ಒಬ್ಬ ಹುಡುಗ ಆತನ ಅಜ್ಜನ ಹತ್ತಿರ ಮಾತಾಡುತ್ತಿದ್ದ. “ತಾತಾ, ನಾನಿವತ್ತು ಅಪ್ಪನ ಜತೆ ಪೇಟೆಗೆ ಹೋಗಿದ್ದೆ. ಕಳೆದ
ಕೆಲವು ತಿಂಗಳುಗಳಿoದ ಸಂಗ್ರಹಿಸಿದ ಉಣ್ಣೆಯನ್ನು ಮಾರುವುದಿತ್ತು. ನಾನು ಅಪ್ಪನಿಗೆ ಸಹಾಯ ಮಾಡಿದ್ದರಿಂದ ನನ್ನನ್ನೂ ಕರೆದುಕೊಂಡು ಹೋಗುವುದಾಗಿ ಅಪ್ಪ ಹೇಳಿದಾಗ ನಂಗೆಷ್ಟು ಖುಷಿಯಾಗಿತ್ತು ಗೊತ್ತಾ? ನಾನು ಮೊದಲ ಬಾರಿ ಉಣ್ಣೆ ಮಾರಾಟದ ಮಾರ್ಕೆಟ್ಗೆ ಹೋಗುವುದು ಎಂಬ ಕಾರಣಕ್ಕೆ ಮತ್ತು ಏನನ್ನಾದರೂ ಕೊಂಡುಕೊಳ್ಳಬಹುದು ಎಂಬ
ಆಸೆಯಿoದ ಬಹಳ ಎಂದರೆ ಬಹಳ ಸಂತೋಷದಲ್ಲಿದ್ದೆ. ಮಾರ್ಕೆಟ್ ಪೂರ್ತಿ ಹುಡುಕಿದ ಮೇಲೆ ಲೋಹದ ಸುಂದರವಾದ ಚಾಕುವೊಂದು ನನ್ನ ಕಣ್ಣಿಗೆ ಬಿತ್ತು. ಆ ಪುಟ್ಟ ಚಾಕು ಎಷ್ಟು ಚೆಂದವಿತ್ತು ಗೊತ್ತೇ?”
ಅಷ್ಟು ಹೇಳಿದ ಹುಡುಗ ಅಜ್ಜನ ಮೊಣಕಾಲಿನ ಮೇಲೆ ತಲೆಯಿಟ್ಟು ಮೌನವಾದ. ಅಜ್ಜ ನಿಧಾನವಾಗಿ ಹುಡುಗನ ತಲೆ ಸವರಿ ಕೇಳಿದ, ‘ಏನಾಯ್ತೋ?’ ತಲೆ ಎತ್ತದೇ ಹುಡುಗ ಹೇಳಿದ. “ನಾನು ಹೊರಗಡೆ
ಹೋಗಿ ಅಪ್ಪನಿಗಾಗಿ ಕಾಯುತ್ತ ನಿಂತೆ. ಸೂರ್ಯನ ಬೆಳಕಿನಲ್ಲಿ ನನ್ನ ಹೊಸ ಚಾಕು ಹೇಗೆ ಕಾಣಿಸುತ್ತದೆಂಬ ಕಾತರ ನನಗೆ. ಅಷ್ಟು ಹೊತ್ತಿಗೆ ಕೆಲವು ಪಟ್ಟಣದ ಹುಡುಗರು ಬಂದು ನನ್ನ ಸುತ್ತಲೂ ನಿಂತು ಕೆಟ್ಟ ಕೆಟ್ಟ ಮಾತುಗಳನ್ನಾಡತೊಡಗಿದರು. ಒಬ್ಬ ಹೇಳಿದ ‘ಹೇ ಕೊಳಕು ಹುಡುಗಾ ನೀನಿರುವ ವೇಷಕ್ಕೆ ನಿನಗೆ ಇಷ್ಟು ಚೆಂದದ ಹೊಳೆವ ಚಾಕು ಏಕೆ? ಇದು
ನಿನ್ನ ಹತ್ತಿರ ಇರುವ ವಸ್ತುವೇ ಅಲ್ಲ ಬಿಡು.’ ಹೀಗೆ ಆತ ಹೇಳುತ್ತಿದ್ದಂತೆ ದೊಡ್ಡ ದೊಡ್ಡ ಹುಡುಗರು ನನ್ನ ಮೈಮೇಲೆ ಬಿದ್ದರು. ಆ ಗಲಾಟೆಯಲ್ಲಿ ನನ್ನ ಚಾಕು ಬಿದ್ದು ಹೋಯಿತು. ಅವರೆಲ್ಲ ಗಹಗಹಿಸಿ ನಗುತ್ತ ನನ್ನ
ಚಾಕುವನ್ನು ಕಸಿದುಕೊಂಡು ಓಡಿಹೋದರು.” ಹೇಳುತ್ತ ಹೇಳುತ್ತ ಹುಡುಗನ ಕಣ್ಣುಗಳು ಕೆಂಪಾದವು, ಆತ ರೋಷದಿಂದ ಮುಷ್ಠಿ ಬಿಗಿದು ಕೂಗಿದ: ‘ನಾನು ಅವರನ್ನು ದ್ವೇಷಿಸುತ್ತೇನೆ.’
ಎಷ್ಟೆಲ್ಲ ವರ್ಷಗಳ ಕಾಲ ಏನೆಲ್ಲವನ್ನು ನೋಡಿದ ಕಣ್ಣುಗಳಿಂದ ಅಜ್ಜ ಮೊಮ್ಮಗನ ಮುಖವನ್ನೇ ದಿಟ್ಟಿಸಿದ ಮತ್ತು ಹೇಳಿದ, “ಮಗೂ ನಾನೂ ನಿನ್ನ ಥರವೇ ಯಾರಾದರೂ ಈ ರೀತಿ ನನ್ನ ವಸ್ತುಗಳನ್ನೇನಾದರೂ
ತೆಗೆದುಕೊಂಡು ಚೂರೂ ಪಶ್ಚಾತ್ತಾಪವಿಲ್ಲದೇ ಹೋದಾಗ ಅವರನ್ನು ನಖಶಿಖಾಂತ ದ್ವೇಷಿಸುತ್ತಿದ್ದೆ. ಆದರೆ ನಿನಗೊಂದು ವಿಷಯ ಗೊತ್ತಾ? ದ್ವೇಷ ನಮ್ಮನ್ನೇ ನಾಶ ಮಾಡುವ ತಾಕತ್ತು ಹೊಂದಿದೆ. ಇದು ಹೇಗೆ ಎಂದರೆ ನಾವು ವಿಷ ಕುಡಿದು ಶತ್ರು ಸಾಯಲಿ ಎಂದು ಬಯಸಿದಂತೆ!! ನಾನು ಈ ರೀತಿ ತುಂಬ ತೊಳಲಾಟವನ್ನು ಅನುಭವಿಸಿದ್ದೇನೆ. ನಮ್ಮ
ಮನಸ್ಸಿನಲ್ಲಿ ಎರಡು ತೋಳಗಳಿವೆ. ಮೊದಲನೆಯದು ಶಾಂತಿಯನ್ನು ಬಯಸುತ್ತದೆ. ಮತ್ತು ಯಾರಿಗೂ ಅನ್ಯಾಯ ಮಾಡುವುದಿಲ್ಲ. ತನ್ನ ಸುತ್ತಮುತ್ತಲಿನ ವಾತಾವರಣದೊಂದಿಗೆ ಹೊಂದಾಣಿಕೆಯಿoದಿರಲು ಬಯಸುತ್ತದೆ. ಹಾಗಂತ ಆ ತೋಳ ಹೇಡಿಯಲ್ಲ, ಅದು ದುರ್ಬಲತೆಯನ್ನೂ ಹೊಂದಿಲ್ಲ. ಅನ್ಯಾಯವನ್ನು ಸರಿಯಾದ ರೀತಿಯಲ್ಲಿ ಸರಿಪಡಿಸಲು
ಬಯಸುತ್ತದೆ, ಸುಮ್ಮನೆ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ನೆಮ್ಮದಿಯನ್ನು ಕಳೆದುಕೊಳ್ಳುವುದಿಲ್ಲ.
ಇನ್ನು ಎರಡನೆಯ ತೋಳ ಯಾವಾಗಲೂ ಕೋಪದಿಂದ ಕುದಿಯುತ್ತಿರುತ್ತದೆ. ಸಣ್ಣ ಸಣ್ಣ ವಿಷಯಗಳಿಗೂ ರೌದ್ರರೂಪ ತಾಳುತ್ತದೆ. ಎಲ್ಲ ಸಮಯ ಎಲ್ಲರೊಂದಿಗೂ ಕತ್ತಿ ಮಸೆಯುತ್ತಲೇ ಇರುತ್ತದೆ. ಯಾವಾಗಲೂ ಕೋಪದಿಂದ ಕುದಿಯುತ್ತಿರುವ ಕಾರಣಕ್ಕೆ ಅದಕ್ಕೆ ಯೋಚ£ಮಾಡುವ ಸಾಮರ್ಥ್ಯವೇ ಇಲ್ಲ! ಕೆಲವೊಮ್ಮೆ ಇವೆರಡೂ ತೋಳಗಳು ಮನಸ್ಸಿನಲ್ಲಿ ಹೊಡೆದಾಟ ಶುರುಮಾಡಿಬಿಡುತ್ತವೆ! ನಾನು ಸರಿ ನಾನು ಸರಿ ಎನ್ನುತ್ತ ಎರಡೂ ನನ್ನ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತವೆ!!”
ಅಷ್ಟು ಹೊತ್ತಿನವರೆಗೂ ಸುಮ್ಮನೆ ಕಥೆ ಕೇಳುತ್ತಿದ್ದ ಹುಡುಗ ಕೇಳಿದ, ‘ಹಾಗಾದರೆ ತಾತಾ ಯಾವುದು
ಗೆಲ್ಲುತ್ತದೆ?’ ಆಗ ಮುಗುಳ್ನಕ್ಕು ತಾತ ಹೇಳಿದ: ‘ನಾನು ಯಾವುದಕ್ಕೆ ಆಹಾರ
ಹಾಕುತ್ತೇನೋ ಅದು!!’
ಬಹಳ ಮಾರ್ಮಿಕವಾದ ಈ ಕಥೆಯ ನೀತಿಯನ್ನು ಬದುಕಿನಲ್ಲಿ ಎಲ್ಲರೂ ಅಳವಡಿಸಿಕೊಂಡಿದ್ದೇ ಹೌದಾದರೆ ಜಗತ್ತು ಎಷ್ಟು ಸುಂದರವಾದ ಸ್ಥಳವಾಗುತ್ತಿತ್ತು! ನಾವೆಲ್ಲ ಮನುಷ್ಯರು. ಉಪ್ಪು ಹುಳಿ ಖಾರ ತಿನ್ನುವ, ಪ್ರೀತಿ, ದ್ವೇಷ, ಅಸೂಯೆ, ಮೋಹಗಳಿಂದ ಕೂಡಿರುವ ಅತ್ಯಂತ ಸಾಮಾನ್ಯರಾಗಿರುವ ಮನುಷ್ಯರು. ಕೆಲವರು ದೊಡ್ಡದೊಡ್ಡ
ಹುದ್ದೆಯಲ್ಲಿರಬಹುದು, ಇನ್ನೊಂದಿಷ್ಟು ಜನ ಆಗರ್ಭ ಶ್ರೀಮಂತರಿರಬಹುದು, ಮತ್ತೊಂದಷ್ಟು ಜನ ಅಧಿಕಾರದ ಗದ್ದುಗೆಯಲ್ಲಿರಬಹುದು, ಅಷ್ಟೇ. ಆದರೆ ಆಂತರ್ಯದಲ್ಲಿ ಎಲ್ಲರೂ ಒಂದೇ ರೀತಿ ಯೋಚಿಸುತ್ತಿರುತ್ತೇವೆ: ಹಣದ ಬಗ್ಗೆ, ನಮಗಾಗದವರ ಬಗ್ಗೆ, ಗೆಲ್ಲುವ ಬಗ್ಗೆ, ಮಕ್ಕಳ ಬಗ್ಗೆ ಕೊನೆಗೆ ಮನೆಯ ನಾಯಿಯ ಬಗ್ಗೆಯೂ. ಒಬ್ಬ ಮಗನಿಗೆ ಹೊಸ ಬಟ್ಟೆ ತರಲು ದುಡ್ಡು ಹೊಂದಿಸಲು ಯೋಚನೆ ಮಾಡಿದರೆ ಇನ್ನೊಬ್ಬ ಮಗಳಿಗೆ ಹೊಸ ಐ ಫೋನ್ ಕೊಡಿಸುವ ಯೋಚನೆ ಮಾಡುತ್ತಿರಬಹುದು. ಒಬ್ಬ ಬಸ್ಸಿನ ಪಯಣದಲ್ಲಿ ಅನುಚಿತವಾಗಿ ವರ್ತಿಸಿದ ಸಹ ಪ್ರಯಾಣಿಕನ ಬಗ್ಗೆ ಉರಿಯುತ್ತಿದ್ದರೆ ಮತ್ತೊಬ್ಬ ತನ್ನ ಬಿಎಮ್ಡಬ್ಲು÷್ಯ ಕಾರಿನ ಚಾಲಕನ ಮೇಲೆ ಕೋಪಿಸಿಕೊಂಡಿರಬಹುದು. ವ್ಯತ್ಯಾಸಗಳೇನೇ
ಇರಲಿ, ಒಟ್ಟಿನಲ್ಲಿ ನಾವೆಲ್ಲ ನಮ್ಮದೇ ಆದ ಯೋಚನೆಗಳು ಮತ್ತು ದ್ವಂದ್ವಗಳಲ್ಲಿ ಮುಳುಗಿರುತ್ತೇವೆ. ನಮ್ಮೆಲ್ಲರ ತಲೆಯಲ್ಲೂ ಈ ತೋಳಗಳು ಹೊಡೆದಾಡುತ್ತಲೇ ಇರುತ್ತವೆ.
ನಮಗೆ ಕೋಪ ಬಂದಾಗ ನಮ್ಮೆದುರು ಎರಡು ಆಯ್ಕೆಗಳಿವೆ. ಮೊದಲನೆಯದು ನಮ್ಮ ಮನವ ಸಂತೈಸಿಕೊoಡು ನಮ್ಮ ಕೋಪದ ಕಾರಣಗಳನ್ನು ಹುಡುಕುವುದು, ಅದು ಸಾಧುವಾದದ್ದೇ ಎಂದು ಯೋಚಿಸುವುದು. ನಮ್ಮ ತಪ್ಪಿನ ಸಾಧ್ಯತೆಗಳ ಕಡೆಗೂ ಗಮನ ಹರಿಸುವುದು. ಕೊನೆಗೆ ಸಮಾಧಾನವಾಗಿ ನಮ್ಮ ಅಭಿಪ್ರಾಯವನ್ನು ಮಂಡಿಸುವುದು.
ಎರಡನೆಯದ್ದು ಕೋಪದ ಕೈಗೆ ಬುದ್ಧಿ ಕೊಟ್ಟು ಮೂರ್ಖರಾಗುವುದು. ತನ್ನ ದೊಡ್ಡ ತಪ್ಪುಗಳ ಪರವಾಗಿ ವಾದಿಸುವ ಮನಸ್ಸು ಬೇರೆಯವರ ಸಣ್ಣ ಸಣ್ಣ ತಪ್ಪುಗಳಿಗೂ ವಿರೋಧಿ ಲಾಯರ್ ಆಗಿ ಬಿಡುತ್ತದೆ. ಬೇರೆಯವರ ಮೇಲೆ ಕೆಂಡಕಾರುತ್ತದೆ. ಮೊದಲನೆಯ ತೋಳ ತಣ್ಣಗಿರು ಎಂದರೆ ಎರಡನೆಯ ತೋಳ ಶರ್ಟಿನ ತೋಳೇರಿಸು ಎಂದು ಪ್ರೇರೇಪಿಸುತ್ತದೆ. ಯಾವುದಕ್ಕೆ ನಾವು ಆಹಾರ ಹಾಕುತ್ತೇವೆ? ಅಂದರೆ ಯಾವುದರ ಬಗ್ಗೆ ಜಾಸ್ತಿ ಯೋಚಿಸುತ್ತೇವೆ
ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ಹಾಗೂ ಭವಿಷ್ಯ ರೂಪುಗೊಳ್ಳುತ್ತದೆ.
ಸಹಜವಾಗಿ ಎಲ್ಲರಲ್ಲೂ ತಮಗೆ ಅನ್ಯಾಯ ಮಾಡಿದವರ ಬಗ್ಗೆ ಕೋಪ ಉಕ್ಕುತ್ತದೆ, ದ್ವೇಷ ಹೆಡೆಯಾಡುತ್ತದೆ. ಶೇಕ್ಸ್ಪಿಯರ್ನ ಖ್ಯಾತ ನಾಟಕ ‘ಮರ್ಚಂಟ್ ಆಫ್ ವೆನಿಸ್’ನಲ್ಲಿ ಶೈಲಾಕ್ ಖಳನಾಯಕ. ಕ್ರೂರಿ. ನಿಜ, ಆದರೆ ಆತನ ಆ ವರ್ತನೆಗೆ ಆಳವಾದ ಕಾರಣಗಳಿದ್ದವು. ಆಂಟೊನಿಯೋನ ಕುರಿತು ಆತ ಹೇಳುತ್ತಾನೆ: “ಅವನು ನನ್ನನ್ನು ಅವಮಾನಿಸಿದ, ನನ್ನ ಸೋಲುಗಳನ್ನು ನೋಡಿ ನಕ್ಕ, ನನ್ನ ಗೆಲುವುಗಳನ್ನು ವ್ಯಂಗ್ಯವಾಗಿ ಆಡಿಕೊಂಡ, ನನ್ನ ದೇಶವನ್ನು ಅವಮಾನಿಸಿದ, ನನ್ನ ಗೆಳೆಯರನ್ನು ತಣ್ಣಗಾಗಿಸಿದ, ಶತ್ರುಗಳನ್ನು ಹುರಿದುಂಬಿಸಿದ, ಅದಕ್ಕೆ ಅವನು ಕೊಡುವ ಕಾರಣವಾದರೂ ಏನು? ನಾನೊಬ್ಬ ಯುಹೂದಿ ಎನ್ನುವುದು! ಯಾಕೆ ಯುಹೂದಿಯೊಬ್ಬನಿಗೆ ಕಣ್ಣಿಲ್ಲವೇ, ಕೈಯ್ಯಿಲ್ಲವೇ, ಅಂಗಾoಗಗಳಿಲ್ಲವೇ, ಆಸೆಗಳು, ಮೋಹ ಇಲ್ಲವೇ? ಅವನು ತಿನ್ನುವ ಆಹಾರ, ಗಾಯಗೊಳ್ಳುವ ಆಯುಧ, ಖಾಯಿಲೆಗಳು, ಅವನ್ನು ಗುಣ
ಪಡಿಸುವ ವಿಧಾನ ಎಲ್ಲವೂ ಒಬ್ಬ ಕ್ರಿಶ್ಚಿಯನ್ನನಂತೆ ಅಲ್ಲವೇ? ಅದೇ ಚಳಿಗಾಲ ಮತ್ತು ಬೇಸಗೆ ನಮ್ಮನ್ನು ತಣ್ಣಗೆ ಹಾಗೂ ಬೆಚ್ಚಗೆ ಮಾಡುವುದಿಲ್ಲವೇ? ನೀವು ಚುಚ್ಚಿದರೆ ನಮ್ಮ ದೇಹದಿಂದ ರಕ್ತ ಬರುವುದಿಲ್ಲವೇ? ನೀವು ವಿಷವುಣಿಸಿದರೆ ನಾವು ಸಾಯುವುದಿಲ್ಲವೇ? ನೀವು ತಪ್ಪು ಮಾಡಿದರೆ ನಾವು ಸೇಡು ತೀರಿಸಿಕೊಳ್ಳುವುದು ಬೇಡವೇ?” ಅವನ ಕೋಪವೇನೋ ಸಾಧುವೇ. ಆದರೆ ಹಾಗೆಂದು ಆಂಟೊನಿಯೋನ ಒoದು ಪೌಂಡ್ ಮಾಂಸವನ್ನು ಕೇಳಿದ್ದಕ್ಕೆ ಆತ ಅತ್ಯಂತ ಕ್ರೂರ ಖಳನಾಯಕ ಎನಿಸಿಕೊಂಡ. ಕೋಪವನ್ನು ದ್ವೇಷವನ್ನಾಗಿಸಿಕೊಂಡು ನೆಮ್ಮದಿ ಪಡೆಯುವ ಆತನ ಯೋಚನೆ ಅವಸರದ್ದು.
ಆರೋಗ್ಯಕರ ಪೈಪೋಟಿ, ಸೋಲನ್ನು ಗೆಲುವನ್ನಾಗಿ ಪರಿವರ್ತಿಸಿಕೊಳ್ಳುವ ಚಾಣಾಕ್ಷ ನಡೆ ಇವೆಲ್ಲ ಬದುಕಿನಲ್ಲಿ ಮುನ್ನಡೆಯಲು ಬೇಕು. ದ್ವೇಷವನ್ನು ನಾಶ ಮಾಡುವುದೆಂದರೆ ಶರಣಾಗತಿಯೆಂದಲ್ಲ. ಸೋಲೊಪ್ಪಿಕೊoಡು ಸುಮ್ಮನಾಗುವುದೂ ಅಲ್ಲ. ನಮ್ಮ ಬುದ್ಧಿ ನಮ್ಮ ಕೈಯ್ಯಲ್ಲಿಯೇ ಇರುವಂತೆ ನೋಡಿಕೊಳ್ಳುವುದು. ದ್ವೇಷ ನಮ್ಮನ್ನು
ಕುರುಡಾಗಿಸುತ್ತದೆ. ತಾಳ್ಮೆ ನಮಗೆ ಮೂರನೇ ಕಣ್ಣೊಂದನ್ನು ದಯಪಾಲಿಸುತ್ತದೆ. ಕಲ್ಲಿನ ಬಾವಿಕಟ್ಟೆಯನ್ನೇ ನಾರಿನ ಹಗ್ಗ ಸತತ ಉಜ್ಜುವಿಕೆಯಿಂದ ಸವೆಸಬಲ್ಲುದಾದರೆ ನಿರಂತರ ಪ್ರಯತ್ನ ಗೆಲುವು ತಾರದೇ ಇದ್ದೀತೇ? ನಮ್ಮನ್ನು ಕೀಳಾಗಿ ಕಂಡವರಿಗೆ ತಾಳ್ಮೆಯಿಂದ ಯಶಸ್ಸಿನಿಂದಲೇ ಉತ್ತರಿಸುವ ಸಾಧಕರು ನಾವಾಗೋಣ. ಯಾಕೆಂದರೆ The best revenge
is massive success! (ಅತ್ಯುತ್ತಮ ಸೇಡು ಎಂದರೆ ಬಹುದೊಡ್ಡ ಯಶಸ್ಸು).