ತೀರಾ ಪೋಲಿ ಗಂಡಸರAತೆ ಆ ಹುಡುಗಿಯನ್ನು ಒಲಿಸಿಕೊಳ್ತೀನಿ ಅಂತ ಬೆಟ್ ಕಟ್ಟಿ ನಿನ್ನ ಬೆನ್ನ ಹಿಂದೆ ಬಿದ್ದು ನಿನ್ನ
ಒಲಿಸಿಕೊಂಡವನಲ್ಲ ಬಿಡು ನಾನು. ಪ್ರೀತಿ ಅನ್ನುವ ಭಾವವೊಂದು ಹೇಳ ಹೆಸರಿಲ್ಲದೆ, ಹೃದಯದ ಕವಾಟಿಗೆ ಬೀಗ ಜಡಿದು ಕೂತಿದ್ದ ಅಲೆಮಾರಿ ನಾನು. ತಂಗಾಳಿಯoತೆ ನೀನೇ ನನ್ನ ಬಾಳಲ್ಲಿ ಬಂದು, ಪ್ರೀತಿ, ಪ್ರೇಮ, ಕಾಳಜಿಯ ನವಿರು ಭಾವಗಳ ಪರಿಚಯಿಸಿದವಳು. ಇತರರಂತೆ ನನ್ನ ಲೋಪ ದೋಷಗಳನ್ನಷ್ಟೇ ಎತ್ತಿ, ಆಡಿ, ಕಾಲೆಳೆಯದೆ, ನನ್ನಲ್ಲಿರಬಹುದಾದ ಸಣ್ಣ ಪುಟ್ಟ ಒಳ್ಳೆಯ ಗುಣಗಳನ್ನು ಗುರುತು ಹಿಡಿದು ಹೊಗಳಿ ಅಟ್ಟಕ್ಕೇರಿಸುತ್ತಿದ್ದವಳು. ‘ಎಷ್ಟು ಮಾಡಿದರೂ ಜನ ಇಷ್ಟೇ ಬಿಡು’
ಎಂದು ಹೇಗೆ ಬೇಕೋ ಹಾಗೆ ಅಬ್ಬೇಪಾರಿಯಂತೆ ಬದುಕುತ್ತಿದ್ದವನನ್ನು ‘ಹೀಗೆ ಮಾಡು’ ಎಂದು ತಿದ್ದುತ್ತಾ ಜೀವನಕ್ಕೆ ಹೊಸ ಬಣ್ಣ ಹಚ್ಚಿದವಳು ನೀನು.
‘ನೀನು-ಎನ್ನುವ ಬೆರಗೊಂದು ಹೀಗೆ ನನ್ನ ಬದುಕಲ್ಲಿ ಬಂದು ನನ್ನೆದುರು ಕೈ ಚಾಚಿ ನಿಲ್ಲಬಹುದು ಎಂದು ಊಹಿಸಿಯೇ ಇರಲಿಲ್ಲ. ಯಾರೋ ಅವಿವೇಕಿಯೊಬ್ಬಳನ್ನು ಪ್ರೀತಿಸಿ, ಅವಳ ಕೈಗೊಂಬೆಯಾಗಿ ಅವಳ ತಾಳಕ್ಕೆ ಕುಣಿಯುವ ತೊಗಲುಗೊಂಬೆಯoತಿದ್ದ ನನ್ನನ್ನು ಇನ್ನೊಂದು ಚಂದದ ಗೊಂಬೆ ಸಿಕ್ಕಿತ್ತು ಎಂದು ಸೂತ್ರ ಹರಿದು ಹೋದವಳ ನೆನೆಯುತ್ತಾ, ಕುಡಿತಕ್ಕೆ ದಾಸನಾಗಿದ್ದ ಈ ದೇವದಾಸನನ್ನು, ಪ್ರೀತಿಯಿಂದ ಮೇಲೆತ್ತಿ, ನೇರ ನಿನ್ನೆದೆಯ ಒಲವ ಸುರಿದು, ಆ ಪ್ರೇಮ ಸುಧೆಯಲ್ಲಿ ಮತ್ತೆ ನನ್ನನ್ನು ಮನುಷ್ಯನಾಗಿ ಮಾಡಿದವಳು ನೀನು! ಹಾಗೊಂದು ಒಲವು ಬಲಗಾಲಿಟ್ಟು ಹೃದಯದ ಒಳಗೆ ಬಂದ ಘಳಿಗೆ, ಅಲ್ಲಲ್ಲಿ ಗೂಡು ಕಟ್ಟಿ ಕೂತಿದ್ದ ಹಳೆಯ ನೆನಪುಗಳೆಂಬ ಪಳಿಯುಳಿಕೆಗಳ ಹೇಳ ಹೆಸರಿಲ್ಲದೆ ಗುಡಿಸಿ ಎಸೆದಿದ್ದೆ. ಒಲವ ರಂಗೋಲಿಯಲ್ಲಿ ಭಾವಗಳ ಬಣ್ಣ ತುಂಬುತ್ತಾ, ಕಣ್ಣ ತುದಿಗೆ ಸುಂದರ ಕನಸುಗಳ ತುಣುಕನಿಟ್ಟೆ. ಕನಸೇ ಕಾಣ ಬಯಸದ ಬರಡು ಮನಸ್ಸು, ಅಸಲಿಗೆ ಬದುಕಲು ಕೆಲಸಕ್ಕೆ ಬಾರವು ಎಂದು ಎಲ್ಲೆಂದರಲ್ಲಿ ಎಸೆದಿದ್ದ ಕನಸುಗಳನ್ನೆಲ್ಲಾ ನೀನು ಒಂದೊoದೇ ಹೆಕ್ಕಿ, ಒಟ್ಟು ಮಾಡಿ, ಬೆರಳು ಮಡಚಿ, ಲೆಕ್ಕ ಇಟ್ಟು, ಆಸೆಗಳ ಕಾಮನಬಿಲ್ಲನ್ನು
ಎಳೆದು ಬಾಗಿಸಿ, ಕನಸುಗಳನ್ನು ಪೋಣಿಸಿ ತವಕಿಸುತ್ತಿದ್ದೆ. ಒಂದೊoದೇ ಕನಸನ್ನು ನನಸು ಮಾಡುತ್ತಾ ಸ್ವರ್ಗಕ್ಕೆ ಕಿಚ್ಚು ಹಚ್ಚು ಎಂದು ಹುರಿದುoಬಿಸಿದವಳು.
ದೇವಲೋಕದಿಂದ ಬಂದ ಅಪ್ಸರೆಯಂತೆ ಇಬ್ಬರೂ ಕೂಡಿ ಕಂಡ ಕನಸುಗಳ ಮೆಟ್ಟಿಲನ್ನು ಒಂದೊoದಾಗಿ ಕೈ ಹಿಡಿದು ಮೆಲ್ಲ ಮೆಲ್ಲನೆ ಏರಿಸಿ, ಹತ್ತುವ ಕಾಲುಗಳಿಗೆ ಕಸುವು ತುಂಬಿ, ಮುಂದಡಿ ಇಡುವ ಧೈರ್ಯ ನೀಡಿ,
ಮತ್ತೆ ಬದುಕಿನ ದಾರಿಗೆ ಹಚ್ಚಿದವಳು. ಹೀಗೆ ಕಂಡ ಕನಸುಗಳೆಲ್ಲಾ ಒಂದೊAದಾಗಿ ನನಸಾಗುತ್ತಿರುವ ಹೊತ್ತಿನಲ್ಲೇ ನೀನು ಥೇಟ್ ಆ ಮಾಯಾವಿಯಂತೆ ಇದ್ದಕ್ಕಿದ್ದ ಹಾಗೆ ಮಾಯವಾದೆ ಏಕೆ ಹುಡುಗಿ? ಎಲ್ಲಾ ಸರಿ ಇದೆ ಎಂದು ನಾನು ಅಭಿಮಾನದಿಂದ ಎದೆಯುಬ್ಬಿಸಿ ಬೀಗುವ ಹೊತ್ತಲ್ಲೇ, ಲೆಕ್ಕ ತಪ್ಪಿದ್ದು ಯಾಕೆ? ಎಲ್ಲವೂ ನೀನೆಣಿಸಿದಂತೆ ನಡೆಯುತ್ತಿರುವಾಗ,
ಹೀಗೆ ಹೇಳ ಹೆಸರಿಲ್ಲದೆ ನನ್ನ ಕೈ ಬಿಟ್ಟು ನಡೆದಿದ್ದೆಲ್ಲಿಗೆ?
ನನ್ನಂಥವನನ್ನ ಪ್ರೀತಿಸೋಕ್ಕೆ ಏನು ಕಾರಣ ಅಂತ ದೇವತೆಯoಥ ನಿನ್ನಲ್ಲಿ ಅದೆಷ್ಟೋ ಬಾರಿ ಕೇಳಿದ್ದಿದೆ. ಆಗೆಲ್ಲಾ ನೀನು ದಿವಿನಾಗೊಮ್ಮೆ ನಕ್ಕು ಸುಮ್ಮನಾಗಿ ಬಿಡುತ್ತಿದ್ದೆ. ಪ್ರೀತಿಸೋಕ್ಕೆ ಕಾರಣ ಬೇಕಿಲ್ಲ ಬಿಡು. ಆದರೆ ನನ್ನ ಹೀಗೆ ಬಿಟ್ಟು ಹೋಗೋಕ್ಕೆ ಏನು ಕಾರಣವೇ? ನನಗೊಂದು ವರದಂತೆ ಬಂದ ದೇವತೆ ನೀನು. ಬಿಟ್ಟು ಹೋಗುವಾಗ ನಿನ್ನ ಶಾಶ್ವತವಾಗಿ ಮರೆತುಬಿಡುವ ಶಾಪವನ್ನಾದರೂ ಕೊಟ್ಟು ಹೋಗಬಾರದಿತ್ತೇ? ಈಗ ನೋಡು ಮರೆಯುವುದನ್ನು ಹೊಸದಾಗಿ ಕಲಿಯಬೇಕಿದೆ. ಬೇಡ…ಬೇಡ…ಮರೆಯುವ ಭರದಲ್ಲಿ ನಿನ್ನ ನೆನಪುಗಳೂ ಸೋರಿಹೋಗಿ ಬಿಟ್ಟರೆ! ಇರಲಿ ಬಿಡು.… ನೆನಪುಗಳಾದರೂ ನನ್ನ ಉಸಿರಿಗೆ ಕೊಂಚ ಬಿಸುಪನ್ನು ತುಂಬೀತು. ಉಸಿರಿಗೆ ಕೊಂಚ ಕಸುವು ನೀಡೀತು ಎಂದು ಸಾಕಿದ ನೆನಪುಗಳೇ ಸಂಜೆ ಕಳೆಯುತ್ತಲೇ ನೆದರ ಮುಂದೆ ಬಂದು ಕಣ್ಣೆವೆಗಳು ಕೂಡದಂತೆ ಕಾಡುತ್ತವೆಯಲ್ಲಾ, ಆಗಲೇ ನೋಡು ಮರೆವು ಎನ್ನುವ ಶಾಪವಾದರೂ ವರವಾಗಿ ಸಿಗಬಾರದಿತ್ತೇ ಅನಿಸೋದು. ಯಾಕೆಂದರೆ, ಮರೆವು ನಿನ್ನ
ನೆನಪುಗಳಷ್ಟು ಕ್ರೂರಿ ಅಲ್ಲ ಬಿಡು.
ಹುಚ್ಚನ ಥರ ಮಾತಾಡ್ತೀನಲ್ವಾ? ಏನು ಮಾಡಲಿ ಹೇಳು. ನೀ ಹೀಗೆ ನಡೆಯುವ ಮುನ್ನ ಒಂದೋ, ನಿನ್ನ ಬಿಟ್ಟು ಜೀವಿಸೋದು ಕಲಿಸಿ ಹೋಗಬೇಕಿತ್ತು. ಇಲ್ಲಾ ಮರೆಯುವಂತೆ ಶಪಿಸಬೇಕಿತ್ತು. ನನ್ನ ದೇವತೆ ನೀನು. ನಿನ್ನ ಈ ಭಕ್ತನ ಮೇಲೆ ಇಷ್ಟಾದರೂ ಕರುಣೆ ತೋರಿಸ ಬೇಕಿತ್ತು. ನೋಡು, ಈಗ ನೀನಿಲ್ಲದೆ ನಾನು ಮತ್ತದೇ ಅಬ್ಬೇಪಾರಿಯಂತಾಗಿದ್ದೇನೆ ಎoದು ಜನ ಮುಸಿ ಮುಸಿ ನಗುತ್ತಾರೆ. ಮತ್ತೆ ಅದೇ ಹಳೆಯ ನನ್ನಗುಣಗಳನ್ನು ಎತ್ತಿ, ಆಡಿ,ಏನಂತೆ ಯಾಕಂತೆ ಎಂಬ ಅಂತೆ-ಕಂತೆಗಳಿಂದ ವಾಸಿಯಾಗಿದ್ದ ಗಾಯಗಳ ಗುರುತಿಗೆ ಗೆರೆ ಕೊರೆಯುತ್ತಿದ್ದಾರೆ.
ಅವರಿಗೇನು ಹೇಳಲಿ? ನೀನಿಲ್ಲದೆ ನಿಟ್ಟುಸಿರಿಟ್ಟ ಘಳಿಗೆಗಳ, ನಿಡುಸುಯ್ದ ರಾತ್ರಿಗಳ ಲೆಕ್ಕ ಯಾರಿಗೆ ಹೇಳಲಿ? ನೀನು ಬಂದ ಮೇಲೆ ಬರೀ ಸಂಭ್ರಮಿಸೋದನ್ನೇ ಕಲಿತ ಈ ಹೃದಯಕ್ಕೆ ಈಗ ಈ ನೋವಿನ
ಪರಿಚಯವ ಮಾಡಿಕೋ ಎಂದು ಹೇಳಲೆ? ಸರಿನಾ ನೀನು ಮಾಡಿದ್ದು? ಹೋಗುವುದೇ ನಿಜವಾಗಿದ್ದರೆ, ನನ್ನ ಬದುಕಲ್ಲಿ ಬಂದಿದ್ದು ಯಾಕೆ? ಒಂದು ಗಾಯ ಸಾಲದಾಗಿತ್ತು ಅಂತಲೇ? ಹೋಗಲಿ ಬಿಡು… ಬಾಳ ದಾರಿಗೆ ಬೆಳದಿಂಗಳನು ಚೆಲ್ಲಿ ದೂರವಾದವಳ ಮೇಲೆ ದೂರಲಿ ಏನು? ನೀನಿದ್ದಷ್ಟೂ ದಿನವೂ ಬೆಳದಿಂಗಳು ಇದ್ದುದ್ದಂತೂ ನಿಜವೇ.
ನಿನ್ನಿಷ್ಟದ ಕಡಲ ಮುಂದೆ ನಿಂತಿದ್ದೇನೆ. ‘ಎಷ್ಟು ಚಂದ ಅಲ್ವಾ?’ ಎಂದು ಬೆರಳು ಚಾಚಿ ತೋರಿಸಿ ಚಪ್ಪಾಳೆ ಹಾಕಿ ನೋಡಿ ನಲಿದ ಅದೇ ಕಡಲು ಇಂದ್ಯಾಕೋ ನೀರಸ. ಅದೂ ಕೂಡ ನಿನ್ನ ಅನುಪಸ್ಥಿತಿಯ ನೆನಪಲ್ಲಿ ಸೊರಗಿದಂತಿದೆ.…ನಾವು ಕೈಕೈ ಹಿಡಿದು, ಹೆಜ್ಜೆಗೆ ಹೆಜ್ಜೆ ಸೇರಿಸಿ ನಡೆವಾಗ ಸಂತೋಷದಿoದ ಉಬ್ಬಿ ಬರುತ್ತಿದ್ದ ಅಲೆಗಳು ಈಗ ನರ್ತಿಸುತ್ತಿಲ್ಲ. ಸಾಗರದ ಮೇಲೆ ತೇಲಿ ಬಂದ ತಂಪೆರೆವ ತಂಗಾಳಿ, ಬಿರುಸಾಗಿದೆ. ಮನಸ ತುಂಬಿದ ನೋವಿನ ಅಲೆಗಳೋ, ಎದುರಿನ ಸಾಗರದಲೆಯೊಡನೆ ಪೈಪೋಟಿಗೆ ಬಿದ್ದಂತೆ ಒಂದರ ಮೇಲೊಂದರoತೆ ಜಾರುತ್ತಿವೆ.
ಅಂದು ಎದೆಯಾಳದವರೆಗೂ ನನ್ನ ಕೈ ಹಿಡಿದು ಬಂದಿದ್ದ ನಿನ್ನನ್ನು, ಕಾಲುಗಳಡಿಯಲ್ಲಿ ಕಚಗುಳಿ ಇಟ್ಟು, ಕಾಲು ಸಡಲಿಸಿ, ಬೇಕು ಬೇಕೆಂದೇ ನನ್ನೆದೆಗೆ ತಂದು ಅಪ್ಪುತ್ತಿದ್ದ ಅಲೆಗಳಿಗೆ ಇಂದೇಕೋ ಆ ತುಂಟತನವಿಲ್ಲ. ಎದೆಯ ಮೀರಿ ನಿಂತ ಅಲೆಗಳಿಗೂ ಎದೆಯಾಳದ ನಿನ್ನ ವಿರಹದ ಬೇಗೆಯನ್ನು ತಣಿಸಲಾಗುತ್ತಿಲ್ಲ. ವಿರಹದ ಸುಳಿಯಲ್ಲಿ ಸಿಲುಕಿ, ನಿನ್ನ ನೆನಪಿನಾಳ ಬಂಧಿಯಾಗಿರುವ ನನಗೆ ಈ ಸಾಗರದಾಳ ಏನೇನೂ ಅಲ್ಲ ಎಂದು ಹೇಗೆ ಹೇಳಲಿ? ಇನ್ನೊಂದಿಷ್ಟು ಮುಂದಕ್ಕೆ ಹೋಗಲೇ? ಹೌದಲ್ಲಾ, ಜೀವನ ಪೂರ್ತಿ ಜೊತೆಜೊತೆಯಲ್ಲಿ ನಡೆಯುವ ಆಣೆ ಇತ್ತವರು ನಾವು, ಈಗ ಹೆಜ್ಜೆ ಹಿಂದು ಮುಂದಾಗಿದ್ದು ಹೇಗೆ? ನಿನ್ನ ಹಾಗೆ ನನ್ನ ಈ ಒಂಟಿತನಕ್ಕೂ ಸಾವು ಕೊಟ್ಟು ಹೋಗಬಾರದಿತ್ತೇನೇ? ನನ್ನ ಉಸಿರಲ್ಲಿ ಉಸಿರಾಗಿದ್ದ ನೀನು, ಉಸಿರು ಚೆಲ್ಲುವ ಮುನ್ನ, ಒಂದೇ ಒಂದು ಬಾರಿ ಯೋಚಿಸಬಾರದಿತ್ತೆ, ನೀನಿಲ್ಲದೆ ನನಗೇನಿದೆ?