ಹೋಲಿ ರೋಜರಿ ಪ್ರೌಢಶಾಲೆ ಎನ್ನುವುದು ನನ್ನ ಹೈಸ್ಕೂಲಿನ ಪ್ರತಿವರ್ಷ ಸರಾಸರಿ ನೂರಿಪ್ಪತ್ತರಿಂದ ನೂರಾಮೂವತ್ತು ವಿದ್ಯಾರ್ಥಿಗಳು ಓದುವ ಜ್ಞಾನಮಂದಿರವದು. ಇದೇ ಹೆಸರಿನ ಪ್ರಾಥಮಿಕ ಶಾಲೆಯೂ ಸೇರಿದಂತೆ ರೋಜರಿ ಶಾಲೆಯನ್ನು
ನಡೆಸಿಕೊಂಡು ಹೋಗುತ್ತಿರುವ ಆಡಳಿತ ಮಂಡಳಿ ಕ್ರೈಸ್ತ ಸಮುದಾಯಕ್ಕೆ ಸೇರಿದ್ದು. ನಾನು ಓದುವಾಗ ಶಾಲೆಯ ಮುಖ್ಯೋಧ್ಯಾಪಕರಾಗಿದ್ದವರ ಹೆಸರು ಫಾದರ್ ರೇಮಂಡ್ ಫರ್ನಾಂಡಿಸ್. ಬಹುಶ: ಈಗಲೂ ಅವರೇ ಅಲ್ಲಿನ ಮುಖ್ಯೋಧ್ಯಾಪಕರಾಗಿರುವರೋ, ಇಲ್ಲವೋ ನನಗೆ ತಿಳಿಯದು. ಕ್ರೈಸ್ತ ಸನ್ಯಾಸಿಗಳ ಶಾಸ್ತ್ರೀಯ ಉಡುಗೆಯಾಗಿದ್ದ ಬಿಳಿಯ ನಿಲುವಂಗಿಯನ್ನು ಧರಿಸಿ ಹೈಸ್ಕೂಲಿನ ಆವರಣದುದ್ದಕ್ಕೂ ಅವರು ನಡೆಯುತ್ತಿದ್ದರೆ, ನೋಡುವವರಿಗೆ ಅವರಲ್ಲೊಬ್ಬ ಕಟ್ಟಾ ಕ್ರೈಸ್ತ ಮತ ಪ್ರಚಾರಕ ಗೋಚರಿಸಲಿಕ್ಕೂ ಸಾಕು.
ಆದರೆ ಕೊಂಚ ರೇಮಂಡ್ ಫರ್ನಾಂಡಿಸರ ವ್ಯಕ್ತಿತ್ವವನ್ನು ಅರಿತುಕೊಂಡರೆ ನೀವು ಕಾಣದ ಆ ವ್ಯಕ್ತಿಯ ಬಗ್ಗೆ ನಿಮ್ಮಲ್ಲೊಂದು ಅವ್ಯಕ್ತ ಗೌರವ ಖಂಡಿತವಾಗಿಯೂ ಮೂಡುತ್ತದೆ. ಫಾದರ್ ರೇಮಂಡ್ ಅದ್ಭುತವಾಗಿ ಹಾಡುತ್ತಾರೆ. ದೇವಸುತ ಏಸುಕ್ರಿಸ್ತನ ಬಹುತೇಕ ಕತೆಗಳು ನಮಗೆ ಪರಿಚಿತವಾಗಿದ್ದು ಅವರಿಂದಲೇ. ವಿದ್ಯಾರ್ಥಿಗಳು ಆಗೊಮ್ಮೆ ಈಗೊಮ್ಮೆ ಸಮೀಪದ ಚರ್ಚಿಗೆ ತೆರಳುತ್ತಿದ್ದೇವಾದರೂ ಅದು ಯಾರಿಗೂ ಕಡ್ಡಾಯವಾಗಿರಲಿಲ್ಲ. ಏಸುವಿನ ಕತೆಗಳನ್ನು ಅರ್ಥೈಸುವ ಭರದಲ್ಲಿ ಬಾಯಿತಪ್ಪಿಯೂ ಅನ್ಯಧರ್ಮೀಯರ, ಅನ್ಯಧರ್ಮೀಯ ಆಚರಣೆಗಳ ಅವಹೇಳನ ಅಲ್ಲಿ ನಡೆಯುತ್ತಿರಲಿಲ್ಲ. ಕ್ರೈಸ್ತಧರ್ಮೀಯರ ಶಾಲೆಯೇ ಆಗಿದ್ದರೂ ಕ್ರಿಶ್ಚಿಯನ್ ಹುಡುಗರಿಗೆ ಅದೊಂದೇ ಕಾರಣಕ್ಕೆ ಯಾವುದೇ ರಿಯಾಯತಿ ಅಲ್ಲಿರಲಿಲ್ಲ.
ಶಾಲಾ ಮಟ್ಟದ ಸಂಗೀತ ಸ್ಪರ್ಧೆಯೊಂದರಲ್ಲಿ ಕೆಲವು ಕ್ರೈಸ್ತ ಹುಡುಗರು ಕ್ರಿಸ್ತನ ಮಹಿಮೆಯನ್ನು ಸಾರುವ ಹಾಡುಗಳನ್ನು ಹಾಡಿಯೂ ಪ್ರಶಸ್ತಿಗಳನ್ನುಗೆಲ್ಲುವಲ್ಲಿ ವಿಫಲರಾಗಿದ್ದರು ಎಂದರೆ ವಸ್ತುಸ್ಥಿತಿ ಎಷ್ಟು
ಪಾರದರ್ಶಕವಾಗಿತ್ತೆನ್ನುವುದನ್ನು ನೀವೇ ಊಹಿಸಿ. ಅಂಥದ್ದೊಂದು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದ ಹುಡುಗ ’ಭಾಗ್ಯದ ಲಕ್ಷ್ಮೀ ಬಾರಮ್ಮ’ ಎನ್ನುವ ಭೀಮ್ಸೇನ್ ಜೋಶಿಯವರ ಹಾಡನ್ನು ಹಾಡಿದ್ದ ಎಂಬುದಾಗಿ ನನ್ನ ನೆನಪು. ಶಾಲೆಯ ವಾರ್ಷಿಕ ಸಮ್ಮೇಳನಗಳಲ್ಲಿ ನಡೆಯುತ್ತಿದ್ದ ನಾಟಕಗಳ ಪೈಕಿ ಭೂಕೈಲಾಸ, ಬೇಡ ವಾಲ್ಮೀಕಿಯಾದ ಕತೆಯಂಥಹ ಸನ್ನಿವೇಶಗಳದ್ದೇ ಸಿಂಹಪಾಲು. ಎಷ್ಟು ಚಂದದ ವಾತಾವರಣವಿತ್ತು ಗೊತ್ತೆ ನನ್ನ ಪ್ರೌಢಶಾಲೆಯಲ್ಲಿ? ನನ್ನ ಹೈಸ್ಕೂಲಿನ
ಗೆಳತಿಯರು ಮುಡಿಯ ತುಂಬ ಹೂವು ಮುಡಿಯುತ್ತಿದ್ದರು. ಕೈತುಂಬ ಬಳೆ ತೊಟ್ಟು, ಹಣೆಗೆ ಕೆಂಪನೆಯ ಕುಂಕುಮವಿಟ್ಟುಕೊಂಡೇ ಶಾಲೆಗೆ ಬರುತ್ತಿದ್ದರು. ಯಾವುದಕ್ಕೂ ಅಲ್ಲಿ ಪ್ರತಿಬಂಧವಿರಲಿಲ್ಲ.
ಸಂಕ್ರಾತಿಯ ಹಬ್ಬದ ಮರುದಿನ ಎಳ್ಳು ಬೀರಲೆಂದೇ ಒಂದು ಘಂಟೆಯಷ್ಟು ಬಿಡುವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು. ಅಪ್ಪಟ ಹಿಂದೂ ಪದ್ದತಿಯಲ್ಲಿ ಎಳ್ಳುಬೆಲ್ಲವನ್ನು ಶಿಕ್ಷಕರಿಗೆ ಕೊಟ್ಟು ಕಾಲಿಗೆ ನಮಸ್ಕರಿಸಿದರೇ, ಕೊಂಚವೂ ಬೇಸರವಿಲ್ಲದೆ ಮನತುಂಬಿ ಹಾರೈಸುತ್ತಿದ್ದರು ಕ್ರೈಸ್ತ ಪಾದ್ರಿ. ಪ್ರತಿವರ್ಷವೂ ಹತ್ತನೆಯ ತರಗತಿಗಳ ಫಲಿತಾಂಶಗಳಲ್ಲಿ ತೊಂಭತ್ತಕ್ಕಿಂತಲೂ
ಹೆಚ್ಚಿನ ಪ್ರತಿಶತ ವಿದ್ಯಾರ್ಥಿಗಳ ತೇರ್ಗಡೆಯ ಫಲಿತಾಂಶವನ್ನು ನೀಡುವ ನನ್ನ ಶಾಲೆ ನಿಜಕ್ಕೂ ಒಂದು ಆದರ್ಶ ಶಿಕ್ಷಣಸಂಸ್ಥೆ.
ಇಂಥದ್ದೊಂದು ಶಾಲೆಯಲ್ಲಿ ನಾನು ಓದಿದ್ದು ಒಂಬತ್ತು ಮತ್ತು ಹತ್ತನೆಯ ತರಗತಿಗಳನ್ನು ಮಾತ್ರ. ಅದಕ್ಕೂ ಮುಂಚಿನ
ಶಿಕ್ಷಣವನ್ನು ನಾನು ಪೂರೈಸಿದ್ದು ಹಳಿಯಾಳ ವೆಂಬ ಕರಾವಳಿಯ ಬಯಲುಸೀಮೆಯ ತಾಲೂಕಿನ ಕಾರ್ಮೆಲ್ ಎಂಬ ಸಂಸ್ಥೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಹೆಸರೇ ಸೂಚಿಸುವಂತೆ ಅದು ಸಹ ಕ್ರೈಸ್ತ ಸಂಸ್ಥೆಯೇ. ಆದರೆ ಅಲ್ಲಿನ ಶಿಕ್ಷಣ
ವ್ಯವಸ್ಥೆಯೂ ಹೋಲಿ ರೋಜರಿಗಿಂತ ತೀರ ವಿಭಿನ್ನವೇನೂ ಇರಲಿಲ್ಲ. ಓದುತ್ತಿದ್ದ ವಿದ್ಯಾರ್ಥಿಗಳ ಲೆಕ್ಕಾಚಾರದಲ್ಲಿ ಅದು ದೊಡ್ಡದಿತ್ತೆನ್ನುವುದನ್ನು ಹೊರತು ಪಡಿಸಿ ಮತ್ತೆಲ್ಲ ವ್ಯವಸ್ಥೆಗಳೂ ಬಹುತೇಕ ಒಂದೇ ತೆರನಾದದ್ದು. ಕ್ರಿಸ್ತ ಏಸುವನ್ನು ಹೊಗಳುವ ಪ್ರಾರ್ಥನೆಗಳು ಕಾರ್ಮೆಲ್ ಶಾಲೆಯಲ್ಲಿಯೂ ಇದ್ದವು. ಚರ್ಚಿಗೆ ಹೋಗುವ ಪದ್ದತಿಯೂ ಅಲ್ಲಿತ್ತು. ಅಷ್ಟಾಗಿಯೂ ಥೇಟು ರೋಜರಿ ಶಾಲೆಯಂತೆಯೇ ಅನ್ಯ ಧರ್ಮ ಅಸಹಿಷ್ಣುತೆ ಎನ್ನುವ ಮಾತು ಕಾರ್ಮೆಲ್ ಶಾಲೆಯಲ್ಲಿಯೂ ಇರಲಿಲ್ಲ.
ಇದು ನನ್ನೊಬ್ಬನ ಕತೆಯಲ್ಲ, ಬಹುಶ: ನನ್ನ ಕಾಲದ ಬಹುತೇಕರ ಕತೆ ಹೀಗೆಯೇ ಇತ್ತು. ಆವತ್ತಿಗೆ ಸಣ್ಣ ಊರಿನ ಬಹುತೇಕ ಕ್ರೈಸ್ತ ಮತದ ಶಾಲೆಗಳು ಇದ್ದಿದ್ದೇ ಹಾಗೆ. ಹೆಸರಿಗೆ ಕ್ರೈಸ್ತ ಮ್ಯಾನೆಜ್ಮೆಂಟ್ ಅಂತಾದರೂ ಶಿಕ್ಷಕರಲ್ಲಿ ಬಹುತೇಕರು ಹಿಂದೂಗಳೇ ಆಗಿರುತ್ತಿದ್ದರು. ಹಾಗಾಗಿ ಮಕ್ಕಳಿಗೆ ಹಾಗಿರಲಿ, ಸ್ವತ: ಆ ಶಿಕ್ಷಕರಿಗೆ ಕ್ರೈಸ್ತ ಆಚರಣೆಗಳ ಬಗ್ಗೆ ಅಷ್ಟಾಗಿ
ಮಾಹಿತಿಯಿರುತ್ತಿರಲಿಲ್ಲ. ಹಾಗೆಂದು ಬೆರಳೆಣಿಕೆಯಷ್ಟಿರುತ್ತಿದ್ದ ಕ್ರೈಸ್ತ ಶಿಕ್ಷಕರಿಗೆ ಪರಧರ್ಮದ ಬಗ್ಗೆ, ಅನ್ಯಧರ್ಮದ ಆಚರಣೆಗಳ ಬಗ್ಗೆ ಅಸಹನೆಯಿರುತ್ತಿತ್ತಾ..? ಖಂಡಿತ ಇಲ್ಲ. ವಿದ್ಯಾರ್ಥಿಗಳ ಪ್ರತಿಹಬ್ಬದ ಆಚರಣೆಗಳನ್ನು, ಸಂತೋಷಗಳನ್ನು
ಸಮಾನವಾಗಿ ಅನುಭವಿಸುತ್ತಿದ್ದ ಶಿಕ್ಷಕರು. ’ಏನ್ರೋ, ಹಬ್ಬ ಅಂತೀರಿ. ಒಬ್ಬೊಬ್ಬರೇ ತಿಂತೀರಿ ಸಿಹಿಗಳನ್ನ..? ನಮಗೆಲ್ಲ ಇಲ್ಲವಾ..’ ಎಂದು ಸ್ವತ: ಶಿಕ್ಷಕರೇ ವಿದ್ಯಾರ್ಥಿಗಳ ಕಾಲೆಳೆದದ್ದು ಅದೆಷ್ಟು ಸಲವೋ.
ಹಬ್ಬದ ದಿನಗಳಲ್ಲಿ ಕ್ರೈಸ್ತ ಮಿತ್ರರು ಮನೆಗೆ ಬಂದರೆ ಖುಷಿಯಿಂದಲೇ ಹಬ್ಬದಡುಗೆ ಬಡಿಸುತ್ತಿದ್ದೆವು. ನಮ್ಮೊಟ್ಟಿಗೆ ಕೂತು ಉಣ್ಣುವ ಹುಡುಗರಿಗೆ ಪಟಾಕಿಯೆಡೆಗೆ ಭಯಂಕರ ಆಸಕ್ತಿ. ಕ್ರಿಸ್ಮಸ್ ಬಂದಾಗ ಆತಿಥ್ಯವೆನ್ನುವುದು ಅವರ
ಪಾಲಿನ ಸಂತಸ. ಅಸಲಿಗೆ ನಮ್ಮ ಮನೆಯಿದ್ದಿದ್ದೇ ಮುಸಲ್ಮಾನರ ಬೀದಿಯಲ್ಲಿ. ಇಪ್ಪತ್ತು ಇಪ್ಪತ್ತೈದು ಮುಸ್ಲಿಂ ಮನೆಗಳಿದ್ದ ಬೀದಿಯ ಐದಾರು ಹಿಂದೂ ಮನೆಗಳ ಪೈಕಿ ನಮ್ಮದೂ ಒಂದು ಮನೆ. ಹಬ್ಬದ ದಿನಗಳಲ್ಲಿ ನಮ್ಮ ಮನೆಯಿಂದ ತಿನಿಸುಗಳು ಅವರ ಮನೆಗೆ ಹೋಗುತ್ತಿದ್ದವು. ರಮ್ಜಾನ್ ಹಬ್ಬಕ್ಕೆ ಅವರ ಮನೆಯ ಶೀರ್ ಕುರ್ಮಾ ನಮ್ಮ ಮನೆಗೆ. ಮಾಂಸಾಹಾರಿ
ಗಳಾಗಿದ್ದರೆ ರುಚಿಕಟ್ಟಾದ ಮಟನ್ ಬಿರಿಯಾನಿ. ನಾವು ಹಿಂದೂಗಳು ಅವರ ಅಡುಗೆ ತಿನ್ನಬಾರದು ಎನ್ನುವ ಭಾವ ನಮ್ಮಲ್ಲಾಗಲಿ, ತಾವು ಮುಸ್ಲಿಮರು ’ಕಾಫೀರ’ರ ಅಡುಗೆ ತಾವು ತಿನ್ನಬಾರದು ಎನ್ನುವ ಅನಿಸಿಕೆ ಅವರಲ್ಲಾಗಲಿ ಕಂಡಿದ್ದಿಲ್ಲ. ಗಣೇಶ ಹಬ್ಬದ ಪೆಂಡಾಲು, ಮಸೀದಿಯ ಆಜಾನ್ನ ಮೈಕು ಒಟ್ಟೊಟ್ಟಿಗೆ ಕೂಗುತ್ತಿದ್ದ, ಒಟ್ಟಿಗೆ ಕೂಗಿಯೂ ಯಾರಲ್ಲಿಯೂ ಅಸಹನೆ ಕಿರಿಕಿರಿಗಳನ್ನು ಹುಟ್ಟಿಹಾಕದ ಚಂದದ ದಿನಗಳವು.
ಹೀಗೊಂದು ಸಾಮರಸ್ಯವಿತ್ತು ಎನ್ನುವ ಕಾರಣಕ್ಕೆ ಆಗ ಕೋಮುಗಲಭೆಗಳೇ ಇರಲಿಲ್ಲವಾ..? ಖಂಡಿತ ಇಲ್ಲ. ಕೋಮುಗಲಭೆಗಳು ಇದ್ದೇ ಇದ್ದವು. ಬಹುಶ: ಇಂದಿಗಿAತ ಹೆಚ್ಚು ಕೋಮು ಗಲಭೆಗಳು… ಆ ಕಾಲದಲ್ಲಿದ್ದವು. ತಣ್ಣಗೆ ಬದುಕುತ್ತಿದ್ದ ಜನರ ನಡುವೆ ಏಕಾಏಕಿ ಬಿರುಗಾಳಿಯಂತೆ ಬೀಸುತ್ತಿದ್ದ ಕೋಮು ಗಲಭೆಗಳಿದ್ದವು. ಉತ್ತರ ಕನ್ನಡದ ಭಟ್ಕಳವೆನ್ನುವ ಊರು ಆ ಕಾಲಕ್ಕಾಗಲೇ ಕೋಮು ಗಲಭೆಗಳಿಗೆ, ಇಸ್ಲಾಮಿಕ್ ಉಗ್ರವಾದಿಗಳ ಬೆಂಬಲಕ್ಕೆ ನಿಂತ ಊರೆಂಬ ಹೆಸರಿನಲ್ಲಿ ಆವತ್ತಿಗೂ ಕುಖ್ಯಾತವಾಗಿತ್ತು. ಆದರೆ ಆ ಗಲಭೆಗಳು ಶುರುವಾದಷ್ಟೇ ವೇಗದಲ್ಲಿ ತಣ್ಣಗಾಗುತ್ತಿದ್ದವು. ಮೂರು ದಿನ ಹೊತ್ತಿ ಉರಿಯುತ್ತಿದ್ದ ಊರುಗಳು ನಾಲ್ಕನೆ ದಿನಕ್ಕಾಗಲೇ ತಣ್ಣಗಾಗುತ್ತಿದ್ದವು. ಅಲ್ಲೊಂದು ಸಣ್ಣ ಗಲಭೆಯೂ ನಡೆದಿಲ್ಲವೇನೋ ಎನ್ನುವಂತೆ. ವಿಚಿತ್ರವೆಂದರೆ ಗಲಭೆಗಳಿಗೆ ಖ್ಯಾತವಾಗಿದ್ದ ಊರುಗಳ ಜನರನ್ನು ಹೊರತುಪಡಿಸಿ ಸುತ್ತಮುತ್ತಲಿನ ಉಳಿದ ಊರುಗಳ ಜನಸಾಮಾನ್ಯರ ದೈನಂದಿನ ಬದುಕಿನಲ್ಲಿ ತೀರ ದೊಡ್ಡ ಬದಲಾವಣೆಗಳೇನೂ ಆಗಿರುತ್ತಿರಲಿಲ್ಲ. ಅಲ್ಲೆಲ್ಲೋ ಭಟ್ಕಳದಲ್ಲಿ ಮುಸ್ಲಿಮ್ ಯುವಕನಿಗೆ ಇರಿದರು ಎನ್ನುವ ಸುದ್ದಿಗೆ ನನ್ನೂರಿನ ಮುಸಲ್ಮಾನ ಯುವಕ ಉದ್ವಿಗ್ನನಾಗುತ್ತಿರಲಿಲ್ಲ. ಇನ್ನೆಲ್ಲೋ ಮುಸ್ಲಿಮರು ಹಿಂದೂಗಳನ್ನು ಬಡಿದರೆನ್ನುವ ಕಾರಣಕ್ಕೆ ನಾಲ್ಕೇ ನಾಲ್ಕು ಹಿಂದೂ ಮನೆಗಳಿದ್ದ ಬೀದಿವಾಸಿಗಳಾದ ನಮಗೆ ಭಯ ಅಂಜಿಕೆಗಳಿರುತ್ತಿರಲಿಲ್ಲ. ಬದುಕು ತೀರ ಸಾಮಾನ್ಯವಾಗಿಯೇ ಇರುತ್ತಿತ್ತು.
ಬಹುಶಃ ಅದೇ ಕಾರಣಕ್ಕೋ ಏನೋ, ಮತಾಂತರ, ಅನ್ಯ ಧರ್ಮ ಅಸಹಿಷ್ಣುತೆ ಎನ್ನುವ ಪದಗಳು ನಮ್ಮ ಬಾಲ್ಯದ ದಿನಗಳಲ್ಲಿ ತುಂಬ ಪರಿಚಿತ ಪದವೇನೂ ಆಗಿರಲಿಲ್ಲ. ಆ ಹೊತ್ತಿಗೆ ನಮ್ಮ ಗ್ರಹಿಕೆಯ ಪರಿಧಿಯಾಚೆಗಿನ ಪದಗಳು ಅವು. ಮುಂದೆ ಬದುಕು ಬದಲಾಯಿತು. ಕಾಲೇಜು ಪದವಿ ಮುಗಿಸಿ ಬೆಂಗಳೂರಿಗೆ ಬಂದ ಮೇಲೆ ಇಲ್ಲಿನ ಕೆಲವು ಕಾನ್ವೆಂಟ್ಗಳ
ಸ್ವರೂಪದ ಪರಿಚಯವಾಯಿತು. ಅಲ್ಲೊಮ್ಮೆ ಇಲ್ಲೊಮ್ಮೆ ಕೇಳಿದ್ದೇವಾದರೂ ಕ್ರಿಶ್ಚಿಯನ್ ಮ್ಯಾನೆಜ್ಮೆಂಟ್ ಶಾಲೆಗಳಲ್ಲಿ ಹೆಣ್ಣುಮಕ್ಕಳು ಹೂ ಮುಡಿಯುವಂತಿಲ್ಲ, ಬಳೆ ಹಾಕಿಕೊಳ್ಳುವಂತಿಲ್ಲ, ಕುಂಕುಮ ಇಡುವಂತಿಲ್ಲ ಎನ್ನುವ ಸಂಪ್ರದಾಯವಿದೆ ಎನ್ನುವುದು ಖುದ್ದು ಅನುಭವಕ್ಕೆ ಬಂದಾಗ ನಿಜಕ್ಕೂ ಅಚ್ಚರಿಯಾಗಿತ್ತು. ಅದರಲ್ಲೂ ಯಶವಂತಪುರದ ಪರಿಚಿತ ಕ್ರೈಸ್ತನೊಬ್ಬನಿಗೆ ‘ದೀಪಾವಳಿಯ ಶುಭಾಶಯಗಳು’ ಎಂದಾಗ ಆತ ‘ನಿಮಗೆ ಸರ್, ನಮಗಲ್ಲ’ ಎಂದು ನಕ್ಕಾಗ ಎಂಥದ್ದೇ ಸಂಗತಿಯಿರಲಿ, ನನಗೆ ಅರಿವಿಲ್ಲ, ನನ್ನ ಅನುಭವಕ್ಕೆ ಬಂದಿಲ್ಲ ಅಥವಾ ನನ್ನ ತಿಳುವಳಿಕೆಯ ಪರಿಮಿತಿಯೊಳಗಿಲ್ಲ ಎಂದಾಗ, ಅಂಥಹ ವಿಷಯಗಳು ಅಸ್ತಿತ್ವದಲ್ಲೇ ಇಲ್ಲ ಎನ್ನುವುದು ಪರಮ ಮೂರ್ಖತನ ಎನ್ನುವ ನನ್ನ ನಂಬಿಕೆಯ ಮಾತುಗಳು ಮತ್ತೊಮ್ಮೆ ಗಟ್ಟಿಯಾದಂತೆನ್ನಿಸಿದ್ದವು.
ಅಷ್ಟಾಗಿಯೂ ನಮ್ಮ ಕಾಲದಲ್ಲಿರದ ಅಥವಾ ಇದ್ದೂ ಇಲ್ಲದಂತಿದ್ದ ಅಸಹಿಷ್ಣುತೆ ಏಕಾಏಕಿ ಹೆಚ್ಚಿದ್ದೇಕೆ ಎನ್ನುವ ಪ್ರಶ್ನೆ ನನ್ನನ್ನು ಆಗಾಗ ಕಾಡುತ್ತಲೇ ಇರುತ್ತದೆ. ಈ ಅಸಹಿಷ್ಣುತೆ ಮೊದಲೂ ಇತ್ತು, ಆದರೆ ಆಗೆಲ್ಲ ಸುದ್ದಿ ಮಾಧ್ಯಮಗಳಿರಲಿಲ್ಲ, ಹಾಗಾಗಿ ವಿಷಯದ ಮಾಹಿತಿಯಿರುತ್ತಿರಲಿಲ್ಲ ಎನ್ನುವ ವಾದವೊಂದಿದೆಯಾದರೂ, ಪ್ರತಿ ಸಿನಿಮಾದ ಯಾವುದೋ ಸಣ್ಣ ದೃಶ್ಯಕ್ಕೆ, ‘ನಮ್ಮ ಜಾತಿಗೆ ಅವಮಾನವಾಯಿತು’ ಎನ್ನುವ, ಪ್ರತಿ ಪುಸ್ತಕದ ಯಾವುದೋ ನಾಲ್ಕು ಸಾಲುಗಳಿಗೆ, ’ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಯಿತು’ ಎಂದು ಅರಚಾಡುವ ಅತಿರೇಕದ ವಾದಿಗಳನ್ನು ಕಂಡಾಗ
ಅದನ್ನೊಪ್ಪಿಕೊಳ್ಳುವುದು ಸ್ವಲ್ಪ ಕಷ್ಟವೇ.
ಸುಮ್ಮನೇ ಗಮನಿಸಿ ನೋಡಿದರೆ ನಮ್ಮ ಬಾಲ್ಯದಲ್ಲಿ ತೆವಳುತ್ತಿದ್ದ ತಂತ್ರಜ್ಞಾನಕ್ಕೆ ಈಗ ಕುದುರೆಯ ವೇಗವಿದೆ. ಪತ್ರಗಳಿಂದ ಲ್ಯಾಂಡ್ ಲೈನ್ ಫೋನುಗಳಿಗೆ ಬರುವ ಕಾಲಾವಧಿಯ ಅರ್ಧ ಸಮಯದಲ್ಲಿ ಮೊಬೈಲ್ ಫೋನ್ ಎನ್ನುವ ಮಾಂತ್ರಿಕತೆಯ ಅವಿಷ್ಕಾರವಾಯಿತು. ಮೊಬೈಲ್ ಎನ್ನುವ ಮಾಯಾವಿ ಕೈಗೆ ಬಂದದ್ದು ಮಾತ್ರವೇ ನೆನಪಿದೆ. ಆದರೆ ಅಲ್ಲಿಂದ ಮುಂದೆ ದೂರಸಂಪರ್ಕ ಕ್ಷೇತ್ರದಲ್ಲಾದ ಬದಲಾವಣೆಯಿದೆಯಲ್ಲ ಅದರ ಬಗ್ಗೆ ಬರೆದರೆ ಅದೇ ಒಂದು ಮಹಾಗ್ರಂಥವಾದೀತು. ಇಂದು ಮೊಬೈಲ್ ಎನ್ನುವ ಸಲಕರಣೆಯನ್ನು ಕೇವಲ ದೂರವಾಣಿ ಎಂದು ಕರೆಯುವುದೇ ಅಪರಾಧವಾದೀತು. ಪ್ರತಿಯೊಬ್ಬನ ಕೈಯೊಳಗಿನ ಬ್ರಹ್ಮಾಂಡವದು ಎನ್ನುವುದು ಹೆಚ್ಚು ಸೂಕ್ತವೇನೋ. ಅಳವಡಿಸಿಕೊಂಡಿರುವ ಅಂತರ್ಜಾಲದ ವ್ಯವಸ್ಥೆಯಿಂದಾಗಿ ಸಾಮಾನ್ಯ ಜ್ಞಾನ, ಸಂಗೀತ, ಸಾಹಿತ್ಯ ಕೊನೆಗೆ ಶೈಕ್ಷಣಿಕ ಮಾಹಿತಿಗಳು ಸಹ ಈಗ ಮೊಬೈಲಿನಲ್ಲಿ ಲಭ್ಯ. ಕೇವಲ ದೂರಸಂಪರ್ಕ ವ್ಯವಸ್ಥೆ ಮಾತ್ರವೇ ಬದಲಾಗಿದೆಯಾ..? ಹಾಗೇನಿಲ್ಲ. ಸಾರಿಗೆ ವ್ಯವಸ್ಥೆಗಳಲ್ಲಿ ಸಹ ಆಗಿರುವ ಬದಲಾವಣೆಗಳು ಕಡಿಮೆಯೇನಿಲ್ಲ. ಒಂದು ಕಾಲಕ್ಕೆ ಕೇವಲ ಸಿರಿವಂತರ ಸ್ವತ್ತು ಎನ್ನಿಸುತ್ತಿದ್ದ ವಿಮಾನಯಾನಗಳು ಈಗ ಮಧ್ಯಮವರ್ಗೀಯರ ಕೈಗೆಟುಕಲಾರಂಭಿಸಿವೆ. ದುಬಾರಿ, ಅಗ್ಗ ಎನ್ನುವ ಲೆಕ್ಕಾಚಾರಗಳನ್ನು ಪಕ್ಕಕ್ಕಿಟ್ಟರೆ ದೊಡ್ಡ ಕಾಯಿಲೆಗಳಿಗೆ ಚಿಕಿತ್ಸೆಯೆನ್ನುವುದು ಮುಂಚಿಗಿAತಲೂ ಸುಲಭಕ್ಕೆ ದೊರಕಲಾರಂಭಿಸಿವೆ. ಪದವಿ, ಉನ್ನತ ಪದವಿಗಳನ್ನೋದಿದ ಮೇಲೂ ಉದ್ಯೋಗ ಸಿಗುವುದು ಹರಸಾಹಸವೆನ್ನುತ್ತಿದ್ದ ಕಾಲಮಾನ, ಪದವಿಪೂರ್ವ ಶಿಕ್ಷಣ ಮುಗಿಸಿದರೆ ಸಾಕು, ಹೊಟ್ಟೆಪಾಡಿಗೆ ಸಣ್ಣದ್ದೇನೋ ಕೆಲಸ ದೊರಕುವುದು ಕಷ್ಟವೇನಿಲ್ಲ ಎನ್ನುವ ಕಾಲವಾಗಿ ಬದಲಾಗಿದೆ. ಗ್ಯಾಸ್ ಸಿಲೆಂಡರುಗಳಿಗೆ ಅರ್ಜಿ ಹಾಕಿದರೆ ಮರುದಿನದ ಹೊತ್ತಿಗೆಲ್ಲ ಸಿಲೆಂಡರು ಮನೆ ಬಾಗಿಲಿಗೆ ಬಂದು ಬೀಳುತ್ತದೆ, ಅಡುಗೆ ಮಾಡಿಕೊಳ್ಳಲು ಬೇಸರವಾಯಿತಾ..? ಇವೆಯಲ್ಲ ಸ್ವಿಗ್ಗಿ, ಜೊಮ್ಯಾಟೊ, ಆರ್ಡರ್ ಮಾಡಿದರಾಯ್ತು, ಅರ್ಧ ಗಂಟೆಗೆಲ್ಲ ರುಚಿಕಟ್ಟಾದ ಊಟ ಮನೆಯ ಬಾಗಿಲಿನೆದುರು ಹಾಜರ್. ಒಟ್ಟಾರೆಯಾಗಿ ಯಾವುದಕ್ಕೂ ಕಾಯುವ ಅಗತ್ಯವಿಲ್ಲ.
ತಾರ್ಕಿಕವಾಗಿ ಕಾಯುವಿಕೆ ಕಡಿಮೆಯಾಗುತ್ತಿದ್ದ ಹಾಗೆ ಬದುಕಿನ ಅಸಹನೆಯೂ ಕಡಿಮೆಯಾಗಬೇಕಿತ್ತು. ಬದುಕು ಹೆಚ್ಚು ಹೆಚ್ಚು ಸಹ್ಯ ಎನ್ನಿಸಬೇಕಿತ್ತು. ಆದರೆ ಹಾಗಾಗಲಿಲ್ಲ. ಬಾಳಿನ ಅಸಹನೆಗಳು ಹೆಚ್ಚುತ್ತಲೇ ಸಾಗಿದವು. ಜನ ಹೆಚ್ಚು ಹೆಚ್ಚು ಅತಿಸೂಕ್ಷ್ಮರಾಗುತ್ತ ನಡೆದರು. ಸಣ್ಣಪುಟ್ಟ ಕಾಲೆಳೆಯುವಿಕೆ, ಹಾಸ್ಯಗಳನ್ನು ಸಹ ಜನ ಗಂಭೀರವಾಗಿ ಪರಿಗಣಿಸಲಾರಂಭಿಸಿದರು. ಪ್ರತಿಯೊಂದಕ್ಕೂ ಧಾರ್ಮಿಕ ಭಾವನೆಯ ಧಕ್ಕೆಯೆಂಬ ಸೂಕ್ಷ್ಮದರ್ಶಕದಡಿ ನೋಡುವ ಪ್ರವೃತ್ತಿ ಬೆಳೆಯಿತು. ಒಟ್ಟಾರೆಯಾಗಿ ಸಣ್ಣದ್ದೊಂದು ಅಂತರವಿಟ್ಟುಕೊಂಡೇ ಅನ್ಯಧರ್ಮೀಯರೊಡನೆ ಸ್ನೇಹ ಬೆಳೆಸುವ, ಕಾಪಾಡಿಕೊಳ್ಳುವ ಅನಿವಾರ್ಯದ ಗೋಡೆಯೊಂದು ಗೊತ್ತಿಲ್ಲದಂತೆ ಜನ ಸಾಮಾನ್ಯರ ನಡುವೆಯೇ ಬೆಳೆದುಬಿಟ್ಟಿತು.
ಇಂಥದ್ದೊಂದು ಬದಲಾವಣೆಯನ್ನು, ನಮ್ಮ ನಡುವಿನ ಭಾವ ಪಲ್ಲಟವನ್ನು ಮೊದಲು ಗಮನಿಸಿದ್ದು ರಾಜಕೀಯ ವಲಯ. ಸಹಜವಾಗಿಯೇ ರಾಜಕಾರಣಿಗಳು ಅದನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲಾರಂಭಿಸಿದರು. ಆ ಕಾರಣದಿಂದಾಗಿಯೇ ಜಾತಿ ರಾಜಕಾರಣವೆನ್ನುವುದು ಮುಂದುವರೆದು ಧರ್ಮ ರಾಜಕೀಯತೆ ಎನ್ನುವ ಹಂತಕ್ಕೆ ತಲುಪಿಕೊಂಡಿತು. ಆ ಧರ್ಮಕ್ಕೆ ಆ ಪಕ್ಷಕ್ಕೆ, ಈ ಧರ್ಮಕ್ಕೆ ನಮ್ಮ ಪಕ್ಷ ಎನ್ನುವಂಥಹ ವಾದಗಳು ಕೇಳಿಬರಲಾರಂಭಿಸಿದವು. ಪರಿಣಾಮವಾಗಿ ಮುಖ್ಯವಾಹಿನಿಯಲ್ಲಿ ಚರ್ಚೆಯಾಗಬೇಕಿದ್ದ ಸಮಸ್ಯೆಗಳು ತೆರೆಮರೆಗೆ ಸೇರಿಕೊಂಡವು. ಅಲ್ಲೆಲ್ಲೋಸಣ್ಣದಾಗಿ ಚರ್ಚೆಯಲ್ಲಿ ಮುಗಿಯಬೇಕಿದ್ದ ಕಲಹಗಳು ದೊಡ್ಡ ವೇದಿಕೆಯ ಮೇಲೆ ಮೆರೆದಾಡಲಾರಂಭಿಸಿದವು.
ಪ್ರಸ್ತುದದ ಸಮಸ್ಯೆಗಳನ್ನೇ ಸುಮ್ಮನೆ ಗಮನಿಸಿ ನೋಡಿ. ಮುಂಚಿನಂತೆ ಬೆಲೆಯೇರಿಕೆ, ರಸ್ತೆಗಳು, ಶಿಕ್ಷಣದ ಸುಧಾರೀಕರಣದಂಥಹ ಸಮಸ್ಯೆಗಳು ಈಗ ರಾಜಕೀಯ ವರ್ಗಕ್ಕಾಗಲಿ, ಜನಸಾಮಾನ್ಯರಿಗಾಗಲಿ ಚರ್ಚೆಯ ವಿಷಯವೇ ಅಲ್ಲ. ಆದರೆ ಮತಾಂತರ ನಿಷೇಧ ಕಾಯ್ದೆ ಎಂದಾಕ್ಷಣ ಅದು ಬಲುದೊಡ್ಡ ಚರ್ಚೆ. ಹೊಸ ಧರ್ಮಗಳ ಸ್ಥಾಪನೆಯೆನ್ನುವುದು ಬಹು ಮಹತ್ವದ ಚರ್ಚೆ. ಶಿಕ್ಷಣ ಹೇಗಾದರೂ ಇರಲಿ, ಶಾಲೆಯಲ್ಲಿ ಮೊಟ್ಟೆ ಕೊಟ್ಟು ಮಾಂಸಾಹಾರಿಗಳ ಓಲೈಕೆ ಮಾಡಬೇಕಾ? ಹಣ್ಣುಕೊಟ್ಟು ಸಸ್ಯಹಾರಿಗಳ ಮನವೊಲಿಸಬೇಕಾ ಅದು ಮತ್ತೂ ದೊಡ್ಡ ಚರ್ಚೆ. ಓಟ್ ಬ್ಯಾಂಕ್ ಎನ್ನುವ
ಬ್ರಹ್ಮಾಸ್ತ್ರಕ್ಕಾಗಿ ಚರ್ಚೆಯೇ ಅಲ್ಲದ ವಿಷಯಗಳಿಗೆ ಗಂಟೆಗಟ್ಟಲೇ ವಾರಗಟ್ಟಲೇ ಚರ್ಚೆ.
ಇಲ್ಲಿ ತಪ್ಪು ಸರಿಗಳ ಪರಾಮರ್ಶೆಗೆ ನಾನಿಳಿಯಲಾರೆ. ಆದರೆ ಏಕೆ ಹೀಗಾಯಿತು..? ಪ್ರಶಾಂತವಾಗಿರಬೇಕಿದ್ದ ಬದುಕು ಕಲ್ಲೆಸೆದ ಕೊಳದ ಅಲೆಗಳಂತೆ ಯಾಕಿಷ್ಟು ಅಸಹನೀಯವಾಯಿತು..? ಕಾಲ ಸರಿದಂತೆ ಪರಿಪಕ್ವವಾಗಬೇಕಿದ್ದ ಸಮುದಾಯ ಏಕಿಷ್ಟು ಸಂವೇದನಾಹೀನತೆಯನ್ನು ಬೆಳೆಸಿಕೊಂಡಿತು..? ಇದಕ್ಕೆಲ್ಲ ತಂತ್ರಜ್ಞಾನದ ಅತಿವೇಗದ ಬೆಳವಣಿಗೆ ಕಾರಣವಾ..? ಬದಲಾದ ಮನುಷ್ಯನ ಆದ್ಯತೆಗಳು ಕಾರಣವಾ..? ಬದುಕಿನ ರೀತಿ ಬದಲಾಗುತ್ತಿದ್ದ ಹಾಗೆ ಆಲೋಚನಾ ಧಾಟಿಯೂ ಬದಲಾಯಿತಾ..? ಎನ್ನುವ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ಳುವುದಂತೂ ಹೌದು. ಬಹುಶ: ಅಂಥಹ ಯಾವ ಪ್ರಶ್ನೆಗಳಿಗೂ ಇದಮಿತ್ಥಂ ಎನ್ನುವ ಸಮರ್ಪಕ ಉತ್ತರಗಳಿಲ್ಲ. ಆದರೆ ಈ ಬಗೆಯ ಸ್ಥಿತ್ಯಂತರ ತೀರ ಅಪಾಯಕಾರಿ ಎನ್ನುವುದು ಮಾತ್ರ ಸುಳ್ಳಲ್ಲ ನೋಡಿ.
2023ರ ಹೊಸಬೆಳಕಿನಲ್ಲಿ ಧಾರ್ಮಿಕ ದಳ್ಳುರಿಗಳು ಕಡಿಮೆಯಾಗಲಿ,
ಸಹಿಷ್ಣುತೆ ಬೆಳೆಯಲಿ ಎಂದು ಹಾರೈಸುವುದೇ ಅತಿ ದೊಡ್ಡ ಹಾರೈಕೆ.