ಮೊದಲೇ ಕೆಂಡಬಿಸಿಲು. ಗಾಳಿ ದಿವಾಳಿ. ದೇವಾಲಯದ ಸುತ್ತಲು ಅಗ್ನಿಕುಂಡ. ಬೆವರು ಕತಕತ ಕುದಿದು ಚಿಲ್ಲನೇ ಚಿಮ್ಮುತ್ತಿದೆ.
ಆದರೆ ಪ್ರಚಂಡ ಭಕ್ತಿಯ ಮುಂದೆ ಯಾರೇನು? ಏನಾದರೇನು ?….
ಎಲ್ಲವೂ ಶಿವಶಿವಾ…..
ಅಬ್ಬಬ್ಬಾ….ಅಗೋ….ಆ ಉರಿಯುತ್ತಿರುವ ಕಿಚ್ಚಿನಲ್ಲಿ ಕರಿಯಣ್ಣ…. ಶಿವಶಿವಾ….. ಅಂತ ಕೂಗಿ ಹಾರಿಯೇಬಿಟ್ಟ! ಪಾದ ಸುಟ್ಟಿತು! ಕೈ ಸುಟ್ಟಿತು! ಮೈ ಸುಟ್ಟಿತು! ಶಿವನ ನೆನಪಿನ ಮುಂದೆ ಏನು ಸುಟ್ಟರೆ ಏನು ?…. ಎಲ್ಲಾ ಎಲ್ಲಾ ಶಿವಶಿವಾ…..
ಕೆಂಪಣ್ಣನೂ ಬಿಡಲಿಲ್ಲ. ಉದ್ದವಾದ ಹರಿತ ಶಸ್ತçವೊಂದನ್ನು ಬಲಕಿನ ಗಲ್ಲದಲ್ಲಿ ಚುಚ್ಚಿ ಎಡಕಿನ ಗಲ್ಲದಲ್ಲಿ ….. ಶಿವಶಿವಾ… ಅಂತ ಹಿರಿದೇಬಿಟ್ಟ! ಶಿವಶಿವಾ….ಚಿಕ್ಕಣ್ಣ ಬಿಟ್ಟಾನೆಯೇ ? ಶಿವನಿಗಾಗಿ ಎಡಗೈಯ ಒಂದು ಬೆರಳು ಕಚಕ್ಕಂತ ಕತ್ತರಿಸಿಯೇ ಒಗೆದ! ದೇವರು ಬರಲಿ…. ದೇವರು ಪ್ರತ್ಯಕ್ಷನಾಗಲಿ…. ಅಂತ ದೇವಣ್ಣ ಎರಡು ತಿಂಗಳ ಅನ್ನ-ನೀರು ಬಿಟ್ಟು…. ಶಿವಶಿವಾ…. ಅನ್ನುತ್ತ ಗಾಳಿಯಲ್ಲಿ ಗಾಳಿಯನ್ನೇ ಕುಡಿದು ಉಪವಾಸ ಬಿದ್ದ!
ಕೆಂಚರಾಜ…. ಮದ್ದಾನಯ್ಯ….. ಸಿಂಗಾರೆವ್ವ….. ಶಂಕ್ರಮ್ಮ….. ಹoಪಮ್ಮ…. ಚಲುವಣ್ಣ….. ಎಲ್ಲರೂ ಶಿವನಿಗಾಗಿ ಸಾವಿರ ಮೈಲು ದೂರದ ಕಾಶಿಕ್ಷೇತ್ರಕ್ಕೆ ದೀಡ ನಮಸ್ಕಾರ, ದಿಂಡೂರ್ಕಿ ನಮಸ್ಕಾರ ಹಾಕುತ್ತಲೇ ಹೋಗಿಬಂದರು. ಕೈಲಾಸದಲ್ಲಿ ಪಾರ್ವತಿ ಸಿಟ್ಟಾದಳು. ಶಂಕರನ ಟೊಂಕಕ್ಕೆ ಕಚಕ್ಕನೇ ತಿವಿದು ಹೇಳಿದಳು- “ಏನ್ರಿ…. ಏನಿದು….. ನಿಮಗೆ ಬುದ್ದಿಗಿದ್ದಿ ಇದೆಯೋ ಇಲ್ಲವೋ….. ನಿಮಗಾಗಿ ಕಿಚ್ಚು ಹಾರುತ್ತಾರೆ….. ಪರ್ವತದಿಂದ ಜಿಗಿದು ಸಾಯುತ್ತಾರೆ….. ಅಗೋ…. ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಕೂಸನ್ನೇ ನಿಮಗಾಗಿ ಗಂಗಾನದಿಯಲ್ಲಿ ಎಸೆಯುತ್ತಿದ್ದಾರೆ….. ಕಣ್ಣು ಕಿತ್ತು ಚಲ್ಲುತ್ತಾರೆ…. ಕೈ ಕಡಿಯುತ್ತಿದ್ದಾರೆ….. ತಮ್ಮ ಚರ್ಮವನ್ನೇ ನಿಮ್ಮ ಮುಂದೆ ಸುಲಿಯುತ್ತಿದ್ದಾರೆ. ಇಂಥಾ ಇಂಥಾ ಮಹಾದ್ಭುತ ಭಕ್ತರಿಗೆ ನೀವು ಪ್ರತ್ಯಕ್ಷ ಆಗದಿದ್ದರೆ ನೀವೆಂಥಾ ಶಿವಾ…. ಬರೀ ಶವಾ…. ಹೋಗಿ…. ಉಳಿಸಿ ಅವರನ್ನು…. ಕೇಳಿದ್ದು ಕೊಟ್ಟು ನಿಮ್ಮ
ಮಾನಾ ಉಳಿಸಿಕೊಳ್ಳಿ…..ಇಲ್ಲಾ ಅಂದ್ರ ನನ್ನ ರಾಜಿನಾಮೆ ತೊಗೋಳ್ರಿ…..”
ಶಿವ ಕುಲುಕುಲು ನಕ್ಕು ಹೇಳಿದ- “ಪ್ರಿಯೇ….ಪಾರ್ವತಿ….ಜಾಣಿ…. ನಿನ್ನ ಕರುಣೆಗೆ ಕೊನೆಯಿಲ್ಲ…. ಆದರೆ ನನಗಾಗಿ ಸಾಯುತ್ತಿರುವ ಈ ಜನಾ ಎಂಥಾ ಡೇಂಜರಸ್ ಅನ್ನುವದು ನನಗೆ ಗೊತ್ತಿದೆ….. ಅವರು ಉಪವಾಸ
ಇದ್ದು ಉಪವಾಸ ಸಾಯುವದೇ ಮೇಲು…. ಅದೇ ಸುಖ ಅವರಿಗೆ….. ಅವರಿಗೆ ಕೂಳು ಕೊಟ್ಟು ನೋಡು….. ನಿನ್ನನ್ನೇ ಹೊತ್ತುಕೊಂಡು ಹೋಗುತ್ತಾರೆ…..” ಗಿರಿಜೆ ಕೆಂಡಕಿಡಿ ಆದಳು. “ನೀವು ಶಿವಾ ಅಲ್ಲಾ….. ಕ್ರೂರ ಶವಾ!
ನಿಷ್ಕರುಣಿ…. ನಿರ್ಮೋಹಿ…. ಮೇಲೆ ತನ್ನವರೆಂದಡೆ ಕೂಗಿಡಿಸಿ ಕಾಡುವ….. ಅಂತ ನಮ್ಮ ರಾಘವಾಂಕ ಮಹಾಕವಿ ಸೋಮನಾಥ ಚಾರಿತ್ರö್ಯದಲ್ಲಿ ಹೇಳಿದ್ದು ಖರೇ ಆತು! ಇಂದು ಈ ಭಕ್ತೋತ್ತಮರಿಗೆ ವರದಾನ ಕೊಟ್ರೀ
ಭೇಸಿ…. ಇಲ್ಲಾ ಅಂದ್ರ….. ನಾನೇ ನಾನೇ ಭಯೋತ್ಪಾದಕಳು ಆಗ್ತೀನಿ…..
ಹುಷಾರಿ….. ಹುಷಾರಿ……”
ಶಿವ ತಕ್ಷಣ ಪಾರ್ವತಿಯ ಕೈ ಹಿಡಿದು…. “ವೇಟ್…. ವೇಟ್…… ಪಾರ್ವತಿ ಶಾಪಾ ಕೊಡಬೇಡ ….ತಡಿ….. ಇಗೋ ಕೊಟ್ಟೆ….ಕೊಟ್ಟೇಬಿಟ್ಟೆ…..” ಅಂತ ಢಮಢಮ ಢಮಢಮ ಬಾರಿಸಿಯೇ ಬಿಟ್ಟ….. ಪರ್ವತಗಳು ನಡುಗಿದವು! ಸಮುದ್ರಗಳು ಉಕ್ಕೇರಿದವು! ನಕ್ಷತ್ರಗಳು ಚಿಮ್ಮಿದವು!
ಅದೇ ದಿನ ಶಿವನ ಕಠೋರ ಆಜ್ಞೆಯ ಮೇರೆಗೆ ಆ ದೇಶದ ಚಕ್ರವರ್ತಿ ಆ ಮಹಾದ್ಭುತ ಭಕ್ತರಿಗೆ….. ಒಬ್ಬೊಬ್ಬರಿಗೆ ಒಂದೊAದು ನೂರು ಎಕರೆ ಫಲವತ್ತಾದ ಭೂಮಿ ಕೊಟ್ಟ. ಮಳೆ ಕೊಟ್ಟ. ಬೆಳೆ ಕೊಟ್ಟ. ಪುರುಮಾಶಿ
ಸಂಪತ್ತು ಕೊಟ್ಟ……
ಒಂದು ವರ್ಷ ಕಳೆದಿರಲಿಲ್ಲ. ಕರಿಯಣ್ಣ ತನಗೆ ದೊರೆತ ಆ ಒಂದು ನೂರು ಎಕರೆ ಪ್ಲಾಟುಮಾಡಿ ಯದ್ವಾತದ್ವಾ ರೇಟಿಗೆ ಮಾರಾಟಕ್ಕೆ ಇಟ್ಟ. ಕೆಂಪಣ್ಣ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಿಸಿದ. ಚಿಕ್ಕಣ್ಣ ಸಾವಿರ ಮನೆಗಳನ್ನು ಕಟ್ಟಿಸಿ ಭಾಡಿಗಿಗೆ ಭರ್ತೀ ರೇಟಿಗೆ ಕೊಟ್ಟ. ದೇವಣ್ಣ ಇನ್ನೂ ಜಾಣ ….. ಭಾರೀ ಸ್ಟಾçಂಗ್ ಆಗಿ ಫಾಯಿವ್ ಸ್ಟಾರ್ ಹೊಟೇಲ್- ಕಮ್- ಹೈಟೆಕ್ ನೈಟ ಕ್ಲಬ್….. ಕಮ್- ಬಾರ್ ಪೆರಲಾರ್ ಮಾಡಿಬಿಟ್ಚ!
ಶಿವನ ಪರಮಾದ್ಭುತ ಭಕ್ತೆಯರೂ, ಬೆಳ್ಳಂಬಿಳಿಯ ಬಟ್ಟೆ ಧರಿಸಿದವರೂ, ಕಾವಿ ಉಟ್ಟವರೂ ಆದ ಸಿಂಗಾರೆವ್ವ, ಹಂಪವ್ವ, ನಿಂಗವ್ವ, ನೀಲವ್ವ, ಸತ್ಯವ್ವ, ಸಾವಿತ್ರೆವ್ವ, ಮಾಯಾದೇವಿ ಎಲ್ಲರೂ ಶಿವನ ಗುಡಿಯಿಂದ ಭಕ್ತಿಯಿಂದ ಓಡಿ ಬಂದು, ಒಬ್ಬೊಬ್ಬ ಪುಂಡ ಪಡುವಲ ಭಕ್ತನನ್ನು ಖಾಯಂ ಆಗಿ ಉದ್ಧಾರ ಮಾಡಿ ಸುಖ ಸಂಸಾರ ಹೂಡಿ ಆದರ್ಶ ಮೆರೆದರು. ನವ್ಯಾತಿನವ್ಯ ಬಂಗಲೆ ಕಟ್ಟಿಸಿಕೊಂಡು, ನೂರಾರು ಪ್ಲಾಟು ಖರೀದಿಸಿ, ಒಂದು ರೂಪಾಯಿಗೆ ಒಂದು ಸಾವಿರ ಪಟ್ಟು ಲಾಭ ಲಪಟಾಯಿಸಿ, ಮಿರಿಮಿರಿ ಮಿಂಚುವ ಬಣ್ಣದ ಕಾರಿನಲ್ಲಿ ಜಗದೋದ್ಧಾರಕ್ಕಾಗಿ ಸುಜ್ಞಾನದ ಬೆಳಕು ಹರಡುತ್ತ ಸಂಚರಿಸತೊಡಗಿದರು.
ಜಿರ್ಲಿ-ಪುರ್ಲಿ ವ್ಯಾಪಾರ ಮಾಡುವ ಭಕ್ತೋತ್ತಮರು ಕೋಟ್ಯಾಂತರ ವ್ಯವಹಾರಗಳ ಚೀಟಿ-ಲಾಟರೀ ಇಂಡಸ್ಟಿçà ಗಳನ್ನು ಹುಟ್ಟು ಹಾಕಿದರು. ಇನ್ನು ಕೆಲವರು ಜಾಣರು…. ನೂತನ ಶೈಲಿಯ ಏಜನ್ಸೀ ಆರಂಭಿಸಿ…. ಭಾಡಿಗೆ ಮನೆ ಕೊಡಿಸಿದರೆ ಐದು ಸಾವಿರ….. ಪ್ಲಾಟು ಕೊಡಿಸಿದರೆ ಐವತ್ತು ಸಾವಿರ….. ಮನೆ ಕೊಡಿಸಿದರೆ ಒಂದು ಲಕ್ಷ….. ಏಜನ್ಸೀ ಹೊಡೆಯತೊಡಗಿದರು.
ಹೆರಿಗೆ ಮಾಡಿಸಲೂ ದುಡ್ಡು, ಸ್ಮಶಾನಕ್ಕೂ ದುಡ್ಡು, ದೇವರ ಪ್ರಸಾದದ ಕಾಂಟ್ರಾಕ್ಟ ಕೊಡಿಸಲೂ ದುಡ್ಡು!
ಕೆಲವರು ಶಿವನ ಹೆಸರಿನಿಂದ ಸೂಪರ್ ಟೆಕ್ ಶೈಲಿಯಲ್ಲಿ ….”ಓಂಶಿವ
ಶಾoತಾನoದ ಆಶ್ರಮ” ಕಟ್ಟಿ, ಒಬ್ಬೊಬ್ಬರಿಂದ ಶ್ರೀ ಶಿವನ ಪ್ರತ್ಯಕ್ಷ ದರ್ಶನಕ್ಕಾಗಿ ಹತ್ತು- ಇಪ್ಪತ್ತು- ಮೂವತ್ತು ಲಕ್ಷ ಕೀಳತೊಡಗಿದರು. ಒಂದು ದಿನ ಸ್ವಯಂ ಪಾರ್ವತಿದೇವಿ ಭಿಕ್ಷÄಕಿಯ ಗುಪ್ತ ವೇಷ ಧರಿಸಿ….. ಕರಿಯಣ್ಣನ ಮನೆಗೆ ಬಂದು ಭಿಕ್ಷೆ ಬೇಡಿದರೆ…. ಕರಿಯಣ್ಣ ಹೇಳಿದ-
“ಲೇ ಹುಡಿಗಿ….. ನೀ ನಮ್ಮ ಮನೇಲಿ ಮುಸುರಿ ತಿಕ್ಕು……” ಪಾರ್ವತಿ ಕೇಳಿದಳು- “ಏನು ಪಗಾರ ಕೊಡ್ತೀರಿ ಧಣೀ….?”
ಕರಿಯಣ್ಣ ಹೇಳಿದ- “ರಾತ್ರೀ ಉಳಿದ ಎಲ್ಲಾ ಮುಸುರೀ ಪುಕ್ಕಟೆ ಕೊಡ್ತೇನಿ. ಮ್ಯಾಲ ವರ್ಷಕ್ಕ ಯಾಡ್ಡ ಹಳೇ ಸೀರಿ. ಸಾಕಾ….?”
ಪಾರ್ವತಿ ಕೆಂಡಕಿಡಿಯಾಗಿ ಚಿಂಗೆದ್ದು ಚೀರಿದಳು- “ಲೇ ಬದ್ಮಾಷ್….. ನಾಯಾರು ಗೊತ್ತೋ ನಿನಗೆ ?” ಕರಿಯಣ್ಣ ಅರಚಿದ- ” ನೀ ಯಾರಿದ್ರೇನು? ಇಲ್ಲಿ ನಮ್ಮ ಬಾಗಲಕ್ಕ ನೀ ಅಷ್ಟ ಅಲ್ಲಾ….. ಆ ಮ್ಯಾಗಿನ ಶಿವಾ ಬಂದ್ರೂ ನಾ ಕೊಡೂ ಕೂಲಿ ಇಷ್ಟೇ. ಬೇಕಾದ್ರ ಬಾ….. ಸಾಕಾದ್ರ ಹೊಂಟೆದ್ದ ಹೋಗು…..” ಗಿರಿಜೆ ಚಿಟ್ಟನೇ ಚಿಂಗೆದ್ದು ಚೀರಿ, ಕೈಲಾಸಕ್ಕೆ ಪಟ್ಟನೇ ಹಾರಿ,
ಶಿವನನ್ನು ವಕ್ಕರಿಸಿ ಇಕ್ಕರಿಸಿ ಕಚಕ್ಕನೇ ತಿವಿದು ಹೇಳಿದಳು- “ಶಿವನೇ….. ಶಿವನೇ….. ಸುಟ್ಟುಬಿಡು ಅವರನ್ನು….
ಸುಟ್ಟುಬಿಡು….” ಶಿವನೆಂದ- “ಪ್ರಿಯೇ….ಪ್ರಾಣಪ್ರಿಯೇ…. ಅವರೆಲ್ಲ ಏರ್ ಕಂಡೀಶನ್ಡ ಮನೆ….ಏಸಿ ಕಾರಿನಲ್ಲಿ ಸುಖವಾಗಿ ಇರುವ ವ್ಹಿಯಾಯ್ಪಿ ಭಕ್ತರು. ನಾನು ಸುಡಬೇಕೆಂದರೆ ಅವರಿಗೆ ಪೋಲೀಸ ಪ್ರೊಟೆಕ್ಶನ್ ….ಲೀಗಲ್ ಪ್ರೊಟೆಕ್ಶನ್ ಇದೆ. ಅವರು ನನ್ನನ್ನೇ ಬಂದೀಖಾನೆಗೆ ಅಟ್ಟುತ್ತಾರೆ. ಸಾರಿ…. ಪ್ರಿಯೇ…ಸಾರಿ…. ಅವರೆಲ್ಲ ನನ್ನ ಭಕ್ತರು….. ಇಂಥವರೇ ಅಲ್ಲವೇ ನನ್ನ ನಿಜವಾದ ಹೈಟೆಕ್ ಭಕ್ತರು ಕಣೇ…..?” ಪಾರ್ವತಿ ಹಣಿಹಣಿ ಜಜ್ಜಿಕೊಂಡು, ಶಿವನ ಕೈಯ್ಯ ಡಮರುಗವನ್ನು ಕಿತ್ತು ಭರ್ರನೇ ಬೀಸಾಕಿಬಿಟ್ಟಳು!