ಅದು ೨೦೧೭ರ ಬಿರುಬೇಸಗೆ. ಧಾರಾಳ ಮಳೆಯಾಗುವ ಶಿರಸಿಯಂತಹ ತಣ್ಣನೆಯ ನಗರವೂ ಬೊಗಸೆ ನೀರಿಗಾಗಿ ಬಾಯ್ತೆರೆದು
ನಿಂತಿತ್ತು ಎಂದರೆ ಬರಗಾಲದ ಭೀಕರತೆಗೆ ಬೇರೆ ವಿವರಣೆ ಬೇಕಿಲ್ಲವೇನೋ.
ಇದರಿಂದ ಚಿಂತಿತರಾದ ಜನಪರ ಕಾಳಜಿಯುಳ್ಳ ಶಿರಸಿಯ ಆಗಿನ ಉಪವಿಭಾಗಾಧಿಕಾರಿ ರಾಜು ಮೊಗವೀರ ಯುಗಾದಿಯ ದಿನ ಒಂದು ಸಭೆ ಕರೆದು, ನೀರಿನ ಅಭಾವ ನೀಗಿಸಲು ಮಾಡಬೇಕಾದ ಕಾರ್ಯಗಳ ಬಗ್ಗೆ ಸಲಹೆಗಳನ್ನು ಕೇಳಿದರು. ಹಲವು ವಿಚಾರಗಳ ಮಧ್ಯೆ, ಕೆರೆಗಳ ಹೂಳೆತ್ತಿ ಅಭಿವೃದ್ಧಿ ಮಾಡಬೇಕೆಂಬ ಪ್ರಸ್ತಾವನೆ ಬಂತು. ಯಾರು ಮಾಡಬೇಕು? ಎಂಬ ಪ್ರಶ್ನೆ ಬಂದಾಗ ಜೀವಜಲ ಕಾರ್ಯಪಡೆಯ ಸ್ಥಾಪನೆಗೆ ನಿರ್ಧಾರವಾಯಿತು. ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದು – ಶ್ರೀನಿವಾಸ ಹೆಬ್ಬಾರ್!
ಅವರೇ ಏಕೆ ಎಂಬ ಪ್ರಶ್ನೆಗೆ ಉತ್ತರ ಸಿಗಲು ಹೆಚ್ಚು ಕಾಯಬೇಕಿರಲಿಲ್ಲ. ಮರುದಿನ ಬೆಳಗ್ಗೆಯೇ ಶಿರಸಿಯ ಆನೆಹೊಂಡದಲ್ಲಿ ಹೆಬ್ಬಾರರ ಜೆಸಿಬಿ, ಮಣ್ಣು ಸಾಗಿಸಲು ಟಿಪ್ಪರ್ಗಳು ಬಂದು ನಿಂತಿದ್ದವು. ಜನರೂ ಬೆಂಬಲಕ್ಕೆ ನಿಂತು ಒಂದೇ ದಿನದಲ್ಲಿ ೪.೫೦ ಲಕ್ಷ ರೂ. ಸಂಗ್ರಹಿಸಿ ಕೊಟ್ಟರು. ಇರುವೆಗೂ ಕುಡಿಯಲು ನೀರು ಸಾಲದಂತಿದ್ದ ಆನೆಹೊಂಡ ಹನ್ನೆರಡು ದಿನಗಳಲ್ಲಿ ನಳನಳಿಸಿತು. ಅದಕ್ಕೆಷ್ಟು ಖರ್ಚಾಯಿತು ಎಂದು ಕೇಳಿದರೆ, ಉತ್ತರ- ಒಂದು ಅರ್ಥಗರ್ಭಿತ ನಗು.
ಕೊಳವೆಬಾವಿ ಕೊರೆಸುವ ಸಂಸ್ಕೃತಿ ಬದಲಾಗಿ, ಮತ್ತೆ ಕೆರೆ-ಬಾವಿ ತೋಡಿಸಲು ಜನರು ಮುಂದಾಗಬೇಕು. ಕೆರೆ ಹೂಳೆತ್ತುವ ಜತೆಗೆ ಇಂಗುಗುಂಡಿ ನಿರ್ಮಿಸಿದರೆ ಬರ ಓಡಿಸಲು ಸಾಧ್ಯ ಎಂದು ನಂಬಿ ನಡೆದವರು, ಶಿರಸಿ ಪರಿಸರದ ಜಲ ಜೀವಿಯಾಗಿ ಎಲ್ಲರಿಗೂ ಮಾದರಿಯಾದವರು ಶ್ರೀನಿವಾಸ ಹೆಬ್ಬಾರರು.
ಇಲ್ಲಿ ಏರಿತು, ಅಲ್ಲಿ ಇಳಿಯಿತು!
ಮುಂದೆ ರಾಯರಕೆರೆಯ ಕಣ್ಣೀರು ಒರೆಸಲು ಅವರು ಮುಂದಾದರು. ಆ ಕೆರೆ ಹುಡುಗರು ಕ್ರಿಕೆಟ್ ಆಡುವ ಮೈದಾನವಾಗಿತ್ತು. ಅತಿಕ್ರಮಣವಾಗಿ ಅಡಕೆ ಗಿಡಗಳನ್ನೂ ಬೆಳೆಸಿದ್ದರು. ಧೈರ್ಯ ಮಾಡಿ ಮೂರುವರೆ ಎಕರೆ
ವಿಸ್ತೀರ್ಣವಿದ್ದ ಈ ಕೆರೆಯನ್ನು ೩೦ ಅಡಿ ಆಳ ಆಳ ತೋಡಿಸಿ, ಹೂಳೆತ್ತಿಸಿದರು. ಅದಕ್ಕೆ ೭೦ ಲಕ್ಷ ರೂ ವೆಚ್ಚವಾಯಿತು. ಆದರೆ, ಕೆರೆಯಲ್ಲಿ ೧೨ ಅಡಿ ನೀರು ನಿಂತಾಗ ಅವರ ಶ್ರಮ ಸಾರ್ಥಕವಾಗಿತ್ತು.
ರಾಯರಕೆರೆಯಲ್ಲಿ ೩೦ ಅಡಿ ಆಳದವರೆಗೂ ತೋಡಿ ಹೂಳೆತ್ತಿದಾಗ ಅಲ್ಲಿ ಹನ್ನೆರಡು ಅಡಿ ನೀರು ನಿಂತಿತು. ಆದರೆ, ಅಲ್ಲಿಂದ ೨.೫ ಕಿ.ಮೀ. ದೂರದಲ್ಲಿರುವ ಕೋಟೆ ಕೆರೆಯಲ್ಲಿ ಎರಡು ಅಡಿ ನೀರು ಇಳಿಯಿತಂತೆ! ಭೂಮಿ ಹೇಗೆ ನೀರಿನ ಮಟ್ಟವನ್ನು ಕಾಪಾಡಿಕೊಳ್ಳುತ್ತದೆ ಎನ್ನುವ ಚೋದ್ಯವನ್ನು ಪ್ರತ್ಯಕ್ಷವಾಗಿ ಕಂಡ ಹೆಬ್ಬಾರರು ಕೆರೆಗಳ ಹೂಳೆತ್ತಿಸುವ ಜತೆಗೆ,
ಆ ಕೆರೆಗಳಿಗೆ ಮತ್ತೆ ತ್ಯಾಜ್ಯ ಸೇರದಂತೆ ಕ್ರಮ ಕೈಗೊಂಡರು. ಕೆರೆ-ಬಾವಿಗಳ ಜೀವ ಸೆಲೆಗಳನ್ನು ಕಾಪಾಡುವುದಕ್ಕಾಗಿ ಇಂಗುಗುಂಡಿ, ಮಳೆನೀರು ಕೊಯ್ಲಿನಂತಹ ಕ್ರಮಗಳಿಗೂ ಮುಂದಾದರು.
ಮುಂದೆ ಸುಪ್ರಸನ್ನ ನಗರದ ಕೆರೆ ಅಭಿವೃದ್ಧಿ ಆಯಿತು. ಇಲ್ಲಿಯೂ ಕೆರೆಯ ಅಂಗಳವನ್ನು ಅತಿಕ್ರಮಿಸಿ, ಅಡಿಕೆ ತೋಟ ಬೆಳೆಸಲಾಗಿತ್ತು. ಈಗ ಮೂರೂವರೆ ಎಕರೆ ಜಾಗದಲ್ಲೂ ಸಮೃದ್ಧ ಜಲರಾಶಿ ತುಂಬಿದೆ. ಬಸೆಟ್ಟಿ ಕೆರೆ, ಎಕ್ಕಂಬಿ ಕೆರೆ, ಹಳದೋಟ ಕೆರೆ, ಬದೂರು-ಕೆಂಚಗದ್ದೆ ಕೆರೆ ಇತ್ಯಾದಿಗಳನ್ನೂ ಜೀರ್ಣೋದ್ಧಾರ ಮಾಡಿದ್ದಾರೆ. ಜತೆಗೆ, ನೀರಿಂಗಿಸುವ ಕಾಯಕದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ದಡದಲ್ಲಿ ನಿಂತು ಕೆಲಸ ಮಾಡಿಸುವುದಲ್ಲ, ಪಾಚಿಕಟ್ಟಿದ ನೀರಿನೊಳಗೆ ಬುಟ್ಟಿ ಹಿಡಿದು ಸ್ವತಃ ಸ್ವಚ್ಛತಾ ಕಾರ್ಯ ಮಾಡುತ್ತಾರೆ.
ಜೀವಜಲ ಕಾರ್ಯಪಡೆಯಲ್ಲಿ ಅನಿಲ್ ನಾಯಕ್, ವಿ. ಪಿ. ಹೆಗಡೆ (ವೈಶಾಲಿ), ಎಂ. ಎಂ. ಭಟ್ ಕಾರೆಕೊಪ್ಪ,ಅಶೋಕ್ ಭಟ್ ,ಮಂಜು ಮೊಗೇರ್, ಹರಿಪ್ರಕಾಶ್ ಕೋಣೆಮನೆ, ಡಾ| ಶಿವರಾಮ್, ಶ್ರೀಕಾಂತ್ ಭಟ್, ವೆಂಕಟೇಶ್ ಹೆಗಡೆ ಬೆಂಗಳೆ ಮುಂತಾದ ಮಹನೀಯರು ಶ್ರೀನಿವಾಸ ಹೆಬ್ಬಾರರ ಜತೆಗೆ ಕೈಜೋಡಿಸಿದ್ದಾರೆ. ರಾಜು ಮೊಗವೀರ ಶಿರಸಿಯಲ್ಲಿ ಉಪವಿಭಾಗಾಧಿಕಾರಿಯಾಗಿ ಇದ್ದಷ್ಟು ದಿನವೂ ಇವರ ಸೇವಾ ಕಾರ್ಯಗಳಿಗೆ ಆಸರೆಯಾಗಿದ್ದರು.
ಜೆಸಿಬಿಯೇ ಮುಳುಗಿತು!
ಅಘನಾಶಿನಿ ನದಿಯ ಮೂಲವಾಗಿರುವ ಶಂಕರಹೊಂಡದ ಅಭಿವೃದ್ಧಿ ಬಹಳ ಸವಾಲಿನ ಕೆಲಸವಾಗಿತ್ತು. ದೊಡ್ಡ ಗಣಪತಿ ದೇವಸ್ಥಾನದ ಪಕ್ಕದಲ್ಲಿದ್ದರೂ ಈ ಕೆರೆಯ ಪಾವಿತ್ರö್ಯ ಮರೆಯಾಗಿತ್ತು. ಜನ ಅದನ್ನು ಶೌಚಕ್ಕೆ ಬಳಸುತ್ತಿದ್ದರು. ಅದರಲ್ಲಿ ಎಷ್ಟು ಹೂಳು ತುಂಬಿತ್ತೆಂದರೆ, ಸ್ವಚ್ಛತೆಗಾಗಿ ಕೆರೆಯ ಅಂಗಳಕ್ಕೆ ಇಳಿದಿದ್ದ ಜೆಸಿಬಿಯೇ ಮುಳುಗಿ ಹಾಳಾಯಿತು. ಕೊನೆಗೆ ಅದರ ಬಿಡಿ ಭಾಗಗಳನ್ನು ಬಿಚ್ಚಿ ತೆಗೆದು ರದ್ದಿಗೆ ಮಾರಬೇಕಾಯಿತು. ಆದರೆ, ಹಿಡಿದ ಕೆಲಸ ಬಿಡುವಂತಿಲ್ಲ. ಕೆರೆಯ ಜೀರ್ಣೋದ್ಧಾರಕ್ಕೆಂದೇ ೩೫ ಲಕ್ಷ ರೂ. ಖರ್ಚು ಮಾಡಿ ಹೊಸ ಹಿಟಾಚಿ ತರಿಸಿದರು. ಊರವರಿಂದ ೨ ಲಕ್ಷ ರೂ. ಸಂಗ್ರಹವಾದರೆ, ಕೆರೆಯ ಅಭಿವೃದ್ಧಿಗೆ ಹೆಬ್ಬಾರರು ವ್ಯಯಿಸಿದ್ದು ಬರೋಬ್ಬರಿ ೧ ಕೋಟಿ ರೂಪಾಯಿ! ಈಗ ಕೆರೆಯ ಆವರಣದಲ್ಲಿ ಸುಂದರವಾದ ಹೂದೋಟ, ಮಕ್ಕಳ ಆಟಿಕೆಗಳು, ವಾಕಿಂಗ್ ಪಾತ್, ಕಾರಂಜಿ ಎಲ್ಲವೂ ಇದ್ದು, ಆಕರ್ಷಕವಾಗಿವೆ. ವಿಹಾರಕ್ಕೆ ಬರುವವರಿಗೆ ಉಚಿತ ಬೋಟಿಂಗ್ ವ್ಯವಸ್ಥೆಯಿದೆ. ಇದೆಲ್ಲವನ್ನೂ ನಿರ್ವಹಿಸುತ್ತಿರುವುದು, ಹೆಬ್ಬಾರರೇ! ಆರು ತಿಂಗಳಲ್ಲಿ ಶಂಕರ ಹೊಂಡ ರಮ್ಯಾದ್ಭುತ ತಾಣವಾಗಿ ಅರಳಿ ನಿಂತಿತು. ಫಿಟ್ನೆಸ್ ಬಯಸುವ ಯುವಜನರಿಗಾಗಿ ರೋಟರಿ ಕ್ಲಬ್ ಇಲ್ಲೊಂದು ಜಿಮ್ ಅನ್ನು ಉಚಿತವಾಗಿ ನಡೆಸುತ್ತಿದೆ.
ಬೆಳಗಿತು ಬೆಳ್ಳಕ್ಕಿ ಕೆರೆ
ಬೆಳ್ಳಕ್ಕಿ ಕೆರೆಯ ಅಭಿವೃದ್ಧಿ ಮತ್ತೊಂದು ರೋಚಕ ಕಥೆ. ಆ ಕೆರೆಯ ನೀರಿಗಾಗಿ ೬೦ ವರ್ಷಗಳ ಹೋರಾಟದ ಇತಿಹಾಸವೇ ಇದೆ. ಇದರ ಪಾತ್ರದಲ್ಲಿ ೩ ಎಕರೆ ೬ ಗುಂಟೆ ಜಾಗ ಎನ್ಎ ಆಗಿತ್ತು. ತೆರವಿಗೆ ಹೋದಾಗ ತಕರಾರು ಎದುರಿಸಬೇಕಾಯಿತು. ಹೆಬ್ಬಾರರದು ಒಂದೇ ಮಾತು- ಮೂವತ್ತು ವರ್ಷಗಳಿಂದ ಕೆರೆಯ ಜಾಗ ಹಾಗೂ ನೀರು ನುಂಗಿದ್ದೀರಿ. ಹಾಗೆ ನೋಡಿದರೆ ನೀವೇ ಈ ಕೆರೆಯ ದುರಸ್ತಿ ಮಾಡಿಸಬೇಕು. ನಮಗಾದರೂ ಮಾಡಲು ಅವಕಾಶ ಕೊಡಿ – ಎಂಬುದಾಗಿ. ಹೆಬ್ಬಾರರ ಹಠದ ಮುಂದೆ ಅವರ ಆಟ ನಡೆಯಲಿಲ್ಲ. ಕೆರೆ ಅಭಿನೃದ್ಧಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಸ್ಥಳೀಯರು ಕೇವಲ ೧೦ ನಿಮಿಷಗಳಲ್ಲಿ ೨.೨೫ ಲಕ್ಷ ರೂ. ಸಂಗ್ರಹಿಸಿ ಕೊಟ್ಟಿದ್ದರು. ಬೆಲೆ ಕಟ್ಟಲಾಗದ ಆತ್ಮತೃಪ್ತಿ ಎಂಟರಿಂದ ಹತ್ತು ಕೆರೆ ಅಭಿವೃದ್ಧಿ ಮಾಡಿದ್ದೀರಿ. ಸರ್ಕಾರದಿಂದ ಏನು ಸಹಾಯ ಸಿಕ್ಕಿದೆ ಎಂದು ಕೇಳಿದರೆ, ಅವರ ಉತ್ತರ ವಿನೋದ ಹಾಗೂ ವಿಷಾದದಿಂದ ಕೂಡಿತ್ತು. ಇಂತಹ ಕೆಲಸಗಳಿಗೆ ಸರ್ಕಾರದಲ್ಲಿ ಆದ್ಯತೆ ಇಲ್ಲ. ನಾವು ಮಾಡುತ್ತೇವೆ ಎಂದರೆ ಧಾರಾಳವಾಗಿ ಅನುಮತಿ ಕೊಡುತ್ತಾರೆ. ಪ್ರತಿಯೊಂದು ಕೆರೆಯನ್ನೂ ಸ್ಥಳೀಯಾಡಳಿತಗಳ ಅನುಮತಿ ಪಡೆದೇ ಅಭಿವೃದ್ಧಿ ಮಾಡಿದ್ದೇವೆ. ಸರ್ಕಾರದಿಂದ ಒಂದು ಪೈಸೆಯ ಸಹಾಯವೂ ಇಲ್ಲ. ಊರವರ ಸಹಭಾಗಿತ್ವ ಇರುತ್ತದೆ. ತಮ್ಮ ಶಕ್ತಾö್ಯನುಸಾರ ಕೈಜೋಡಿಸುತ್ತಾರೆ. ನಾವು ಯಾರಿಂದ, ಏನನ್ನೂ ನಿರೀಕ್ಷಿಸುವುದಿಲ್ಲ. ಇಂಥ ಕೆರೆ ಅಭಿವೃದ್ಧಿ ಮಾಡಿಸಬೇಕು ಅಂತ ಅನ್ನಿಸಿದರೆ, ತಜ್ಞರ ತಂಡಗಳೊAದಿಗೆ ಚರ್ಚಿಸಿ, ಅಳತೆ ಮಾಡಿಸಿ, ಯೋಜನೆ ಸಿದ್ಧಪಡಿಸಿ, ಸ್ಥಳೀಯಾಡಳಿತದ ಅನುಮತಿ ಪಡೆದು ಜೆಸಿಬಿ ಹಚ್ಚುವುದೇ. ಖರ್ಚಾಗುವ ದುಡ್ಡಿನ ಲೆಕ್ಕ ಮುಖ್ಯವಲ್ಲ. ಎಷ್ಟು ನೀರು ಬಂತು, ಅದರಿಂದ ಎಷ್ಟು ಜನರಿಗೆ, ಪ್ರಾಣಿ- ಪಕ್ಷಿಗಳಿಗೆ ಹಾಗೂ ಪರಿಸರಕ್ಕೆ ಅನುಕೂಲವಾಯಿತು ಎಂಬುದನ್ನು ಕಂಡಾಗ ಸಿಗುವ ಆತ್ಮತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವೇ? ಎನ್ನುತ್ತಾರೆ. ತಮ್ಮ ಕಾರ್ಯದಲ್ಲಿ ಸದಾ ಬೆನ್ನಿಗೆ ನಿಂತ ಪತ್ರಿಕೆಗಳ ಸಹಕಾರವನ್ನು ಹೆಬ್ಬಾರರು ನೆನೆಯುತ್ತಾರೆ. ಈ ಎಲ್ಲ ಕೆರೆಗಳ ಅಭಿವೃದ್ಧಿಗೆ ನಾಲ್ಕು ಕೋಟಿ ರೂ.ಗಳಿಗೆ ಮಿಕ್ಕಿ ಖರ್ಚಾಗಿದೆ. ನೆರವು ನೀಡುವಂತೆ ಹೆಬ್ಬಾರರು ಎಂದೂ ಯಾರನ್ನೂ ಕೇಳಿಲ್ಲ. ಸ್ಥಳೀಯರೇ ಸ್ವಯಂ ಪ್ರೇರಣೆಯಿಂದ ಸುಮಾರು ೨೮ ಲಕ್ಷ ರೂ. ಸಂಗ್ರಹಿಸಿ ಕೊಟ್ಟಿದ್ದಾರೆ. ಮೊತ್ತಕ್ಕೆ ಮಹತ್ವವಿಲ್ಲ, ಒಳ್ಳೆಯ ಕೆಲಸಗಳಿಗೆ ಜನ ಬೆಂಬಲ ನೀಡುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದರು.
ಸೆಕೆಂಡ್ ಹ್ಯಾಂಡ್ ಲಾರಿ
ಜುಲೈ ೯, ೧೯೫೮ರಂದು ಕುಮಟಾ ತಾಲೂಕಿನ ಮಣಕಿ ಗ್ರಾಮದಲ್ಲಿ ಸೀತಾರಾಮ ಹೆಬ್ಬಾರ್ ಮತ್ತು ಸುಭದ್ರಾ ಹೆಬ್ಬಾರ್ ದಂಪತಿಯ ಪುತ್ರನಾಗಿ ಜನಿಸಿದ ಶ್ರೀನಿವಾಸ್ ಅವರು ಬಾಲ್ಯದಲ್ಲಿಯೇ ಸಾಹಸಿ ಪ್ರವೃತ್ತಿಯನ್ನು ಹೊಂದಿದ್ದರು. ಕೃಷಿ ಕುಟುಂಬದ ಹಿನ್ನೆಲೆ. ಪ್ರೌಢಶಿಕ್ಷಣವನ್ನು ಪೂರೈಸಿದ ಬಳಿಕ ಒಂದು ಸೆಕೆಂಡ್ ಹ್ಯಾಂಡ್ ಲಾರಿ ಕೊಂಡು, ಸ್ವತಃ ಚಾಲಕರಾಗಿ
ಕಾಯಕ ಆರಂಭಿಸಿದ ಅವರು ಸದ್ಯ ೩೦ಕ್ಕೂ ಹೆಚ್ಚು ಲಾರಿಗಳ ಮಾಲೀಕರಾಗಿ, ಉದ್ಯಮಿಯಾಗಿ ನೂರಾರು ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ. ಪತ್ನಿ ಹೇಮಾ, ಮಗಳು ನಿವೇದಿತಾ, ಅಳಿಯ ಅಕ್ಷತ್ ಹಾಗೂ ಮೊಮ್ಮಗಳು ಅವನಿ- ಇವರನ್ನು ಒಳಗೊಂಡ ಸುಂದರ ಸಂಸಾರ ಹೆಬ್ಬಾರರ ಕಾಯಕ ಬೆನ್ನಿಗೆ ನಿಂತಿದೆ. ತಮ್ಮೆಲ್ಲ ಸೇವಾ ಕಾರ್ಯಗಳನ್ನೂ ಇಷ್ಟೊಂದು ಅಚ್ಚುಕಟ್ಟಾಗಿ ನಡೆಸಲು ಪತ್ನಿ ಹೇಮಾ ಅವರ ಸಹಕಾರವೇ ಕಾರಣ ಎಂದು ಹೆಬ್ಬಾರರು ವಿಶೇಷವಾಗಿ ಉಲ್ಲೇಖಿಸುತ್ತಾರೆ.
ಶಿರಸಿ ಸ್ವಚ್ಛತೆಗೆ ಆದ್ಯತೆ
ಸ್ವತಃ ಟ್ರಾಕ್ಟರ್ ಖರೀದಿಸಿ, ಆರೆಂಟು ಕೆಲಸಗಾರರನ್ನಿಟ್ಟು, ಶಿರಸಿ ನಗರದ ಐದು ಕೀಮೀ ವ್ಯಾಪ್ತಿಯಲ್ಲಿ ಸ್ವಚ್ಛತಾ ಸೇವೆಯನ್ನು ನಡೆಸುತ್ತಿದ್ದಾರೆ. ಮರಾಟಿಕೊಪ್ಪದ ಯುವ ಸಂಘಟನೆಗೆ ಒಂದು ವಾಹನ ಕೊಡಿಸಿ, ಅಶಕ್ತ, ಅಸ್ವಸ್ಥ ಹಾಗೂ ಗಾಯಗೊಂಡ ಗೋವುಗಳ ಸೇವೆಗೆ ಅನುವು ಮಾಡಿಕೊಟ್ಟಿದ್ದಾರೆ. ಚಿಕಿತ್ಸಾ ಸೌಲಭ್ಯಗಳ ಜತೆಗೆ ನೂರು ಅಡಿ ಆಳಕ್ಕೆ ಬಿದ್ದ ಗೋವುಗಳನ್ನು ಎತ್ತಲೂ ಈ ವಾಹನದಲ್ಲಿ ವ್ಯವಸ್ಥೆಯಿದೆ. ಶಿರಸಿ- ಯಲ್ಲಾಪುರದ ಜನತೆಗೆ ಅನುಕೂಲವಾಗುವಂತೆ ತಲಾ ಒಂದೊಂದು ಅಂಬುಲೆನ್ಸ್ ಕೊಡಿಸಿದ್ದಾರೆ. ಆರ್ಥಿಕ ಅನುಕೂಲವಿದ್ದವರು ಡೀಸೆಲ್ ಹಾಕಿಸುತ್ತಾರೆ. ಆದರೆ, ಇವುಗಳ ಸೇವೆ ರೋಗಿಗಳಿಗೆ ಉಚಿತವಾಗಿರುತ್ತದೆ. ಕುಡಿಯುವ ನೀರು ಪೂರೈಕೆ, ವೈದ್ಯಕೀಯ ವೆಚ್ಚ ಪಾವತಿ… ಮುಂತಾದ ಸೇವಾ ಕಾರ್ಯಗಳಿಗೆ ಲೆಕ್ಕವೇ ಇಲ್ಲ. ಹೆಬ್ಬಾರರು ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾಗಿದ್ದಾರೆ. ನಾಡಿನ ಅಸಂಖ್ಯ ಬಡ ಮಕ್ಕಳ ಶುಲ್ಕ ಭರಿಸಿ, ಪುಸ್ತಕ, ಬಟ್ಟೆ, ಪಾಟಿಚೀಲ ಕೊಡಿಸಿ ಬೆಳಕಿನ ಹಾದಿಯಲ್ಲಿ ಅವರ ಪಯಣ ತಡೆಯಿಲ್ಲದೆ ನಡೆಯುವಂತೆ ನೋಡಿಕೊಂಡಿದ್ದಾರೆ. ಆದರೆ, ತಮ್ಮನ್ನೆಲ್ಲ ಕೈಹಿಡಿದು ನಡೆಸುತ್ತಿರುವುದು ಹೆಬ್ಬಾರರು ಎಂದು ಈ ವಿದ್ಯಾರ್ಥಿಗಳಿಗೂ ಗೊತ್ತಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸಲು ಕಷ್ಟವಿದೆ ಎಂದು ಅಧ್ಯಾಪಕರು, ಉಪನ್ಯಾಸಕರು ಪಟ್ಟಿ ಕೊಡುತ್ತಾರೆ. ಅವರೆಲ್ಲರ ಶುಲ್ಕ ಪಾವತಿಯಾಗುತ್ತದೆ. ಹೇಗೆ ಎಂದು ಯಾರಿಗೂ ತಿಳಿಯದಂತಹ ಗುಪ್ತದಾನ ಅವರದು. ವೃತ್ತಿಪರ ಶಿಕ್ಷಣದ ಅನೇಕ ವಿದ್ಯಾರ್ಥಿಗಳ ಲಕ್ಷಾಂತರ ರೂ. ಶುಲ್ಕವನ್ನು ಹೆಬ್ಬಾರರು ಪಾವತಿಸಿದ್ದುಂಟು. ಪುತ್ರಿಯ ವಿವಾಹ ಮಹೋತ್ಸವದ ನೆಪದಲ್ಲಿ ಗೋಳಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ರಥದ ಮನೆ, ಕಲ್ಯಾಣ ಮಂಟಪದ ಛಾವಣಿ ಇತ್ಯಾದಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಕೊಳಗಿಬೀಸ್ ಆಂಜನೇಯ ದೇವಸ್ಥಾನದಲ್ಲಿ ಮಹಾದ್ವಾರ, ಆವರಣ ಗೋಡೆಗಳಿಗೆ ವರ್ಣಚಿತ್ರಗಳ ಅಲಂಕಾರ ಇತ್ಯಾದಿ ಅಭಿವೃದ್ಧಿ ಕಾರ್ಯಗಳು ಮುಕ್ತಾಯ ಹಂತದಲ್ಲಿವೆ, ಅAಜನಾದ್ರಿ ಆಂಜನೇಯ ದೇವಸ್ಥಾನಕ್ಕೆ ಟಿಪ್ಪರ್ಗಳಲ್ಲಿ ೨೦೦೦ ಲೋಡ್ ಮಣ್ಣು ಸಾಗಿಸಿ, ಅಭಿವೃದ್ಧಿಗೆ ಸಹಕರಿಸಿದ್ದಾರೆ. ಶಿರಸಿ ಶ್ರೀ ರಾಘವೇಂದ್ರ ಮಠದ ರಾಘವೇಂದ್ರ ಮೂರ್ತಿ, ಆಂಜನೇಯ, ಕೊಳಗಿ ಬೀಸ್ ಆಂಜನೇಯ, ಅಂಜನಾದ್ರಿ ಆಂಜನೇಯ ಮೂರ್ತಿಗಳ ಬೆಳ್ಳಿ ಕವಚಗಳಿಗೆ ಬಂಗಾರದ ಲೇಪನ ಮಾಡಿಸಿದ್ದಾರೆ. ನಮಗೆ ಗೊತ್ತಿರುವುದು ಇಷ್ಟು. ಗೊತ್ತಿಲ್ಲದೆ ಇನ್ನೆಷ್ಟೋ!
ಪ್ರಶಸ್ತಿ-ಗೌರವ
ಶ್ರೀನಿವಾಸ ಹೆಬ್ಬಾರರ ಸಾಧನೆಯನ್ನು ಸೋಂದಾ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂಧ್ರ ಸರಸ್ವತೀ ಸ್ವಾಮಿಗಳು ಗುರುತಿಸಿ, ಅಭಿನಂದಿಸಿದರು. ಹಲವು ಸಂಘ-ಸಂಸ್ಥೆಗಳು `ಜಲಯೋಗಿ’, `ಕದಂಬ ರತ್ನ’ ಮುಂತಾದ ಬಿರುದು – ಸನ್ಮಾನಗಳನ್ನು ನೀಡಿವೆ. ಜಿಲ್ಲಾಡಳಿತ, ಕನ್ನಡ ಸಾಹಿತ್ಯ ಪರಿಷತ್ತು ಸನ್ಮಾನ ಪತ್ರ ನೀಡಿ ಗೌರವಿಸಿವೆ.
ಮರಳಿ ಕೊಡುವ ಕಾಯಕ:
ನೀರು ಜೀವಜಲವಾಗಿದೆ, ಗಿಡ-ಮರಗಳನ್ನು ಬೆಳೆಸುತ್ತ, ಮಳೆ ಕೊಯ್ಲು ಹಾಗೂ ಇಂಗು ಗುಂಡಿಗಳAತಹ ಕ್ರಮಗಳ ಮೂಲಕ ಮುಂದಿನ ಪೀಳಿಗೆಗೂ ಶುದ್ಧ ನೀರನ್ನು ಉಳಿಸಬೇಕಿದೆ. ನಾವು ಈ ಭೂಮಿಯ ಮೇಲೆ ಹುಟ್ಟಿದ್ದೇವೆ. ಪ್ರಕೃತಿಯಿಂದ ಎಲ್ಲವನ್ನೂ ಪಡೆದು ಬೆಳೆದಿದ್ದೇವೆ. ಇಂದು ನಾವು ಉಸಿರಾಡುವ ಗಾಳಿಯನ್ನು ಕೊಡುವ ಮರಗಳನ್ನು ಬೆಳೆಸಿದ್ದು ಯಾರೆಂದು ನಮಗೆ ಗೊತ್ತಿಲ್ಲ, ಕುಡಿಯುವ ನೀರಿನ ಕೆರೆಗಳನ್ನು ಕಟ್ಟಿಸಿದ್ದು ಯಾರೆಂಬ ಅರಿವಿಲ್ಲ. ನಮಗೆ ಆಹಾರ ಬೆಳೆದು ಕೊಡುವ ರೈತರ ಕಷ್ಟವೂ ಹಲವರ ಅರಿವಿಗಿಲ್ಲ. ಪ್ರಕೃತಿಯಿಂದ ಇಷ್ಟೆಲ್ಲ ಉಪಕೃತರಾದ ನಾವು ಮರಳಿ ಈ ಪರಿಸರಕ್ಕೆ ಏನು ಕೊಡುಗೆ ಕೊಟ್ಟಿದ್ದೇವೆ? ಎಲ್ಲವನ್ನೂ ಸರ್ಕಾರವೇ ಮಾಡಬೇಕೆಂದು ನಿರೀಕ್ಷಿಸುವ ಬದಲು ಎಲ್ಲರೂ ತಮ್ಮ ಆದಾಯದ ಒಂದು ಭಾಗವನ್ನು ಸಮಾಜ ಸೇವಾ ಕಾರ್ಯಗಳಿಗೆ ಮೀಸಲಿಡಬೇಕು. ಆಗಲೇ ನಮ್ಮ ಜನ್ಮ ಸಾರ್ಥಕವಾಗುವುದು – ಇದು ಹೆಬ್ಬಾರರ ಖಚಿತ ನುಡಿ. ಕೆರೆಗಳನ್ನು ನುಂಗಿ ಊರು ಕಟ್ಟುವ ಬೆಂಗಳೂರಿನಂತಹ ನಗರಗಳಲ್ಲೂ ಕೆರೆ ಹೆಬ್ಬಾರರಂತಹ ಒಬ್ಬಿಬ್ಬರಾದರೂ ಇರಲಿ..