ಕೆಲವೊಮ್ಮೆ ಬೇಕು ಎನ್ನುವ ಕನಸು ಬೀಳದೆ ನಾವು ಕಲ್ಪನೆ ಕೂಡ ಮಾಡಿಕೊಳ್ಳದಂತ ಕನಸು ಬಿದ್ದುಬಿಡುತ್ತೆ. ಇದಕ್ಕೆ ಯಾರ
ಹೊಣೆಗಾರಿಕೆ ಹೇಳಿ. ಕನಸು ನಮ್ಮ ಕೈಗೆ ಎಟಕುವಂಥದ್ದಲ್ಲ. ಬಿದ್ದಿದ್ದು ಕಾಣಬೇಕು ಅಷ್ಟೇ. ಕನಸುಗಳು ಆಕಾಶದ ಹಾಗೆ. ಹಿಡಿಯಲಾಗದ ಹೊಳೆಯುವ ಗಂಟು. ಅದಕ್ಕಾಗಿಯೇ ಜನ ಆಕಾಶ ನೋಡಿ ಹತ್ತು ಹಲವು ಕಲ್ಪಿಸಿಕೊಂಡು ಕನಸಿನ ಪುಷ್ಪಕ ಕಟ್ಟುತ್ತಾರೆ. ತಾರೆಗಳ ಜೊತೆ, ಚಂದ್ರನ ಜೊತೆ ಸೇರುವ ಗೆಳೆತನದ ಅನುಭೂತಿಯ ಭಾವ ಹೊಂದುತ್ತಾರೆ. ಕಲ್ಪನೆಯ ಪ್ರೀತಿಸಿ, ಮೋಹಿಸುತ ಆರಾಧಿಸಿ ಕನಸಿನ ಭೃಂಗವ ಏರಿ ಕವಿ ಎನಿಸಿಕೊಂಡುಬಿಡುತ್ತಾರೆ.
ಕನಸು ಕಾಣೋದು ಜೀವನ. ಆದರೆ ಬರೀ ಕನಸನ್ನೇ ಕಾಣೋದು ಜೀವನವಲ್ಲ. ಕಾಣುವ ಕನಸನ್ನು ನನಸು ಮಾಡಿಕೊಳ್ಳಲು ಪರಿಶ್ರಮ ಬೇಕು. ಕನಸಿನಲ್ಲಿ ಕಂಡಿದ್ದೆಲ್ಲಾ ಕನಸೇ ಅಲ್ಲ, ಹಾಗಂತ ಕನಸಿನಲ್ಲಿ ಕಂಡದ್ದನ್ನೆಲ್ಲಾ ನನಸು ಮಾಡಿಕೊಳ್ಳಲು ಸಾಧ್ಯವೂ ಇಲ್ಲ. ಎಲ್ಲಕ್ಕೂ ಮಿತಿ ಇದೆ ಅದನ್ನು ನಾವು ಅರ್ಥೈಸಿಕೊಳ್ಳಬೇಕು. ಕೆಲವೊಂದು ಕನಸು ಹತ್ತಾರು ಕ್ಷಣಗಳು ಇರಬಹುದು. ಮತ್ತೆ ಕೆಲವು ಹದಿನೈದರಿಂದ ಇಪ್ಪತ್ತು ನಿಮಿಷಗಳವರೆಗೂ ಇರಬಹುದು. ಅತೀ ಕಡಿಮೆ ಅವಧಿಯ ಕನಸುಗಳು ಮನಸ್ಸಿನಲ್ಲಿ ಛಾಪು ಮೂಡಿಸಿಕೊಳ್ಳುವ ಮುಂಚೆಯೇ ಕರಗಿ ಹೋಗಿರುತ್ತವೆ. ಇನ್ನು ಕೆಲವು ದೀರ್ಘ ಅವಧಿಯವು ನಿದ್ದೆಯಿಂದ ಎದ್ದ ಮೇಲೂ ಕಾಡುತ್ತವೆ. ಕನಸುಗಳು ಇರುಳಲ್ಲೇ ಬರಬೇಕು ಅಂತ ರೂಲ್ಸ್ ಏನೂ ಇಲ್ಲ. ಆದರೂ ಕನಸುಗಳು ಇರುಳಲ್ಲೇ ಬರಬೇಕು. ಇಲ್ಲ ಅಂದರೆ, ಹಗಲಲ್ಲಿ ಕಾಣೋ ಕನಸುಗಳು ಹಗಲುಗನಸಾಗುತ್ತೆ, ಆದರೆ ಈ ಹಗಲುಗನಸು ಕಾಣೋದು ಕೆಲವರಿಗೆ ಮಾತ್ರ ಸೀಮಿತ. ಅಕಸ್ಮಾತ್, ರಾತ್ರಿ ಕಾಣೊ ಕನಸು ಹಗಲಲ್ಲಿ ಬಂದು ಕಾಡಿದ್ರೆ ಹೇಗಿರುತ್ತೆ?
ಬಡವ ಬಲ್ಲಿದ ಎಂಬ ಭೇದವಿಲ್ಲದೆ, ಗಂಡು ಹೆಣ್ಣು ಎಂಬ ಭೇದವಿಲ್ಲದೆ, ದೇಶ ಭಾಷೆಗಳ ತಾಪತ್ರಯವಿಲ್ಲದೆ, ಎಲ್ಲರಿಗೂ ಇರುವ ದೈವ ಕೊಟ್ಟ ವರ ಈ ಕನಸು. ಕೆಲವರು ಕನಸುಗಳಿಗೆ ಬಹಳ ಪ್ರಾಮುಖ್ಯತೆ ನೀಡುತ್ತಾರೆ. ಕನಸುಗಳು ಮುಂದಾಗುವುದನ್ನು ಈಗಲೇ ಸೂಚ್ಯವಾಗಿ ನಮಗೆ ಎಚ್ಚರಿಸಲು ಬಂದಿದೆ ಎಂಬ ಕೆಲವರ ನಂಬಿಕೆ. ಹಲವೊಮ್ಮೆ ‘ಕಾಕತಾಳೀಯವೋ’ ಎಂಬoತೆ ಕನಸಿನಲ್ಲಿ ಕಂಡಿದ್ದು ನಿಜವೇ ಆಗಿಬಿಡುತ್ತದೆ.
ಕನಸಲ್ಲಿ ಕಾಣೋದು ನಿಜ, ಹೌದು, ಅಲ್ಲ ಎಂಬುದಕ್ಕೆ ಎಲ್ಲೂ ನಿರ್ದಿಷ್ಟ ಉತ್ತರವಿಲ್ಲ. ಕನಸುಗಳನ್ನು ಕಾಣೋದು ತಪ್ಪೇ ಎಂಬ ಪ್ರಶ್ನೆ ಹಲವಾರು ಬಾರಿ ಕೇಳಿಯೇ ಇದ್ದೇವೆ? ‘ಕನಸು’ ಎಂಬುದನ್ನು ನೇರವಾಗಿ ಅರ್ಥೈಸಿಕೊಂಡರೆ, ಕನಸನ್ನು ಕಾಣಬೇಕೋ ಬೇಡವೋ ಎಂಬುದೇ ನಮ್ಮ ಕೈಯಲ್ಲಿ ಇಲ್ಲದಿರುವಾಗ ಅದು ತಪ್ಪೇ ಒಪ್ಪೇ ಎಂದು ಆಲೋಚಿಸುವುದೇ ಮೊದಲ ತಪ್ಪು.
ಕೆಲವರು ಕನಸಿನಲ್ಲೇ ಅರಮನೆ ಕಟ್ಟಿ ಬಿಡುತ್ತಾರೆ. ಇದಕ್ಕೆ ‘ತಿರುಕನ ಕನಸು’ಗಿಂತಾ ಉತ್ತಮ ಉದಾಹರಣೆ ಇಲ್ಲ ಎನಿಸುತ್ತದೆ. ಪ್ರತೀ ಬಾರಿ ಲಾಟರಿಯನ್ನು ಕೊಳ್ಳುವ ಜನರ ಕನಸುಗಳನ್ನು ಗುಡ್ಡೆ ಹಾಕಿದರೆ ಹಿಮಾಲಯಕ್ಕಿಂತಲೂ ಎತ್ತರವಿರುತ್ತದೇನೋ. ಆದರೆ ಲಾಟರಿ ಫಲಿತಾಂಶ ಬoದು ತಮಗೇನೂ ದಕ್ಕಲಿಲ್ಲ ಎಂದ ಕೂಡಲೇ ನಿರಾಸೆ ಎಂಬುದು ಈ
ಕನಸನ್ನು ನುಂಗಿ ನೀರು ಕುಡಿಯುತ್ತದೆ. ಇದು ಮುಂದಿನ ಲಾಟರಿ ಟಿಕೆಟ್ ತೆಗೆದುಕೊಳ್ಳುವ ತನಕ ಮಾತ್ರ.
ಕೆಲವೊಮ್ಮೆ ಕನಸುಗಳು ಕನಸುಗಾರನ ಮೇಲೆ ಕೊಂಚ ವಿಶಿಷ್ಟವಾಗಿಯೇ ಪರಿಣಾಮ ಬೀರಬಲ್ಲದಾಗಿರುತ್ತದೆ ಅಥವಾ ಆತಂಕಕ್ಕೆ ಒಳಗಾಗುವoತೆ ಮಾಡಬಹುದು. ಇಂಥಾ ಕನಸಿನ ಅರ್ಥವೇನು ಎಂದು ತಿಳಿಯಲು ಯಾವುದಾದರೂ ಜ್ಯೋತಿಷಿಗಳ ಬಳಿ ಹೋಗಿ ಪರಿಹಾರ ಕೇಳೋದು ಬಹಳ ಹಿಂದಿನಿoದ ಬಂದಿರುವ ರೂಢಿ. ಇದು ತಪ್ಪೋ
ಸರಿಯೋ ಗೊತ್ತಿಲ್ಲ. ಇವೆಲ್ಲವೂ ಅವರವರ ನಂಬಿಕೆಯ ಮೇಲೆ ಅವಲಂಬಿತ. ಕನಸಿನಲ್ಲಿ ದೈವ, ದೇವಪುರುಷರು, ನಮ್ಮನ್ನಗಲಿದವರು ಕಾಣೋದು ಮತ್ತು ಆ ವಿಷಯವನ್ನು ನಾವು ಸ್ವೀಕರಿಸುವ ಬಗ್ಗೆಯೂ ಕೂಡ ಅವರವರ ನಂಬಿಕೆಯ ಮೇಲೆ ಅವಲಂಬಿತ. ಈಗಿನ ಕಾಲದ ಮಕ್ಕಳು ಎಷ್ಟು ಬುದ್ದಿವಂತರಾಗಿರ್ತಾರೆ ಅಂದ್ರೆ, ಚಿಕ್ಕoದಿನಲ್ಲೇ ಅವರು ಕನಸು ಕಾಣೋಕೆ ಶುರು ಮಾಡ್ತಾರೆ. ನಾನು ದೊಡ್ಡವಳಾದ ಮೇಲೆ, ಡಾಕ್ಟರ್ ಆಗ್ಬೇಕು, ಪೊಲೀಸ್ ಆಗ್ಬೇಕು, ಇಂಜಿನಿಯರ್ ಆಗ್ಬೇಕು, ಟೀಚರ್ ಆಗ್ಬೇಕು ಈ ರೀತಿ ಸಾವಿರ ಕನಸು ಕಾಣ್ತಾರೆ. ಆದ್ರೆ ಬೆಳೆಯುತ್ತಾ ಅವರ ಆಸೆಯಲ್ಲಿ ಕೊಂಚ ಬದಲಾವಣೆಗಳಾಗುತ್ತವೆ. ಯಾಕಂದ್ರೆ, ಪ್ರಪಂಚ ಅವರನ್ನ ಆ ರೀತಿ ಬದಲಾಯಿಸುತ್ತೆ. ಅವರ ಕನಸು ಎಲ್ಲಕ್ಕಿಂತ ಮೀರಿದ್ದಾಗಿರುತ್ತದೆ. ಅದನ್ನ ನನಸು ಮಾಡಿಕೊಳ್ಳಲು, ಕಷ್ಟಪಟ್ಟು ಓದುತ್ತಾರೆ. ಅವರಿಗೆ ಬೆನ್ನೆಲುಬಾಗಿ
ಅವರ ತಂದೆ, ತಾಯಿ ನಿಂತಿರುತ್ತಾರೆ. ಯಾಕಂದ್ರೆ, ಎಲ್ಲಾ ತಂದೆ, ತಾಯಿಗೂ ಮಕ್ಕಳ ಆಸೆಯನ್ನ ಪೂರೈಸುವುದೇ ಅವರವರ ಕನಸಾಗಿರುತ್ತೆ. ಹಾಗಾಗಿ ಅವರ ಆಸೆ, ಕನಸುಗಳನ್ನು ಅವರು ಪೋಷಿಸುತ್ತಾರೆ.
ಇವತ್ತಿನ ದಿನ ಅವರು ಯಶಸ್ವಿಯಾಗಿದ್ದಾರೆ ಅಂದರೆ ಅದಕ್ಕೆ ಅವರು ಕಂಡ ಕನಸು, ಅದನ್ನು ಸಾಕಾರಗೊಳಿಸುವತ್ತ ಅವರ ಪರಿಶ್ರಮವೇ ಮುಖ್ಯ ಕಾರಣವಾಗಿರುತ್ತದೆ. ಕನಸು ಕಾಣದೇ ಇದ್ದರೆ ಮುಂದೊAದು ದಿನ ಬದುಕು ಏಕತಾನತೆಯಿಂದ ಬರಡಾದೀತು, ಮನಸ್ಸು ಮೂಕವಾದೀತು. ಬದುಕಲ್ಲಿ ಸ್ವಾರಸ್ಯವಿರಬೇಕೆಂದರೆ, ಪ್ರಗತಿಯಿರಬೇಕೆಂದಿದ್ದರೆ, ಆತ್ಮತೃಪ್ತಿ- ಆತ್ಮವಿಶ್ವಾಸದಿಂದ ಕೂಡಿರಬೇಕೆÀಂದರೆ ಕನಸು ಕಾಣಲೇಬೇಕು.
ಬದುಕುವುದು ಅಂದರೆ ಕನಸು ಕಾಣುವುದು. ಕಂಡ ಕನಸುಗಳನ್ನು ನನಸನ್ನಾಗಿಸಿಕೊಳ್ಳಲಿಕ್ಕಾಗಿ ಪ್ರಯತ್ನಿಸುವುದು. ಒಂದಾದ ನಂತರ ಇನ್ನೊoದು ಕನಸನ್ನು ನನಸುಗಳನ್ನಾಗಿ ಮಾಡಿಕೊಳ್ಳುತ್ತ ಹೋಗುವುದು. ಮತ್ತೆ ಹೊಸ ಹೊಸ ಕನಸುಗಳನ್ನು ಕಾಣುವುದು. ಇದೇ ಬದುಕು. ಕನಸು ಕಾಣುವುದರಿಂದ ಬದುಕಿನಲ್ಲಿ ಉತ್ಸಾಹವನ್ನು, ಭರವಸೆಯನ್ನು
ಇಟ್ಟುಕೊಳ್ಳಬಹುದು. ರಾತ್ರಿ ನಿದ್ರೆ ಬರದಿರುವಷ್ಟು ಆ ಕನಸು ನಮ್ಮನ್ನು ಕಾಡಬೇಕು. ಅದನ್ನು ನನಸು ಮಾಡಿಕೊಳ್ಳಲಿಕ್ಕೆ ಮನಸ್ಸು ಹಾತೊರೆಯಬೇಕು. ಒಬ್ಬರಿಗೆ ಬಂದoತಹ ಆಲೋಚನೆಯಾಗಲೀ, ಕನಸಾಗಲೀ ಇನ್ನೊಬ್ಬರಿಗೆ ಬರುವ ಸಾಧ್ಯತೆ ತೀರಾ ಕಡಿಮೆಯಾಗಿರುತ್ತದೆ. ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಕನಸನ್ನು ನೀವೇ ನನಸು ಮಾಡಿಕೊಳ್ಳಬೇಕು. ಆ ಕನಸು ನಿಮಗಾಗಿಯೇ ನಿಮ್ಮ ಬಳಿಗೆ ಬಂದಿರುತ್ತದೆ. ಕಂಡ ಕನಸನ್ನು ನನಸು ಮಾಡಿಕೊಳ್ಳಲಿಕ್ಕೆ ಶ್ರದ್ಧೆಯಿಂದ ಪ್ರಯತ್ನಿಸಬೇಕು.
ಜಗತ್ತಿನಲ್ಲಿ ಯಾರು ಕನಸು ಕಾಣುವುದಿಲ್ಲಾ ಹೇಳಿ? ಮನುಷ್ಯನಾದಿಯಾಗಿ, ಮೂಕಪ್ರಾಣಿಗಳೂ ಕನಸು ಕಾಣುತ್ತವೆ. ಮನುಷ್ಯ ಆಸ್ತಿ-ಅಂತಸ್ತು, ಆಕಾಶ-ಭೂಮಿಯೆಂದು ಕನಸು ಕಂಡರೆ, ಮುಗ್ಧ ಮೂಕಪ್ರಾಣಿಗಳು ತಮ್ಮ ಒಡೆಯ, ಮೇವು, ಆಹಾರವೆಂದು ಕನಸು ಕಾಣುತ್ತವೆ ಒಳ್ಳೆಯ ಕನಸು ಕಾಣಿರಿ. ಒಳ್ಳೆಯ ಕನಸು ಕಾಣುವುದು ಜೀವನದಲ್ಲಿ ಧನಾತ್ಮಕ ಅಂಶವನ್ನು ವೃದ್ಧಿಸಿ, ಹೊಸ ಹುರುಪು ಕಟ್ಟಿಕೊಟ್ಟು, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅದೇ ಬೇರೆಯವರಿಗೆ ಕೆಟ್ಟದಾಗುವ ಮನೆಮುರುಕ ಕನಸು ಕಂಡರೆ, ಅದರಿಂದ ಋಣಾತ್ಮಕ ಅಂಶಗಳು ಹೆಚ್ಚಾಗಿ ಜೀವನ ಅಂಧಕಾರದತ್ತ ಜಾರತೊಡಗುತ್ತದೆ. ಇದನ್ನು ಯೋಚಿಸಿ ಕನಸು ಕಾಣಿರಿ. ಕನಸುಗಳು ನಮ್ಮನ್ನು ಜೀವಂತವಾಗಿಡಲು ತುಂಬಾ ಮುಖ್ಯ. ಯಾವಾಗಲೂ ಕನಸು ಕಾಣ್ತಾನೆ ಇರಬೇಕು. ಈಡೇರುವ ಕನಸು, ಕೈಗೆ ಎಟುಕದ ಕನಸು, ಸಣ್ಣ ಕನಸು, ದೊಡ್ಡ ಕನಸು ಹೀಗೆ ತರ ತರದ ಕನಸು ಒಟ್ಟಿನಲ್ಲಿ ಕನಸು ಕಾಣಬೇಕು. ಎಲ್ಲಾ ಕನಸುಗಳು ನನಸಾಗ ಬೇಕು ಅಂತನೂ ಇಲ್ಲ. ಅಸಾಧ್ಯವಾದ ಕನಸುಗಳಿಗಾಗಿ ಕೊರಗುವುದು ಬಿಟ್ಟು ಮತ್ತೊಂದು ಹೊಸ ಕನಸು ಕಾಣಬೇಕು. ಆಗ ಜೀವನ ಕಲರ್ ಫುಲ್.