ಇತ್ತೀಚೆಗೆ ನಾನು ಯಾವುದೋ ಕಾರಣಕ್ಕೆ ನನ್ನ ಹಳೆಯ ಕಡೆತಗಳನ್ನು ಹುಡುಕುತ್ತಾ ಇರುವಾಗ ಆರ್.ಎನ್. ಜಯಗೋಪಾಲ್, ಚಿ. ಉದಯಶಂಕರ್ ಮತ್ತು ವಿಜಯನಾರಸಿಂಹ ಮೂವರೂ ಒಟ್ಟಿಗೆ ಇರುವ ಅಪರೂಪದ ಒಂದು ಪೋಟೋ ಸಿಕ್ಕಿತು. ಇದನ್ನು ನನಗೆ ಕೊಟ್ಟಿದ್ದವರು ಆರ್.ಎನ್.ಜಯಗೋಪಾಲ್. ಇದರ ಹಿಂದೆ ಒಂದು ಕುತೂಹಲಕರ ಕಥೆ ಕೂಡ ಇತ್ತು.
ಇದು ರೂಪುಗೊಂಡಿದ್ದು ೧೯೬೭ರಲ್ಲಿ ತೆರೆಕಂಡ ‘ಬಂಗಾರದ ಹೂವು’ ಚಿತ್ರದ ಗೀತರಚನೆ ಸಂದರ್ಭದಲ್ಲಿ. ಈ ಚಿತ್ರದ ನಿರ್ದೇಶಕ ಬಿ.ಎ.ಅರಸ್ಕುಮಾರ್ ಅವರಿಗೆ ಹೀಗೆ ಮೂವರಿಂದಲೂ ಏಕ ಕಾಲದಲ್ಲಿ ಗೀತೆಗಳನ್ನು ಬರೆಸಬೇಕು ಎನ್ನುವ ಬಹುದಿನದ ಕನಸು ಇತ್ತು. ಆಗಿನ ಮದ್ರಾಸ್ನ ಗೋಲ್ಡನ್ ಸ್ಟುಡಿಯೋದಲ್ಲಿ ಇದು ಸಾಧ್ಯವಾಯಿತು. ಅಲ್ಲಿ ಆರ್. ಎನ್.ಜಯಗೋಪಾಲ್ ‘ಆ ಮೊಗವು ಎಂಥಾ ಚೆಲುವು’, ಚಿ.ಉದಯಶಂಕರ್ ‘ಓಡುವ ನದಿ ಸಾಗರವ ಸೇರಲೇಬೇಕು’ ಮತ್ತು ವಿಜಯ ನಾರಸಿಂಹ ‘ನೀ ನಡೆವ ಹಾದಿಯಲ್ಲಿ ನಗೆಹೂವು ಬಾಡದಿರಲಿ’ ಗೀತೆಗಳನ್ನು ಬರೆದರು. ಅಲ್ಲಿಂದ ಮೂವರೂ ಲಜ್ ಸರ್ಕಲ್ನಲ್ಲಿ ಇದ್ದ ವಿಸ್ಡನ್ ಹೋಟಲ್ (ಇದು ಈಗಿನ ಕಾಫಿಡೇಯಂತಹ ಹೋಟಲ್)ನಲ್ಲಿ ಕಾಫಿ ಕುಡಿದರು. ಆಗ ಚಿ. ಉದಯಶಂಕರ್ ‘ಬನ್ರೋ ಇಲ್ಲಿನ ಲಿಂಗಂ ಸ್ಟುಡಿಯೋದಲ್ಲಿ ಪೋಟೋಗಳು ಬಹಳ ಚೆನ್ನಾಗಿರ್ತಾವಂತೆ. ನಾವು ಮೂವರೂ ಒಂದು ಪೋಟೋ ತೆಗೆಸಿಕೊಳ್ಳೋಣ’ ಎಂದರು. ಹೀಗೆ ಈ ಪೋಟೋ ಸೃಷ್ಟಿಯಾಯಿತು.
ಇದನ್ನು ನಾನು ದಾಖಲೆ ಮಾಡಿ ಕೆಲವು ದಿನಗಳಿಗೆ ಒಬ್ಬರು ತಕರಾರು ತೆಗೆದರು. ‘ಆ ಮೊಗವು ಎಂಥಾ ಚೆಲುವು’ ಜಯಗೋಪಾಲ್ ಬರೆದಿದ್ದು ಅಲ್ಲ ಉದಯಶಂಕರ್ ರಚನೆ ಎಂದು ಆಕಾಶವಾಣಿಯಲ್ಲಿ ಹೇಳ್ತಾರೆ. ನಿಮ್ಮ ಮಾತಿಗೆ ದಾಖಲೆ ಕೊಡಿ’ ಎನ್ನುವುದು ಅವರ ತಕರಾರಿನ ಸಾರಾಂಶ. ಗ್ರಾಮಾಪೋನ್ ಪ್ಲೇಟ್ನಲ್ಲಿ ಅದು ಉದಯಶಂಕರ್ ಎಂದೇ ಇದೆ ಎನ್ನುವುದು ನನಗೂ ಗೊತ್ತಿತ್ತು. ಹೀಗಾಗಿ ನಾನು ಅವರ ಪ್ರಶ್ನೆಗೆ ಉತ್ತರಿಸಲು ಹೋಗಲಿಲ್ಲ. ಅನೇಕ ಹಾಡುಗಳು ಹೀಗೆ ಯಾರ ರಚನೆ ಯಾರ ಕಡೆಗೋ ಹೋಗಿರುವುದು. ಆ ಕಾಲದಲ್ಲಿ ಸಾಮಾನ್ಯ ಕೂಡ ಆಗಿತ್ತು. ಇದಕ್ಕೆ ಕಾರಣವಾದ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡುತ್ತೇನೆ.
ಹಳೆಯ ಚಿತ್ರಗೀತೆಗಳ ದಾಖಲೆಗೆ ಆಧಾರವಾಗಿ ಇರುತ್ತಾ ಇದ್ದಿದ್ದು ಗ್ರಾಮಾಪೋನ್ ಪ್ಲೇಟ್ಗಳು. ಕಳೆದ ಶತಮಾನದ ಆರಂಭಿಕ ದಶಕಗಳಿಂದಲೂ ಗ್ರಾಮಾಪೋನ್ ಪ್ಲೇಟ್ಗಳು ಇದ್ದವು. ಇವುಗಳ ಮೂಲಕ ಚಿತ್ರಗೀತೆಗಳು ಬಂದಿದ್ದು ತಡವಾಗಿ. ಇದಕ್ಕೆ ಕಾರಣ ಇಷ್ಟೇ ಆರಂಭಿಕ ದಿನಗಳಲ್ಲಿ ಪಾತ್ರಧಾರಿಗಳು ಹಾಡುತ್ತಲೇ ಅಭಿನಯಿಸಬೇಕಿತ್ತು. ಅವರ ಧ್ವನಿ ತಲುಪುವ ಹಾಗೆ ಮತ್ತು ಕ್ಯಾಮರಾ ಕಣ್ಣಿಗೆ ಕಾಣದ ಹಾಗೆ ಮೈಕ್ಗಳು ಇರುತ್ತಿದ್ದವು. ಆರ್ಕೆಸ್ಟ್ರಾದವರು ಟ್ರ್ಯಾಲಿಯಲ್ಲಿ ಅವರನ್ನು ಫಾಲೋ ಮಾಡುತ್ತ ಇದ್ದರು. ೧೯೪೧ರ ಸುಮಾರಿಗೆ ಸ್ಟುಡಿಯೋ ವ್ಯವಸ್ಥೆ ಬಂದಿತು. ೧೯೪೫ರಲ್ಲಿ ಮ್ಯಾಗ್ನಟಿಕ್ ಟೇಪ್ಗಳು ಬಂದವು. ಇದು ಚಿತ್ರಗೀತೆಗಳ ಇತಿಹಾಸದಲ್ಲಿ ಕ್ರಾಂತಿಕಾರಕ ಬೆಳವಣಿಗೆ. ಇದರಿಂದ ಚಿತ್ರಗೀತೆಗಳು ಗ್ರಾಮಾಪೋನ್ ಪ್ಲೇಟ್ ನಲ್ಲಿ ಅಡಕವಾಗುವುದು ಸಾಧ್ಯವಾಯಿತು. ಆಗೆಲ್ಲಾ ಗ್ರಾಮಾಫೋನ್ ಪ್ಲೇಟ್ನ ಒಂದು ಬದಿಯಲ್ಲಿ ೩ ನಿಮಿಷ ಹನ್ನೆರಡು ಸೆಕೆಂಡ್ ಮತ್ತು ಇನ್ನೊಂದು ಬದಿಯಲ್ಲಿ ಕೂಡ ಅಷ್ಟೇ ಕಾಲಾವಧಿಯ ಅವಕಾಶ. ಒಂದು ತಟ್ಟೆಗೆ ಎರಡು ಹಾಡುಗಳು.
ನೀವು ಗಮನಿಸ ಬಹುದು. ಬಹು ಕಾಲ ಇದೇ ಚಿತ್ರಗೀತೆಗಳ ಕಾಲಾವಧಿ ಆಗಿತ್ತು. ಹಾಡು ಎಷ್ಟೇ ದೊಡ್ಡದಿದ್ದರೂ ಈ ಅವಧಿಗೆ ಕತ್ತರಿಸಬೇಕಿತ್ತು. ಇಲ್ಲವೆ ಎರಡೂ ಬದಿಯನ್ನು ಇದಕ್ಕಾಗಿ ಬಳಸಬೇಕಿತ್ತು. ಹೀಗೆ ಕತ್ತರಿಸುವ ವ್ಯವಸ್ಥೆ ಇದ್ದಿದ್ದು ಕೊಲ್ಕತ್ತಾದ ಬಳಿಯ ಡಂಡಂನಲ್ಲಿ ಮಾತ್ರ. ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಗ್ರಾಮಾಪೋನ್ ಪ್ಲೇಟ್ಗಳನ್ನು ಎ.ವಿ.ಎಂನ ಒಡೆತನದ ಸರಸ್ವತಿ ಸ್ಟೋರ್ ನೋಡಿಕೊಳ್ಳುತ್ತಿತ್ತು. ಇಲ್ಲಿ ಬಹುಕಾಲ ಕನ್ನಡಿಗರು ಇರಲಿಲ್ಲ. ಹೀಗಾಗಿ ವಿಪರೀತ ಭಾಷಾ ತಪ್ಪುಗಳ ಜೊತೆಗೆ ಯಾರ ಹಾಡು ಯಾರ ಕಡೆಗೋ ಹೋಗುವುದು ಸಹಜವಾಗಿತ್ತು. ಏಕೆಂದರೆ ಇದು ನೋಡಲು ಸಿಗುತ್ತಾ ಇದ್ದಿದ್ದೇ ಕೊಲ್ಕತ್ತಾಕ್ಕೆ ಹೋಗಿ ಬಂದ ನಂತರ. ಗ್ರಾಮಾಪೋನ್ ಪ್ಲೇಟ್ಗಳು ಬಹು ದುಬಾರಿ ಬೆಲೆಯದಾಗಿರುತ್ತಿದ್ದವು. ಆಗಿನ ಗೀತರಚನೆಕಾರರು, ಸಂಗೀತ ನಿರ್ದೇಶಕರು ಯಾರೂ ಅವುಗಳನ್ನು ಕೊಳ್ಳುವಷ್ಟು ಸಮರ್ಥರರಾಗಿರಲಿಲ್ಲ. ಅವರಿಗೆ ತಪ್ಪು ಗೊತ್ತಾಗ್ತಾ ಇದ್ದಿದ್ದೇ ಆಕಾಶವಾಣಿಯಲ್ಲಿ ಪ್ರಸಾರ ಆದಾಗ. ಆಗಲೂ ಕೂಡ ನೂರೆಂಟು ಕಾನೂನಿನ ತೊಡಕುಗಳು. ಎಷ್ಟೋ ಜನ ಅದನ್ನು ಬದಲಿಸಲು ಪ್ರಯತ್ನಿಸಿ ನಿರಾಶರಾಗಿ ಕೈ ಬಿಟ್ಟಿದ್ದೂ ಇದೆ.
‘ಬೂತಯ್ಯನ ಮಗ ಅಯ್ಯು’ ಚಿತ್ರದ ‘ಮಲೆನಾಡ ಹೆಣ್ಣ ಮೈ ಬಣ್ಣ’ ಗೀತೆಯನ್ನು ಯಾರೂ ಮರೆಯಲಾರರು. ಅದು ಕೇಳಲು ಮತ್ತು ನೋಡಲು ಎರಡೂ ರೀತಿಯಲ್ಲಿಯೂ ಸುಂದರವಾದ ಗೀತೆ. ಇದನ್ನು ಬರೆದವರು ಚಿ.ಉದಯಶಂಕರ್ ಎಂದು ನೀವೆಲ್ಲಾ ಕೇಳಿಕೊಂಡೇ ಬಂದಿದ್ದೀರಿ. ಆದರೆ ವಾಸ್ತವವಾಗಿ ಇದನ್ನು ಬರೆದವರು ಹುಣಸೂರು ಕೃಷ್ಣಮೂರ್ತಿಗಳು. ಇದನ್ನು ನನ್ನ ಬಳಿ ಹೇಳಿದ್ದ ಹುಣಸೂರರು ‘ಇದನ್ನು ಸರಿಪಡಿಸಲು ಎಲ್ಲಾ ಪ್ರಯತ್ನಪಟ್ಟು ಸೋತಿದ್ದೇನೆ’ ಎಂದಿದ್ದರು. ‘ನಿಮ್ಮ ಹೆಸರಿನಲ್ಲಿ ನೂರಾರು ಅಮೋಘ ಗೀತೆಗಳಿವೆ, ಇದಕ್ಕೆ ಏಕೆ ಪೇಚಾಡುತ್ತೀರಿ’ ಎಂದು ಸಮಾಧಾನ ಹೇಳಿದ್ದೆ. ಅವರು ಸಂಭಾಷಣೆ ಬರೆಯುವ ಸಂದರ್ಭದಲ್ಲಿಯೇ ಈ ಗೀತೆಯನ್ನು ಕೂಡ ಬರೆದಿದ್ದರು. ಆದರೆ ಇನ್ನೊಂದು ಬದಿಯಲ್ಲಿ ಚಿ.ಉದಯಶಂಕರ್ ಅವರು ಬರೆದ ‘ವಿರಸವೆಂಬ ವಿಷಕೆ’ ಗೀತೆ ಇತ್ತು. ಲೇಬಲ್ ಮಾಡುವವನು ಎರಡೂ ಕಡೆ ಉದಯಶಂಕರ್ ಎಂಬ ಹೆಸರು ಅಂಟಿಸಿ ಬಿಟ್ಟಿದ್ದ. ಇದು ಹುಣಸೂರರ ರಚನೆ ಎಂದು ನನಗೆ ಉದಯಶಂಕರ್ ಕೂಡ ಖಚಿತ ಪಡಿಸಿದ್ದರು. ಆದರೆ ದಾಖಲೆಯಲ್ಲಿ ಬದಲಾಯಿಸಲು ಆಗಲೇ ಇಲ್ಲ.
ಒಂದು ಚಿತ್ರದಲ್ಲಿ ಮೂರು ನಾಲ್ಕು ಜನ ಗೀತರಚನೆ ಮಾಡಿದರೆ ಇಂತಹ ಸಮಸ್ಯೆ ಉಂಟಾಗುವುದು ಸಾಮಾನ್ಯ. ನಿರ್ಮಾಪಕರು ಇದನ್ನು ಸರಿಪಡಿಸಬೇಕು. ಆದರೆ ಬಹಳ ಸಂದರ್ಭದಲ್ಲಿ ಅವರು ಬೇರೆ ಭಾಷೆಯವರು ಆಗಿದ್ದರಿಂದ ಸರಿಪಡಿಸುವ ಕುರಿತು ಆಸಕ್ತಿ ತೋರಿಸುತ್ತಾ ಇರಲಿಲ್ಲ. ‘ಸ್ಕೂಲ್ ಮಾಸ್ಟರ್’ ಚಿತ್ರದ ‘ಸ್ವಾಮಿದೇವನೆ ಲೋಕ ಪಾಲನೆ’ ಗೀತೆ ಎಲ್ಲರಿಗೂ ಗೊತ್ತು. ಇದನ್ನು ರಚಿಸಿದ್ದವರು ಮೈಸೂರಿನ ಆಸ್ಥಾನ ವಿದ್ವಾಂಸರಾಗಿದ್ದ ಸೋಸಲೆ ಅಯ್ಯಾ ಶಾಸ್ತಿçಗಳು. ಈ ಚಿತ್ರದ ಎಲ್ಲಾ ಗೀತೆಗಳೂ ಕಣಗಲ್ ಪ್ರಭಾಕರ್ ಶಾಸ್ತ್ರಿಯವರು ಬರೆದದ್ದರಿಂದ ಈ ಗೀತೆ ಕೂಡ ಅವರ ಹೆಸರಿಗೇ ಸೇರಿ ಹೋಗಿದೆ.
‘ಎಮ್ಮೆತಮ್ಮಣ್ಣ’ ಚಿತ್ರದಲ್ಲಿ ‘ನೀನ್ಯಾರಿಗಾದೆಯೋ ಎಲೆ ಮಾನವ’ ಎಂಬ ಗೀತೆ ಅಳವಡಿಕೆಯಾಗಿದೆ. ಇದು ಜನಪದಗೀತೆ
ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಗ್ರಾಮೋಪೋನ್ ಪ್ಲೇಟ್ ಪ್ರಕಾರ ಇದು ಜಿ.ವಿ.ಅಯ್ಯರ್ ರಚನೆಯಾಗಿದೆ. ಹಾಗೇ
ಆಕಾಶವಾಣಿಯಲ್ಲಿ ಪ್ರಸಾರ ಕೂಡ ಆಗುತ್ತಿದೆ. ಸಂಗೀತ ನಿರ್ದೇಶಕರು ಈ ಸಮಸ್ಯೆಯಿಂದ ಬಚಾವ್ ಆಗುತ್ತಾರೆ. ಏಕೆಂದರೆ ಒಂದು ಸಿನಿಮಾದ ಎಲ್ಲಾ ಹಾಡುಗಳಿಗೆ ಅವರೇ ಸಂಗೀತ ನೀಡಿರುತ್ತಾರೆ. ಆದರೆ ಒಂದು ಚಿತ್ರದ ಹಾಡು ಇನ್ನೊಂದು ಚಿತ್ರಕ್ಕೆ ಬಳಕೆಯಾದರೆ ಅಲ್ಲಿ ಸಂಗೀತ ನಿರ್ದೇಶಕರು ನಷ್ಟ ಅನುಭವಿಸುತ್ತಾರೆ.
‘ಜೀವನಚೈತ್ರ’ ಚಿತ್ರದ ‘ನಾದಮಯ ಈ ಲೋಕವೆಲ್ಲಾ’ ಗೀತೆ ಎಲ್ಲರಿಗೂ ಗೊತ್ತು. ಇದು ರಾಜ್ಕುಮಾರ್ ಅವರಿಗೆ ರಾಷ್ಟçಪ್ರಶಸ್ತಿಯನ್ನು ತಂದುಕೊಟ್ಟಿತು ಎನ್ನುವ ಸಂಗತಿ ಕೂಡ ಗೊತ್ತು. ಈ ಚಿತ್ರದ ಸಂಗೀತ ನಿರ್ದೇಶಕರು
ಉಪೇಂದ್ರಕುಮಾರ್ ಅವರಾಗಿದ್ದರಿಂದ ಈ ಗೀತೆ ಕೂಡ ಅವರ ಹೆಸರಿನಲ್ಲಿಯೇ ಪ್ರಸಾರ ಆಗುತ್ತಾ ಇದೆ. ವಾಸ್ತವ ಎಂದರೆ ಇದು ಧ್ವನಿಮುದ್ರಣ ಮಾತ್ರ ಮುಗಿಸಿ ನಿಂತುಹೋಗಿದ್ದ ರಾಜ್ಕುಮಾರ್ ಅವರ ‘ಅಮೃತ ವರ್ಷಿಣಿ’ ಚಿತ್ರಕ್ಕೆ ಸಿದ್ದವಾದ ಗೀತೆ. ಇದರ ಸಂಗೀತ ಸಂಯೋಜಕರು ಎಂ.ರಂಗರಾವ್. ಆದರೆ ಈ ಹಾಡಿನ ಯಶಸ್ಸು ಅವರಿಗೆ ಸಿಕ್ಕಲೇ ಇಲ್ಲ. ಇನ್ನೊಂದು ಕಡೆ ಉಪೇಂದ್ರಕುಮಾರ್ ನಷ್ಟ ಅನುಭವಿಸಿದ ಪ್ರಸಂಗ ಕೂಡ ಇದೆ. ‘ಕಾಮನ ಬಿಲ್ಲು’ ಚಿತ್ರದ ‘ನೇಗಿಲ ಯೋಗಿ’ ಗೀತೆಯನ್ನು
ಕರ್ನಾಟಕ ಸರ್ಕಾರ ರೈತಗೀತೆ ಎಂದು ಅಂಗೀಕರಿಸಿ ಅದರ ಸಂಗೀತ ಸಂಯೋಜಕರು ಸಿ.ಅಶ್ವತ್ಥ್ ಎಂದು ಉಲ್ಲೇಖಿಸಿದೆ. ಆದರೆ ಈ ಗೀತೆಗೆ ಅಶ್ವತ್ಥ್ ಗಾಯಕರು ಮಾತ್ರ. ಸಂಗೀತ ಸಂಯೋಜನೆ ಮಾಡಿರುವುದು ಉಪೇಂದ್ರಕುಮಾರ್ ಅವರು.
ಆದರೆ ಗಾಯಕರೂ ಕೂಡ ಈ ಸಮಸ್ಯೆಯಿಂದ ಹೊರತಾಗಿಲ್ಲ. ‘ಕಪ್ಪು ಬಿಳುಪು’ ಚಿತ್ರದ ‘ಈ ಚಂದದ ಮನೆಯಲ್ಲಿ’ ಗೀತೆಯನ್ನು ಎಲ್ಲರೂ ಕೇಳಿದ್ದೀರಿ. ಅದು ಪಿ.ಸುಶೀಲಾ ಅವರ ಗಾಯನ ಎಂದೇ ಪ್ರಸಾರ ಆಗುತ್ತಾ ಬಂದಿದೆ.
ವಾಸ್ತವ ಎಂದರೆ ಇದನ್ನು ಹಾಡಿರುವುದು ಗಾಯಕಿ ವಸಂತ. ಗ್ರಾಮಾಪೋನ್ ಪ್ಲೇಟ್ ಮಾಡುವವರಿಗೆ ಅವರ ಹೆಸರು
ಅಪರಿಚಿತವಾಗಿದ್ದರಿಂದ ಸುಶೀಲಾ ಅವರ ಹೆಸರು ಹಾಕಿದರು. ವಸಂತ ಇದನ್ನು ಸರಿ ಪಡಿಸುವ ಎಲ್ಲಾ ಪ್ರಯತ್ನ ಮಾಡಿ
ವಿಫಲರಾದರು.
‘ಮಿಸ್ ಲೀಲಾವತಿ’ ಚಿತ್ರದ ‘ದೋಣಿ ಸಾಗಲಿ ಮುಂದೆ ಹೋಗಲಿ’ ಗೀತೆಯನ್ನು ಎಲ್ಲರೂ ಕೇಳಿದ್ದೀರಿ. ಈ ಗೀತೆಯನ್ನು ಎಸ್. ಜಾನಕಿಯವರೊಂದಿಗೆ ಹಾಡಿದ್ದವರು ರಾಮಚಂದ್ರ ಎಂದು ಕೇಳಿದ್ದೇವೆ. ಈ ರಾಮಚಂದ್ರ ಯಾರು? ಪಿ.ಸುಶೀಲಾ ಅವರ ಸೋದರ ಎಂಬ ಮಾತು ಬಹಳ ಕಾಲ ಪ್ರಚಾರದಲ್ಲಿತ್ತು. ಇತ್ತೀಚೆಗೆ ಇನ್ನೊಬ್ಬರು ರಾಮಚಂದ್ರ ನಾನೇ ಹಾಡಿದ್ದು ಎಂದು ಹೇಳಿದ್ದಾರೆ. ಇದು ಬಗೆಹರಿಯದ ಸಮಸ್ಯೆ ಎನ್ನಬಹುದು. ಇವೆಲ್ಲವೂ ತೀರಾ ಹಳೆಯ ಕಥೆ ಎನ್ನಬೇಡಿ. ಇಂತಹ ವ್ಯತ್ಯಯಗಳು ಈಗಲೂ ಆಗುತ್ತಾ ಇರುತ್ತವೆ.
‘ಶ್ರೀ ಮಂಜುನಾಥ’ ಚಿತ್ರದ ಎಲ್ಲಾ ಗೀತೆಗಳು ಹಂಸಲೇಖ ಅವರ ಹೆಸರಿನಲ್ಲಿ ಇವೆ. ಆದರೆ ಅದರಲ್ಲಿನ ‘ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೆ’ ಗೀತೆಯನ್ನು ಬರೆದವರು ನಮ್ಮ ಗುಂಪಿನಲ್ಲಿ ಇರುವ ನಾಗೇಂದ್ರ ಪ್ರಸಾದ್. ಇದು ನಿಜವೆಂದೂ ಸ್ವತ: ಹಂಸಲೇಖ ಕೂಡ ಒಪ್ಪುತ್ತಾರೆ. ಆದರೂ ಬದಲಾವಣೆ ಸಾಧ್ಯವಾಗಿಲ್ಲ.
ನನಗೆ ಗೊತ್ತಿದ್ದ ಹಾಗೆ, ಹೀಗೆ ಬದಲಾಯಿಸಲು ಸಾಧ್ಯವಾದ ಏಕೈಕ ಪ್ರಸಂಗ ‘ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ’ ಗೀತೆಯದು. ‘ಸೊಸೆ ತಂದ ಸೌಭಾಗ್ಯ’ ಚಿತ್ರದಲ್ಲಿ ಉಳಿದ ಎಲ್ಲಾ ಗೀತೆಗಳನ್ನೂ ಚಿ. ಉದಯಶಂಕರ್ ಅವರೇ ಬರೆದಿದ್ದರು. ಈ ಗೀತೆ ಕೊನೆಯ ಕ್ಷಣದಲ್ಲಿ ಸೇರ್ಪಡೆ ಆಗಿದ್ದರಿಂದ ಅದನ್ನು ಆರ್.ಎನ್.ಜಯಗೋಪಾಲ್ ಅವರು ಬರೆದಿದ್ದರು. ಉಳಿದ ಗೀತೆಗಳ ಜೊತೆಗೆ ಇದೂ ಕೂಡ ಉದಯಶಂಕರ್ ಅವರ ಖಾತೆಗೆ ಜಮಾ ಆಗಿ ಬಿಟ್ಟಿತ್ತು. ಜಯಗೋಪಾಲ್ ಅವರಿಗೆ ವೈಯಕ್ತಿಕವಾಗಿ ಇದು ಬಹಳ ಪ್ರಿಯವಾದ ಗೀತೆ ಆಗಿದ್ದರಿಂದ ಎಲ್ಲಾ ದಾಖಲೆಗಳನ್ನು ನೀಡಿ ತಮ್ಮ ಹೆಸರಿಗೆ ಇದನ್ನು ವರ್ಗಾಯಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಅದಕ್ಕಾಗಿ ಅವರು ಸಾಕಷ್ಟು ಪತ್ರ ವ್ಯವಹಾರ ನಡೆಸಬೇಕಾಯಿತು ಎನ್ನುವುದು ಸತ್ಯ. ಈಗಂತೂ ಆಕಾಶವಾಣಿ, ದೂರದರ್ಶನ ಬಿಟ್ಟರೆ ಉಳಿದ ಎಫ್.ಎಂ.ಗಳಾಗಲಿ, ವಾಹಿನಿಗಳಾಗಲಿ ಗೀತರಚನೆಕಾರರ ಮತ್ತು ಸಂಗೀತ ನಿರ್ದೇಶಕರ ಹೆಸರನ್ನು ಹೇಳುವ ಪರಿಪಾಟವನ್ನೇ ಬಿಟ್ಟಿವೆ. ಮುಂದಿನ ದಿನಗಳಲ್ಲಿ ಇತಿಹಾಸ ಹೇಗೆ ದಾಖಲಾಗಬಹುದು? ಯೋಚಿಸಿದರೇ ಭಯವಾಗುತ್ತದೆ.