ಲೇಖಕ ಜನಾರ್ಧನ್ ಭಟ್ ಅವರು ಅನುವಾದಿಸಿರುವ ‘ಡಿಕೆಮರಾನ್’ ಪುಸ್ತಕವನ್ನು ಓದುತ್ತಿದ್ದೆ. ಬೊಕಾಚಿಯೋನ ‘ಡಿಕೆಮರಾನ್’ ಕೃತಿ ಹದಿನಾಲ್ಕನೆಯ ಶತಮಾನದ್ದು. ಆರುನೂರ ಐವತ್ತು ವರ್ಷಗಳಿಂದಲೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿರುವ ಈ ಕೃತಿ ಇಂಗ್ಲಿಷ್ ಸಾಹಿತ್ಯದ ಪಿತಾಮಹ ಚಾಸರ್ನಿಗೆ ಕ್ಯಾಂಟರ್ಬರಿ ಟೇಲ್ಸ್ ಬರೆಯಲು ಸ್ಫೂರ್ತಿ ನೀಡಿತ್ತು. ಇದರಲ್ಲಿರುವ ಕಥೆಗಳ ಪೈಕಿ ಕೆಲವೊಂದನ್ನು ನಾನು ಓದಿದ್ದೆನಾದರೂ ಎಲ್ಲವೂ ಸಿಕ್ಕಿರಲಿಲ್ಲ.
ಈ ಕಾದಂಬರಿಯ ಕಥಾಹಂದರವೆಂದರೆ ಪ್ಲೇಗ್ನಿಂದ ತಪ್ಪಿಸಿಕೊಳ್ಳಲು ಇಟಲಿಯ ಏಳು ಮಂದಿ ಶ್ರೀಮಂತ ಯುವತಿಯರು ಮೂವರು ಯುವಕರ ಜತೆ ನಗರದಿಂದ ದೂರ ಹಳ್ಳಿಗಳಿಗೆ ತೆರಳುತ್ತಾರೆ. ತಮ್ಮಲ್ಲಿಯೇ ದಿನಕ್ಕೊಬ್ಬರನ್ನು ರಾಜ ರಾಣಿ ಎಂದು ಆಯ್ಕೆ ಮಾಡಿಕೊಳ್ಳುತ್ತ ಅವರು ಸೂಚಿಸಿದ ವಿಷಯದ ಬಗ್ಗೆ ಕಥೆ ಹೇಳುತ್ತಿರುತ್ತಾರೆ. ಯೂರೋಪಿನ ನವೋದಯದ ಪ್ರಮುಖ ಕೃತಿಗಳಲ್ಲಿ ಒಂದಾದ ಈ ಪುಸ್ತಕ ಅಂದಿನ ಇಟಾಲಿಯನ್ ಸಮಾಜದ ಆಗುಹೋಗುಗಳಿಗೆ ಕನ್ನಡಿ ಹಿಡಿಯುತ್ತದೆ. ಹೆಚ್ಚಿನ ಕಥೆಗಳು ನೈತಿಕತೆಗೆ ಸವಾಲೊಡ್ಡುವವೇ ಆಗಿದ್ದರೂ ಅವು ಅಂದಿನ ವಾಸ್ತವವೂ ಆಗಿದ್ದವು. ಭಟ್ಟರ ಅನುವಾದವೂ ಕೂಡ ಸರಳವಾಗಿದ್ದು ಆಸಕ್ತಿಯನ್ನು ಕೆರಳಿಸಲು ಸಫಲವಾಗಿದೆ.
ನೂರಾರು ಕಥೆಗಳ ಈ ಗುಚ್ಛದಲ್ಲಿ ಸುಂದರವಾದ ಕಥೆಯೊಂದು ಹೀಗಿದೆ. ಜಿನೋವಾದಲ್ಲಿ ಗ್ರಿಮಾಲ್ಡಿ ಎಂಬ ಶ್ರೀಮಂತನಿದ್ದ. ಅವನು ಅತ್ಯಂತ ಧನಿಕ, ಆದರೆ ಅಷ್ಟೇ ಜಿಪುಣ. ಊಟ ಬಟ್ಟೆಗೂ ಗತಿ ಇಲ್ಲದವನಂತೆ ಬದುಕುತ್ತಿದ್ದ ಅವನು ಕಡುಜಿಪುಣ ಎಂದೇ ಎಲ್ಲರಿಂದ ಕರೆಯಿಸಿಕೊಳ್ಳುತ್ತಿದ್ದ. ಹೀಗಿರುವಾಗ ಒಮ್ಮೆ ನಗರಕ್ಕೆ ಬೋರ್ಸಿಯರ್ ಎಂಬ ಪ್ರಸಿದ್ಧ ರಾಜತಾಂತ್ರಿಕ ಬರುತ್ತಾನೆ. ಊರಿನ ಪ್ರಮುಖರೆಲ್ಲ ಆತನನ್ನು ಸತ್ಕರಿಸಿ ಆದರಿಸುತ್ತಾರೆ. ಗ್ರಿಮಾಲ್ಡಿಯ ‘ಅಪಖ್ಯಾತಿ’ ಅತಿಥಿಯ ಕಿವಿಗೂ ಬಿದ್ದುದರಿಂದ ಆತ ಸ್ವತ: ಆ ಜಿಪುಣನ ಮನೆಗೆ ಹೋಗಲು ನಿರ್ಧರಿಸುತ್ತಾನೆ. ಆಗ ಗ್ರಿಮಾಲ್ಡಿ ಅತಿಥಿಯನ್ನು ಆದರದಿಂದಲೇ ಬರಮಾಡಿಕೊಳ್ಳುತ್ತಾನೆ.
ಊಟೋಪಚಾರಗಳೆಲ್ಲ ಮುಗಿದ ಮೇಲೆ ತನ್ನ ಸುಂದರವಾದ ಹೊಸ ಮನೆಯನ್ನು ಅತಿಥಿಗೆ ತೋರಿಸುತ್ತ ಗ್ರಿಮಾಲ್ಡಿ ಅಲ್ಲಿ ಜಗತ್ತಿನ ಅಪೂರ್ವವಾದ ಒಂದು ವಸ್ತುವಿನ ಚಿತ್ರ ಬರೆಯಿಸಬೇಕೆಂದು ತಾನು ನಿರ್ಧರಿಸಿರುವುದಾಗಿ ಹೇಳಿ ಅತಿಥಿಯ ಅಭಿಪ್ರಾಯವನ್ನು ಕೇಳುತ್ತಾನೆ. ಆಗ ಬೋರ್ಸಿಯರ್ ಕೊಂಚ ಯೋಚಿಸಿ ಅಲ್ಲಿ ‘ಔದಾರ್ಯ’ದ ಚಿತ್ರ ಬಿಡಿಸಿದರೆ
ಯೋಗ್ಯವಾಗಿರುತ್ತದೆ ಎನ್ನುತ್ತಾನೆ.
ಇದೊಂದೇ ಮಾತು ಗ್ರಿಮಾಲ್ಡಿಯನ್ನು ಸಂಪೂರ್ಣವಾಗಿ ಬದಲಾಯಿಸಿಬಿಡುತ್ತದೆ. ತನ್ನ ಬದುಕಿನ ಬಗ್ಗೆ ನಾಚಿಕೊಳ್ಳುತ್ತ ಪರಿವರ್ತನೆಗೊಳಗಾದ ಗ್ರಿಮಾಲ್ಡಿ ಹೇಳುತ್ತಾನೆ, “ಮಾನ್ಯರೇ, ಈ ಮನೆಯಲ್ಲಿ ಔದಾರ್ಯವನ್ನು ಹೇಗೆ ಚಿತ್ರಿಸುತ್ತೇನೆಂದರೆ ನೀವಾಗಲೀ ಅಥವಾ ಬೇರೆಯವರಾಗಲೀ ಇಲ್ಲಿ ಅದನ್ನು ನೋಡಿಲ್ಲ ಎಂದು ಹೇಳುವ ಅವಕಾಶವೇ ಇರುವುದಿಲ್ಲ”!! ಮುಂದೆ ಆತ ಜಿಪುಣತನ ಬಿಟ್ಟು ಧಾರಾಳಿಯಾಗಿ ಬದುಕುತ್ತಾನೆ.
ಈ ಕತೆಯನ್ನು ಏಕೆ ಇಲ್ಲಿ ಹೇಳಿದೆನೆಂದರೆ ಸಮಯಕ್ಕೆ ಸರಿಯಾಗಿ ಆಡಿದ ಒಂದು ಮಾತು ಒಬ್ಬರ ಬದುಕನ್ನೇ ಬದಲಾಯಿಸಿಬಿಡಬಹುದು. ನಮ್ಮ ಬದುಕನ್ನು ತಿದ್ದಿಕೊಳ್ಳಲು ದಾರಿ ತಪ್ಪಿದ ಪಾದಗಳು ಮತ್ತೆ ಸರಿದಾರಿಗೆ ಹೊರಳಿಕೊಂಡು ನಡೆಯಲು ಯಾರದ್ದಾದರೂ ನುಡಿ ಸ್ಫೂರ್ತಿಯುತವಾಗಬಹುದು. ಏಕೆಂದರೆ, ಎಲ್ಲ ಸಂದರ್ಭದಲ್ಲೂ ತಪ್ಪುಗಳನ್ನು ಮಾಡುವುದು ಉದ್ದೇಶಪೂರ್ವಕವಾಗಿಯೇ ಇರಬೇಕಿಲ್ಲ. ನಮಗೆ ಗೊತ್ತಿಲ್ಲದೆಯೇ ನಮ್ಮಿಂದ ಪ್ರಮಾದಗಳಾಗಬಹುದು. ನಮ್ಮ ನಡವಳಿಕೆಯಲ್ಲಿ ತಿದ್ದಿಕೊಳ್ಳಬೇಕಾದ ಅಂಶಗಳಿರಬಹುದು. ಅಂತಹ ಸಂದರ್ಭಗಳಲ್ಲಿ ಯಾರದೋ ಒಂದು ಹಿತನುಡಿ ನಮ್ಮ ಕಣ್ಣು ತೆರೆಸಬಹುದು.
ಇಲ್ಲಿ ನಾವು ನೆನಪಿಟ್ಟುಕೊಳ್ಳಬೇಕಾದ ಸಂಗತಿ ಇಷ್ಟೇ. ವಿಷಾದ ಮನಸ್ಸನ್ನು ತುಂಬಿಕೊಂಡಿದ್ದಾಗ ಚಿಕ್ಕ ಚಿಕ್ಕ ಕಿರಿಕಿರಿಗಳೂ ದೊಡ್ಡ ದೊಡ್ಡ ಸಮಸ್ಯೆಗಳಂತೆ ಕಾಡುತ್ತವೆ. ದಣಿದ ಪಾದಗಳಿಗೆ ನಡೆವ ನಾಲ್ಕೇ ಹೆಜ್ಜೆ ಮೈಲುಗಟ್ಟಲೆ ದೂರ ಕ್ರಮಿಸಿದಂತೆ ಭಾಸವಾಗುತ್ತದೆ. ಆದರೆ ಉತ್ಸಾಹದಿಂದ ಚಿಮ್ಮುವ ಮನಸ್ಸುಗಳಿಗೆ ಮೈಲುಗಳೂ ಹತ್ತಿರವೇ!! ನಮ್ಮ ಮನಸ್ಸಿನಲ್ಲಿ ದುಗುಡ ತುಂಬಿಕೊಂಡಿದ್ದಾಗ, ಓದಲು ಇಷ್ಟವಿಲ್ಲದಿದ್ದಾಗ ಪುಸ್ತಕ ತೆರೆದರೆ ಅಕ್ಷರಗಳು ಕಲಸಿಹೋದಂತೆ ಭಾಸವಾಗುತ್ತದೆ. ಆದರೆ ಯಾರಾದರೂ ಉತ್ತೇಜನಕಾರಿ ಮಾತುಗಳನ್ನಾಡಿದರೆ ಅಥವಾ ನಾವೇ ಗೋಡೆಯ ಮೇಲೆ ಅಂಟಿಸಿಟ್ಟ ಸ್ಫೂರ್ತಿಯುತ ವಾಕ್ಯವೊಂದು ಕಣ್ಣಿಗೆ ಬಿದ್ದರೆ ಸೋಮಾರಿತನ ಕರಗಿ ಹೋಗಿ ಮತ್ತೆ ಉತ್ಸಾಹದಿಂದ ಅಭ್ಯಾಸ ಶುರುಮಾಡಲು ಸಾಧ್ಯ. ಹಾಗಂತ ನಮಗೇನು ಓದುವುದರ ಅಥವಾ ಓದದಿರುವುದರ ಪರಿಣಾಮಗಳ ಬಗ್ಗೆ ಗೊತ್ತಿಲ್ಲವೇ? ಗೊತ್ತಿದೆ. ಆದರೂ ನಮಗೆ ಸ್ಫೂರ್ತಿ ಬೇಕು. ಪ್ರೋತ್ಸಾಹದ ಮಾತು ಬೇಕು. ಈ ಮಾತುಗಳಿಂದಲೇ ಸಾಮಾನ್ಯರೆನಿಸಿಕೊಂಡ ವ್ಯಕ್ತಿಗಳು ಅಸಾಮಾನ್ಯ ಕೆಲಸ ಮಾಡಿದ್ದಾರೆ. ಕಡುಬಡತನ ಮತ್ತು ಹೀನಾತಿಹೀನ ಪರಿಸ್ಥಿತಿಯಿಂದ ದಿಗಿಲು ಹುಟ್ಟಿಸುವ ಯಶಸ್ಸಿನ ಬೃಹತ್ ಶಿಖರಗಳನ್ನೇ ಮಣಿಸಿದ್ದಾರೆ.
ನಿಜ,ಅರ್ಥಪೂರ್ಣವಾದ ಸ್ಫೂರ್ತಿಯುತವಾದ ಮಾತುಗಳಿಂದ ಇಂತಹ ಸಾಧನೆ ಸಾಧ್ಯ. ಸೋತು ಕೈಚೆಲ್ಲಿದಾಗ ತಣ್ಣನೆಯ ಅಂಗೈಯನ್ನು ತನ್ನ ಬೆಚ್ಚನೆಯ ಬಿಗಿ ಮುಷ್ಠಿಯಲ್ಲಿ ಒತ್ತಿ ಸ್ನೇಹಿತನೋ ಸ್ನೇಹಿತೆಯೋ ಆಡುವ ಭರವಸೆಯ ಒಂದು ಮಾತು ಮತ್ತೆ ಜಗತ್ತನ್ನೇ ಗೆಲ್ಲುವ ವಿಶ್ವಾಸ ಮೂಡಿಸುವಷ್ಟು ತಾಕತ್ತು ಹೊಂದಿರುತ್ತದೆ. ಬಟ್ಟಲುಗಣ್ಣುಗಳ ಮೃದು ನೋಟದಲ್ಲಿಯೇ ಮನಸ್ಸನ್ನು ಹಿತವಾಗಿ ನೇವರಿಸುತ್ತಿದ್ದ ಗೆಳತಿ ಏಕೋ ಕಣ್ತಪ್ಪಿಸಲಾರಂಭಿಸಿದಾಗ, ರಾತ್ರಿ ಕೋಣೆಗೆ ಬಂದು ಲೋಟದಲ್ಲಿ ಬಿಸಿಹಾಲನ್ನು ಕೊಟ್ಟು ಪಕ್ಕವೇ ನಿಂತು ತಲೆ ಸವರಿ ಅಮ್ಮನಾಡುವ ಮಮತೆ ತುಂಬಿದ ಸಮಾಧಾನದ ಎರಡೇ ವಾಕ್ಯ ಸಡಿಲವಾಗಲಾರಂಭಿಸಿದ ಆತ್ಮವಿಶ್ವಾಸದ ಕೋಟೆಯನ್ನು ಮತ್ತೆ ನಿರ್ಮಿಸುತ್ತದೆ. ಬದ್ಧ ವೈರಿಗಳಂತೆ ಕಿತ್ತಾಡುವ ಗಂಡಹೆಂಡಿರ ನಡುವಿನ ವಾರಗಟ್ಟಲೆಯ ವಿರಸ ಒಬ್ಬರ ನಿಜವಾದ ಪಶ್ಚಾತ್ತಾಪದ ಒಂದೇ ಶಬ್ದದಿಂದ ಸುದೀರ್ಘ ಅಪ್ಪುಗೆಯಲ್ಲಿ ಕೊನೆಗೊಂಡು ಸುಖಾಂತವಾಗುತ್ತದೆ.
ಎಲ್ಲ ಉತ್ತರವನ್ನೂ ಬಲ್ಲ ಬ್ರಿಲಿಯಂಟ್ ಸ್ಟೂಡೆಂಟ್ ಎಂಬ ಅಹಮ್ಮಿನಿಂದ ತರಗತಿಯಲ್ಲಿ ವಿದ್ಯಾರ್ಥಿಗಿರುವ ಎಲ್ಲೆಯನ್ನು ಮೆಲ್ಲನೆ ಮೀರುವವರ ಆ ಅಹಮ್ಮಿನ ಬಲೂನನ್ನು ನಯವಾದ ಆದರೆ ತೀಕ್ಷ್ಣವಾದ ಮಾತಿನ ಸೂಜಿಯಿಂದಲೇ ಟೀಚರ್ ಒಡೆಯಬಲ್ಲರು. ಬದುಕಿನ ಎಲ್ಲ ತಿರುವಿನಲ್ಲೂ ನಿರೀಕ್ಷಿಸಿದ ದಾರಿ ಕಾಣದೇ ಹಾದಿ ದೀರ್ಘವಾಗುತ್ತಲೇ ಹೋದಾಗ, ಎದೆಯ ಭಾರವನ್ನಿಳಿಸುವ ಜಾಗ ಎಷ್ಟು ಅರಸಿದರೂ ಕಾಣದೇ ಹೋದಾಗ, ಜಗತ್ತಿನ ಎಲ್ಲರೂ ಸುಖವಾಗಿದ್ದಾರೆ. ನಾನು ಮಾತ್ರ ಒಂಟಿ ಎಂಬ ಭಾವನೆ ಕಾಡಿದಾಗ ‘ಮುಂದೆ ಒಳ್ಳೆಯದಾಗಲಿದೆ, ತಾಳು’ ಎಂಬ ಮನಸ್ಸಿನ ಸಮಾಧಾನದ ಮಾತು ಮಾತ್ರವೇ ಕಗ್ಗತ್ತಲ ದಾರಿಯ ನಡುವಿನ ಕೈದೀಪವಾಗುತ್ತದೆ.
ಈ ಮನಸಿನ ಉತ್ಸಾಹವನ್ನು ನಿರಂತರವಾಗಿ ಕಾಪಾಡಿಕೊಳ್ಳುವುದೇ ಸವಾಲು. ಈ ಸವಾಲಿಗೆ ಸೆಡ್ಡು ಹೊಡೆಯಲು ಸ್ಫೂರ್ತಿದಾಯಕ ಮಾತುಗಳು ಸಹಾಯಕ್ಕೆ ಬರುತ್ತವೆ. ಒಂದಂತೂ ನಿಜ. ಜಗತ್ತಿನಲ್ಲಿ ಜನರು ಉಚಿತವಾಗಿ ಕೊಡುತ್ತ ಹೋಗುವುದು ಸಲಹೆ ಮಾತ್ರವನ್ನೇ. ಹಾಗಾಗಿ ಯಾರಾದರೂ ಉಪದೇಶ ಪ್ರಾರಂಭಿಸಿದ ಕೂಡಲೇ ನಾವು ಸಲಹೆ ಕೊಡುತ್ತಿರುವವರ ಕಣ್ಣು ತಪ್ಪಿಸಿ ನಮ್ಮ ಹುಬ್ಬು ಮೇಲಕ್ಕೇರಿಸಿ ಹಣೆಯ ಮೇಲೆ ಅಸಹನೆಯ ನೆರಿಗೆಗಳನ್ನು ಮೂಡಿಸಿಕೊಳ್ಳುತ್ತೇವೆ. ಆದರೆ ಸಮಯ ನೋಡಿ ತಿಳಿಹೇಳಿದ ಬುದ್ಧಿಯ ಮಾತುಗಳು ಕಣ್ಣು ಕೆಂಪಾಗಿಸದೇ ವ್ಯಕ್ತಿಗಳನ್ನು ಸುಧಾರಿಸಬಲ್ಲವು..
ಹಿಂದಿಯ ‘ರಾಜಪೂತ್ ಕೀ ಹಾರ್’ ಎನ್ನುವ ಏಕಾಂಕ ನಾಟಕವೊಂದರಲ್ಲಿ ರಜಪೂತ ರಾಜನೊಬ್ಬ ಯುದ್ಧದಲ್ಲಿ ಸೋತು ವಾಪಾಸಾಗಿದ್ದಾನೆ. ಆತನ ಪತ್ನಿ ಮತ್ತು ತಾಯಿಗೆ ಇದನ್ನು ಸಹಿಸಲಾಗುತ್ತಿಲ್ಲ. ಒಂದೋ ಗೆಲ್ಲಬೇಕು ಇಲ್ಲವೇ ವೀರಮರಣವನ್ನಪ್ಪಬೇಕು. ಇದು ರಜಪೂತರ ಸಂಪ್ರದಾಯ. ಹೇಡಿತನದ ಜೀವನವನ್ನು ಅವರೆಂದೂ ಬಯಸರು. ರಾಣಿಗಂತೂ ಈ ಅವಮಾನ ಸಹಿಸಲಾಗುತ್ತಿಲ್ಲ. ಅದನ್ನವಳು ನೇರವಾಗಿಯೇ ವ್ಯಕ್ತಪಡಿಸುತ್ತಿದ್ದಾಳೆ. ಆದರೆ ರಾಜಮಾತೆ ಹಾಗೆ ನೇರವಾಗಿ ಹೇಳಲಾರಳು. ಒಂದು ದಿನ ಸೊಸೆಯ ಹತ್ತಿರ ಆದದ್ದೆಲ್ಲವನ್ನೂ ಮರೆತುಬಿಡುವಂತೆಯೂ, ಪತಿಯನ್ನು ಸತ್ಕರಿಸುವಂತೆಯೂ ಹೇಳಿ ಅವಳನ್ನು ಒಪ್ಪಿಸುತ್ತಾಳೆ. ಹಲ್ವಾ ಮಾಡೋಣ ಎನ್ನುತ್ತಾಳೆ ರಾಜಮಾತೆ. ಸೊಸೆ ಹಲ್ವಾ ಮಾಡುತ್ತಿರುವಾಗ ಲೋಹದ ಸೌಟು ಲೋಹದ ಕಡಾಯಿಗೆ ತಾಗಿ ಸದ್ದಾಗುತ್ತದೆ. ಆಗ ಅತ್ತೆ ಅಲ್ಲೇ ಹತ್ತಿರವಿದ್ದ ಮಗನಿಗೆ ಕೇಳುವಂತೆ ವ್ಯಂಗವಾಗಿ ಹೇಳುತ್ತಾಳೆ, “ಲೋಹಕ್ಕೆ ಲೋಹ ತಾಕುವುದನ್ನು ನೋಡಿ ನನ್ನ ಮಗ ಹೆದರಿ ನನ್ನ ಮಡಿಲೊಳಗೆ ಅಡಗಿಕೊಳ್ಳಲು ಓಡಿ ಬಂದದ್ದು ನಿನಗೆ ಗೊತ್ತಲ್ಲವಾ? ಇಲ್ಲಿಂದಲೂ ಅವನನ್ನು ಓಡಿಸಬೇಕೆಂದು ಮಾಡಿದ್ದೀಯೋ ಹೇಗೆ? ಅವನು ಇನ್ನೆಲ್ಲಿ ಹೋಗುತ್ತಾನೆ? ದಯವಿಟ್ಟು ಲೋಹದ ಸೌಟನ್ನು ಹೊರಗೆ ಎಸೆ. ಮತ್ತೆ ಲೋಹದ ಕಡಾಯಿಯೊಂದಿಗೆ ತಾಗಿದರೆ ನನ್ನ ಮಗ ಹೆದರಿ ಓಡಿಹೋಗುತ್ತಾನೆ, ಆಗ ನಾನೇನು ಮಾಡಲಿ?” ರಾಜನಿಗೆ ತನ್ನ ತಾಯಿಯ ವ್ಯಂಗ್ಯದ ಮಾತುಗಳು ಅರ್ಥವಾಗುತ್ತವೆ. ಆತ ಪತ್ನಿ ಮತ್ತು ತಾಯಿಯ ಕ್ಷಮೆ ಕೋರಿ ಮತ್ತೆ ಯುದ್ಧರಂಗಕ್ಕೆ ಮರಳುತ್ತಾನೆ.
ಎಷ್ಟು ಸುಂದರ ಉದಾಹರಣೆಯೊಂದಿಗೆ ಮಗನನ್ನು ಎಚ್ಚರಿಸಿದಳು ಆ ತಾಯಿ. ಹೇಳುವ ಮಾತುಗಳನ್ನು ಹೇಗೆ ಹೇಳಬೇಕೋ ಹಾಗೆ ಹೇಳಿದರೆ ಬಹಳ ಮಂದಿಯ ಬದುಕು ಸುಧಾರಿಸಬಹುದು. ಹೇಗೆ ಹೇಳಿದರೂ ಕೇಳದವರ ಕಥೆ ಬಿಡಿ. ಜಗತ್ತನ್ನು ಸುಧಾರಿಸಬೇಕೆಂದು ನಾವೇನು ಪ್ರತಿಜ್ಞೆ ಮಾಡಿಲ್ಲವಲ್ಲ. ಆದರೆ ಕನಿಷ್ಠ ನಮ್ಮನ್ನು ನಾವು ಸುಧಾರಿಸಿಕೊಳದಿದ್ದರೆ
ಹೇಗೆ? ನಮ್ಮ ಒಳಿತಿಗಾಗಿ ನಮ್ಮವರು ನೀಡುವ ಸಲಹೆಯನ್ನು ಸಾವಧಾನವಾಗಿ ಕೇಳಬಹುದಲ್ಲವೇ? ನಮ್ಮ ಕೋಳಿಯಿಂದಲೇ ಬೆಳಗಾಗುತ್ತಿದೆ ಎಂದು ನಾವು ಅಂದುಕೊಂಡರೇನು, ಎರಡೂವರೆ ವರ್ಷದ ಮಕ್ಕಳಿಗೂ ಅದು ಸುಳ್ಳು, ಬೆಳಗಾಗುವುದು ಸೂರ್ಯನಿಂದ ಎಂದು ಗೊತ್ತಾಗುವ ಯುಗವಿದು. ಹಾಗಾಗಿ ಅಂತರಂಗ ವಿಮರ್ಶೆಗೂ ಒಂದಿಷ್ಟು ಸಮಯ ಕೊಡುವುದು ಒಳ್ಳೆಯದು. ಏಕೆಂದರೆ ಕೊನೆಗೂ ನಾವು ಸದಾ ಕೇಳಬೇಕಿರುವುದು ನಮ್ಮೊಳಗಿನ ಮಾತನ್ನೇ! ಅದನ್ನು ಕೇಳಿಸಿಕೊಳ್ಳುವ ಸಾವಧಾನದ ಮನಸ್ಥಿತಿಯನ್ನು ಬೆಳೆಸಿಕೊಂಡವರಿಗೆ ಬೇರೆ ಯಾವ ಹೊರಗಿನ ಸ್ಫೂರ್ತಿಯೂ ಬೇಡ!! ಸ್ವಲ್ಪ ಕಷ್ಟವೇ. ಆದರೆ ಕಷ್ಟ ಎಲ್ಲಿಲ್ಲ?
ಸಂತಸದ ಸೂರ್ಯೋದಯವನ್ನು ಕಾಣಬೇಕೆಂದರೆ ನೋವಿನ ಕತ್ತಲೆಯ ದಾರಿಯಲ್ಲಿ ಸ್ವಯಂ ಸ್ಫೂರ್ತಿಯಿಂದ ನಡೆಯಲೇಬೇಕಲ್ಲವೇ? ಅದಕ್ಕೇ ‘ಸಖೀಗೀತ’ದಲ್ಲಿ ಬೇಂದ್ರೆ ಹೇಳುತ್ತಾರೆ:
“ಸಪ್ಪೆ ಬಾಳುವೆಗಿಂತ ಉಪ್ಪುನೀರೂ ಲೇಸು
ಬಿಚ್ಚು ಸ್ಮೃತಿಗಳ ಹಾಯಿ ಬೀಸೋಣ ಬಾ
ಬೀಸೋಣ ಈಸೋಣ ತೇಲೋಣ ಮುತ್ತಿನ
ತವರಮನೆ ಮುಟ್ಟಲು ಮುಳುಗೋಣ ಬಾ”