ಚಿಕ್ಕಂದಿನಲ್ಲೇ ನನಗೆ ವಿಮಾನವೇರುವ ಕನಸು. ಮನೆಯ ಅಂಗಳದಲ್ಲಿ ನಿಂತರೆ ಬಾನೆತ್ತರದಲ್ಲಿ ಹಾರುತ್ತ ಸಾಗುವ ಲೋಹದ ಹಕ್ಕಿ ನಮ್ಮಲ್ಲಿ ಬೆರಗನ್ನೂ, ಕುತೂಹಲವನ್ನೂ ಮೂಡಿಸುತ್ತಿತ್ತು. ನಾನು ಕ್ರಿಕೆಟ್ ಆಟಗಾರನಾಗುತ್ತೇನೆ. ಆಗ ದೇಶ-ವಿದೇಶಗಳಿಗೆ ವಿಮಾನದಲ್ಲೇ ಸಂಚರಿಸಬಹುದು ಎಂದು ನಾನು ಕಂಡ ಕನಸನ್ನು ಮಧ್ಯರಾತ್ರಿಯಲ್ಲಿ ಅಮ್ಮನನ್ನು ಎಬ್ಬಿಸಿ ಹೇಳಿ, ಬಯ್ಯಿಸಿಕೊಂಡಿದ್ದೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮೈದಾನದಲ್ಲಿ ಕ್ರಿಕೆಟ್ ಅಥವಾ ಕಬಡ್ಡಿ ಆಡುವಾಗಲೂ ವಿಮಾನಗಳು ತಲೆಯ ಮೇಲೆ ಹಾರಿ ಹೋಗುತ್ತಿದ್ದೆವು. ಆಗ ನಾವೆಲ್ಲ ಆಟ ನಿಲ್ಲಿಸಿ, ಎವೆಯಿಕ್ಕದೆ ಅವುಗಳನ್ನೇ ನೋಡುತ್ತಿದ್ದೆವು. ಸೆಕೆಯ ಸಂದರ್ಭದಲ್ಲಿ ಮಳೆ ಬರುವ ಮುನ್ಸೂಚನೆಯಾಗಿ ಮನೆಯ ಸುತ್ತಮುತ್ತ ಹಾರಾಡುತ್ತಿದ್ದ ಏರೋಪ್ಲೇನ್ ಚಿಟ್ಟೆಗಳನ್ನೇ ನೋಡಿ ಸಂಭ್ರಮಿಸುತ್ತ ಅದು ಹೇಗೋ ಬಾಲ್ಯ ಕಳೆದು ಹೋಯಿತು. ಪತ್ರಕರ್ತನಾಗಿ ನನ್ನ ಆರಂಭದ ದಿನಗಳಲ್ಲಿ ಮಂಗಳೂರಿನಲ್ಲಿ ಒಂದು ಸಲ ವಿಮಾನ ನಿಲ್ದಾಣ ಪ್ರಾಧಿಕಾರದವರು ನಮ್ಮನ್ನು ಈ ಲೋಹದ ಹಕ್ಕಿಯೊಳಗೆ ಕರೆದೊಯ್ದು ತೋರಿಸಿದ್ದರು. ಆದರೆ, ಹಾರಾಟ ಸಾಧ್ಯವಾಗಿರಲಿಲ್ಲ. ಆ ಬಯಕೆ ಈಡೇರಿದ್ದು ಇತ್ತೀಚೆಗೆ.
ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯೊಂದರ ಆಹ್ವಾನದ ಮೇರೆಗೆ ಅನುವಾದದ ಪ್ರಾಜೆಕ್ಟ್ ಒಂದಕ್ಕಾಗಿ ದೆಹಲಿಗೆ ಬುಲಾವ್ ಬಂದಿತ್ತು. ವಿಮಾನದ ಟಿಕೆಟ್ ಕೂಡ ಅವರೇ ಬುಕ್ ಮಾಡಿದ್ದರು. ಹುಬ್ಬಳ್ಳಿಯಿಂದ ದೆಹಲಿಗೆ ನೇರ ವಿಮಾನ ಸೇವೆ ಇಲ್ಲದ ಕಾರಣ ಬೆಂಗಳೂರಿನಲ್ಲಿ ಬದಲಿಸಬೇಕಿತ್ತು. ಐದು ದಿನಗಳಿಗೆಂದು ಹೋದ ಪ್ರಾಜೆಕ್ಟ್ ಒಂದು ತಿಂಗಳು ಇಪ್ಪತ್ತೈದು ದಿನಗಳಿಗೆ ವಿಸ್ತರಿಸಿತ್ತು. ನಡುವೆ ಎಂಟು ದಿನಗಳ ಬಿಡುವಿದ್ದಾಗ ವಾಪಸ್ ಹುಬ್ಬಳ್ಳಿಗೆ, ಒಂದು ಸಲ ಅದೇ ಪ್ರಾಜೆಕ್ಟಿನ ಭಾಗವಾಗಿ ಎರಡು ದಿನ ಅಹಮದಾಬಾದ್ಗೂ ಹೋಗಿ ಬರಬೇಕಾಯಿತು. ಹೀಗೆ 55 ದಿನಗಳ ಅವಧಿಯಲ್ಲಿ ಬರೊಬ್ಬರಿ 13 ಸಲ ವಿಮಾನವೇರಿದೆ. ಬಹುತೇಕ ಪ್ರತಿ ಸಲವೂ ಕಿಟಕಿ ಬದಿಯಲ್ಲೇ ಆಸನವಿತ್ತು. ನನ್ನ ಗೆಳೆಯನೊಬ್ಬ ಕರೆ ಮಾಡಿದಾಗೆಲ್ಲ ಭೂಮಿ ಮೇಲೆ ಅದೀರೋ? ಎಲ್ಲಾರೂ ಹಾರಿ ಹೋಗೀರೋ? ಅಂತಲೇ ಕೇಳುತ್ತಿದ್ದ.
ಅದೊಂದು ನೋಡಬ್ಯಾಡ್ರೀ…
ಆಗಷ್ಟೇ ಅಜಯ್ ದೇವಗನ್ ಅಭಿನಯದ ರನ್ವೇ 34 ಸಿನೆಮಾ ಬಿಡುಗಡೆಯಾಗಿತ್ತು. ಅದನ್ನು ನನ್ನ ಮಡದಿ ನೋಡಿದ್ದಳು. ‘ನೀವು ವಿಮಾನದಾಗ ಹೋಗೋರದೀರಿ. ವಾಪಸ್ ಬರೋ ತನಕ ಅದನ್ನಂತೂ ಖಂಡಿತ ನೋಡಬ್ಯಾಡ್ರೀ…’ ಎಂದು ಕಣ್ಣಂಚಿನಲ್ಲಿ ನೀರು ತಂದುಕೊಂಡೇ ಹೇಳಿದ್ದಳು. ಆ ಸಿನೆಮಾದ ಕಥೆ ತಕ್ಕಮಟ್ಟಿಗೆ ತಿಳಿದಿದ್ದ ಕಾರಣ ಆಕೆಯ ಆತಂಕವನ್ನು ಅರ್ಥ ಮಾಡಿಕೊಂಡು ತಲೆ ಅಲ್ಲಾಡಿಸಿದೆ. ಆದರೆ ವಿಮಾನಕ್ಕಾಗಿ ಕಾಯುತ್ತಾ ಕುಳಿತಿದ್ದಾಗ ಆ ಸಿನೆಮಾ ಮೊಬೈಲಲ್ಲೇ ನೋಡಿ ಮುಗಿಸಿದೆ. ನಾನು ಕುಳಿತಿದ್ದ ವಿಮಾನ ಟೇಕ್ ಆಫ್, ಲ್ಯಾಂಡ್ ಆಗುವಾಗ ರನ್ವೇ 34 ಸಿನೆಮಾದ ಜೊತೆಗೆ ಹಳೆಯ ದುರ್ಘಟನೆಗಳೂ ಬೇಡ ಬೇಡವೆಂದರೂ ನೆನಪಿನಲ್ಲಿ ಸುಳಿಯುತ್ತಿದ್ದವು.
ಸ್ಪೇನ್ ದೇಶದ ಟೆನೆರಿಫ್ ಏರ್ಪೋರ್ಟ್ನಲ್ಲಿ 1977ರಲ್ಲಿ ನಡೆದ ದುರಂತವು ಕೇವಲ 61 ಜನರನ್ನು ಬದುಕಲು ಬಿಟ್ಟು, ಎರಡು ವಿಮಾನಗಳಲ್ಲಿದ್ದ 583 ಜನರನ್ನು ಬಲಿ ಪಡೆದಿದ್ದು, ಇತಿಹಾಸದಲ್ಲೇ ಅತ್ಯಂತ ಘೋರವೆನಿಸಿದೆ. ಅಲ್ಲದೆ, 520 ಪ್ರಯಾಣಿಕರು ಅಸುನೀಗಿದ್ದ ಜಪಾನ್ ಏರ್ಲೈನ್ಸ್ ವಿಮಾನ ಅಪಘಾತ (1985), ಗಾಳಿಯಲ್ಲೇ ಪರಸ್ಪರ ಢಿಕ್ಕಿ ಹೊಡೆದು ಎರಡು ವಿಮಾನಗಳಲ್ಲಿದ್ದ ಎಲ್ಲ 349 ಪ್ರಯಾಣಿಕರ ಸಾವಿಗೆ ಕಾರಣವಾದ ಚಾರ್ಖಿ ದಾದ್ರಿ ಅಪಘಾತ (1996), ಪ್ಯಾರಿಸ್ ಸಮೀಪ 346 ಜನರನ್ನು ಬಲಿ ಪಡೆದ ಟರ್ಕಿ ಏರ್ಲೈನ್ಸ್ ವಿಮಾನ ದುರಂತ (1974), ಮಂಗಳೂರು ಸಮೀಪ ಕೆಂಜಾರಿನಲ್ಲಿ ಲ್ಯಾಂಡ್ ಆಗುವ ಕೆಲವೇ ಕ್ಷಣಗಳ ಮೊದಲು ದುರಂತಕ್ಕೀಡಾಗಿ 158 ಜನರನ್ನು ಆಹುತಿ ಪಡೆದು, 8 ಜನರಷ್ಟೇ ಬದುಕುಳಿದ ಏರ್ ಇಂಡಿಯಾ ವಿಮಾನ ದುರಂತ (2010) ನೆನಪಾಗಿ, ಹೃದಯ ಬಾಯಿಗೆ ಬಂದಂತಾಗುತ್ತಿತ್ತು. ಕಂದಹಾರ್ ರೀತಿಯಲ್ಲಿ ಉಗ್ರರು ವಿಮಾನವನ್ನು ಹೈಜಾಕ್ ಮಾಡಿದರೆ? ಎಂಬ ಆತಂಕವೂ ಕಾಡುತ್ತಿತ್ತು.
ಕೆಲವು ವರ್ಷಗಳ ಹಿಂದೆ ನಾನು `ದಿ ಹೋಟೆಲ್’ ಎನ್ನುವ ಒಂದು ಇಂಗ್ಲಿಷ್ ಕಾದಂಬರಿಯನ್ನು ಓದಿದ್ದೆ. ಹೋಟೆಲ್ನ ಲಿಫ್ಟ್ ಕುಸಿದು ಬಿದ್ದು ಸಂಭವಿಸುವ ದುರಂತವನ್ನು ಆ ಕಾದಂಬರಿಕಾರ ಎಷ್ಟು ಅದ್ಭುತವಾಗಿ ಕಟ್ಟಿಕೊಟ್ಟಿದ್ದನೆಂದರೆ, ಕಾದಂಬರಿ ಓದಿದ ಮೇಲೆ ಕನಿಷ್ಠ ಮೂರು ತಿಂಗಳ ಕಾಲ ನಾನು ಲಿಫ್ಟ್ ಬಳಸಿದ್ದರೆ ಕೇಳಿ!
ನೆಲದ ಮೇಲೆ ಚೆಲ್ಲಿದ ನಕ್ಷತ್ರಗಳು…
ಮಳೆಗಾಲವಾದ್ದರಿಂದ ಮೋಡಗಳ ಮೇಲೆ ತೇಲುತ್ತ, ಅವುಗಳ ನಡುವೆ ನುಗ್ಗುತ್ತ, ಗಾಳಿಯಿದ್ದರೆ ಕೊಂಚ ನಡುಗುತ್ತ ರಾತ್ರಿ ವೇಳೆ ಸಮುದ್ರಮಟ್ಟದಿಂದ ಸುಮಾರು 35 ಸಾವಿರ ಅಡಿಗಳಷ್ಟು ಎತ್ತರದಲ್ಲಿ ತಾಸಿಗೆ 800 ಕಿ.ಮೀ. ಸರಾಸರಿ ವೇಗದಲ್ಲಿ ವಿಮಾನ ಸಾಗುವಾಗ ಅದರ ವೇಗವೂ ಕಡಿಮೆ ಎಂದು ಅನ್ನಿಸುವುದಿದೆ. ಒಂದೊಂದು ಸಲ ಚಲನೆಯೇ ಇಲ್ಲದೆ ನಿಂತೇ ಬಿಟ್ಟಿದೆಯೇನೋ ಎಂದು ಭ್ರಮಿಸುವಂತಾಗುತ್ತದೆ. ರಾತ್ರಿ ವೇಳೆ ಬೆಂಗಳೂರು, ಹೈದರಾಬಾದ್, ಅಹ್ಮದಾಬಾದ್ ಮತ್ತು ದೆಹಲಿ… ನಾಲ್ಕೂ ನಗರಗಳ ಮೇಲೆ ಪಕ್ಷಿನೋಟ ಬೀರಿದ್ದೇನೆ. ಗಾಢ ಕತ್ತಲೆಯಲ್ಲಿ ನಕ್ಷತ್ರಗಳು ನೆಲದ ಮೇಲೆಲ್ಲ ಹರಡಿದಂತೆ ದೀಪಗಳು ಬೆಳಗುತ್ತಿರುತ್ತವೆ. ರಸ್ತೆಗಳಲ್ಲೂ ವಾಹನಗಳ ದೀಪಸಾಲು.
ಈ ನಗರಗಳು ಎಷ್ಟೊಂದು ವಿಸ್ತಾರವಾಗಿ ಹಬ್ಬಿವೆ! ಆದರೂ ಜನರಿಗೆ-ವಾಹನಗಳಿಗೆ ಜಾಗ ಸಾಲುತ್ತಿಲ್ಲ! ದೆಹಲಿಯ ರಸ್ತೆಗಳಲ್ಲಂತೂ ಇಂಚುಗಳ, ಮಿಲಿ ಮೀಟರ್ಗಳ ಲೆಕ್ಕದಲ್ಲಿ ಸೈಡ್ ಕೊಡುತ್ತಾರೆ. ಅಲ್ಲಿ ಗೀಚು, ಡೆಂಟ್ ಅಥವಾ ಅಪಘಾತದ ಯಾವುದೇ ಕುರುಹುಗಳಿಲ್ಲದ ಕಾರು ನಿಮ್ಮ ಪುಣ್ಯದಿಂದ ಕಾಣಸಿಕ್ಕಿತೆಂದರೆ ಒಂದೋ ಹೊಸದಾಗಿರುತ್ತದೆ, ಇಲ್ಲವೇ ಮಾಲೀಕ ಅದನ್ನು ರಸ್ತೆಗೇ ತರುವುದಿಲ್ಲ. ಯಮ ವೇಗದಲ್ಲಿ, ಸ್ವಲ್ಪವೂ ನಿಯಂತ್ರಣವಿಲ್ಲದಂತೆ ಎಷ್ಟು ಕೆಟ್ಟದಾಗಿ ಗಾಡಿ ಓಡಿಸುತ್ತಾರೆ ಎಂಬುದಕ್ಕೆ ಪುರುಸೊತ್ತೇ ಇಲ್ಲದಂತೆ ಹೆದ್ದಾರಿ ಮೇಲೆ ಶರವೇಗದಲ್ಲಿ ಸಾಗುವ ಆಂಬ್ಯುಲೆನ್ಸ್ ಗಳೇ ಸಾಕ್ಷಿ.
ಇರಲಿ, ಸದ್ಯಕ್ಕೆ ನೆಲದ ಮೇಲಿನ ಸುದ್ದಿ ಬಿಟ್ಟು ಮತ್ತೆ ಆಕಾಶಕ್ಕೆ ನೆಗೆಯೋಣ. ಮುಂಬೈಯಿಂದ ಅಹ್ಮದಾಬಾದ್ಗೆ ನೀವು ಸಂಜೆಯ ಹೊತ್ತು ವಿಮಾನದಲ್ಲಿ ಸಾಗಬೇಕು. ಬಹುತೇಕ ಅರಬ್ಬಿ ಸಮುದ್ರದ ಮೇಲೆಯೇ ನಿಮ್ಮ ಪಯಣ. ಸೂರ್ಯ ಮುಳುಗುವ ಹೊತ್ತು, ಮೋಡಗಳೂ ಹೊಂಬಣ್ಣ ತಾಳಿ ದೃಶ್ಯಕಾವ್ಯವನ್ನೇ ಸೃಷ್ಟಿಸುತ್ತವೆ.
ಹಾರುವ ಕನಸಿಗೆ ರೆಕ್ಕೆ
ವಿಮಾನ ಪ್ರಯಾಣ ದುಬಾರಿ ಎಂಬುದು ನಿಜ. ಆದರೆ, ಅದು ಸಾಕಷ್ಟು ಸಮಯವನ್ನು ಉಳಿಸುತ್ತದೆ. ಹವಾಯಿ ಚಪ್ಪಲಿ ತೊಡುವ ಪ್ರತಿಯೊಬ್ಬ ಸಾಮಾನ್ಯ ನಾಗರಿಕನೂ ವಿಮಾನಗಳಲ್ಲಿ (ಹವಾಯಿ ಜಹಜ್) ಸಂಚರಿಸುವಂತಾಗಬೇಕು ಎಂಬ ಕನಸಿನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯನ್ನು 2017ರಲ್ಲೇ ಜಾರಿಗೆ ತಂದರು. ಯೋಜನೆಯ ಆರಂಭದ ಐದು ವರ್ಷಗಳಲ್ಲಿ 425 ಮಾರ್ಗಗಳಲ್ಲಿ ವಿಮಾನ ಸಂಚಾರವನ್ನು ಆರಂಭಿಸಲಾಗಿದೆ. 58 ಎರ್ಪೋರ್ಟ್ಗಳು (ಈ ಪೈಕಿ ಕರ್ನಾಟಕದಲ್ಲಿ ಆರು – ಬೆಳಗಾವಿ, ಹುಬ್ಬಳ್ಳಿ, ಮೈಸೂರು, ವಿದ್ಯಾನಗರ, ಕಲಬುರಗಿ, ಬೀದರ್), 8 ಹೆಲಿಪೋರ್ಟ್ಗಳು ಮತ್ತು ಎರಡು ವಾಟರ್ ಏರೋಡ್ರೋಮ್ಗಳನ್ನು ನಿರ್ಮಿಸಲಾಗಿದೆ. 2014ರ ವರೆಗೆ ದೇಶದಲ್ಲಿ ಕೇವಲ 74 ವಿಮಾನ ನಿಲ್ದಾಣಗಳು ಕಾರ್ಯಾಚರಣೆಯಲ್ಲಿದ್ದವು. ಈಗ ಅವುಗಳ ಸಂಖ್ಯೆ 141ಕ್ಕೇರಿದೆ. 2026ರ ವೇಳೆಗೆ 220 ವಿಮಾನ ನಿಲ್ದಾಣಗಳನ್ನು ನಿರ್ಮಿಸಿ, 1000 ಮಾರ್ಗಗಳಲ್ಲಿ ವಿಮಾನ ಸಂಚಾರವನ್ನು ಆರಂಭಿಸುವ ಗುರಿಯಿದೆ. ಜೊತೆಗೆ 8 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ – ಗುವಾಹಟಿಯಿಂದ ಢಾಕಾ, ಕಠ್ಮಂಡು, ಯಾಂಗೂನ್, ಕೌಲಾಲಂಪುರ, ಸಿಂಗಾಪುರ ಮತ್ತು ಬ್ಯಾಂಕಾಕ್ ಮಾರ್ಗಗಳಲ್ಲಿ, ವಿಜಯವಾಡದಿಂದ ಸಿಂಗಾಪುರ ಮತ್ತು ದುಬೈಗಳಿಗೂ ಉಡಾನ್ ವಿಮಾನಗಳು ಹಾರಲಿವೆ. ಪ್ರತಿ 800 ಕಿ.ಮೀ. ಅಂತರದಲ್ಲಿ ಒಂದು ವಿಮಾನ ನಿಲ್ದಾಣವನ್ನು ಸ್ಥಾಪಿಸುವ ಯೋಜನೆಯಿದು. ಉಡಾನ್ ಯೋಜನೆಯಡಿ ವಿಮಾನ ಪ್ರಯಾಣ ದರವೂ ತುಂಬ ಅಗ್ಗವಾಗಿದೆ. ಎಷ್ಟೆಂದರೆ, ದೀಪಾವಳಿ, ದಸರಾ, ಯುಗಾದಿ, ಗಣೇಶ ಚತುರ್ಥಿ ಸಮಯದಲ್ಲಿ ಖಾಸಗಿ ಬಸ್ಸುಗಳು ವಿಧಿಸುವಷ್ಟು ದರದಲ್ಲಿ ನೀವು ವಿಮಾನದಲ್ಲಿ ಪ್ರಯಾಣಿಸಬಹುದು! ಪ್ರತಿ ಸೀಟ್ಗೆ ಅಥವಾ ಒಂದು ಗಂಟೆಯ ಪ್ರಯಾಣಕ್ಕೆ (ಎಕಾನಮಿ ಕ್ಲಾಸ್) ಗರಿಷ್ಠ 2,500 ರೂ. ದರ ನಿಗದಿಪಡಿಸಲಾಗಿದೆ. ವಿಮಾನ ಯಾನದಿಂದ ಬರುವ ಆದಾಯ ಹಾಗೂ ತಗುಲುವ ವೆಚ್ಚದ ನಡುವಿನ ವ್ಯತ್ಯಾಸವನ್ನು ತುಂಬಿಕೊಡಲು ವಯಾಬಲಿಟಿ ಕ್ಯಾಪ್ ಫಂಡಿಂಗ್ (ವಿಸಿಎಫ್) ಬಳಸಲಾಗುತ್ತದೆ. ವರ್ಷಕ್ಕೆ ಸುಮಾರು 205 ಕೋಟಿ ರೂ.ಗಳನ್ನು ಸರ್ಕಾರವೇ ಭರಿಸುತ್ತದೆ. ವಿಸಿಎಫ್ನಲ್ಲಿ ಶೇ. 20ನ್ನು ರಾಜ್ಯಗಳು, ವಾಯವ್ಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದರೆ ಶೇ. 10 ಮೊತ್ತವನ್ನು ಭರಿಸಬೇಕು. ಜೊತೆಗೆ, ಅಗತ್ಯ ಭೂಮಿ, ರಕ್ಷಣೆ, ವಿಮಾನ ನಿಲ್ದಾಣದಲ್ಲಿ ನೀಡುವ ಸೇವೆಯಲ್ಲಿ ವಿನಾಯಿತಿ ಒದಗಿಸುವುದಕ್ಕೆ ಈ ವರೆಗೆ 19 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು ಒಪ್ಪಿ, ಸಹಿ ಹಾಕಿವೆ. ವಿಮಾನಯಾನ ಸಂಸ್ಥೆಗಳ, ಯಾತ್ರಾ ಮತ್ತು ಮೇಕ್ಮೈ ಟ್ರಿಪ್ ವೆಬ್ಸೈಟ್ಗಳ ಮೂಲಕವೂ ಉಡಾನ್ ಯೋಜನೆಯಡಿ ವಿಮಾನ ಟಿಕೆಟ್ ಖರೀದಿಸಬಹುದು.
ವಿಮಾನ ನಿಲ್ದಾಣಗಳಲ್ಲಿ ಆಹಾರ ಮತ್ತು ವಸ್ತುಗಳು ತುಂಬ ದುಬಾರಿ. ಆದರೆ, ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಏರ್ಪೋರ್ಟ್ ಲಾಂಜ್ ಇರುತ್ತದೆ. ವಿಮಾನವೇರಲು ಸಮಯವಿದ್ದರೆ, ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದ್ದರೆ ಅಲ್ಲಿ 25 ರೂ.ಗಳ ನಾಮಮಾತ್ರ ಶುಲ್ಕದಲ್ಲಿ ನಿಮಗೆ ಪ್ರವೇಶ ಲಭ್ಯ. ಊಟ-ತಿಂಡಿ, ವಿಶ್ರಾಂತಿ ಸೌಲಭ್ಯಗಳು ಸಿಗುತ್ತವೆ. ಒಂದು ಸಲ ಕಾರ್ಡ್ ಸ್ವೈಪ್ ಮಾಡಿದರೆ ಎರಡು ತಾಸುಗಳಿಗೆ ಅವಕಾಶ ಸಿಗುತ್ತದೆ. ಇನ್ನಷ್ಟು ಸಮಯ ಕಳೆಯಬೇಕೆಂದರೆ, ಮತ್ತೊಮ್ಮೆ ಕಾರ್ಡ್ ಸ್ವೈಪ್ ಮಾಡಿದರೆ ಆಯಿತು. ಇದು ವಿಮಾನ ಪ್ರಯಾಣಿಕರಿಗೆ ಪ್ರಾಧಿಕಾರಗಳು ಕೊಡುವ ಕಾಂಪ್ಲಿಮೆಂಟರಿ ಆಗಿರುತ್ತದೆ.
ನಮ್ಮ ಕನಸುಗಳಿಗೆ ರೆಕ್ಕೆಗಳು ಮೂಡಿವೆ. ಬನ್ನಿ, ಹಕ್ಕಿಯಂತೆ ಹಾರೋಣ, ಜಗದ ಸೊಬಗನ್ನು ಬೆರಗಿನ ಕಂಗಳಿಂದ ನೋಡೋಣ.