ಮೊನ್ನೆ ಭದ್ರಾವತಿಗೆ ಹೋಗಿದ್ದಾಗ ಗೆಳೆಯ ದಶರಥ ಸಿಕ್ಕಿದ್ದ. ಹೀಗೆ ಕುಶಲೋಪರಿ ಮಾತನಾಡುತ್ತಿದ್ದಾಗ “ಪತ್ರಿಕೆಯಲ್ಲಿ ಬರೆಯುತ್ತಿರುವ ವ್ಯಂಗ್ಯಚಿತ್ರ ನೋಡುತ್ತಿರುತ್ತೇನೆ. ನಮ್ಮ ಸುತ್ತ-ಮುತ್ತಲ ನಡೆಯುವ ಘಟನೆಗಳನ್ನು, ವಾಸ್ತವ ಸನ್ನಿವೇಶಗಳನ್ನು ಆಯ್ಕೆ ಮಾಡಿ ತುಂಬಾ ಚೆನ್ನಾಗಿ ಬರೆಯುತ್ತೀಯ. ಖುಷಿಯಾಯ್ತು. ನಿನಗೆ ಹಾಸ್ಯ ಅಂದರೆ ತುಂಬಾ ಇಷ್ಟ ಅಲ್ವಾ..! ನೀನೇ ತುಂಬಾ ಚೆನ್ನಾಗಿ ಜೋಕ್ಸ್ ಮಾಡುತ್ತೀಯ. ಹಾಸ್ಯ ಬಗ್ಗೆ ಒಂದಾದರೂ ಬರಿ’ ಅಂತ ಸಲಹೆಯನಿತ್ತ. ನಿಜ. ದಶು ಹೇಳಿದಂತೆ ನನಗೆ ಹಾಸ್ಯ ಅಂದರೆ ತುoಬಾ ಇಷ್ಟ. ಟಿ.ವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ನಾನು ನೋಡುವುದು ನ್ಯೂಸ್ ಹಾಗೂ ಹಾಸ್ಯ ಎರಡೇ ಕಾರ್ಯಕ್ರಮವನ್ನು. ಹಾಸ್ಯಕ್ಕೆ ಯಾವ ವಿಷಯವನ್ನು ಆಯ್ಕೆ ಮಾಡುವುದು ಎಂದು ಯೋಚಿಸುತ್ತಿದ್ದಂತೆ ನನ್ನ ಮನಸ್ಸು ಸುಮಾರು ಹತ್ತು ವರ್ಷದ ಹಿಂದೆ ಓಡಿತು. ಆಗ ನೆನಪಾಗಿದ್ದು ನಮ್ಮ ಕಾರ್ಖಾನೆಯ ಲೋಕೇಶ.
ಒಮ್ಮೆ ನಮ್ಮ ಲೋಕೇಶ ತನ್ನ ಎರಡನೇ ಪಾಳಿಯಲ್ಲಿ ಕೆಲಸ ನಿರ್ವಹಿಸುವಾಗ ರಾತ್ರಿ ೮ ಗಂಟೆಗೆ ಕ್ಯಾಂಟೀನ್ಗೆ ಊಟಕ್ಕೆ ಹೋದ. ಊಟ ಮಾಡಿಕೊಂಡು ಹಾಗೆ ಅಡುಗೆ ಭಟ್ಟರನ್ನು ಮಾತನಾಡಿಸಿಕೊಂಡು ಬರೋಣ ಅಂತ ಕಾರ್ಖಾನೆಯ ಅಡುಗೆ ಕೋಣೆಗೆ ಹೋದ. ಅಲ್ಲಿ ಅಡುಗೆ ಭಟ್ಟರು ಕೆಲಸವೆಲ್ಲ ಮುಗಿಸಿ ತಲೆಗೆ ಹರಳೆಣ್ಣೆಯನ್ನು ಹಾಕಿಕೊಳ್ಳುತ್ತಿದ್ದರು. ನಮ್ಮ ಲೋಕೇಶನ ಒಂದು ಸಣ್ಣ ಬುದ್ದಿ ಏನೆಂದರೆ ಯಾರೇ ಏನೇ ತಿನ್ನುತ್ತಿರಲಿ, ಅಥವಾ ಅವರ ಬಳಿ ಇನ್ನೇನಾದರೂ ಇರಲಿ… ತನಗೆ ಬೇಕು ಅನ್ನೋ ಸ್ವಭಾವ. ಹಾಗಾಗಿ ಅಡುಗೆ ಭಟ್ಟರು ತಲೆಗೆ ಹಚ್ಚುತ್ತಿರುವ ಹರಳೆಣ್ಣೆ ತಮ್ಮ
ಹಳ್ಳಿಯಿಂದ ತಂದದ್ದು ಎಂದು ಹೇಳುತ್ತಿದ್ದಂತೆ ‘ನಟರಾಜ’ ಅನ್ನೋ ಒಬ್ಬ ಹುಡುಗನನ್ನು ಕಳಿಸುತ್ತೇನೆ. ಒಂದು ಬಾಟಲ್ನಲ್ಲಿ ನನಗೂ ಸ್ವಲ್ಪ ಕೊಟ್ಟು ಕಳಿಸಿ’ ಅಂತ ಪುನಃ ತನ್ನ ಡಿಪಾರ್ಟಮೆಂಟಿಗೆ ಹೋದ.
ಯಾವುದೋ ಕೆಲಸದಲ್ಲಿ ಮಗ್ನನಾಗಿದ್ದ ನಟರಾಜನನ್ನು ಕರೆದು “ಕ್ಯಾಂಟೀನಿನಲ್ಲಿ ಅಡುಗೆ ಭಟ್ಟರಿಗೆ ತಲೆಗಾಕೋ ಎಣ್ಣೆಯನ್ನು ಹೇಳಿದ್ದೇನೆ. ಇಸ್ಕೊಂಡು ಬಾ” ಅಂತ ಕಳಿಸಿದ. ನಟರಾಜನಿಗೆ ಸ್ವಲ್ಪ ತಿಳುವಳಿಕೆ ಕಡಿಮೆ. ಕ್ಯಾಂಟೀನ್ ವಿಶ್ರಾಂತಿ ಕೊಠಡಿಯಲ್ಲಿದ್ದ ಭಟ್ಟರಿಗೆ “ಲೋಕೇಶ್ ಸಾರ್ ತಲೆಗಾಕೋ ಎಣ್ಣೆಯನ್ನು ಇಸ್ಕೊಂಡು ಬಾ ಅಂತ
ನಿಮ್ಮತ್ರ ಕಳ್ಸಿದ್ದಾರೆ” ಅಂದಾಗ ಭಟ್ಟರು “ಅಲ್ಲೇ ಅಡುಗೆ ಮನೆಯಲ್ಲಿ ಇಟ್ಟಿದ್ದೇನೆ. ತಗೊಂಡು ಹೋಗು” ಅಂತ ಹೇಳಿದ್ದಾರೆ. ನಟರಾಜ ಸೀದಾ ಅಡುಗೆ ಮನೆಗೆ ಹೋಗಿ ಅಲ್ಲಿಟ್ಟಿದ್ದ ಎಣ್ಣೆ ಡಬ್ಬವನ್ನು ತೆಗೆದುಕೊಂಡು ಲೋಕೇಶನಿಗೆ ಕೊಟ್ಟಿದ್ದಾನೆ.
ನಂತರ ಲೋಕೇಶ ಒಂದು ರೂಂಗೆ ಕರೆದು ನಟರಾಜನನ್ನು ಕರೆದು “ಸ್ವಲ್ಪ ತಲೆಗೆ ಈ ಎಣ್ಣೆಯನ್ನು ಹಚ್ಚು” ಎಂದು ಹೇಳಿ ಚೆನ್ನಾಗಿ ಆ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿಸಿಕೊಂಡು ಸ್ವಲ್ಪ ಸಮಯದ ನಂತರ “ಥ್ಯಾoಕ್ಸ್ ನಟರಾಜ್. ಹಳ್ಳಿಯಲ್ಲಿ ತಯಾರಿಸಿದ ಶುದ್ಧ ಎಣ್ಣೆ. ಈಗ ತಲೆ ತಂಪಾಯಿತು” ಅಂತ ತನ್ನ ಎರಡನೆ ಶಿಫ್ಟ್ ಕೆಲಸ ಮುಗಿಸಿ ಮನೆಗೆ ಹೋಗಿದ್ದಾನೆ. ರಾತ್ರಿ ೧೦.೪೦ರ ವರೆಗೂ ಟಿವಿ ಕಾರ್ಯಕ್ರಮ ನೋಡಿ ನಂತರ ಹೆಂಡತಿ ಪಕ್ಕ ಮಲಗಿದ್ದಾನೆ. ಹೆಂಡತಿ ಆತನ ತಲೆ ನವರುತ್ತಾ ಏನ್ರೀ ಇಷ್ಟೊಂದು ಎಣ್ಣೆ ಹಾಕ್ಕೋಂಡು ಬಂದಿದ್ದೀರಾ.. ಅಂತ ಕೇಳಿದ್ದಾರೆ. “ಇದು ವರಿಜಿನಲ್ ಹರಳೆಣ್ಣೆ. ತಲೆ ಎಷ್ಟು ತಂಪಾಗಿದೆ ಗೊತ್ತಾ. ನೆಮ್ಮದಿಯಾಗಿ ಮಲಗುತ್ತೇನೆ. ಬೆಳಗ್ಗೆ ಬೇಗ ಎದ್ದು ನೀರನ್ನು ಬಿಸಿ ಮಾಡು. ನಾಳೆ ಮೊದಲನೆ ಶಿಫ್ಟ್. ಹೆಂಡತಿಗೆ ಏನೋ ಅನುಮಾನ. ಲೋಕೇಶನ ತಲೆಗೂದಲ ಮೇಲೆ ಮತ್ತೊಮ್ಮೆ ಕೈಯಾಡಿಸಿದ್ದಾರೆ. ಏನೋ ಒಂಥಾರ ಅಂಟು ಅಂಟು. ತನ್ನ ಮೂಗಿನ ಬಳಿ ಕೈತಂದು ಆ ಎಣ್ಣೆ ಯಾವುದು ಅಂತ ನೋಡಿದ್ದಾರೆ. “ರೀ.. ಹರಳೆಣ್ಣೆ ಅಂತೂ ಅಲ್ಲ! ಯಾವುದೋ ಬೇರೆ ಎಣ್ಣೆ ಇರಬೇಕು” ಅಂತ ಹೇಳಿದ್ದಾರೆ. “ನಿನಗೆ ಗೊತ್ತಾಗೊಲ್ಲ.. ಸುಮ್ನೆ ಮಲಕ್ಕೋ!” ಅಂತ ಹೇಳಿ ಲೋಕೇಶ ಮಲಗಿದ್ದಾನೆ.
ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಮೊದಲನೆ ಶಿಫ್ಟ್ಗೆ ಕೆಲಸಕ್ಕೆ ಹೋಗಿದ್ದಾನೆ. ಕಾರ್ಖಾನೆಗೆ ಹೋಗುತ್ತಿದ್ದಂತೆ ಸೀದ ತನ್ನ ಕ್ಯಾಂಟೀನ್ಗೆ ಹೋಗಿದ್ದಾನೆ. ಭಟ್ಟರು ಎಂದಿನoತೆ ಬೆಳಗ್ಗೆಯ ಶಿಫ್ಟ್ನ ಕಾರ್ಮಿಕರಿಗೆ ತಿಂಡಿ ತಯಾರಿಸುತ್ತಿದ್ದರು. ಲೋಕೇಶ ಬರುವುದನ್ನು ನೋಡುತ್ತಿದ್ದಂತೆ “ಯಾಕೆ ಸಾರ್… ರಾತ್ರಿ ನೀವು ಕಳಿಸಿದ ನಟರಾಜ ಬಂದ. ಅಡುಗೆ ಮನೆಯಲ್ಲಿ ಇಟ್ಟಿದ್ದ ಎಣ್ಣೆಯನ್ನು ತಗೊಂಡು ಹೋಗು ಅಂತ ಹೇಳಿದೆ. ನೋಡಿ ತಗೊಂಡು ಹೋಗೇ ಇಲ್ಲ” ಅನ್ನುತ್ತಿದ್ದಂತೆ ಲೋಕೇಶನಿಗೆ ಎಲ್ಲೋ.. ಎನೋ… ಎಡವಟ್ಟಾಗಿದೆ ಅನ್ನಿಸುತ್ತದೆ. ನಂತರ ಅಲ್ಲಿಗೆ ಬಂದ ಭಟ್ಟರ
ಸಹಾಯಕ ಲಿಂಗರಾಜು “ಸಾರ್.. ನೆನ್ನೆ ನೀವು ಕಳಿಸಿರೋ ನಟರಾಜ ಆ ಹರಳೆಣ್ಣೆ ಡಬ್ಬದ ಪಕ್ಕ ಇಟ್ಟಿರೋ ಮಿಕ್ಸರ್ ಗ್ರೆöÊಂಡರ್ಗೆ ಹಾಕೋ ಆಯಿಲ್ ಡಬ್ಬವನ್ನು ತಗೊಂಡು ಹೋದ..!!??” ಅನ್ನುತ್ತಿದ್ದಂತೆ ಲೋಕೇಶನಿಗೆ ತಲೆತಿರುಗೋದೊಂದು ಬಾಕಿ…!
* * *
ಹೀಗೆ ಒಮ್ಮೆ ನಮ್ಮ ಡಿಪಾರ್ಟ್ಮೆಂಟಿನ ಗೆಳೆಯರೆಲ್ಲರೂ ಒಮ್ಮೆ ಗೋವಾಕ್ಕೆ ಪ್ರವಾಸ ಹೋಗಿದ್ದೆವು. ಅಲ್ಲಿನ ಹಳೆಯ ಚರ್ಚ್ನ್ನು ನೋಡಿಕೊಂಡು ಬರುವಾಗ ಅಲ್ಲಿಗೆ ಒಬ್ಬ ‘ಸ್ಟೋನ್ ರಿಂಗ್’ ಗಳನ್ನು
ಮಾರುತ್ತಾ ಬಂದ. ಅವು ವಿವಿಧ ಬಣ್ಣಗಳಿಂದ ಕೂಡಿದ್ದರಿಂದ ಅವನು ೧೫೦ ರೂಪಾಯಿ ಹೇಳಿದರೂ ಚೌಕಾಸಿ ಮಾಡಿ ೪೦ ರೂಗಳಿಗೆ ನಾನು ಹಾಗೂ ಗೆಳೆಯ ಮಹೇಶ ಕೊಂಡುಕೊoಡೆವು. ನಮಗಿಂತ ಸ್ವಲ್ಪ ಹಿಂದೆ ಇದೇ ಲೋಕೇಶ ಐಸ್ ಕ್ರೀಂ ತಿನ್ನುತ್ತ ನಿಧಾನವಾಗಿ ನಡೆದುಕೊಂಡು ಬರುತ್ತಿದ್ದ. ಹತ್ತಿರ ಬಂದವನೇ ನಮ್ಮ ಬಳಿ ಬಂದು “ಎಷ್ಟೊಂದು ಚೆನ್ನಾಗಿದೆ.
ಎಲ್ಲಿ ತಗೊಂಡ್ರಿ? ಎಷ್ಟಾಯ್ತು?” ಅಂದ. ಅದಕ್ಕೆ ನಾವು ಬರೀ ೧೦ ರುಪಾಯಿ ಆಯ್ತು ಅಂತ ಸುಳ್ಳು ಹೇಳಿದೆವು. ಥೂ..? ನನ್ಮಕ್ಳ… ನನಗೂ ಕರೆಯಬಾರದ ಅಥವಾ ನನಗೊಂದು ತಗೊಬರ್ದ” ಅಂತ ನಮ್ಮನ್ನು ಬಯ್ದುಕೊಂಡ. ಬಾ.. ಮುಂದೆ ಸಿಗಬಹುದು ಅಂತ ಸಮಾಧಾನ ಮಾಡಿದೆವು. ಒಂದರ್ಧ ಗಂಟೆಯ ನಂತರ ಬೇರೆ ಹುಡುಗ ‘ಸ್ಟೋನ್ ರಿಂಗ್’ಗಳನ್ನು ಮಾರುತ್ತಾ ಬಂದ. ಲೋಕೇಶನಿಗೆ ನೋಡು ಆ ಹುಡುಗ ಮಾರಾಟ ಮಾಡುತ್ತಿದ್ದಾನೆ. ಬೇಕಾದ್ರೆ ತಗೋ..” ಅಂಥ ಹೇಳಿದೆವು. ಖುಷಿಯಿಂದ ಲೋಕೇಶ್ ಅವನ ಬಳಿ ಹೋಗಿ ಸುಮಾರು ಹತ್ತು ನಿಮಿಷ ಅದೂ ಇದೂ ಮಾತನಾಡಿ ಬರಿಗೈಲಿ ವಾಪಸ್ಸು ಬಂದ. ನಮಗೆ ಆಶ್ಚರ್ಯವಾಯಿತು!
ಇದ್ಯಾಕೋ ನಮಗೆ ಆವಾಗ್ಲೇ ಬೈಯ್ದೆ. ಈಗ ನೋಡಿದರೆ ತೊಗೊಳ್ಳೋದು ಬಿಟ್ಟು ಬಿಟ್ಟು ವಾಪಸ್ಸ್ ಬಂದಿದ್ದೀಯಾ? ಅಂತ ಕೇಳಿದೆವು. ಅದಕ್ಕೆ ಲೋಕೇಶ “ಅಲ್ಲ… ಅವನು ಮೊದಲು ಆ ‘ರಿಂಗ್ ಸ್ಟೋನ್’ ಗೆ ೧೫೦ ರೂಪಾಯಿ ಅಂದ. ನಂತರ ೧೦೦ ರೂಪಾಯಿ ಅಂದ! ಕೊನೆಗೆ ೫೦ ರೂಪಾಯಿ ಅಂದ” ಅoತ ಲೋಕೇಶ ಹೇಳುತ್ತಲೇ ಹೋದ. ಅದಕ್ಕೆ ನಾವು “ತಗೋಬೇಕಾಯ್ತು” ಅಂತ ಹೇಳಿದಕ್ಕೆ… ಅವನು ನಮ್ಮನ್ನೇ ಗುಗ್ಗು ಅಂತ ತಿಳಿದುಕೊಂಡಿದ್ದಾನೆ. ನೀವು ಬರೀ ೧೦ ರೂಪಾಯಿಗೆ ತಗೊಂಡಿದ್ದೀರ. ನಾನು ಕೊನೇ ಸಾರಿ ೧೦ ರೂಪಾಯಿಗೆ ಕೊಟ್ಟರೆ ಕೊಡು. ಇಲ್ಲದಿದ್ದರೆ ಬೇಡ!” ಅಂತ ವಾಪಸ್ ಕಳಿಸಿದೆ ಅಂದ. ಲೋಕೇಶನ ಮಾತು ಕೇಳುತ್ತಿದ್ದರೆ ನಮಗೆ ನಗು ಉಕ್ಕಿಬಂತು. ಮಹೇಶ ಅಂತೂ ನಗು ತಡೆಯಲಾರದೆ ದೂರ ಹೋಗಿ ನಗಲು ಶುರುಮಾಡಿದ. ನಮ್ಮ ಸುತ್ತಲೇ ಹಾಸ್ಯ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಅವುಗಳನ್ನು ಆಸ್ವಾದಿಸುವ ಗುಣ ನಮ್ಮದಾಗಬೇಕಷ್ಟೆ.