ಟಣ್.. ಟಣ್.. ಟಪ್.. ಟಪ್.. ಮುಗಿಲ ಹನಿಗಳು ಬಹುಕಾಲ ಬದುಕಿದ್ದಕ್ಕೋ ಏನೋ ಬಹುತೇಕ ಜೀರ್ಣಗೊಂಡAತೆ ಇದ್ದ ಆ ಮನೆಯ ಛಾವಣಿಯಿಂದ ಒಳಕ್ಕೆ ಇಳಿದವು. ಮನೆಯೊಳಗಿನ ಕಂಬಕ್ಕೆ ಒರಗಿ ಭಾಗಶಃ ಮೈಮರೆತ ಸ್ಥಿತಿಯಲ್ಲಿದ್ದ ಮನೋರಂಜಿನಿ ಬೆಚ್ಚಿ, ಮೊರೆತದಿಂದಲೇ ಮಳೆಯನ್ನು ಗ್ರಹಿಸಿದವಳಿಗೆ ಮಳೆಯ ಬಗ್ಗೆ ಕೋಪ ಉಕ್ಕಿತು.
“ಥತ್… ಹಾಳು ಮಳೆ… ಯಾಕಾದ್ರೂ ಬರುತ್ತೋ.. ಅದೂ ಈ ಮುರುಕಲು ಮನೆಯೊಳಗೆ ನಾವಿರೋದೇ ಕಷ್ಟ” ಎಂದು ಜೋರಾಗಿಯೇ ಗೊಣಗಿಕೊಂಡಳು. ಮಗಳನ್ನು ದಯನೀಯವಾಗಿ ನೋಡಿದ ರತ್ನವ್ವ ತಪ್ಪಲೆಯನ್ನು ತಂದು ಹನಿಗಳು ಸೋರುತ್ತಿದ್ದ ಕಡೆ ಇರಿಸಿದಳು.
“ಮಗಾ ಅದ್ಯಾಕೆ ಅಷ್ಟು ಬೇಸರ ಪಟ್ಕೋತಿಯ ಬಿಡು. ಮಳೆ ಇಲ್ಲದೆ ಇದ್ರೆ ನಾವು ಈ ಭೂಮಿ ಮೇಲೆ ಉಳಿಯೋಕಾಗ್ತದಾ?”
“ಹಾಗಂತ ತಲೆ ಮೇಲೆ ಮಳೆ ಸುರಿದುಕೊಳ್ಳೊಕಾಗ್ತದಾ?” ತುಸು ಜೋರು ಧ್ವನಿಯಲ್ಲಿಯೇ ಮನೋರಂಜಿನಿ ರೇಗಿದಳು.
“ಓ ಜಾಸ್ತಿ ಸುರೀತೇನು? ಒರೆಸ್ತೀನಿ ಇರು” ಎಂದ ರತ್ನವ್ವ ಟವೆಲೊಂದನ್ನು ತಂದು ಮಗಳ ನೆತ್ತಿಯನ್ನು ನವಿರಾಗಿ ಒತ್ತುತ್ತ ನೀರು ಒರೆಸತೊಡಗಿದಳು. “ಅವ್ವಾ.. ನಾನೇನು ಕರ್ಮ ಮಾಡಿ ಈ ಮನೆಯಲ್ಲಿ ಹುಟ್ಟಿದೆ? ನನ್ನ ಓರಗೆಯವರೆಲ್ಲ ಎಂಥಾ ಚಂದದ ಮನೆಯಲ್ಲಿ ಬೆಚ್ಚಗೆ ಇದಾರೆ ನೋಡು. ಈ ಮನೆಯಲ್ಲಿ ಇರೋದಕ್ಕಿಂತ ಮರದ ಕೆಳಗೆ ಇರೋದೇ ಮೇಲಲ್ಲವೆ?
ಒಂದು ಮಳೆ ತಡೆಯೋಲ್ಲ, ಬಿಸಿಲು ತಡೆಯೋಲ್ಲ” “ಇಲ್ಲವ್ವಾ.. ಎಲ್ಲವನ್ನೂ ತಡೆದು ತಡೆದೇ ಈ ಮನೆ ಹೀಗಾಗಿರೋದು. ನಾಲ್ಕು ದಿನ ಈ ಮನೆ ಸಹಿಸ್ಕೋ. ಒಳ್ಳೆಯ ದಿನಗಳು ನಿನಗೂ ರ್ತವೆ” “ಹೂಂ ಹೇಳ್ತಾನೇ ಇರು” ಎಂದು ಬಿಗುವಿನಿಂದಲೇ ಎದ್ದು ಹೋದ ಮಗಳ ಮುಖವನ್ನು ನೋಡಿ ಸದ್ದಿಲ್ಲದೆ ನಕ್ಕ ರತ್ನವ್ವ ಮಳೆಯ ಹನಿಗಳಿಂದ ತುoಬುತ್ತಿದ್ದ ತಪ್ಪಲೆಯನ್ನು ನೋಡುತ್ತಾ ಕುಳಿತರೆ ಮನೋರಂಜಿನಿ ಮಳೆಯನ್ನು ಶಪಿಸುತ್ತಲೇ ಮೂಲೆಯಲ್ಲಿ ಮುದುರಿಕೊಂಡು ಕುಳಿತಳು. ಬೆಚ್ಚನೆಯ ಜಾಗದಲ್ಲಿ ಕುಳಿತಿದ್ದರೂ ಮಳೆಯಲ್ಲಿ ಸಂಪೂರ್ಣ ತೋಯ್ದು ಹೋದವಳಂತೆ ಪರಿತಪಿಸತೊಡಗಿದಳು. ರತ್ನವ್ವ ಮಗಳ ಕಸಿವಿಸಿಯನ್ನು ಮನಸ್ಸಿಗೆ ಹಚ್ಚಿಕೊಂಡು “ದೇವರೇ.. ನನ್ನ ಮಗಳಿಗೆ ಒಳ್ಳೆ ಮನೆ ಸಿಕ್ಕಿ ಚೆನ್ನಾಗಿರ್ಲಿ” ಎಂದುಕೊಳ್ಳುತ್ತಾ
ಮನೆದೇವರನ್ನು ನೆನೆದು ಪ್ರಾರ್ಥನೆ ಮಾಡಿದಳು. ರತ್ನವ್ವ ಕೂಲಿ ಮಾಡುವ ಹೆಂಗಸು. ಮಗಳು ಹುಟ್ಟಿದ ಮೇಲೆ ಗಂಡ ನಾಪತ್ತೆಯಾಗಿದ್ದ. ಒಂದಷ್ಟು ದಿನ ಅಲ್ಲಿ ಇಲ್ಲಿ ಹುಡುಕಿಸಿದಳು. ಆದರೆ ಅವನು ಎಲ್ಲೂ ಪತ್ತೆಯಾಗದ ಕಾರಣ ಖಿನ್ನತೆಯಿಂದ ನರಳಿದಳು. ದಿನ ಕಳೆದಂತೆ ಎಲ್ಲಕ್ಕೂ ಹೊಂದಿಕೊಳ್ಳುವ ಸಂಕಲ್ಪ ಮಾಡಿ ಬದುಕನ್ನು ಇದ್ದ ಹಾಗೆ ಸ್ವೀಕರಿಸುವುದನ್ನು ಕಲಿತಳು. ಮಗಳಿಗಾಗಿ ಎಲ್ಲವನ್ನೂ ಒದಗಿಸಿಕೊಡಲಾಗದಿದ್ದರೂ ಅವಳ ಪ್ರಯತ್ನವಂತೂ ನಿಲ್ಲುವಂತಿರಲಿಲ್ಲ. ಮಗಳು ತನ್ನ ಓರಗೆಯವರೊಂದಿಗೆ ತನ್ನನ್ನು ಹೋಲಿಸಿಕೊಂಡು ಕೊರತೆಗಳನ್ನು ಕಂಡಾಗ ತಾಯಿ ಜೀವ ಬಹಳ ಸಂಕಟ ಪಡುತ್ತಿತ್ತು. ಮನೋರಂಜಿನಿ ಬಹಳ ಸುಂದರಿ. ತನಗಿಂತ ಏನೂ ಸುಂದರವಾಗಿಲ್ಲದ ತನ್ನ ಓರಗೆಯವರು ಹೊಂದಿದ್ದ ಸೌಲಭ್ಯಗಳು ಅವಳನ್ನು ಸಂಕಟಕ್ಕೀಡುಮಾಡುತ್ತಿದ್ದವು.
* * * * *
ಕಾಲಚಕ್ರ ಒಂದು ಸುತ್ತು ಉರುಳಿತು. “ರತ್ನಾಕ್ಕಾ.. ಕೊನೆಗೂ ನಿನ್ನ ಪ್ರಾರ್ಥನೆ ದೇವರಿಗೆ ಮುಟ್ಟಿತು ಬಿಡು.
ಮನೋರಂಜಿನಿಗೆ ಎಂಥಾ ಸಂಬoಧ ಬಂದಿದೆ ಗೊತ್ತಾ?…” ಎಂದು ಮದುವೆ ದಲ್ಲಾಳಿ ಶಂಕ್ರಣ್ಣ ವರನ ಕಡೆಯವರ ಗುಣಗಾನ ಮಾಡುತ್ತಿದ್ದರೆ ರತ್ನಕ್ಕ ಸಂತಸ ಮತ್ತು ಸಂಕಟಗಳಿoದ “ಅಣ್ಣ ಬರೋಕೆ ಹೇಳು. ಅವರು
ನನ್ನ ಮಗಳನ್ನು ಒಪ್ಪಿಕೊಂಡರೆ ಸಾಕು” ಎಂದಳು. ಸುoದರಿಯಾದ ಮನೋರಂಜಿನಿಯನ್ನು ವರನ ಕಡೆಯವರು
ಒಪ್ಪದೆ ಇರುವಂತಿರಲಿಲ್ಲ. ಮುಂದಿನದು ಕನಸಿನಂತೆ ನಡೆದುಹೋಯಿತು. ಅದೃಷ್ಟ ಮತ್ತು ತಾಯಿಯ ಶ್ರಮ ಕಾರಣ ಅವಳೀಗ ಶ್ರೀಮಂತ ಮನೆತನದ ಸೊಸೆ. ಅವಳ ಕನಸನ್ನೂ ಮೀರಿಸುವಂತಹ ಸುಂದರವಾದ ಮನೆ ಅವಳದಾಗಿತ್ತು. ಬಿಸಿಲು ಮತ್ತು ಮಳೆ ಪ್ರವೇಶಿಸುವುದಿರಲಿ ಮನುಷ್ಯರ ಮುಖಗಳನ್ನೂ ಕಾಣಲು ಬಿಡದಂತೆ ಎತ್ತರಕ್ಕೇರಿಸಿರುವ ಗೋಡೆಗಳು. ಸ್ವರ್ಗಕ್ಕೆ ಪ್ರವೇಶ ಸಿಕ್ಕ ಸಂಭ್ರಮ ಅವಳದಾಗಿತ್ತು. ಒಂದಷ್ಟು ದಿನ ಮೈಮರೆತವಳಂತೆ ಜೀವಿಸಿದಳು. ದಿನಕಳೆದಂತೆ ಸಿರಿವಂತಿಕೆ ಸೆರೆ
ಎನಿಸತೊಡಗಿತು. ಸದಾ ಚಾವಣಿಯ ನೆರಳಿನಲ್ಲಿಯೇ ಇದ್ದವಳಿಗೆ ಇತ್ತೀಚೆಗೆ ಉಸಿರು ಕಟ್ಟಿದ ಅನುಭವ.
ಅದೊಂದು ದಿನ ಜೋರು ಮಳೆ ಹನಿಯುತ್ತಿತ್ತು. ಕಿಟಕಿಯಲ್ಲಿ ಇಣುಕುತ್ತ ಕುಳಿತಿದ್ದವಳ ಕಣ್ಣಲ್ಲಿ ಹನಿಗಳು ಉದುರಿದವು. ಹುಚ್ಚು ಹಿಡಿದವಳಂತೆ ಬೀದಿಗೆ ಓಡಿದಳು. ಮಳೆಯಲ್ಲಿ ಮನಸೋ ಇಚ್ಛೆ ನೆನೆದಳು. ಮಣ್ಣಿನಲ್ಲಿ ಉರುಳಾಡಿ ಆನಂದಿಸಿದಳು. ಮಳೆಯಲ್ಲಿ ನೆನೆಯುತ್ತಿದ್ದ ಮರಗಿಡಗಳನ್ನು ನೇವರಿಸಿದಳು. ಅಂಗಾಲಿಗೆ ಆಹ್ಲಾದಕರ ಸ್ಪರ್ಶ ನೀಡುತ್ತಿದ್ದ ಗರಿಕೆಯ ಬಗ್ಗೆ ಅಭಿಮಾನ ಮೂಡಿತು. ತನ್ನದೇ ಪ್ರಪಂಚದಲ್ಲಿ ಮುಳುಗಿ ಪರಮಾನಂದದಲ್ಲಿದ್ದ ಮನೋರಂಜಿನಿ ತನ್ನ ಮನೆಯೆಡೆಗೆ ಇರುಗಿ ನೋಡಿದಳು. ಬೆಳೆದ ಪೈರಿನ ಹೊಲದ ನಡುವೆ ನಿಂತ ಬೆದರುಗೊಂಬೆಯನ್ನು ಕoಡವಳoತೆ ಗಹಗಹಿಸಿ ನಕ್ಕಳು.