ಟಾಮಿಯನ್ನು ಹೇಗಾದರೂ ಮಾಡಿ ಜಾತ್ಯಂತರ ಮಾಡುವ ಪಣ ತೊಟ್ಟಂತಿದ್ದ ಮಾಟಿ. ಅದಕ್ಕೆ ಇಂಬು ಕೊಡುವಂತೆ ಪ್ರೌಢಾವಸ್ಥೆ ತಲುಪಿದ ಟಾಮಿಯ ಬಾಲ ಗುಂಗುರಾಕಾರ ತಾಳಿತು. “ಹೀಂಗ ರೌಂಡ್ ಆದ ಬಾಲದ ಒಳಗೆ ಹುಳ ನುಸುಳಿದರೆ ನಾಯಿಯ ಮಾಲೀಕರಿಗೆ ಅಪಶಕುನ, ಹಿಡಿದ ಕೆಲಸ ಕೆಟ್ಟ ಬಿಡ್ತಾವು ” ಮತ್ತು ಅದಕ್ಕೆ ಸೂಕ್ತ ಮದ್ದು ಬಾಲವನ್ನೇ ಕಟ್ ಮಾಡುವುದು. ತಾನೂ ಜಂಟಿ ಮಾಲೀಕನಾದ್ದರಿಂದ ಅದರ ಪರಿಣಾಮ ತನ್ನ ಮೇಲೂ ಆಗುತ್ತದೆ ಎಂದು ಹೊಸ ಪುಂಗಿರಾಗ ಊದಿದ. ನಾಯಿಯ ವೃತ್ತಾಕಾರದ ಬಾಲಕ್ಕೂ, ಎಲ್ಲಾ ಬಿಟ್ಟು ಅದರೊಳಗೆ ನುಸುಳುವ ಹುಳಕ್ಕೂ ಮತ್ತು ಮಾಲೀಕರ ಕರ್ಮಕ್ಕೂಯಾವುದೇ ಸಂಬಂಧ ಕಾಣಿಸಲಿಲ್ಲ. ಒಟ್ಟಿನಲ್ಲಿ ಟಾಮಿಯ ಬಾಲವನ್ನು ಕತ್ತರಿಸಲು ಮಾಟಿಯೇ ನೇಯ್ದ ಹೊಸ ಕುತಂತ್ರದoತೆ ಕಾಣಿಸಿತು. ಟಾಮಿಯ ಬಾಲದ ಮೇಲೆ ಕಾಕದೃಷ್ಟಿ ಬಿದ್ದಿತ್ತು ಮಾಟಿಗೆ. ಬಾಲ ಕತ್ತರಿಸಲು ನಾನು ಸುತಾರಾಂ ಸಿದ್ಧನಿರಲಿಲ್ಲ. ಜೊತೆಗೆ ಚಿಟ್ಟಿಯ ಬೆಂಬಲವೂ ದೊರಕಿತು. “ರೌಂಡ್ ಬಾಲದ ಟಾಮಿ, ಜಾತಿ ನಾಯಿ ನೋಡಿದಂಗ ಆಕ್ಕೈತಿ ಆಮೇಲೆ ಎಷ್ಟು ಲಕ್ಷಣವಾಗಿ ಕಾಣಸುತ್ತ” ಎಂದದ್ದು ಮಾಟಿಗೆ ಭ್ರಮನಿರಸವಾಯಿತು. ಈ ವಿಷಯವನ್ನು ಪರಮಗುರು ದಾಸ್ನ ಬಳಿ ಪ್ರಸ್ತಾಪಿಸಿದಾಗ ಅಂಥದ್ದೇನೂ ಇಲ್ಲ ಎಂದು ಬಿಟ್ಟ. ಮಾಟಿ ಪಟ್ಟು ಬಿಡದೆ ತನ್ನ ಸಿದ್ಧಾಂತಕ್ಕೆ ಇಂಬು ಕೊಡುವಂತೆ ಒಂದು ಉಪಕತೆಯನ್ನೂ ಜೋಡಿಸಿದ. ಅವರ ಸಂಬoಧಿಕರೊಬ್ಬರು ಇದೇ ರೀತಿ ರೌಂಡ್ ಬಾಲವಿದ್ದ ನಾಯಿಯ ದೆಸೆಯಿಂದ ಎಷ್ಟೊಂದು ವಿಘ್ನಗಳು ಎದುರಾದವೆಂದೂ ಬಾಲ ಕತ್ತರಿಸಿದಾಗ ಎಲ್ಲಾ ಸಮಸ್ಯೆಗಳು ಬಗೆಹರಿದವೆಂದು ಹೇಳಿದ. ಈ ನಡುವೆ ದಾಸ್ ನಾಯಿಗೆ ರೆಬಿಸ್ ಚುಚ್ಚುಮದ್ದು ಹಾಕಿದರೆ ಒಳ್ಳೆಯದು, ಯಾರನ್ನಾದರೂ ಕಚ್ಚಿದರೆ ಅದಕ್ಕೆ ಸೂಕ್ತ ಮದ್ದು ಇಲ್ಲ ಎಂದು ಸೂಚಿಸಿದ. ಅದರಂತೆ ಪಶುವೈದ್ಯಕೀಯ ಆಸ್ಪತ್ರೆಗೆ ಹೋಗಿ ಅಲ್ಲಿ ಚುಚ್ಚು ಮದ್ದು ಹಾಕಿಸುತ್ತಿರುವಾಗ ವೈದ್ಯರ ಬಳಿ ಈ ವಿಷಯ ಪ್ರಸ್ತಾಪಿಸಿದಾಗ ಅವರು ಬಾಲ ಕತ್ತರಿಸುವುದು, ಬರೆ ಎಳೆಯುವುದು ಶೋಕಿಗಾಗಿ ಮಾತ್ರ, ಅದು ನಾಯಿಯ ಮೂಲಭೂತ ಗುಣಗಳನ್ನು ಬದಲಾಯಿಸುವುದಿಲ್ಲ ಎಂದು ಹೇಳಿದರು. ಅಲ್ಲಿಗೆ ಟಾಮಿಯನ್ನು ಜಾತ್ಯಂತರ ಗೊಳಿಸುವ ಪ್ರಯತ್ನಗಳಿಗೆ ಮಾಟಿ ಇತಿಶ್ರೀ ಹಾಡಿದ. ಮುಖ್ಯವಾಗಿ ಟಾಮಿ ಬಚಾವಾಯಿತು.
ಈ ನಡುವೆ ಇನ್ನೊಂದು ಸಮಸ್ಯೆ ಉದ್ಭವಿಸಿತು. ಬಹುಪಾಲು ಟಾಮಿಯನ್ನು ಗೇಟಿನ ಬಳಿ ಕಟ್ಟಿ ಹಾಕಿರುತ್ತಿದ್ದರಿಂದ ದೊಡ್ಡದಾಗುತ್ತಿದ್ದoತೆ ಅದರ ಕಾಲುಗಳು ಸೊಟ್ಟವಾಗಿ, ಅದರ ನಡೆ ಪೆಂಗ್ವಿನ್ ಪಕ್ಷಿಯ ನಡಿಗೆಯನ್ನು ಹೋಲತೊಡಗಿತು. ಇದು ಮನಸ್ಸಿಗೆ ತುಂಬ ಬೇಸರದ ಸಂಗತಿಯಾಯಿತು. ಚಿಕ್ಕಂದಿನಲ್ಲಿ ಓಡಿ, ಕುಣಿದು ಕುಪ್ಪಳಿಸುತ್ತಿದ್ದ ಟಾಮಿ ಈಗ ಕುಂಟುತ್ತಾ ನಡೆಯಲಷ್ಟೆ ಸಾಧ್ಯವಾಗಿತ್ತು. ಅದಕ್ಕೆ ಮಾಟಿ ಎರಡು ಕಟ್ಟಿಗೆಗಳನ್ನು ಮುಂದಿನ ಎರಡೂ ಕಾಲುಗಳಿಗೆ ಕಟ್ಟಿದರೆ ಕೆಲ ದಿನಗಳಲ್ಲಿ ನೇರವಾಗಬಹುದು ಎಂದು ಸಲಹೆ ಕೊಟ್ಟ. ಅಣ್ಣೀಗೆರೆಯ ಹತ್ತಿರ ಇರುವ ನಾಟಿ ವೈದ್ಯರು ಕೈ ಅಥವಾ ಕಾಲು ಮುರಿದಾಗ ನೇರವಾದ ಕಟ್ಟಿಗೆಯನ್ನು ಕೈಗೆ ಬ್ಯಾಂಡೇಜ್ನಿAದ ಇದೇ ರೀತಿ ಕಟ್ಟುತ್ತಿದ್ದರು.
ಟಾಮಿಗೆ ಈ ರೀತಿ ಕಟ್ಟಿದಾಗ ಪ್ರತಿರೋಧವಿಲ್ಲದೆ ಕಟ್ಟಿಸಿಗೊಂಡಿತು. ಆದರೆ ಎರಡು ಹೆಜ್ಜೆ ಮುಂದಿಡಲಾಗಲಿಲ್ಲ. ಸಮಸ್ಯೆ ಉಂಟಾಗಿದ್ದು ಕಟ್ಟಿಗೆ ದೆಸೆಯಿಂದ; ಅದರಿಂದ ಟಾಮಿಯ ಕಾಲು ಬೆಂಡಾಗುತ್ತಿರಲಿಲ್ಲ. ಬೆದರು ಬೊಂಬೆಯoತೆ ಕಾಣುತ್ತಿದ್ದ ಟಾಮಿಯನ್ನು ನೋಡಿ ನಗು ಬಂತಾದರೂ ಅದರ ಸಂಕಷ್ಟವನ್ನು ನೋಡಿ ಅಯ್ಯೋ ಎನಿಸಿತು. ಹಗ್ಗ, ಕಟ್ಟಿಗೆ ಬಿಚ್ಚಿದಾಗ ಟಾಮಿಗೆ ನಿರಾಳವಾಯಿತು. ಎಣ್ಣೆ ಹಚ್ಚಿ ತಿಕ್ಕಿದರೆ ಸರಿಯಾಗಬಹುದು ಎಂದು ದಿನವೂ ಮಾಲಿಶ್ ಮಾಡತೊಡಗಿದೆವು. ಟಾಮಿ ಸುಮ್ಮನೆ ಕುಳಿತುಕೊಂಡು ಸೇವೆ ಮಾಡಿಸಿಕೊಳ್ಳುತ್ತಿತ್ತು. ಎಣ್ಣೆಯ ಮಜ್ಜನದ ನಂತರ ಬೂದಿಯಲ್ಲಿ ಹೊರಳಾಡಿ, ಕಾಲಿಗೆ ಬೂದಿ ಮೆತ್ತಿಕೊಂಡು ನಿಂತರೆ ಬಿಳೀ ಕಾಲು, ಕರಿ ಮೈಬಣ್ಣದ ಒಂದು ವಿಶಿಷ್ಟ ಜಾತಿಯ ನಾಯಿಯಂತೆ ಭಾಸವಾಗುತ್ತಿತ್ತು.
ಟಾಮಿಯನ್ನು ಹಿಡಿದು ಸ್ವಚ್ಛಗೊಳಿಸಲು ನೀರು ಸಾಬೂನು ತಂದರೆ ಹಿoದಿನ ಘಟನೆಯನ್ನು ನೆನಪಿಸಿಕೊಂಡು ಈ ಸಲ ತನ್ನ ಜೀವ ತೆಗೆಯದೇ ಬಿಡುವುದಿಲ್ಲ ಎಂದೆಣಿಸಿ ಕೊಸರಿಕೊಂಡು ಓಡಿ ಹೋಯಿತು. ಹೀಗೆ ತೈಲ ಮಾಲಿಶ್ ಸೇವೆ ಸುಮಾರು ದಿನಗಳು ನಡೆದರೂ ಮಾಟಿಯ ಬೆಂಡಾದ ಕಾಲುಗಳಲ್ಲಿ ಗಮನಾರ್ಹವಾದ ಬದಲಾವಣೆಗಳೇನು
ಕಾಣಿಸಲಿಲ್ಲ. ಟಾಮಿಯು ಸರಪಳಿಯಿಂದ ಮುಕ್ತಗೊಂಡ ಮೇಲೆ ಅದಕ್ಕೆ ಸಂಪೂರ್ಣ ಸ್ವತಂತ್ರ ಸಿಕ್ಕಂತಾಗಿ ಬೀದಿಯ ಇತರೆ ನಾಯಿಗಳ ತಂಡವನ್ನು ಸೇರಿ ಅವುಗಳ ದೈನಂದಿನ ಚಟುವಟಿಕೆಗಳಲ್ಲಿ ಭಾಗಿಯಾಗಿ ಬಿಟ್ಟಿತು. ಮನೆಯಲ್ಲಿ ಇದ್ದಾಗ ಅಪರಿಚಿತರು ಬಂದರೆ ಬಾಲ ಅಲ್ಲಾಡಿಸಿ ತಾನೇ ಸ್ನೇಹ ಹಸ್ತ ಚಾಚುತ್ತಿದ್ದ ಟಾಮಿ ಬೀಡಾಡಿ ನಾಯಿಗಳ ಜೊತೆಗೆ ಸೇರಿ
ಕುತ್ತಿಗೆಯನ್ನು ಮೇಲಕ್ಕೆ ಚಾಚಿ, ಗಂಟಲಿನಿoದ ಬೌಬೌ ಎಂದು ಒದರುತ್ತಿತ್ತು. ತಾನು ಒದರುತ್ತಿದ್ದುದು ಅಪರಿಚಿತರಿಗೋ, ಕಳ್ಳ ಕಾಕರಿಗೋ ಅಥವಾ ಬೇರೆ ಬೀದಿಯ ನಾಯಿಗೋ ಎಂದು ಅದಕ್ಕೆ ಗೊತ್ತಾಗುತ್ತಿರಲಿಲ್ಲ. ಜೊತೆ ನಾಯಿ ಒದರುತ್ತಿದ್ದರೆ ಅಷ್ಟೇ ಸಾಕು ಟಾಮಿಯೂ ಜೋರಾಗಿ ಒದರಿ ತನ್ನ ಬೆಂಬಲ ಸೂಚಿಸುತ್ತಿತ್ತು. ನಮಗೆ ಬೇಸರವೆನಿಸಿದ್ದು ಅದು ಆಹಾರ ಮತ್ತು ಮಲಗುವ ಜಾಗವನ್ನೂ ಬದಲಾಯಿಸಿದ್ದು. ಬ್ರೆಡ್, ಬಿಸ್ಕತ್ತು ಹಾಕಿದಾಗ ಬಂದು ಖುಷಿಯಿಂದ ತಿoದು ಮತ್ತೆ ಆಡಲು ಹೋಗಿ ಬಿಡುತ್ತಿತ್ತು. ಹಲವು ಸಲ ಟಾಮಿ ಟಾಮಿ ಎಂದು ಕರೆದರೆ ಬಾಲ ಅಲ್ಲಾಡಿಸುತ್ತ ಬರುತ್ತಿತ್ತು. ಆಟಕ್ಕೆ ಹೋಗುವಾಗ, ಕಿರಾಣಿ ವಸ್ತುಗಳನ್ನು ತರುವಾಗ ಟಾಮಿ ಬಾ ಎಂದರೆ ಬಂದು ಬಿಡುತ್ತಿತ್ತು ಕಾವಲು ನಾಯಿಯಂತೆ; “ನಗರಸಭೆಯವರು ಬೀಡಾಡಿ ನಾಯಿಯನ್ನು ಎತ್ತಿಕೊಂಡು ಹೋಗುತ್ತಾರೆ” ಎಂಬ ಸುದ್ದಿಯನ್ನು ತಂದ ಮಾಟಿ ನಮ್ಮನ್ನು ಜಾಗೃತಗೊಳಿಸಿದ. ಬೀಡಾಡಿ ನಾಯಿಗಳ ಸಂಗದಿoದ ಟಾಮಿಯನ್ನು ಹೇಗೆ ಬಿಡಿಸಬೇಕು ? ಸಾಕಿದ ನಾಯಿಯ ಲಕ್ಷಣವಿಲ್ಲದ ಟಾಮಿಯನ್ನು ಹೇಗೆ ಪ್ರತ್ಯೇಕಿಸಬೇಕು? ಅದಕ್ಕೊಂದು ಕೊರಳಪಟ್ಟಿ ಹಾಕಿದರೆ ಸಾಕಿದ ನಾಯಿಯ ಕಳೆ ಬರುತ್ತದೆ, ನಗರಸಭೆಯ ಕರ್ಮಚಾರಿಗಳ ಕಾಕದೃಷ್ಟಿಯಿಂದ ತಪ್ಪಿಸಿಕೊಳ್ಳಬಹುದು. ಚಪ್ಪಲಿ ಹೊಲಿಯುವ ಕೊಪ್ಪಳನ ಅಂಗಡಿಗೆ ಹೋಗಿ ಚರ್ಮದ ಕೊರಳ ಪಟ್ಟಿಯನ್ನು ಹೊಲಿಸಿ ಟಾಮಿಗೆ ಹಾಕಿದ್ದಾಯಿತು. ಟಾಮಿಗೆ ಇದು ಇರಸು ಮುರುಸಾಯಿತು. ಕುತ್ತಿಗೆಯಿಂದ ಬೇರ್ಪಡಿಸಲು
ಹರಸಾಹಸ ಮಾಡಿತು. ಗೋಡೆಗೆ, ಗೇಟಿಗೆ ಕುತ್ತಿಗೆ ಉಜ್ಜಿ ಬಿಡಸಿಕೊಳ್ಳಲು ವಿಫಲ ಯತ್ನ ನಡೆಸಿತು. ಟಾಮಿಯ ಸಂಕಟ ಅರ್ಥವಾದರೂ ಕತ್ತುಪಟ್ಟಿ ಅನಿವಾರ್ಯವಾಗಿತ್ತು. ಒಂದು ದಿನ ಶಾಲೆಗೆ ಹೋಗುವಾಗ ಗೇಟಿನ ಬಳಿಯೇ ಬಂದು
ನಿoತಿತ್ತು. ಬಾಲದ ಜತೆ ಮೈಯನ್ನು ಅಳ್ಳಾಡಿಸಿ ಕುಯ್ ಕುಯ್ ಎಂದು ಏನನ್ನೋ ಹೇಳಲು ಬಯಸಿತ್ತು. ಅದನ್ನು ಕೇಳುವ ವ್ಯವಧಾನ ನನಗಿರಲಿಲ್ಲ; ಶಾಲೆಗೆ ಹೋಗುವ ಅವಸರವಿತ್ತು. ಬಿಸ್ಕೆಟ್ ತಿನಿಸಿದೆ, ಖುಷಿಯಿಂದ ಗಬಗಬ ತಿಂದುಬಿಟ್ಟಿತು. ತಲೆಯ ಮೇಲೆ ಕೈಯಾಡಿಸಿ ಶಾಲೆಗೆ ಹೊರಟೆ. ಅದು ಕುಯ್ ಕುಯ್ ಎಂದು ಏನೇನೋ ಹೇಳುತ್ತಿತ್ತು. ಸಾಯಂಕಾಲ ಆಟದ ಕಡೆ ಗಮನವಿದ್ದುದರಿಂದ ಶಾಲೆಯಿಂದ ಬಂದ ತಕ್ಷಣ ಪಾಟೀಚೀಲವನ್ನು ಇಟ್ಟದ್ದೇ ಆಟಕ್ಕೆ ತೆರಳಿದೆ. ವಾಪಸು ಬಂದಾಗ ಟಾಮಿಯ ಸುಳಿವಿರಲಿಲ್ಲ. ಬೀದಿಯಲ್ಲಿ ಕಣ್ಣಳತೆಗೂ ಕಾಣಲಿಲ್ಲ. ಚಿಟ್ಟಿಗೆ ಕೇಳಿದರೆ ಅವತ್ತು ನೋಡಿಯೇ ಇಲ್ಲ ಎಂದು ಹೇಳಿದ. ಮಾಟಿಯ ಮನೆಗೆ ಹೋದಾಗ ಮಾಟಿ ಊಟ ಮಾಡುತ್ತಿದ್ದ. ಹೀಗಾಗಿ ನಾನು ಮತ್ತು ಚಿಟ್ಟಿ ಕಾರ್ಯಾಚರಣೆಗೆ ಇಳಿದೆವು. ಹಿಂದಿನ ಬೀದಿ ಮುಂದಿನ ಬೀದಿ ಎಲ್ಲಾ ಕಡೆ ಹುಡುಕಿದೆವು. ಟಾಮಿಯ ಸುಳಿವೇ ಇಲ್ಲ! ಅವತ್ತು ರಾತ್ರಿ ನಿದ್ರೆ ಬರಲಿಲ್ಲ. ವಿಚಿತ್ರ ಸಂಕಟ. ಬೆಳಗಾಗುವದಷ್ಟೇ ಕಾದು ಬೆಳಬೆಳಿಗ್ಗೆ ಮಾಟಿಯ ಮನೆಗೆ ಹೋದೆ. ಅವನಿಗೂ ಆಶ್ಚರ್ಯ. ಟಾಮಿ ಕಾಣುತ್ತಿಲ್ಲ ಎನ್ನುವ ಸಂಗತಿ ಕೇಳಿ ದಿಗ್ಭ್ರಮೆಗೊಂಡ. ಓಣಿಗೆ ಬಂದು ಮತ್ತೆ ಎಲ್ಲ ಕಡೆ ಹುಡುಕುತ್ತಿದ್ದಾಗ ಮಾಟಿ
ಎಂದ. “ಟಾಮಿ ಅಷ್ಟೇ ಅಲ್ಲಾ ಇನ್ನೂ ಎಷ್ಟೊಂದು ನಾಯಿ ಕಾಣಸವಲ್ಲವು.” ಅರೆ, ಹೌದಲ್ಲಾ! ಟಾಮಿಯನ್ನು ಹುಡುಕುವ ಭರದಲ್ಲಿ ನಾನು ಇದನ್ನು ಗಮನಿಸಿಯೇ ಇರಲಿಲ್ಲ. ಆತಂಕ ಇನ್ನೂ ಹೆಚ್ಚಾಯ್ತು. ಮುಖ್ಯ ರಸ್ತೆಯಲ್ಲಿದ್ದ ಪಾನ್ಶಾಪ್ನ ರವಿಯನ್ನು ಕೇಳಿದರೆ ಅವನು ಮಧ್ಯಾಹ್ನ ನಗರಸಭೆಯವರು ಬಂದು ಬಲೆ ಹಾಕಿ ನಾಯಿಗಳನ್ನು ಹಿಡಿದುಕೊಂಡು ಹೋದರು ಎಂದು ಹೇಳಿದ. ಓಡಲು ಬಂದ ನಾಯಿಗಳೆಲ್ಲಾ ತಪ್ಪಿಸಿಕೊಂಡು ಹೋದವು. ಓಡಲು ಬಾರದ ಟಾಮಿಯನ್ನು ಎತ್ತಿಹಾಕಿಕೊಂಡು ಹೋಗಿದ್ದರು. ಈ ಸಂಗತಿಗೆ ಇಂಬು ಕೊಡುವoತೆ ಟಾಮಿಯ ಕೊರಳು ಪಟ್ಟಿಯನ್ನು ಹಿಡಿದುಕೊಂಡು ಸಪ್ಪೆ ಮಾರಿ ಹಾಕಿ ನಿಂತು ಕೊಂಡಿದ್ದ ಚಿಟ್ಟಿ. ನಗರಸಭೆಗೆ ಹೋಗಿ ಅಲ್ಲಿ ವಿಚಾರಿಸಿದರೆ ಅಲ್ಲಿ ನಮಗೆ ಸರಿಯಾದ ಮಾಹಿತಿ ದೊರಕಲಿಲ್ಲ. “ಹೀಗೆ ಸಿಕ್ಕ ನಾಯಿಗಳನ್ನು ಊರ ಹೊರಗೆ ಬಿಟ್ಟು ಬರುತ್ತಾರೆ. ಇಲ್ಲಾ ಇಂಜಕ್ಶನ್ ಕೊಟ್ಟು ಪ್ರಾಣ ತೆಗೆಯುತ್ತಾರೆ” ಟಾಮಿ ಮತ್ತೆ ಸಿಕ್ಕಲೇ ಇಲ್ಲ. ನಮ್ಮ ಜೊತೆ ಮೂರು ವರುಷ ಕಳೆದು, ನಮ್ಮೆಲ್ಲಾ ಹುಚ್ಚು
ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಂಡ ಟಾಮಿ ಇದ್ದಕ್ಕಿದ್ದಂತೆ ಅದೃಶ್ಯವಾದುದು ನಮಗೆಲ್ಲಾ ಮರೆಯಲಾಗದ ದುಃಖವುಂಟು ಮಾಡಿಬಿಟ್ಟಿತು. ಮಾತು ಬಾರದ ಟಾಮಿ ನಮ್ಮೆಲ್ಲ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಿತ್ತು.
ತನ್ನ ಭಾವಗಳನ್ನು ಬಾಲ ಅಲ್ಲಾಡಿಸಿ, ಮುಖ ತಿರುವಿ, ಕಿವಿ ಎತ್ತರಿಸಿ, ಬೇಸರವಾದಾಗ ಶೂನ್ಯದತ್ತ ನೋಡಿ ವ್ಯಕ್ತಪಡಿಸುತ್ತಿತ್ತು. ನಮ್ಮಲ್ಲಿಯೇ ಇದ್ದು, ನಮ್ಮಂತಿರದ ಆದರೆ ನಮ್ಮವರಲ್ಲೊಬ್ಬನಾಗಿದ್ದ ಟಾಮಿ ನಿರಂತರ ನೆನಪು ಮಾತ್ರ. ಪರಮಗುರು ದಾಸ್ ಹುಬ್ಬಳ್ಳಿಯಲ್ಲಿ ಪೇಂಟಿAಗ್ ಪಟುವಾಗಿದ್ದಾನೆ. ಮಾಟಿ ಚಹಾಪುಡಿ, ಸಕ್ಕರೆ, ಮಿಂಟ್ ಮಾರುತ್ತ ಗಲ್ಲೆ ಮೇಲೆ
ವಿರಾಜಮಾನನಾಗಿದ್ದಾನೆ. ಚಿಟ್ಟಿ ಗದುಗನ್ನು ಬಿಟ್ಟು ಯಾವ ಕಾಲವಾಯಿತೋ. ಟಾಮಿ ನಮ್ಮೆಲ್ಲರ ಮರೆಯಲಾಗದ ಕೇಂದ್ರ ಬಿಂದು. ಸಮಾಪ್ತಿ.