ಅಂದು ಭಾನುವಾರ. ಉದ್ಯೋಗಕ್ಕೆ ರಜೆ ಇದ್ದ ಕಾರಣ ಬಹುಬೇಗ ಮನೆಕೆಲಸಗಳನ್ನೆಲ್ಲ ಮುಗಿಸಿ ಕುಳಿತಿದ್ದೆ. ಸಮಯ ನೋಡಿದೆ. ಇನ್ನೂ ಒಂಭತ್ತು ಗಂಟೆ. ಮನೆಯಲ್ಲಿ ನನ್ನ ಹೊರತು ಯಾರೂ ಇರಲಿಲ್ಲ. ಎಲ್ಲರೂ ತಮ್ಮ ಅಭಿರುಚಿಯ ಹವ್ಯಾಸಕ್ಕಾಗಿ ನಾನು ಏಳುವ ಮುಂಚೆಯೇ ಮನೆಯಿಂದ ಹೊರಟುಬಿಟ್ಟಿದ್ದರು. ಯಾರಿದ್ದರೂ ಅವರ ಲೋಕದಲ್ಲಿ ನಾನು
ಇಲ್ಲದ ಕಾರಣ, ಯಾರಿದ್ದರೂ ಇಲ್ಲದಿದ್ದರೂ ನನ್ನ ದಿನಗಳಲ್ಲೇನೂ ವ್ಯತ್ಯಾಸವಿಲ್ಲ. ನಾನು, ನನ್ನ ಕರ್ತವ್ಯ ನಿರ್ವಹಣೆ ಎಂಬುದಕ್ಕೆ ಅಷ್ಟೇ ಸೀಮಿತಗೊಂಡಿರುವ ನನ್ನ ಬದುಕಿನ ಬಗ್ಗೆ ನನಗಂತೂ ಬಹಳ ಬೇಸರವಿದೆ. ಇಂತಹ ಸಮಯಗಳಲ್ಲಿ
ಎಲ್ಲ ನೋವುಗಳೂ ನೆನಪಾಗಿ ನನ್ನನ್ನು ಹಿಂಸಿಸಿ ಬಿಡುತ್ತದೆ.
ನಾನು ಈ ಕುಟುಂಬಕ್ಕಾಗಿ ನನ್ನನ್ನೇ ಕಳೆದುಕೊಂಡೆ. ಉದ್ಯೋಗ
ಮತ್ತು ಸಂಸಾರ ಎರಡನ್ನೂ ಸರಿದೂಗಿಸುತ್ತ, ಮಕ್ಕಳು, ಅತ್ತೆ- ಮಾವಂದಿರನ್ನು ನೋಡಿಕೊಳ್ಳುತ್ತಿರುವುದು ಸಾಮಾನ್ಯ ಕೆಲಸವೇ? ಆದರೂ ಯಾರಿಗೂ ನನ್ನ ಸೇವೆಯ ಅರಿವೇ ಇಲ್ಲವಲ್ಲ. ಇದನ್ನೆಲ್ಲ ಇವರ ಬಳಿ ಹೇಳಿಕೊಂಡರೆ ಏನೆಂದರು?
“ಅದೆಲ್ಲಾ ನಿನ್ನದೇ ಕರ್ಮ. ಅದಕ್ಕೆ ನಾನೇನು ಮಾಡಲಿ?” ಇದೆಂಥ ಧೋರಣೆ? ನನ್ನ ಬಗ್ಗೆ ಒಂದಷ್ಟು ಕನಿಕರ ಬೇಡವೇ? “ನನ್ನನ್ನು ನೋಡು. ನಾಲ್ಕು ಜನರಿಗೆ ನೌಕರಿ ನೀಡಿ ಅವರಿಗೆ ಅನ್ನದ ದಾರಿ ತೋರಿಸುತ್ತಿದ್ದೇನೆ. ನಿನ್ನಿಂದ ಯಾರಿಗೆ ಉಪಯೋಗವಿದೆ ಹೇಳು? ನೀನು ಸ್ವಾರ್ಥಿ, ಕೇವಲ ನಿನಗಾಗಿಯೇ ಬದುಕಿರುವೆ. ಅವರನ್ನು ನೋಡು. ಗಂಡನನ್ನು ಅದೆಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ನೀನೂ ಕಲಿ”. ಒಂದೇ ಎರಡೇ… ಇಂಥ ಸಾಲು ಸಾಲು ಬೈಗುಳಗಳನ್ನು ಕೇಳಿಯೇ ಅಲ್ಲವೇ ನಾನು ಹೈರಾಣಾಗಿ ಹೋಗಿರುವುದು. ‘ಓ ದೇವಾ ನನ್ನ ಕಷ್ಟ ಇವರಿಗೆಲ್ಲಾ ಎಂದು ಅರಿವಾಗುವುದು’ ಎಂದುಕೊಳ್ಳುತ್ತಾ ದುಃಖಿಸತೊಡಗಿದೆ. ಒಂದೊಂದೇ ಘಟನೆಗಳು ನೆನಪಿಗೆ ಬಂದು ದುಃಖ ಮತ್ತಷ್ಟು ಹೆಚ್ಚಾಗತೊಡಗಿತು.
ಬಾಗಿಲ ಕರೆಘಂಟೆಯ ಶಬ್ಧದಿಂದ ಎಚ್ಚೆತ್ತ ನಾನು ಕಣ್ಣೊರೆಸಿಕೊಂಡು ಕಿಟಕಿಯ ಕಡೆ ಇಣುಕಿದೆ. ಗೆಳತಿಯರಾದ ರಮಾ ಮತ್ತು ರಾಧ ನಿಂತಿದ್ದರು. ಬಲವAತದ ನಗೆ ತಂದುಕೊAಡು ಅವರಿಬ್ಬರನ್ನು ಸ್ವಾಗತಿಸಿದೆ.
“ಏನು ಇಷ್ಟು ಸಪ್ಪಗಿದೀಯಾ?” ರಾಧ ಕೇಳಿದಳು.
“ಎಲ್ಲಾ ಇದ್ದದ್ದೇ.
ಇದೆಲ್ಲ ಯಾವತ್ತು ಮುಗಿಯುತ್ತೋ ಏನೋ” ಎಂದೆ.
“ಇದು ಎಂದಿಗೂ ಮುಗಿಯೋಲ್ಲ. ನಾವು ಮುಗಿದುಹೋಗಬೇಕು ಅಷ್ಟೇ.”
“ಅದು ನಿಜ”
“ಈಗ ಹೊರಡು ನಮ್ಮೊಂದಿಗೆ”
“ಎಲ್ಲಿಗೆ?” ಕುತೂಹಲದಿಂದ ಕೇಳಿದೆ.
“ಅಲ್ಲಿಗೆ ಹೋದಮೇಲೆ ನಿನಗೇ ಎಲ್ಲವೂ ಅರ್ಥವಾಗುತ್ತದೆ.”
“ನನಗೆ ಎಲ್ಲಿಗೂ ಬರಲು ಮನಸ್ಸಿಲ್ಲ” ಎಂದು ಅವರಿಂದ ಜಾರಿಕೊಳ್ಳಲು ನೋಡಿದೆ. ಆದರೆ ಅವರು ಸುಲಭಕ್ಕೆ
ಬಿಡುವಂತವರಾಗಿರಲಿಲ್ಲ. ಒಲ್ಲದ ಮನಸ್ಸಿನಿಂದಲೇ ಹೊರಟು ನಿಂತೆ. ಬಹುದೊಡ್ಡ ಉದ್ಯಾನವೊಂದರ ಬಳಿಗೆ ಬಂದೆವು. ದ್ವಾರಪಾಲಕರು ನಮ್ಮನ್ನು ತಡೆದು, ಪರವಾನಗಿ ಪತ್ರವನ್ನು
ಪರಿಶೀಲಿಸಿ ನಮ್ಮನ್ನು ಒಳಗೆ ಬಿಟ್ಟರು.
“ನಿನಗೆ ಗೊತ್ತಾ ಇದರೊಳಗೆ ಪ್ರವೇಶ ಪಡೆದುಕೊಳ್ಳಲು ಅದೆಷ್ಟು ಪರಿಶ್ರಮ ಪಟ್ಟಿದ್ದೇವೆ.” ಎಂದು ರಮಾ ನುಡಿದಾಗ ಅವಳ ಮಾತಿನ ಮೇಲೆ ಅಷ್ಟೇನೂ ಆಸಕ್ತಿ ಇರದ ನಾನು ಆ ಬಗ್ಗೆ ಏನನ್ನೂ ಪ್ರಶ್ನಿಸಲಿಲ್ಲ. ಅವಳೇನೂ ಮುಂದಕ್ಕೆ
ಮಾತನಾಡಲಿಲ್ಲ. ನನ್ನ ಮನಸ್ಸಿನಲ್ಲಿ ಹಿಂದಿನ ಘಟನೆಗಳು, ನಿಂದನೆಯ ಮಾತುಗಳು, ಅನುಭವಿಸುತ್ತಿರುವ ಸಂಕಟಗಳೇ ಓಡುತ್ತಿದ್ದವು. ನನ್ನ ಭಾವಪ್ರಪಂಚದಲ್ಲಿ ನಾನಿದ್ದುಕೊಂಡು ನೆಪಕ್ಕಷ್ಟೇ ಎಂಬಂತೆ ಗೆಳತಿಯರೊಂದಿಗೆ ನಡೆಯುತ್ತಿದ್ದೆ. ಅವರಿಬ್ಬರೂ ಪರಸ್ಪರ ಮಾತನಾಡುತ್ತ ನಡೆಯುತ್ತಿದ್ದರು.
“ಸಂಜೆಯಾಗುತ್ತಿದೆ ಇನ್ನು ಹೊರಡೋಣವೇ?” ಆಗಲೆಂಬಂತೆ ತಲೆಯಾಡಿಸಿದೆ. ಗೆಳತಿಯರನ್ನು
ಅನುಸರಿಸಿಕೊಂಡು ಮುಖ್ಯದ್ವಾರದ ಬಳಿ ಬಂದೆ. “ನಿಮ್ಮನ್ನು ಹೊರಗೆ ಬಿಡಲಾಗದು” ಎಂದು ದ್ವಾರಪಾಲಕ ಕಡ್ಡಿ ಮುರಿದಂತೆ ನುಡಿದಾಗ ನಾನು ಅವಕ್ಕಾಗಿಬಿಟ್ಟೆ. ಥಟ್ಟನೆ ಗೆಳತಿಯರತ್ತ ತಿರುಗಿ ನೋಡಿದೆ. ಅಯ್ಯೋ ಅವರು ಅಲ್ಲಿರಲೇ ಇಲ್ಲ!
“ಎಲ್ಲಿ ಹೋದರು ನನ್ನ ಗೆಳತಿಯರು?” ಅವರು ಉತ್ತರ ನೀಡಲಿಲ್ಲ.
“ನನ್ನನ್ನೇಕೆ ಹೊರಗೆ ಬಿಡುವುದಿಲ್ಲ?”
“ನೀವು ಒಳಗೆ ಬರುವಾಗ ಫಲಕದಲ್ಲಿದ್ದ ಷರತ್ತುಗಳನ್ನು ಓದಲಿಲ್ಲವೇ?”
“ಯಾವ ಷರತ್ತು? ನಾನು ಯಾವುದನ್ನೂ ಓದಲಿಲ್ಲ. ಇಲ್ಲೇನು ನಡೆಯುತ್ತಿದೆ? ನನಗೊಂದೂ ಅರ್ಥವೇ ಆಗುತ್ತಿಲ್ಲ.”
“ನಿಮ್ಮ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ. ನಾನು ಗುರುವಿನ ಅಪ್ಪಣೆಯನ್ನಷ್ಟೇ ಪಾಲಿಸುತ್ತಿರುವೆ”
“ಯಾವ ಗುರು?”
“ಅದೋ ಅಲ್ಲಿ ಕುಳಿತಿದ್ದಾರೆ” ಎಂದು ಬೆರಳು ಮಾಡಿ ತೋರಿಸಿದತ್ತ ದೃಷ್ಟಿ ಹರಿಸಿದೆ. ಕ್ಷಣವನ್ನೂ ವ್ಯಯ ಮಾಡದೆ ಅವರ ಬಳಿ ಓಡಿದೆ.
“ಗುರುಗಳೇ ಏನಿದು? ಯಾರು ನೀವು? ನನ್ನನ್ನು ಇಲ್ಲೇಕೆ ಬಂಧಿಸಿಟ್ಟಿದ್ದೀರಿ? ದಯಮಾಡಿ ನನ್ನನ್ನು ಹೊರಗೆ ಕಳುಹಿಸಲು ನಿಮ್ಮ ದ್ವಾರಪಾಲಕರಿಗೆ ಹೇಳಿ” ಎಂದು ಅಂಗಲಾಚಿದೆ.
“ಮಗೂ ಹೀಗೇಕೆ ಬಡಬಡಿಸುತ್ತಿರುವೆ? ಯಾವ ಬಂಧನ? ಯಾವ ದ್ವಾರಪಾಲಕ?”
“ಅಲ್ಲಿ ನಿಂತಿದ್ದಾನಲ್ಲÁ ಆ ದೊಡ್ಡಗೋಡೆಯ ಬಳಿ.” ಎಂದು ದ್ವಾರಪಾಲಕನೆಡೆಗೆ ನೋಡಿದೆ. ಅವನು ಅಲ್ಲಿರಲಿಲ್ಲ! ಕಂಡದ್ದು ಬಹಳ ಎತ್ತರವಾದ ದೊಡ್ಡ ಗೋಡೆಯಷ್ಟೇ!!
“ಅಯ್ಯೋ ಗುರುಗಳೇ ಇದೇನಿದು? ನಾನು ನನ್ನ ಗೆಳತಿಯರೊಂದಿಗೆ ಬಂದೆ. ಆದರೀಗ ಅವರು ಕಾಣಿಸುತ್ತಿಲ್ಲ. ನಾನು ಇಲ್ಲಿಗೆ ಬಂದ ಆ ದೊಡ್ಡ ಗೇಟು? ಅದು ಎಲ್ಲಿದೆ?”
“ಮಗೂ ಇಲ್ಲಿ ಎಲ್ಲವನ್ನೂ ಅವರೇ ಹುಡುಕಿಕೊಳ್ಳಬೇಕು”
“ಹೀಗೆಂದರೆ ಹೇಗೆ?”
“ಇಲ್ಲದ ಗೋಡೆ- ಬಾಗಿಲನ್ನು ದಾಟಿಸಲಾದೀತೇ?”
“ನಾನು ನೋಡಿದ್ದೇನೆ?”
“ಹಾಗಾದರೆ ನಾನು ಸಹಾಯ ಮಾಡಬಲ್ಲೆ. ದಾರಿ ಕಂಡುಕೊಳ್ಳುವ ಪ್ರಯತ್ನವನ್ನು ನೀನೇ ಮಾಡಬೇಕು ಮಗು”
“ಆಗಲಿ ಗುರುಗಳೇ”
“ಮಗೂ ಇಲ್ಲಿಯ ಎಲ್ಲವೂ ಪ್ರತಿಕ್ಷಣವೂ ಬದಲಾಗುತ್ತಿರುತ್ತದೆ. ನೆನಪು ಮತ್ತು ಕಲ್ಪನೆ ಈ ಎರಡರಿಂದ ಬಳಲದೆ ಈ ಕ್ಷಣದಲ್ಲಿಯೇ ಇದ್ದು ನೋಡು. ಹಾಗಿದ್ದಲ್ಲಿ ಗೋಡೆಗಳು ನಿನ್ನ ದಾರಿಯಲ್ಲಿ ಗೋಚರವಾಗದ ಕಾರಣ ಇಲ್ಲದ ಗೋಡೆಗಳ ನಡುವೆ ಬಾಗಿಲನ್ನು ಹುಡುಕುವ ವ್ಯರ್ಥ ಪ್ರಯತ್ನದಲ್ಲಿ ನಿನ್ನ ಜೀವನ ವ್ಯಯವಾಗುವುದಿಲ್ಲ” ಎಂದ ಗುರುಗಳು ಅಲ್ಲಿಂದ
ಹೊರಟೇಬಿಟ್ಟರು.
ನನ್ನ ಎದುರಿಗೆ ಇದ್ದ ಗೋಡೆಯನ್ನು ಇಲ್ಲವಾಗಿಸುವ ಶಕ್ತಿ ನಿನ್ನೆಗಲ್ಲ, ನಾಳೆಗಲ್ಲ, ಈ ಕ್ಷಣಕ್ಕಿದೆ ಎಂದುಕೊಂಡು ಗಮನವಿರಿಸಿದೆ. ನನ್ನ ಮೊಗದಲ್ಲಿ ಸಂತಸದ ಅಲೆ ಮೂಡಿತು.