ಶ್ರೀ ವೆಂಕಟೇಶ್ವರ ದೇವಾಲಯ, ತಿರುಪತಿ, ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದ್ದು. ಪ್ರಪಂಚದ ಹಲವು ಶ್ರೀಮಂತ ದೇವಾಲಯಗಳಲ್ಲಿ ಇದು ಪ್ರಥಮ ಸಾಲಿನಲ್ಲಿದೆ. ವರ್ಷ ಪೂರ ಭಕ್ತರಿಂದ ತುoಬಿ ತುಳುಕಾಡುವ ದೇವಾಲಯಕ್ಕೆ ವಿದೇಶಗಳಿಂದಲೂ ಸ್ವಾಮಿಯ ದರ್ಶನಕ್ಕೆ ಬರುತ್ತಾರೆ. ಶ್ರೀ ವೆಂಕಟೇಶ್ವರ ದೇವಾಲಯವು ವೈಷ್ಣವ ದೇವಾಲಯವಾಗಿದ್ದು, ಈ ದೇವಾಲಯವು ಆಂಧ್ರ ಪ್ರದೇಶ ರಾಜ್ಯ, ಚಿತ್ತೂರು ಜಿಲ್ಲೆ, ತಿರುಪತಿ ನಗರದ ತಿರುಮಲ ಬೆಟ್ಟದಲ್ಲಿದೆ. ಇವರು ಕಲಿಯುಗದ ಪ್ರತ್ಯಕ್ಷ ದೈವವಾಗಿ; ಈ ಕ್ಷೇತ್ರವು ಭೂ-ವೈಕುಂಠವಾಗಿ ಬೆಳೆದು ಬಂದಿದೆ.
ಇದು ಸಮುದ್ರಮಟ್ಟದಿಂದ ೮೫೩ ಮೀಟರ್ (೨೭೯೯ ಅಡಿಗಳು) ಎತ್ತರದಲ್ಲಿದೆ. ಇದು ಏಳು ಶಿಖರಗಳ ಬೆಟ್ಟವಾಗಿದೆ. ಅವು ವೃಷಭಾದ್ರಿ, ಅಂಜನಾದ್ರಿ, ನೀಲಾದ್ರಿ, ಗರುಡಾದ್ರಿ, ಶೇಷಾದ್ರಿ, ನಾರಾಯಣಾದ್ರಿ, ವೆಂಕಟಾದ್ರಿ. ಅಲ್ಲದೆ ಇದನ್ನು ಆದಿಶೇಷನ ಏಳು ತಲೆಗಳೆಂದು ಕರೆಯುತ್ತಾರೆ. ಉತ್ತರದ ಕಡೆ ಪವಿತ್ರ ಸ್ವಾಮಿಯ ಪುಷ್ಕರಣಿ ಇದೆ. ಈ ದೇವಾಲಯವು ದ್ರಾವಿಡ ಶೈಲಿಯಲ್ಲಿದೆ. ಇದರ ಸ್ಥಾಪನೆ ೩ನೇ ಶತಮಾನದಲ್ಲಿ ಆಗಿದ್ದು ಇಲ್ಲಿನ ಗರ್ಭಗುಡಿಯನ್ನು ಆನಂದನಿಲಯವೆoದು ಕರೆಯುತ್ತಾರೆ. ಶ್ರೀವೆಂಕಟೇಶ್ವರ ಸ್ವಾಮಿಗೆ ವೈಖಾನಾಂಶ ಪದ್ಧತಿಯಂತೆ ಆರಾಧನೆ ಮಾಡುತ್ತಾರೆ. ಇದು ವೈಷ್ಣವ ದಿವ್ಯದೇಶಗಳಲ್ಲಿ ೧೦೬ನೇ ಕ್ಷೇತ್ರವಾಗಿದೆ. ಇದು ಸ್ವಯಂಭೂ ವಿಗ್ರಹವಾಗಿದ್ದು, ಇದು ಪ್ರಪಂಚದಲ್ಲಿಯೇ ಅತಿ ದೊಡ್ಡ ಐಶ್ವರ್ಯವಂತ ದೇವಾಲಯವಾಗಿದೆ. ಪ್ರತಿದಿನ ೫೦ ಸಾವಿರದಿಂದ ೧ ಲಕ್ಷದವರೆಗೆ ಜನರು ಈ ದೇವಾಲಯವನ್ನು ದರ್ಶಿಸುತ್ತಾರೆ, ಒಂದು ಕತೆಯ ಪ್ರಕಾರ ಮೂರ್ತಿಯು ಈ ಕಲಿಯುಗ ಪೂರ್ತಿ ಇಲ್ಲಿಯೇ ನೆಲೆಸಿರುತ್ತದೆ. ದ್ವಾಪರ ಯುಗದಲ್ಲಿ ಆದಿಶೇಷನು ಭೂಮಿಯ ಮೇಲೆ ಶೇಷಾಚಲ ಬೆಟ್ಟದಲ್ಲಿ ಬಂದು ವಾಸಿಸಿದನು. ಆದರೆ ವಾಯುವಿನ ಹೋರಾಟದಲ್ಲಿ ಅದು ಏಳುಭಾಗದ ಶಿಖರಗಳಾಯಿತೆಂದು ದಂತಕತೆ ಹೇಳುತ್ತದೆ.
ಶ್ರೀಮನ್ ನಾರಾಯಣನು ವರಾಹಾವತಾರದಲ್ಲಿ ಹಿರಣ್ಯಾಕ್ಷನನ್ನು ಸಂಹಾರ ಮಾಡಿ, ಆದಿ ವರಾಹಸ್ವಾಮಿಯ ರೂಪದಲ್ಲಿ ಈ ತಿರುಮಲೈನಲ್ಲಿ ನೆಲೆಸಿದನೆಂಬ ನಂಬಿಕೆ ಕೂಡ ಇದೆ. ಅನಂತರ ಕಲಿಯುಗದಲ್ಲಿ ಋಷಿಗಳು ಒಂದು ಮಹಾಯಜ್ಞವನ್ನು ಕೈಗೊಂಡು, ಅನಂತರ ಅದರ ಆಗ್ರಪೂಜೆ (ಫಲ) ತ್ರಿಮೂರ್ತಿಗಳಲ್ಲಿ ಯಾರಿಗೆ ನೀಡಬೇಕೆಂಬ ವಿವಾದ ಉಂಟಾಗಿ, ಕೊನೆಗೆ ತ್ರಿಮೂರ್ತಿಗಳ ಸಾಮರ್ಥ್ಯವನ್ನು ಪರೀಕ್ಷಿಸಲು ಮುಂದಾದ ಭೃಗು ಋಷಿಯು ಶ್ರೀಮಹಾವಿಷ್ಣುವಿನ ಲೋಕಕ್ಕೆ ಹೋಗುತ್ತಾರೆ. ಆದರೆ ಶ್ರೀವಿಷ್ಣು ಇವರ ಕಡೆ ನೋಡುವುದಿಲ್ಲ, ಆಗ ಭೃಗು ಮಹರ್ಷಿಗೆ ಕೋಪವುಂಟಾಗಿ ಶ್ರೀ ಮಹಾವಿಷ್ಣುವಿನ ವಕ್ಷಸ್ಥಳಕ್ಕೆ ಒದೆಯುತ್ತಾರೆ. ಆದರೆ ಶ್ರೀವಿಷ್ಣುವು ಕೋಪಿಸಿಕೊಳ್ಳದೆ, ಋಷಿಯ
ಕಾಲಿಗೆ ನೋವಾಗಿರಬೇಕೆಂದು ಕ್ಷಮೆ ಕೇಳಿ, ಆ ಕಾಲನ್ನು ಹಿಡಿದು ಬೇಡಿಕೊಳ್ಳುವ ರೀತಿ ನಟನೆ ಮಾಡುತ್ತಾ, ಅವರ ಪಾದದಲ್ಲಿರುವ ಕಣ್ಣನ್ನು ಜೋರಾಗಿ ಒತ್ತಿ ನಾಶ ಮಾಡುತ್ತಾರೆ. ತಕ್ಷಣ ಋಷಿಯು ತನ್ನ ಅಹಂಕಾರದಿoದ ಹೊರಬಂದು ಶ್ರೀಮಹಾವಿಷ್ಣುವಿನಲ್ಲಿ ಕ್ಷಮೆ ಕೋರುತ್ತಾನೆ. ಆದರೆ ಪಕ್ಕದಲ್ಲೇ ಕುಳಿತಿದ್ದ ಶ್ರೀಮಹಾಲಕ್ಷ್ಮಿಯು ತಾನು ವಾಸಮಾಡುತ್ತಿರುವ ವಕ್ಷಸ್ಥಳಕ್ಕೆ ಒದ್ದಿದ್ದರಿಂದ ಅಪಮಾನವಾಯಿತೆಂದು, ವೈಕುoಠ ಬಿಟ್ಟು ಭೂಮಿಯ ಮೇಲೆ ಬಂದು, ಈಗಿನ ಕೊಲ್ಲಾಪುರದಲ್ಲಿ
ತಪಸ್ಸು ಆಚರಿಸುತ್ತಾಳೆ. ಶ್ರೀಲಕ್ಷ್ಮೀ ಇಲ್ಲದ ವೈಕುಂಠವನ್ನು ನೋಡಿ, ತಾನೂ ಸಹ ಶ್ರೀಲಕ್ಷ್ಮಿಯನ್ನು ಹುಡುಕುತ್ತಾ ಭೂಮಿಗೆ ಬರುತ್ತಾರೆ. ಆದರೆ ಭೂಮಿಯ ಮೇಲೆ ಬಂದು ಕಾಲಿಟ್ಟೊಡನೆ ಅವರು ಶ್ರೀನಿವಾಸರಾಗಿ ಬದಲಾಗಿ, ತನ್ನ ನಿಜರೂಪವನ್ನು ಮರೆತು ಸಾಮಾನ್ಯ ಮನುಷ್ಯನಾಗಿ ಅನೇಕ ಕಷ್ಟಗಳಿಗೊಳಗಾಗುತ್ತಾರೆ.
ಅನಂತರ ಬಕುಳ ದೇವಿಯ ಆಶ್ರಮಕ್ಕೆ ಸೇರಿ ವಾಸಿಸುತ್ತಾರೆ. ಬಕುಳ ದೇವಿಯು ಹಿಂದೆ ಯಶೋಧಾದೇವಿಯಾಗಿ ಶ್ರೀಕೃಷ್ಣನನ್ನು ಆರೈಕೆ ಮಾಡಿದ್ದಳು. ಆದರೆ ಆತನ ಎಂಟು ವಿವಾಹದಲ್ಲಿ ಒಂದು ವಿವಾಹವಾದರೂ ಕಣ್ಣಿನಿಂದ ನೋಡಬೇಕೆಂಬ ಹಂಬಲದಿoದ ಶ್ರೀಕೃಷ್ಣನನ್ನು ಕೇಳಿಕೊಳ್ಳುತ್ತಾಳೆ. ಕೃಷ್ಣ ಮುಂದೆ ಕಲಿಯುಗದಲ್ಲಿ ನಿನ್ನ ಆಸೆ ಈಡೇರಿಸುತ್ತೇನೆಂದು ಮಾತು ನೀಡಿ, ಕಲಿಯುಗದಲ್ಲಿ ಬಕುಳ ದೇವಿಯು ತಾಯಿಯಾಗಿ ನೋಡುವಂತೆ, ಆಕಾಶರಾಜನ ಮಗಳಾದ ಪದ್ಮಾವತಿಯನ್ನು ವಿವಾಹ ಮಾಡಿಕೊಳ್ಳುತ್ತಾರೆ. ಅನಂತರ ಅವರು ಶ್ರೀನಿವಾಸ ಮಂಗಾಪುರದಲ್ಲಿ (ಕಲ್ಯಾಣ ವೆಂಕಟೇಶ್ವರ ದೇವಾಲಯ) ಅಗಸ್ತ್ಯ ಮುನಿಗಳ ಸೂಚನೆಯಂತೆ ಆರು ತಿಂಗಳು ನೆಲೆಸಿ, ಅನಂತರ ತಿರುಮಲ ಸೇರುತ್ತಾರೆ. ಅಲ್ಲಿ ಸಂಸಾರ ಜೀವನ ನಡೆಸುತ್ತಿರುತ್ತಾರೆ.
ಒಂದು ದಿನ ಶ್ರೀ ನಾರದ ಮಹರ್ಷಿಯಿಂದ ಮಹಾವಿಷ್ಣುವು ಇನ್ನೊಂದು ವಿವಾಹ ಮಾಡಿಕೊಂಡಿರುವುದನ್ನು ತಿಳಿದ ಶ್ರೀಲಕ್ಷ್ಮಿಯು ಪತಿಯನ್ನು ಹುಡುಕಿಕೊಂಡು ಬಂದು, ತಿರುಮಲೈನಲ್ಲಿ ನೋಡುತ್ತಾಳೆ.
ಪದ್ಮಾವತಿ, ಲಕ್ಷ್ಮಿಯ ಕಲಹದಲ್ಲಿ ಶ್ರೀನಿವಾಸರು ಕಲ್ಲಾಗಿ ನಿಲ್ಲುತ್ತಾರೆ. (ಪದ್ಮಾವತಿಯು ಈ ಹಿಂದೆ ಭೂದೇವಿಯಾಗಿದ್ದಾಗ ಮುಂದಿನ ಕಲಿಯುಗದಲ್ಲಿ ವಿವಾಹವಾಗುತ್ತೇನೆಂದು ಮಾತು ನೀಡಿರುತ್ತಾರೆ.) ಹೀಗೆ ಕಲ್ಲಾಗಿರುವುದನ್ನು ನೋಡಿದ ಬ್ರಹ್ಮ-ಶಿವರು ಆ ಇಬ್ಬರು ಸತಿಯರ ಕಲಹಗಳನ್ನು ನೋಡಿ, ಅವರ ಕಲಹ ನಿಲ್ಲಿಸುತ್ತಾರೆ. ಇದೆಲ್ಲಾ ನಿಮಿತ್ತ ಮಾತ್ರ. ಕಲಿಯುಗದಲ್ಲಿ ಸ್ವಾಮಿಯು ತನ್ನ ಭಕ್ತರ ರಕ್ಷಣೆಗಾಗಿ ಇಲ್ಲಿ ನೆಲೆಸಬೇಕಾಗಿತ್ತು. ಆದಕಾರಣ ಇಲ್ಲಿ ನೆಲೆಸಿದ್ದಾರೆ. ನೀವೂ ಸಹ ಇಲ್ಲೇ ನೆಲೆಸಿ ಸ್ವಾಮಿಗೆ ಸಹಾಯ ಮಾಡಿರೆಂದು ಸೂಚಿಸುತ್ತಾರೆ. ಇದರಿಂದ ಮನಃಪರಿವರ್ತನೆಗೊಂಡ ಇಬ್ಬರು ಸತಿಯರು ಶ್ರೀಭಗವಂತ ವಕ್ಷಸ್ಥಳದ ಬಲಭಾಗದಲ್ಲಿ ಲಕ್ಷ್ಮಿ, ಪದ್ಮಾವತಿಯು (ಭೂದೇವಿಯಾಗಿ) ಎಡಭಾಗದಲ್ಲಿ ನೆಲೆಸಿದ್ದಾರೆ. ಈ ದೇವಾಲಯಕ್ಕೆ ಪಲ್ಲವರ ರಾಣಿ ‘ಸಮದಯಿ’ಯು ಮೊಟ್ಟಮೊದಲ ಬಾರಿಗೆ ಅಪಾರ ಭೂಮಿ, ನಗದು, ಆಭರಣಗಳನ್ನು ದಾನ-ದತ್ತುಗಳಾಗಿ
ನೀಡಿದರೆಂದು ಚರಿತ್ರೆಯಲ್ಲಿ ತಿಳಿಸಿದ್ದಾರೆ. ಇವರು ನೀಡಿದ ೧೦ ಮತ್ತು ೧೩ ಎಕರೆಯ ಉತ್ಪತ್ತಿಯಿಂದ ನಿತ್ಯಪ್ರಸಾದ, ಉತ್ಸವ, ಅಭಿಷೇಕಗಳು ಆರಂಭವಾದವು. ಪಲ್ಲವ ಸಂತತಿ ೯ನೇ ಶತಮಾನ, ಚೋಳ ಸಂತತಿ ೧೦ನೇ ಶತಮಾನದಲ್ಲಿ ವಿಜಯನಗರದ ರಾಜರು ೧೪ನೇ ಶತಮಾನಗಳಲ್ಲಿ ಶ್ರೀವೆಂಕಟೇಶ್ವರ ಸ್ವಾಮಿಯ ಭಕ್ತರಾಗಿ, ಅನೇಕ ಸೇವೆ ಸಲ್ಲಿಸಿದ್ದರು. ಶ್ರೀಕೃಷ್ಣದೇವರಾಯ ಅನೇಕ ಸಲ ಭೇಟಿ ನೀಡಿ, ಅನೇಕ ಕಟ್ಟಡಗಳು, ಆಭರಣಗಳನ್ನು ನೀಡಿ ಪೋಷಿಸಿದರು. ಅನಂತರದ ದಿನಗಳಲ್ಲಿ ಮೈಸೂರು
ಅರಸರು, ಗಡವಾಲ ಸಂಸ್ಥಾನ, ಮರಾಠರು ದೇವರನ್ನು ಆರಾಧಿಸಲು ಬರುತ್ತಿದ್ದರು.
೧೮೦೧ರಲ್ಲಿ ಇದನ್ನು ಈಸ್ಟ್ ಇಂಡಿಯಾ ಕಂಪನಿಯು ವಶಪಡಿಸಿಕೊoಡಿತು. ಅವರು ಇತರರಿಗೆ ಬಾಡಿಗೆ ರೂಪದಲ್ಲಿ ಈ ದೇವಾಲಯವನ್ನು ವಹಿಸಿಕೊಟ್ಟರು. ಅನಂತರ ದೇವರ ಇತರ ಸೇವೆಗಳಿಗೆ ಶುಲ್ಕಗಳನ್ನು ವಿಧಿಸಿದರು. ೧೮೪೩ರಲ್ಲಿ ಈ ದೇವಾಲಯವನ್ನು ಈಸ್ಟ್ ಇಂಡಿಯಾ ಕಂಪನಿಯಿoದ ಮಹಂತ ಹತಿರಾಮಜೀಗೆ ವರ್ಗಾಯಿಸ
ಲಾಯಿತು. ಇವರು ಆರು ತಲೆಮಾರುಗಳವರೆಗೆ (೧೯೩೩ರವರೆಗೆ) ನೋಡಿಕೊಳ್ಳುತ್ತಿದ್ದರು. ಅನಂತರ ಈಗಿನ ತಿರುಮಲ ತಿರುಪತಿ ದೇವಾಲಯ ಟ್ರಸ್ಟ್ ನಿಯಮಾವಳಿಯವರ ಸುಪರ್ದಿಗೆ ಸೇರಿತು. ಈ ದೇವಾಲಯ ಗೋಡೆಗಳಲ್ಲಿ ಅನೇಕ ಶಿಲಾಶಾಸನ ಹಾಗೂ ಲಿಖಿತ ಲೇಖನಗಳನ್ನು ಕೆತ್ತಿದ್ದಾರೆ. ದೇವಾಲಯ ಸಾಂಸ್ಕೃತಿಕ, ಚರಿತ್ರೆ, ಸಂಪ್ರದಾಯಗಳoತೆ ಬಹುಭಾಷೆಗಳಲ್ಲಿ ಬರೆದಿದ್ದಾರೆ. ಸುಮಾರು ೬೪೦ ಶಿಲಾಶಾಸನಗಳು ಇಲ್ಲಿಯವರೆಗೆ ದೊರಕಿವೆ. ಈ ಶಾಸನ ಮತ್ತು ಚರಿತ್ರೆಗಳು , ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿದೆ. ದೇವಾಲಯದ ಶ್ರೀವಾರಿ ಹುಂಡಿಯಲ್ಲಿ ಪ್ರತಿದಿನ ಅನೇಕ ಕೋಟಿಗಳಷ್ಟು ವರಮಾನ ಬರುತ್ತದೆ. ದೇವಾಲಯದ ಮಹಾದ್ವಾರದಿಂದ ನೇರವಾಗಿ ಗರ್ಭಗೃಹವಿದೆ. ಮಹಾದ್ವಾರದ ಗೋಪುರದ ಎತ್ತರ ೫೦ ಅಡಿಗಳು, ಐದು ಅಂತಸ್ತಿನಿoದ ಕೂಡಿದೆ. ಗೋಪುರದ ಮೇಲೆ ಏಳು ಕಳಸಗಳನ್ನು ಸ್ಥಾಪಿಸಿದ್ದಾರೆ. ಮುಂದೆ ಬೆಳ್ಳಿ ಬಾಗಿಲು, ಎರಡನೇ ದ್ವಾರದ ಮೂಲಕ ಸಂಪoಗಿ ಪ್ರಾಕಾರಕ್ಕೆ ಪ್ರವೇಶ ಮಾಡಬಹುದು, ಅನಂತರ ಬoಗಾರದ ಬಾಗಿಲು ಗರ್ಭಗೃಹ ಬಾಗಿಲಲ್ಲಿದೆ. ಅದರ ಬದಿಯಲ್ಲಿ ತಾಮ್ರದ ಜಯ-ವಿಜಯ ದ್ವಾರಪಾಲಕರ ವಿಗ್ರಹಗಳು ಇವೆ. ದೇವಾಲಯದಲ್ಲಿ ಪ್ರದಕ್ಷಿಣಾಕಾರಗಳಿವೆ. ದೇವಾಲಯ ಸುತ್ತುವ ಒಳಕಾಲು ದಾರಿಗಳು ಒಂದು ಮಹಾದ್ವಾರದ ಒಳಗೆ ಹೋದರೆ ಮತ್ತೊಂದು ಸoಪoಗಿ ಪ್ರಾಕಾರದ ಒಳಭಾಗದಲ್ಲಿದೆ. ಈ ಸಂಪoಗಿ ಮಂಟಪದಲ್ಲಿ ಪ್ರಾಕಾರದಲ್ಲಿ ಅನೇಕ ಸಣ್ಣ ಮಂಟಪಗಳು, ಧ್ವಜಸ್ತಂಭ, ಬಲಿಪೀಠ, ಕ್ಷೇತ್ರಪಾಲಕ ಶಿಲಾ, ಪ್ರಸಾದ ನೀಡುವ ಸ್ಥಳಗಳಿವೆ. ಮೂರನೇ ಪ್ರಾಕಾರದಲ್ಲಿ ಗರ್ಭಗುಡಿ. ಅಲ್ಲಿಯೇ ಪ್ರದಕ್ಷಿಣೆ ಮಾಡಬಹುದು. ಆನಂದ ನಿಲಯ ವಿಮಾನ ಮತ್ತು ಗರ್ಭಗುಡಿ, ಇಲ್ಲಿ ವರದರಾಜಸ್ವಾಮಿ, ಯೋಗನರಸಿಂಹ, ಪ್ರಧಾನ ಅಡುಗೆ ಮನೆ, ಬಂಗಾರದ ಬಾವಿ, ಅಂಕುರಾರ್ಪಣೆ ಮಂಟಪ, ಯೋಗಶಾಲೆ, ಗಂಧ ತೇಯುವ ಕಲ್ಲುಗಳು, ಸನ್ನಿಧಿ ಭಾಷ್ಯಗಾರರು, ಶ್ರೀವಾರು ಹುಂಡಿ, ಹುಂಡಿ ಹಣ ವಸ್ತು ಪ್ರತ್ಯೇಕ ಮಾಡುವ ಸ್ಥಳ, ಇತರೆ…. ಬಂಗಾರ ಬಾಗಿಲ ಒಳಹೋದರೆ ಎರಡು ದ್ವಾರಗಳ ದಾಟಿಕೊಂಡು ಹೋದರೆ ಸ್ವಾಮಿಯ ಗರ್ಭಗುಡಿ ಇದೆ. ಸ್ವಾಮಿಯು ನಿಂತಿರುವ ಭಂಗಿಯಲ್ಲಿ ಇರುತ್ತಾರೆ. ನಾಲ್ಕು ಕೈಗಳು, ಒಂದು ಕೈ ವರದ ಹಸ್ತ ಮತ್ತೊಂದು ತೊಡೆಯನ್ನು ಸ್ಪರ್ಶಿಸುತ್ತಿದೆ. ಮೇಲಿನ ಕೈಗಳಲ್ಲಿ ಶಂಖ ಮತ್ತು ಸುದರ್ಶನ ಚಕ್ರ ಹೊಂದಿ, ರತ್ನಾಭರಣಗಳಿಂದ ಅಲಂಕೃತವಾಗಿದೆ. ವಕ್ಷಸ್ಥಳದಲ್ಲಿ ಭೂದೇವಿ, ಶ್ರೀದೇವಿಯರು. ಆನಂದ ನಿಲಯ ಗೋಪುರವು ಮೂರು ಅಂತಸ್ತು ಹೊಂದಿ, ಗರ್ಭಗೃಹದ ಮೇಲೆ ನಿರ್ಮಿಸಿದ್ದಾರೆ.
೧. ಮೂಲ ವಿಗ್ರಹ (ದೈವ ಬೇರಂ)
ಮುಖ್ಯ ಶಿಲಾಕಾರದ ವೆಂಕಟೇಶ್ವರರ ವಿಗ್ರಹವನ್ನು ‘ಧೃವಬೇರಂ’ ಎoದು ಕರೆಯುತ್ತಾರೆ. (ತೆಲುಗಿನಲ್ಲಿ ಬೇರಂ ಎಂದರೆ, ದೇವರು, ಧೃವ ಎಂದರೆ ಧ್ರುವ ನಕ್ಷತ್ರ ಅಥವಾ ಸ್ಥಾಪಿಸಿರುವ) ಈ ವಿಗ್ರಹವು ೮ ಅಡಿ ಎತ್ತರವಿದೆ. (ಪಾದ ಪೀಠದಿಂದ ಕಿರೀಟದ ತುದಿಯವರೆವಿಗೆ) ವಿಗ್ರಹ ದೇವಾಲಯದ ಶಕ್ತಿಯ ಉಗಮಸ್ಥಾನವಾಗಿದೆ.
೨. ಕೌಟುಕ ಬೇರಂ (ಭೋಗ ಶ್ರೀನಿವಾಸ)
ಇದು ಒಂದು ಅಡಿ ಎತ್ತರವಿರುವ ಬೆಳ್ಳಿ ವಿಗ್ರಹ. ಇದನ್ನು ಪಲ್ಲವ ರಾಣಿ ‘ಸಮವೈ’ ಅಥವಾ ಕದವೈ ಪೆರಂದೇವಿ ಎನ್ನುತ್ತಾರೆ. ಇವರು ಪಲ್ಲವರಲ್ಲಿ ಪ್ರಮುಖನಾದ ಶಕ್ತಿ ವಿಕಟನ್ರ ಪತ್ನಿ ಕ್ರಿ.ಶ ೬೧೪ರಲ್ಲಿ ದೇವಾಲಯಕ್ಕೆ ಈ ವಿಗ್ರಹವನ್ನು ನೀಡಿದರು. ಇದು ಸ್ಥಾಪನೆಯಾಗದ ವಿಗ್ರಹವಾಗಿದೆ. ಆದರೆ ಎಂದೂ ಇದುವರೆವಿಗೂ ಮೂಲಗರ್ಭಗೃಹದಿಂದ
ಇದನ್ನು ಹೊರಗೆ ತಂದಿಲ್ಲ, ಇದು ಭಕ್ತರ ಆಸೆಗಳನ್ನು ಈಡೇರಿಸಿ, ಅವರ ಸೇವೆಗಳನ್ನು ಸ್ವೀಕರಿಸಲು, ಮೂಲ ವಿಗ್ರಹಕ್ಕೆ ಮಾಡಲಾಗದ ಸೇವೆಗಳನ್ನು ಈ ವಿಗ್ರಹಕ್ಕೆ ಮಾಡುತ್ತಾರೆ. ಆದ್ದರಿಂದ ಮೂಲವಿಗ್ರಹಕ್ಕಿಂತ ಹೆಚ್ಚು ಸೇವೆಗಳನ್ನು ಮಾಡಬೇಕಾಗಿರುವುದರಿಂದ ಭೋಗ ಶ್ರೀನಿವಾಸರೆಂದು ಕರೆಯುತ್ತಾರೆ.
೩. ಸ್ನಪನ ಭೇರಂ (ಉಗ್ರ ಶ್ರೀನಿವಾಸ)
ಇದು ವೆಂಕಟೇಶ್ವರ ಸ್ವಾಮಿಯ ಒಂದು ಭಯಾನಕ ಸ್ವರೂಪ, ಇದು ದೇವಾಲಯದ ಗರ್ಭಗೃಹದೊಳಗೆ ಇರುತ್ತದೆ. ಇದನ್ನು ವರ್ಷಕ್ಕೆ ಒಂದಾವರ್ತಿ ಮಾತ್ರ ಹೊರ ತರುತ್ತಾರೆ. ಅದು ಉತ್ಥಾನ ದ್ವಾದಶಿಯಂದು
(ಕೈಶಿಖ ದ್ವಾದಶಿ) ಸೂರ್ಯ ಉದಯಿಸುವುದರೊಳಗೆ ಮಾತ್ರ ತರುತ್ತಾರೆ. ಈ ಪ್ರತಿಮೆ ಪ್ರತಿದಿನ ಅಭಿಷೇಕಗಳಿಂದ ಪೂಜಿಸಲ್ಪಡುತ್ತದೆ. ಕೇವಲ ಭಕ್ತರ ಪ್ರೀತಿಗಾಗಿ ಮಾಡುವುದಿಲ್ಲ, ಅದು ಉಗ್ರ ಶ್ರೀನಿವಾಸರನ್ನು ಶಾಂತಗೊಳಿಸಲು ಈಗಲೂ ಮಾಡುತ್ತಾ ಬರುತ್ತಿದ್ದಾರೆ. ಈ ದೇವಾಲಯದ ಪೂಜಾರಾಧನೆಯ ಉತ್ಸವಗಳನ್ನು ‘ವೈಖಾನಸ ಪದ್ಧತಿ’ಯಂತೆ ನಡೆಸುತ್ತಾರೆ. ಈ ವೈಖಾಸನರು, ಅತ್ರಿ, ಭೃಗು, ಮರೀಚಿ, ಕಶ್ಯಪರಂತೆ ಹಿಂದೂ ಧಾರ್ಮಿಕ ಆರಾಧನೆಗಳ ಪ್ರಚಾರಕರಾಗಿದ್ದರು. ಪ್ರಾಚೀನ ಗ್ರಂಥಗಳ ಪ್ರಕಾರ ಪ್ರತಿದಿನ ಆರು ಸಲ ಪೂಜಾರಾಧನೆ ಕೈಗೊಳ್ಳಬೇಕು. ಅದರಲ್ಲಿ ಒಂದಾದರೂ ಸಹ ಕಡ್ಡಾಯಪೂರ್ವಕವಾಗಿ ಮಾಡಬೇಕು.
ಆರು ವಿಧದ ಪೂಜೆಗಳು: ೧. ಪ್ರಾರ್ಥಿ ಉತ್ಸವ ಪೂಜೆ ೨. ಪ್ರಾತಃಕಾಲ ಪೂಜೆ ೩.
ಮಧ್ಯಾಹ್ನ ಪೂಜೆ ೪. ಅಪರಾಹ್ನ ಪೂಜೆ ೫. ಸಂಧ್ಯಾಕಾಲ ಪೂಜೆ ೬. ನಿಶಿ ಪೂಜೆ.
ಪ್ರತಿದಿನ ಮೂರು ಪೂಜೆಗಳನ್ನು ಮಾತ್ರ ಮಾಡುತ್ತಾರೆ. ಉಷಾಕಾಲ ಪೂಜೆ, ಮಧ್ಯಾಹ್ನ ಕಾಲ ಪೂಜೆ ಮತ್ತು ನಿಶಿ ಪೂಜೆ. ಈ ಎಲ್ಲಾ ಆರಾಧನೆಗಳು ವಂಶಪಾರoಪರ್ಯವಾಗಿ ಬಂದ ವೈಖಾನಸ ಪೂಜಾರಿಗಳಿಂದ ನಡೆಯುತ್ತದೆ. ಪ್ರತಿದಿನ ಶ್ರೀನಿವಾಸ ಮೂರ್ತಿಯನ್ನು ೫೦ ಸಾವಿರದಿಂದ ಒಂದು ಲಕ್ಷದವರೆವಿಗೂ ಭಕ್ತರು ದರ್ಶನ ಮಾಡುತ್ತಾರೆ. ಅಲ್ಲದೆ, ವಿಶೇಷ ಉತ್ಸವಗಳಲ್ಲಿ ಅಂದರೆ ವಾರ್ಷಿಕ ಬ್ರಹೋತ್ಸವಗಳಲ್ಲಿ ೫ ಲಕ್ಷದವರೆಗೂ ದರ್ಶಿಸುತ್ತಾರೆ. ತಿರುಮಲಕ್ಕೆ ಮೆಟ್ಟಿಲುಗಳ ಎರಡು ಕಾಲುದಾರಿಗಳಿವೆ. ಅದು ಆಲಪಿರಿ ಮೆಟ್ಟಿಲು ಮತ್ತು ಶ್ರೀವಾರಿ ಮೆಟ್ಟಿಲು. ತಿರುಮಲದಲ್ಲಿ ಜಗತ್ಪ್ರಸಿದ್ಧವಾದ ನಿತ್ಯ ಪ್ರಸಾದಗಳನ್ನು ತಯಾರಿಸುತ್ತಾರೆ. ಇದರಲ್ಲಿ ಲಡ್ಡು ಅತ್ಯಂತ ಜನಪ್ರಿಯ. ಇತರ ಪ್ರಸಾದಗಳು ಮೊಸರನ್ನ, ಪುಳಿಯೋಗರೆ, ವಡೆ, ಸಕ್ಕರೆಪೊಂಗಲ್, ಮೆಣಸು ಪೊಂಗಲ್, ಅಪ್ಪo, ಪಾಯಸ, ಜಿಲೇಬಿ, ಮುರುಕು, ದೋಸೆ, ಕೇಸರಿಬಾತ್ ಇದಲ್ಲದೆ ಉಚಿತ ಭೋಜನವನ್ನು ಏರ್ಪಡಿಸಲಾಗಿದೆ. ಈ ಎಲ್ಲಾ ಪ್ರಸಾದಗಳು ಶುದ್ಧವಾದ ತುಪ್ಪದಿಂದ ತಯಾರಿಸಲಾಗುತ್ತದೆ.
ಭಕ್ತಾದಿಗಳು ತಮ್ಮ ಕೂದಲನ್ನು ದೇವರಿಗೆ ಸಮರ್ಪಿಸುತ್ತಾರೆ. ಭಕ್ತಾದಿಗಳು ಹರಕೆ ಹೊತ್ತು ತಮ್ಮ ಕೆಲಸವಾದರೆ, ತಲೆ ಮುಡಿ ಕೊಡುವುದಾಗಿ ಕೋರಿಕೊಂಡಿರುತ್ತಾರೆ. ದಿನಕ್ಕೆ ಒಂದು ಟನ್ ಕೂದಲು ಇಲ್ಲಿ ಸಂಗ್ರಹವಾಗುತ್ತದೆ. ಇದನ್ನು ವರ್ಷಕ್ಕೆ ಕೆಲವು ಸಲ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಇದರಿಂದ ೬ ಮಿಲಿಯನ್ ಡಾಲರ್ ವಾರ್ಷಿಕ ಆದಾಯವಿದೆ. (ಸುಮಾರು ೩೮ ಕೋಟಿ ರೂ). ಒಮ್ಮೆ ಒಬ್ಬ ಕುರಿ ಕಾಯುವವನಿಗೆ ಶ್ರೀನಿವಾಸರು ನೆತ್ತಿಯ ಮೇಲೆ ಹೊಡೆದರಂತೆ. ತಕ್ಷಣ ಆ ಸ್ಥಳದಲ್ಲಿ ಕೂದಲುದುರಿ ಬರಿದಾಯಿತು. ಇದನ್ನು ನೋಡಿದ ನೀಲಾದೇವಿಯು ಮನನೊಂದು, ಅವನಿಗೆ ತನ್ನ ಜಡೆಯ ಕೂದಲನ್ನು ಕತ್ತರಿಸಿ, ಅವನ ನೆತ್ತಿಯ ಮೇಲೆ ಅಂಟಿಸಿದರು. ತಕ್ಷಣ ಅದು ತಲೆಯಲ್ಲಿ ಸೇರಿ, ಅದ್ಭುತವಾಗಿ ಸ್ತ್ರೀಯರಂತೆ ಶೋಭಾಯಮಾನವಾಗಿ ಕೂದಲು ಬೆಳೆಯಿತು. ಇದನ್ನು ನೋಡಿದ ಶ್ರೀನಿವಾಸರು, ನೀಲಾದೇವಿಯ ತ್ಯಾಗಕ್ಕೆ ಮೆಚ್ಚಿ ತನ್ನ ಭಕ್ತರಿಗೆಲ್ಲಾ ತಮ್ಮ ಕೂದಲನ್ನು ನೀಲಾದೇವಿಗೆ ಅರ್ಪಿಸಲು ಸೂಚಿಸಿದರು. ಅಂದಿನಿoದ ತಿರುಮಲ ದೇವಾಲಯವಿರುವ ಬೆಟ್ಟಕ್ಕೆ ನೀಲಾದ್ರಿ ಎಂದು ಹೆಸರು ಬಂದಿತು. ದೇವಾಲಯದ ಶ್ರೀವಾರಿಹುಂಡಿಯಲ್ಲಿ ಪ್ರತಿದಿನ ದೇವರಿಗೆ ೨೨.೫ ಮಿಲಿಯನ್ (೨.೨೫ ಕೋಟಿ) ಅಲ್ಲದೆ ಶ್ರೀನಿವಾಸರಿಗೆ ಚಿನ್ನದ ಗಟ್ಟಿಗಳು; ಇತರ ಬೆಳ್ಳಿ, ಹಣ ಸಮರ್ಪಿಸುತ್ತಾರೆ. ೨೦೧೭ರಲ್ಲಿ ದೇವಾಲಯವು ಎಸ್.ಬಿ.ಐ.ನಲ್ಲಿ ೩೦೦೦ ಕೆ.ಜಿ. ಚಿನ್ನವನ್ನು ಸಂಗ್ರಹಿಸಿಟ್ಟಿದ್ದಾರೆ. ಶ್ರೀನಿವಾಸರು ಪದ್ಮಾವತಿಯನ್ನು ವಿವಾಹವಾಗಲು ಕುಬೇರನಿಂದ ಒoದು ಕೋಟಿ ರೂಪಾಯಿ ತೆಗೆದುಕೊಂಡಿದ್ದರು. (೧೧,೪೦೦,೦೦೦ ಚಿನ್ನದ ನಾಣ್ಯಗಳು) ಇದರಿಂದ ಸಾಲಗಾರರಾದ ಶ್ರೀನಿವಾಸರನ್ನು ನೋಡಿ ಮನನೊಂದ ಶ್ರೀಲಕ್ಷ್ಮೀದೇವಿಯು ಶ್ರೀನಿವಾಸ ವಕ್ಷಸ್ಥಳದಲ್ಲಿ ನೆಲೆಸಿದರು. ಇದರಿಂದ ಪ್ರತಿದಿನ ಕೋಟಿಗಟ್ಟಲೆ ರೂಪಾಯಿಗಳು ಭಕ್ತರಿಂದ ಶ್ರೀನಿವಾಸರಿಗೆ ಬರತೊಡಗಿತು. ಇದನ್ನು ಬಡ್ಡಿ ರೂಪದಲ್ಲಿ ಕುಬೇರನಿಗೆ ಕಲಿಯುಗದ ಅಂತ್ಯದವರೆಗೂ ನೀಡುತ್ತಾರೆಂದು ಉಲ್ಲೇಖವಿದೆ. ಇದಲ್ಲದೆ, ತುಲಾಭಾರದಿಂದ ಭಕ್ತಾದಿಗಳು, ಅಕ್ಕಿ, ಬೆಲ್ಲ ತುಳಸಿ ಎಲೆ, ಸಕ್ಕರೆ, ಬಾಳೆಹಣ್ಣು ಚಿನ್ನ-ಬೆಳ್ಳಿಯ ನಾಣ್ಯಗಳನ್ನು ಹರಕೆ ರೂಪದಲ್ಲಿ ನೀಡುತ್ತಾರೆ. ತಿರುಮಲದಲ್ಲಿ ವರದರಾಜ ದೇವಾಲಯ, ಯೋಗನರಸಿಂಹ, ಗರುಡಮoಥ, ಭೂವರಾಹಸ್ವಾಮಿ, ಬೇಡಿ ಆಂಜನೇಯ, ಬಕುಳಮಾತೆ ಸನ್ನಿಧಿ, ಕುಬೇರ ಸನ್ನಿಧಿ, ರಾಮಾನುಜಂ ಸನ್ನಿಧಿ ಇವೆ. ಶ್ರೀರಾಮಾನುಜರು (೧೦೧೭-೧೦೩೭) ದೇವಾಲಯಕ್ಕೆ ಬಹಳ ಪ್ರಮುಖರು. ಶ್ರೀವೈಷ್ಣವರ ಆಚಾರ್ಯರಾಗಿ, ಸ್ವಾಮಿಯ ಎಲ್ಲಾ ಆರಾಧನೆ ಇತರ ಸಂಪ್ರದಾಯ ಪದ್ಧತಿಗಳು, ಉತ್ಸವಗಳನ್ನು ಜವಾಬ್ದಾರಿಯುತವಾಗಿ ಆಚರಣೆಗೆ ತಂದರು. ಇವರ ಸನ್ನಿಧಿಯು ದೇವಾಲಯದ ಒಳಗಿದೆ.