ಯುವುದೆಂದರೆ ತಮ್ಮ ಕರ್ತವ್ಯ ನಿರ್ವಹಿಸಿದಂತೆ ಎಂದುಕೊಂಡು ಬಿಟ್ಟಿದ್ದಾರೆ! ದೃಶ್ಯ ಮಾಧ್ಯಮಗಳ ಪ್ರತಿನಿಧಿಗಳು ಎದುರಿಗೆ ಕ್ಯಾಮರಾ ಹಿಡಿದುಕೊಂಡು ನಿಂತರಂತೂ ಅವರ ಜೋಶ್ ಮುಗಿಲು ಮುಟ್ಟುತ್ತದೆ. ತಪ್ಪು ಮಾಡಿದವರನ್ನು ಶಿಕ್ಷಿಸುವುದು ಸ್ವಾಗತಾರ್ಹವೇ, ಆದರೆ ಕೆಲಸ ಮಾಡುವ ಉತ್ಸಾಹವನ್ನೇ ಕಳೆದುಕೊಳ್ಳುವ ಕಟು ನುಡಿಗಳನ್ನಾಡುವ ಮೊದಲು ತಾವು ಎಷ್ಟರಮಟ್ಟಿಗೆ ಸಾಚಾ ಇದ್ದೇವೆ ಎಂಬುದರ ಆತ್ಮಾವಲೋಕನ ಮಾಡಿಕೊಳ್ಳುವ ರಾಜಕಾರಣಿಗಳು ಎಷ್ಟು ಜನ ಇದ್ದಾರೆ? ಶಾಸಕರೋ, ಮಂತ್ರಿಯೋ ಆದ ಐದಾರು ವರ್ಷಗಳಲ್ಲಿ ಒಂದಲ್ಲ ಎರಡಲ್ಲ ನೂರಾರು ಕೋಟಿಯ ಆಸ್ತಿ, ಮನೆಮಂದಿಗೆಲ್ಲ ಕೋಟಿಗಟ್ಟಲೆ ಬೆಲೆಯ ಕಾರು, ಬೇರೆಯವರಿಗೆ ಕೊಳ್ಳಲು ಜಾಗವೇ ಇಲ್ಲದಂತೆ ಬೇನಾಮಿ ಹೆಸರಲ್ಲಿ ಭೂಮಿ ಖರೀದಿ, ಚುನಾವಣೆಯ ಹಿಂದಿನ ದಿನ ಹಂಚಲು ಲೆಕ್ಕವಿಲ್ಲದಷ್ಟು ಹಣ ಇವಕ್ಕೆಲ್ಲ ಆದಾಯ ಎಲ್ಲಿಂದ ಬರುತ್ತದೆ? ಅಧಿಕಾರಿಗಳು ಪಡೆವ ಮಾಮೂಲಿನಲ್ಲಿ ಪಾಲು ಪಡೆದು ಎಲ್ಲರೆದುರು ಅವರನ್ನು ಬೈದುಬಿಟ್ಟರೆ
ಗೌರವ ಸಿಗುತ್ತದೆಯೇ? ಖಂಡಿತ ಇಲ್ಲ. ಸಾಯಲಿ, ದುಡ್ಡು ಅಧಿಕಾರ ಇದ್ದವನನ್ನು ಎದುರು ಹಾಕಿಕೊಳ್ಳುವುದ್ಯಾಕೆ ಎಂದೇ ಎಲ್ಲರೂ ನಕಲೀ ಗೌರವ ತೋರುತ್ತಾರೆಯೇ ಹೊರತು ಅವರ ವ್ಯಕ್ತಿತ್ವವನ್ನಂತೂ ಯಾರೂ ಹಿಂದೆಲ್ಲ ಗೌರವ ನೀಡುವುದು ಗೌರವಿಸಲ್ಪಡುವುದು ಸಹಜ ಪ್ರಕ್ರಿಯೆಯಾಗಿತ್ತು. ಗೌರವ ಎನ್ನುವುದು ಪರಸ್ಪರ ಕೊಡುಕೊಳ್ಳುವಿಕೆ. ಆದರೆ ಯಾವಾಗಲೂ ಬೇರೆಯವರಿಂದ ನಮಸ್ಕಾರವನ್ನು ಮೊದಲು ತಮ್ಮನ್ನು ನಿರೀಕ್ಷಿಸುವುದು ಕೆಲವರ ಕಾಯಿಲೆ. ಅವರೇ ಮೊದಲು ಹೇಳಲಿ ಎಂದು ಇವರೂ, ಇವರೇ ಮೊದಲು ಹೇಳಲಿ ಎಂದು ಅವರೂ, ತಮಗೇ ಗೊತ್ತಿಲ್ಲದ ಹಾಗೆ ಅಸಹನೆಯನ್ನು ಬೆಳೆಸಿಕೊಳ್ಳುತ್ತಾರೆ. ಸೀನಿಯರ್ ಆದ ಮಾತ್ರಕ್ಕೆ, ಮೇಲಾಧಿಕಾರಿಯಾದ ಮಾತ್ರಕ್ಕೆ ಮೊದಲು ವಿಶ್ ಮಾಡಬಾರದೆಂದೇನಿಲ್ಲ! ವಯಸ್ಸಿನಲ್ಲಿ, ಅಂತಸ್ತಿನಲ್ಲಿ ಕಿರಿಯರನ್ನೂ ಗೌರವದಿಂದಲೇ ಕಾಣಬೇಕು. ಪ್ರತೀ ಮನುಷ್ಯನಿಗೂ ಅವರದ್ದೇ ಆದ ಆತ್ಮಗೌರವ ಇರುತ್ತದೆ. ಒಬ್ಬ ಚರಂಡಿ ಸ್ವಚ್ಛಗೊಳಿಸುವವನ ಜತೆಗೂ ವಿಶ್ವವಿದ್ಯಾಲಯದ ಕುಲಪತಿಯ ಜತೆಗೂ ನಾನು ಒಂದೇ ರೀತಿ ಮಾತಾಡುತ್ತೇನೆ ಎಂದಿದ್ದರು ಐನ್ಸ್ಟೈನ್,
ಇನ್ನು ಕೆಲವರು ಎದುರಿಗಿರುವ ವ್ಯಕ್ತಿಯ ಬಗ್ಗೆ ಕಿಂಚಿತ್ ಗೌರವ ಇಲ್ಲದಿದ್ದರೂ ಅತಿಯಾಗಿ ಗೌರವ ಹೊಂದಿದವರಂತೆ ವರ್ತಿಸುತ್ತಾರೆ. ಮಂತ್ರಿ ಮಹೋದಯರ, ಉನ್ನತ ಹುದ್ದೆಗಳಲ್ಲಿರುವ ವ್ಯಕ್ತಿಗಳ ಸುತ್ತ ಇಂತಹವರು ಸುತ್ತುತ್ತಿರುತ್ತಾರೆ. ಇದಕ್ಕೆ ಸ್ಥಳೀಯ ಭಾಷೆಯಲ್ಲಿ ‘ಬಕೆಟ್ ಹಿಡಿಯುವುದು’ ಎನ್ನುತ್ತಾರೆ!! ಆತ್ಮಗೌರವವೇ ಇಲ್ಲದ ಈ ರೀತಿಯ ವ್ಯಕ್ತಿಗಳನ್ನು ನೋಡಿದರೇ ಅಸಹ್ಯವೆನಿಸುತ್ತದೆ.
ನಾವು ಯಾರನ್ನಾದರೂ ಗೌರವಿಸುತ್ತೇವೆಂದರೆ, ಅವರಲ್ಲಿರುವ ಉತ್ತಮ ಗುಣಗಳನ್ನು ಇಷ್ಟಪಡುತ್ತೇವೆಂದು ಅರ್ಥ. ಅವರನ್ನು ಗೌರವಿಸುತ್ತ ಅವರಂತೆ ನಾವಾಗಲು ಬಯಸುತ್ತೇವೆ. ಆದರೆ ಯಾರ ಕುರಿತಾದರೂ ನಮಗೆ ಭಯವಿದ್ದರೆ ನಾವು ಅವರನ್ನು ನಮಗೇ ಗೊತ್ತಿಲ್ಲದೇ ದ್ವೇಷಿಸಲಾರಂಭಿಸುತ್ತೇವೆ. ಅವರಿಂದ ದೂರ ಓಡಲೆತ್ನಿಸುತ್ತೇವೆ.
‘ನೀವು ನನ್ನನ್ನು ಇಷ್ಟಪಡುತ್ತೀರೋ ಇಲ್ಲವೋ ಎಂಬುದರ ಬಗ್ಗೆ ನನಗೆ ತಲೆಬಿಸಿ ಇಲ್ಲ. ನಾನು ಕೇಳುವುದು ಒಬ್ಬ ಮನುಷ್ಯನಾಗಿ ನನ್ನನ್ನು ಗೌರವಿಸುವುದರ ಬಗ್ಗೆ’ ಎನ್ನುತ್ತಾರೆ ಬೇಸ್ ಬಾಲ್ ಆಟಗಾರ ಜಾಕಿ ರಾಬಿನ್ಸನ್, ಪರಸ್ಪರ ಗೌರವ ಸಂಬಂಧಗಳ ತಳಹದಿ. ಒಬ್ಬ ವ್ಯಕ್ತಿ ಯಾರೇ ಆಗಲಿ, ಆತನಿಗೆ ಗೌರವ ಪಡೆಯುವ ಎಲ್ಲಾ ಹಕ್ಕೂ ಇದೆ. ಜಾತಿ, ಲಿಂಗ, ಧರ್ಮ, ಅಂತಸ್ತಿನ ಆಧಾರದಲ್ಲಿ ವ್ಯಕ್ತಿಯ ಗೌರವವನ್ನು ನಿರ್ಧರಿಸುವುದು ಸಂವಿಧಾನಕ್ಕೆ ಮಾತ್ರವಲ್ಲ, ಮನುಷ್ಯತ್ವಕ್ಕೇ ನಾವು ಮಾಡುವ ಅಪಚಾರ.
ಜತೆಗೆ ನಮ್ಮನ್ನು ನಾವು ಗೌರವಿಸಿಕೊಳ್ಳುವುದು ಕೂಡ ಮುಖ್ಯ ಸ್ವಗೌರವ ಆತ್ಮಾಭಿಮಾನವನ್ನು ಹೆಚ್ಚಿಸುತ್ತದೆ. ನಮ್ಮ ಪ್ರಯತ್ನಗಳಿಗೆ ಬಲ ತುಂಬುತ್ತದೆ. ನಮ್ಮ ಬಗ್ಗೆ ನಮಗೇ ಗೌರವ ಇಲ್ಲದೇ ಹೋದರೆ ನಮ್ಮ ಪ್ರಯತ್ನಗಳ ಬಗ್ಗೆ ಅನುಮಾನ ಪ್ರಾರಂಭವಾಗುತ್ತದೆ, ಅಲ್ಲಿ ವೈಫಲ್ಯದ ಭಯ ಕಾಡುತ್ತದೆ. ಆತ್ಮಗೌರವವಿಲ್ಲದಿದ್ದರೆ ಕೀಳರಿಮೆಯಿಂದ ನರಳುತ್ತೇವೆ. ಆತ್ಮರತಿ ಹೆಚ್ಚಾದರೆ ಮೇಲರಿಮೆಯ ಗುಲಾಮರಾಗುತ್ತೇವೆ. ಗೌರವ ಮತ್ತು ಭಯ ಇವೆರಡರ ನಡುವಿನ ರೇಖೆ ಬಹಳ ತೆಳುವಾದದ್ದು. ಅದನ್ನು ಅರ್ಥ ಮಾಡಿಕೊಂಡು ನಮ್ಮ ನಡವಳಿಕೆಯಲ್ಲಿ ಬದಲಾವಣೆ ತಂದುಕೊಳ್ಳಲು ಪ್ರಯತ್ನಿಸುವುದು ವ್ಯಕ್ತಿತ್ವ ನಿರ್ಮಾಣದ ಪ್ರಮುಖ ಹೆಜ್ಜೆ.