ನಮ್ಮ ಮನೆಯ ಎದುರುಗಡೆಯೇ ಒಂದು ಸರಕಾರಿ ಶಾಲೆ ಇದೆ. ಒಂದು ಕಡೆಯಿಂದ ಹಸಿರು ಬಿಳಿ ಉಡುಪಿನಲ್ಲಿ ಒಂದೇ ರೀತಿ
ತೋರುವ ಮಕ್ಕಳು. ಅದರ ಜೊತೆಗೆ ಕಪುö್ಪ ಸಮವಸ್ತç ಧರಿಸಿ ಸಮಯಕ್ಕೆ ಸರಿಯಾಗಿ ಹಾಜರಾಗುವ ಕಾಗೆಗಳು. ಶಾಲೆ ಮಕ್ಕಳು ಜಾಸ್ತಿಯೋ? ಕಾಗೆಗಳು ಜಾಸ್ತಿಯೋ? ಅಂತ ಪತ್ತೆ ಹಚ್ಚಲಾರದಷ್ಟು ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದವು.
ನಾನು ಮದುವೆಯಾಗಿ ಬಂದ ಹೊಸತರಲ್ಲಿ, ಹೊಸ ಪರಿಸರಕ್ಕೆ ಒಡ್ಡಿಕೊಳ್ಳುವ ಹೊತ್ತಿನಲ್ಲಿ, ಬಾಗಿಲು ತೆರೆದು ಶಾಲೆಯ ಕಡೆ ಮುಖ ಮಾಡಿ ದಿಟ್ಟಿಸುತ್ತಿದ್ದವಳಿಗೆ ಈ ಅಚ್ಚರಿ ತಂತಾನೆ ತೆರೆದುಕೊಂಡಿತ್ತು. ಢಣ ಢಣ ಗಂಟೆ ಭಾರಿಸಿದ್ದೊಂದೇ ತಡ, ಚಳ್ಳೆಪಿಳ್ಳೆ ಪುಟಾಣಿ ಹೂ ಮಕ್ಕಳು ಕೈ ತೊಳೆಯಲೆಂದು ಮೈದಾನದ ಬಳಿಯಲ್ಲಿರುವ ಬೋರ್ ವೆಲ್ನ ಕಡೆಗೆ ಒಂದೇ ಸಮನೆ ದೌಡಾಯಿಸುತ್ತಿದ್ದರು. ಅಷ್ಟರಲ್ಲೇ ಯಾವುದೇ ಕಚಿಪಿಚಿ, ಗಜಿಬಿಜಿ ಮಾಡದೆ ಅಲ್ಲೆ ಶಿಸ್ತಿನಿಂದ ಕಾದು ಕುಳಿತ್ತಿರುತ್ತಿದ್ದ ಹಿಂಡು ಹಿಂಡು ಕಾಗೆಗಳು ಪರ್ರನೆ ಆಚೆಗೂ ಈಚೆಗೂ ಸಂಭ್ರಮದಿoದ ಹಾರುತ್ತಿದ್ದವು. ಮಕ್ಕಳು ಊಟ ಮಾಡಿ ಅಳಿದುಳಿದದ್ದನ್ನ ಆಚೆ ಚೆಲ್ಲುತ್ತಾರೆ. ತಮಗೆ ಅದುವೇ ಮೃಷ್ಟಾನ್ನ ಭೋಜನ ಅನ್ನುವುದೇ ಅವುಗಳ ಹಿಗ್ಗಿಗೆ ಮುಖ್ಯ ಕಾರಣ.
ತಮಾಷೆಯೆಂದರೆ, ಕಾಗೆಯನ್ನು ಸುಮ್ಮಗೆ ಪೆದ್ದು ಪಕ್ಷಿ ಅಂತ ನಾವು ರಸವತ್ತಾದ ಕತೆ ಕಟ್ಟಿ ಹೇಳುವುದು. ಹಾಗೆ ನೋಡಿದರೆ ಕಾಗೆ ಮಾತ್ರ ಯಾಕೆ? ಹೊಗಳಿಕೆಗೆ ಉಬ್ಬದವರು ಈ ಜಗದಲ್ಲಿ ಯಾರಿದ್ದಾರೆ? ಥೂ! ಕಾಗೆ! ಕಪ್ಪು,ಕರಿ, ಅಪಶಕುನ ಅಂತ ಸಂದರ್ಭ ಸಿಕ್ಕಾಗಲೆಲ್ಲ ಹೀಯಾಳಿಕೆಗೆ ಪಾತ್ರವಾಗಿ ಅದು ಮತ್ತಷ್ಟು ಮೂಲೆ ಸರಿದು ಹೋದುದರಲ್ಲಿ ಎಳ್ಳಷ್ಟು ಸಂಶಯವಿಲ್ಲ. ಪಾಪ! ಅದರ ದನಿ ಇರುವುದೇ ಹಾಗೇ. ದೈವದತ್ತವಾಗಿ ಬಂದoತದ್ದು. ಹಾಗಿರುವಾಗ ಅದನ್ನು ಅದರ ಪಾಡಿಗೆ ಬಿಡುವುದ ಬಿಟ್ಟು, ಕರ್ಕಶ ಶಬ್ದಕ್ಕೆಲ್ಲಾ ಕಾಗೆಯ ದನಿ ಅಂತ ಉಪಾಧಿಯಿಟ್ಟು ಹೀಗೆಳೆಯುವಾಗ ಅದರ ಸ್ಥಿತಿ ಹೇಗಿರಬೇಡ?
ನಾವು ಮಡಿವಂತರoತೆ ಅದಕ್ಕೆ ಮೈಲಿಗೆ ಪಟ್ಟ ಕೊಟ್ಟು ಎಲ್ಲಾದರೂ ಅಪ್ಪಿ ತಪ್ಪಿ ಅದು ತಲೆಯ ಮೇಲಿಂದ ಸವರಿದಂತೆ ಹಾರಿ ಹೋದರೂ ಸಾಕು, ನಂತರ ಸ್ನಾನ ಮಾಡದೇ ಒಳಗೆ ನುಗ್ಗುವಂತಿಲ್ಲ. ಇಷ್ಟೆಲ್ಲಾ ನಿಕೃಷ್ಟಕ್ಕೆ ಒಳಗಾಗಿದ್ದ ಕಾಗೆ ಯಾವಾಗಲೋ ಒಂದು ಬಾರಿ ‘ನಿನ್ನ ಬಣ್ಣ ಎಷ್ಟು ಚೆಂದ! ನಿನ್ನ ದನಿಯು ಎನಿತು ಅಂದ! ಒಂದು ಹಾಡು ಹೇಳುವಿಯಾ? ಅಂತ ಗುಳ್ಳೆ ನರಿ ಹೊಗಳುವಾಗ ಅರಿವಿಲ್ಲದೆಯೇ ಉಬ್ಬಿ, ಕೊಕ್ಕಿನೊಳಗೆ ಕಚ್ಚಿಕೊಂಡದ್ದು, ಆ ಗಳಿಗೆಯಲ್ಲಿ ಮರೆತು ಮಾಂಸದ ತುಣುಕೊಂದು ಹಾಡಲು ಬಾಯಿ ತೆರೆಯುವ ಕ್ಷಣದಲ್ಲಿ ಮೆಲ್ಲನೆ ಜಾರಿ ನೇರ ನರಿಯ ಬಾಯೊಳಗೆ ಬಿದ್ದದ್ದು ಅಂತಹ ದೊಡ್ದ ಸಂಗತಿಯೇನಲ್ಲ ಅಂತ ಈಗ ಅನ್ನಿಸುತ್ತದೆ.
ಹೋಗಲಿ ಬಿಡಿ, ನಾನು ಆಗಲೇ ಶಾಲೆ ವಿಚಾರ ತೆಗೆದೆನಲ್ಲ, ಆಗ ಈ ವಿಷಯ ನೆನಪಿಗೆ ಬಂತು. ಬಹುಶ: ಯಾವುದೋ ಒಮ್ಮೆ ಒಂದು ಕಾಗೆ ಇಂತ ಪೆದ್ದುತನಕ್ಕೆ ಬಲಿಯಾಗಿರಬೇಕಷ್ಟೆ. ಉಳಿದಂತೆ ಕಾಗೆ ಸಾಕಷ್ಟು ಚುರುಕು, ಬುದ್ಧಿವಂತ ಪಕ್ಷಿ ಅಂತ ಶಾಲೆಯ ಮೈದಾನದಲ್ಲಿ ನೋಡುವಾಗಲೆಲ್ಲಾ ಗಮನಿಸಿದ್ದೇನೆ. ಬಹುಶ: ಶಾಲೆಯ ಪ್ರಭಾವಳಿಯೇ ಅದಕ್ಕೂ ತಾಗಿ ಬುದ್ಧಿ ಬಂದಿರಬಹುದೇ? ಅನ್ನೋ ಅನುಮಾನ ಕೂಡ ನನ್ನನ್ನು ಒಮ್ಮೊಮ್ಮೆ ಕಾಡಿದ್ದಿದೆ. ಯಾಕೆಂದರೆ ಬೆಳಗಿನ ಹೊತ್ತು ಮೈದಾನ ತುಂಬಾ ಖಾಲಿಯಾಗಿ ಒಂದು ಕಾಗೆಯೂ ಸುಳಿಯದೆ, ಮಕ್ಕಳ ಪಾಠ ಪ್ರವಚನಕ್ಕೆ ಇನಿತು ತೊಂದರೆ ಕೊಡದೆ ನಿಶ್ಯಬ್ದವಾಗಿರುವಾಗ ಇನ್ನೇನು ೧೨-೪೫ಕ್ಕೆ ಶಾಲೆಯ ಘಂಟೆ ಢಣಢಣ ಭಾರಿಸುತ್ತೆ. ಇದೇ ಸಮಯ ಆಗುತ್ತೆ ಅನ್ನೋದಿಕ್ಕೆ ತುಸು ಮುಂಚೆ ಕಾಗೆಗಳ ಹಿಂಡು ಮೈದಾನದ ಆವರಣದಲ್ಲಿ ಗುಂಪು ಸೇರಿ ಆಪ್ತ ಸಮಾಲೋಚನೆ ಮಾಡುತ್ತಿರುವಂತೆ ಆಚೆ ಈಚೆ ಸದ್ದು ಗದ್ದಲವಿಲ್ಲದೆ ಕುಪ್ಪಳಿಸುತ್ತಾ ಕಾಯುತ್ತವೆ. ಮಕ್ಕಳು ತಿಂದು ಬಿಸಾಕಿದ ಬುತ್ತಿಯೂಟವನ್ನು ಪೈಪೋಟಿಗಿಳಿದಂತೆ ತಿನ್ನುತ್ತಾ ಮಕ್ಕಳ ಕಲರವ, ಕಾಗೆಯ ಅರಚಾಟ ಎಲ್ಲವೂ ಮಿಳಿತಗೊಂಡ ಮೈದಾನಕ್ಕೆ ಹೊಸ ಹುರುಪಿನ ಜನ್ಮ ಬಂದoತೆ ಭಾಸವಾಗುತ್ತಿತ್ತು. ಊಟದ ಸಮಯ ಆಗಿ ಮಕ್ಕಳು ತರಗತಿ ಕೋಣೆಯೊಳಗೆ ಹೊಕ್ಕ ನಂತರ ಕಾಗೆಗಳು ಮೈದಾನವನ್ನು ಶಾಲೆ ಮಕ್ಕಳಿಗೆ ಬಿಟ್ಟು ಕೊಟ್ಟು ತೆಪ್ಪಗೆ ಜಾಗ ಖಾಲಿ ಮಾಡಿ ಬಿಡುತ್ತಿದ್ದವು. ಮತ್ತೆ ಬರುವುದು ನಾಳೆ ಮಧ್ಯಾಹ್ನಕ್ಕೇ.
ಅದೂ ಅಲ್ಲದೆ ಆದಿತ್ಯವಾರ ರಜಾದಿನವೆಂದು ಅದು ಆಗಲೇ ಲೆಕ್ಕ ಹಾಕಿಕೊಂಡಿರುತ್ತದೆ. ಯಾವ ರಜಾದಿನಗಳೂ ಅದು ಶಾಲೆಯ ಕಡೆ ಮುಖ ಮಾಡುವುದಿಲ್ಲ. ಇಂತಹ ತೀಕ್ಷ÷್ಣ ಬುದ್ಧಿಯ ಕಾಗೆಯನ್ನು ಸಮಯಸಮಯ ಸಂದರ್ಭ ಸಿಕ್ಕಾಗಲೆಲ್ಲಾ ಹೀಗಳೆದರೆ ನಿಜಕ್ಕೂ ಬೇಸರವಾಗೋದಿಲ್ವ? ಅದೂ ಅಲ್ಲದೆ ಒಂದು ಅನ್ನದ ಅಗಳು ಕಂಡರೂ ತನ್ನ ಬಳಗವನ್ನೆಲ್ಲಾ ಕರೆದು ಹಂಚಿ ತಿನ್ನುವುದಿಲ್ಲವೇ? ಇಂತಹ ಪರೋಪಕಾರಿ ಕಾಗೆಯ ಕುರಿತು ಅಪಹಾಸ್ಯ ಸಲ್ಲ ಅಂತ ಹೇಳಬೇಕು ಅನ್ನಿಸುತ್ತದೆ. ಬಹುಶ: ಕಾಗೆಯಷ್ಟು ಮನುಷ್ಯನಿಗೆ ಹತ್ತಿರವಾದ ಪಕ್ಷಿ ಬೇರೊಂದು ಇಲ್ಲ. ಅದಕ್ಕೆ ಅವುಗಳು ಯಾವಾಗಲೂ, ಟೀಕೆಗೆ ಒಳಗಾಗುವುದು. ಹತ್ತಿರದ್ದಕ್ಕೇ ಯಾವಾಗಲೂ ನಮ್ಮ ಗುರಿ ನೋಡಿ!
ಇನ್ನು ಕಾಗೆ ಬಗ್ಗೆ ಮಾತಾಡುತ್ತಾ ಕುಂತರೆ ಪುಂಖಾನುಪುoಖ ಕತೆಗಳು ಹಾಗೇ ನೇಯುತ್ತಾ ಸಾಗುತ್ತವೆ. ನಮಗೆಲ್ಲಾ ಗೊತ್ತಿದೆ.ಒಂದಷ್ಟು ವರುಷದ ಕೆಳಗೆ ನಮ್ಮ ಎಳವೆಯಲ್ಲಿ ಅಮ್ಮಂದಿರು ಹೊರಗೆ ಕೂರಬೇಕಾದ
ಸಂದರ್ಭದಲ್ಲಿ ಯಾವಾಗಲೂ ಕಕ್ಕೆ ಮುಟ್ಟಿದೆ ಅಂತ ಕತೆ ಕಟ್ಟಿ ಮೂರು ದಿನವೂ ಕೊಟ್ಟಿಗೆ ಪಕ್ಕದ ಬಿಡಾರದಲ್ಲಿ ಮಲಗುತ್ತಿದ್ದದ್ದು. ಆಗ ಕಾಗೆಯನ್ನು ಮುಟ್ಟಿಸಿಕೊಳ್ಳಲು ಕಾದ ಕತೆಗಳು ಅಷ್ಟಿಷ್ಟಲ್ಲ. ಯಾವಾಗಲೋ ಒಮ್ಮೆ ನಾವೇ
ಸುಳ್ಳು ಸುಳ್ಳೇ ಕಾಗೆ ಮುಟ್ಟಿತು ಅಂತ ಹೇಳಿದ್ದಕ್ಕೆ, ಗದರಿ, ಸ್ನಾನ ಮಾಡಿಸಿ ಒಳಗೆ ತಳ್ಳಿ, ಹೊರಗೆ ಕೂತುಕೊಳ್ಳುವುದು ದೊಡ್ಡವಳಾದ ನಂತರ ಮಾತ್ರ ಅಂತ ಕಾಗೆ ಕತೆಗೆ ಮತ್ತೊಂದು ಆಯಾಮ ಕೊಟ್ಟು ನಮ್ಮ ಕುತೂಹಲವನ್ನು ಇಮ್ಮಡಿಗೊಳಿಸಿದ್ದರು.
ಕಾಗೆಯೊಂದಿಗೇ ಹಾರಿ ಕೊಂಡು ಬಂದ ಕಟ್ಟು ಕತೆಗಳು ಅಷ್ಟಿಷ್ಟಲ್ಲ. ಒಂದು ಕಡೆ ಪುಟ್ಟ ಗುಬ್ಬಕ್ಕನ ಗೂಡು ಸೇರಿ, ಅದಿಟ್ಟ ಮೊಟ್ಟೆಗಳನ್ನೆಲ್ಲಾ ಸ್ವಾಹ ಮಾಡಿದ ನಯವಂಚಕ ಕಾಗೆ, ಮತ್ತೊಂದು ಕಡೆ ತನ್ನ ಮಗನನ್ನೇ ಭಕ್ಷ÷್ಯವಾಗಿ ಬಡಿಸಿದ್ದಾರೆ ಅನ್ನೋ ಅರಿವಿಲ್ಲದೆ ಗಬ ಗಬ ತಿನ್ನುತ್ತಿರುವ ರಕ್ಕಸಿಗೆ, ಒಂಟಿ
ಮರದ ಮೇಲೆ ಕುಳಿತು ‘ತನ್ನ ಮಗನ ತಾನೇ ತಿಂದೆ ಕಾ..ಕೂ..ಕಾ..’ ಅಂತ ಶಕುನ ಹೇಳುವ ಕಾಗೆ. ಹೀಗೆ ಕಾಗೆ ಕತೆಗೆ ನಮ್ಮಲ್ಲಿ ಬರವಿಲ್ಲ. ಕಾಗೆ ನಮ್ಮ ಕಣ್ಣೆದುರಿನಲ್ಲಿಯೇ ಹಾರಿಕೊಂಡು ಇರುವ ಕಾರಣ ಪೋಕರಿ ಮಕ್ಕಳನ್ನು ಹೆದರಿಸಲು, ಬೆದರಿಸಲು, ನಿದ್ರಿಸುವಂತೆ ಮಾಡಲು ಕಾಗೆ ಕತೆಯೇ ಪರಿಣಾಮಕಾರಿಯಗಿರುತ್ತಿತ್ತು. ನೋಡು, ನೀ ನಿದ್ದೆ ಮಾಡದಿದ್ದರೆ ನಿನ್ನನ್ನು ಕಕ್ಕೆ ತಲೆ ಮೇಲೆ ಇಟ್ಟು ಹೊತ್ತುಕೊಂಡು ಹೋಗುತ್ತೆ ಅಂತ ನೂರೆಂಟು ಉಪಕತೆಗಳ ಜೋಡಿಸಿ ಕಲ್ಪನೆಗೆ ಹಚ್ಚಿಸಿಯೇ ನಿದ್ರೆ
ಮಾಡಿಸುತ್ತಿದ್ದದ್ದು. ಕಾಗೆ ಕೋಳಿ ಪಿಳ್ಳೆಗಳನ್ನು ಹಾರಿಸಿಕೊಂಡು ಹೋಗುವುದು ಮಕ್ಕಳು ಹತ್ತಿರದಿಂದ ನೋಡಿಯೇ ಇರುತ್ತಾರೆ. ಕೋಳಿ ಸಾಕುವ ಮನೆಗಳಲ್ಲಿ ಕೋಳಿಯ ಮೊಟ್ಟೆಗಳನ್ನು, ಹೂ ಮರಿಗಳನ್ನು ಕಾಗೆಯಿಂದ ರಕ್ಷಿಸಿ ಜೋಪಾನ ಮಾಡುವುದೆಂದರೆ ಹರಸಾಹಸವೇ. ಕಾಗೆಯ ದೃಷ್ಟಿ ಬಲು ತೀಕ್ಷ÷್ಣ ಇರಬೇಕು. ಅದಕ್ಕೆ ಕಾಕಾ ದೃಷ್ಟಿ ಅನ್ನುವುದಿರಬೇಕು. ತೆಂಗಿನ ಮರದ ತುದಿಯಲ್ಲೋ ಮಾವಿನ ಮರದ ತುದಿಯಲ್ಲೋ ಅಡಗಿ ಕುಳಿತು ಹೇಗೋ ಹೊಂಚು ಹಾಕುವುದರಲ್ಲಿ
ಸಫಲವಾಗಿ ಬಿಡುತ್ತಿತ್ತು.
ಹೆಚ್ಚಿನ ಮನೆಗಳಲ್ಲಿ ಕಾಗೆ ಮರದ ಮರೆಯಲ್ಲಿ ಕೂತದ್ದು ಕಂಡರೆ ಅದಕ್ಕೆ ಕನ್ನಡಿ ಬೆಳಕನ್ನು ಅದರ ಕಣ್ಣಿಗೆ ಹಾಯಿಸುತ್ತಿದ್ದರು. ಆ ಬೆಳಕಿನ ಪ್ರಖರತೆಗೆ ಕಣ್ಣು ಮಂಕಾಗುತ್ತಿತ್ತೋ ಏನೋ, ಅಪಾಯದ ಸುಳಿವು ಸಿಕ್ಕ ಕಾಗೆ ತಕ್ಷಣ ಜಾಗ ಖಾಲಿ ಮಾಡುತ್ತಿತ್ತು. ಆಹಾರದ ವಿಷಯಕ್ಕೆ ಬಂದಾಗ ಕಾಗೆಗೆ ಅಂತ ಮಡಿವಂತಿಕೆಯೇನೂ ಇಲ್ಲ. ಕಾಳು ಕಡ್ಡಿಗಳಿಗಿಂತ ಹೆಚ್ಚಾಗಿ ಕೊಳಚೆ ತ್ಯಾಜ್ಯ, ಸತ್ತ ಪ್ರಾಣಿಯ ಮಾಂಸ ಎಲ್ಲವೂ ಅದಕ್ಕೆ ಪ್ರಿಯವೇ. ಅದಕ್ಕೇ ಬಹುಶ: ಜನರು ಅದನ್ನು ಕಂಡರೆ ಅಸಹ್ಯ ಪಡುವುದು. ಸೂರ್ಯ ಕಂತುವ ಹೊತ್ತಲ್ಲಿ ಮೇಲೆ ಬಾನಿನ ತುತ್ತ ತುದಿಯಲ್ಲಿ ಸಾಲಾಗಿ ರೆಕ್ಕೆ ಮಡಚದೇ ಗೂಡು ಸೇರುವ ಧಾವಂತದಲ್ಲಿ ತಲುಪಿಕೆಯೊಂದನ್ನೇ ಗಮ್ಯವಾಗಿಟ್ಟುಕೊoಡು ಹಾರುವ ಕಾಗೆಗಳ ಧ್ಯಾನ ನನಗೆ ನೋಡಲು ಬಲು ಇಷ್ಟ.
ಇಷ್ಟೆಲ್ಲಾ ಊರೂರು ತಿರುಗುವ ಹೊತ್ತಲ್ಲಿ ಸೋಂಭೇರಿ ಕೋಗಿಲೆ, ಕಾಗೆ ಗೂಡಲಿ ಮೊಟ್ಟೆ ಇಟ್ಟು ಬರುವುದು ಕಾಗೆಗೆ ಗೊತ್ತಿರದ ಸಂಗತಿಯೇನಲ್ಲ. ಪಾಪ! ಅದು ರಾಗ ಹಾಕಿ ಸಂಗೀತ ಅಭ್ಯಾಸ ಮಾಡುವುದರಲ್ಲಿ ನಿರತವಾಗಿರುವಾಗ ಮೊಟ್ಟೆ, ಮರಿ, ಪೋಷಣೆಗೆ ಸಮಯವಾದರೂ ಎಲ್ಲಿ ಸಿಗುತ್ತೆ? ಅನ್ನೋ ಉದಾರ ಮನಸ್ಥಿತಿಯೇ ಇಷ್ಟೆಲ್ಲಾ ವಿಚಾರಗಳಿಗೆ ಮೂಲ ಕಾರಣ. ಆದರೆ ಒಳ್ಳೆಯತನವನ್ನು ಅಷ್ಟು ಸುಲಭವಾಗಿ ಯಾರೂ ಪತ್ತೆ ಹಚ್ಚುವುದಿಲ್ಲ. ಕಾಗೆಗೂ ಕೋಗಿಲೆಗೂ ರೂಪದಲ್ಲಿ, ಬಣ್ಣದಲ್ಲಿ ಅಷ್ಟಾಗಿ ವ್ಯತ್ಯಾಸವಿಲ್ಲದಿದ್ದರೂ, ಹಾಗೆಲ್ಲ ಎಲ್ಲರ ಎದುರಿಗೆ ಕಾಣ ಸಿಗದೆ ನಾಚಿಕೆಯೇ ಮೈಯೆತ್ತಿದಂತೆ ಯಾವಾಗಲೋ ಒಮ್ಮೆ ವಸಂತ ಮಾಸದಲ್ಲಿ ಮಾವಿನ ತಳಿರಿನ ನಡುವೆ ಮೈ ಹುದುಗಿಸಿ ಕುಹೂ..ಕುಹೂ.. ಕೂಗಿದ್ದಕ್ಕೆ ಅದಕ್ಕೆ ವಿಶೇಷ ಮರ್ಯಾದೆ ಸಿಕ್ಕಿ ಗಾನ ಕೋಗಿಲೆ ಅಂತ ಬಿರುದೂ ಸಿಕ್ಕಿಬಿಟ್ಟಿತು ನೋಡಿ. ನಮ್ಮ ಕಾಗಕ್ಕ ಹೊತ್ತು ಗೊತ್ತಿಲ್ಲದೆ ಕ್ರಾ..ಕ್ರಾ.. ಅಂತ ಕರೆದದ್ದಕ್ಕೇ ಅದು ಅವಗಣನೆಗೆ ಪಾತ್ರವಾದದ್ದು ಇರಬೇಕು.
ಅದೇನೇ ಇರಲಿ ಕಾಗೆಯ ಜೊತೆಗೆ ಅನೇಕ ನಂಬಿಕೆಗಳೂ ಕೂಡ ಬೆಸೆದುಕೊಂಡು ಬಂದಿವೆ. ಅದರಲ್ಲೂ ಶ್ರಾದ್ಧದ ದಿನ ಮಾತ್ರ ಕರೆದೂ ಕರೆದೂ ಅದಕ್ಕೆ ಮೃಷ್ಟಾನ ಭೋಜನವಿಕ್ಕುವಷ್ಟು ಅದು ಪ್ರಾಮುಖ್ಯತೆಯನ್ನು ಪಡೆದಿದೆ. ಸತ್ತವರು ಆ ದಿನ ಕಾಗೆ ರೂಪದಲ್ಲಿ ಬಂದು ಅವರ ಪ್ರಯುಕ್ತ ಮಾಡಿದ ಭೋಜನವನ್ನು ಬಂದು ಸೇವಿಸುತ್ತದೆ ಅನ್ನೋ ಬಲವಾದ ನಂಬಿಕೆ. ಆ ದಿನ ಪಿತೃಗಳಿಗೆ ಬಡಿಸಿದ್ದು ಮೊದಲು ಕಾಗೆ ಬಂದು ತಿಂದು ಹೋದ ನಂತರವೇ ಬಂದಿದ್ದ ಸಂಬoಧಿಕರಿಗೆ ಊಟಕ್ಕೆ ಅಣಿಗೊಳಿಸುತ್ತಿದ್ದರು. ಕಾ.. ಕಾ.. ಅಂತ ಮೂರು ಬಾರಿ ಕರೆಯೋದಿಕ್ಕೆ ಮುಂಚೆಯೇ ಕಾಗೆ ಎದುರಿಗಿಟ್ಟ ಆಹಾರವನ್ನು ಕಚ್ಚಿಕೊಂಡು ಹೋಗುತ್ತಿತ್ತು. ಮತ್ತೆ ತನ್ನ ಬಳಗದವರನ್ನೆಲ್ಲಾ ಕರೆದು ತಿನ್ನುತ್ತಿತ್ತು. ಆ ಕ್ಷಣದಲ್ಲಿ ಮಾತ್ರ ಕಾಗೆ ಪಿತೃಗಳ ಅವತಾರದಂತೆ ನಾವು ಪರಿಭಾವಿಸುತ್ತಿದ್ದದ್ದು ಒಂದು ಚೋದ್ಯವೇ. ಸಮಯ ಸಂದರ್ಭಕ್ಕೆ ಅನುಸಾರವಾಗಿ ನಾವು ಯಾರಿಗೂ ಯಾವ ಸ್ಥಾನವನ್ನೂ ಕೊಟ್ಟು ಬಿಡುತ್ತೇವೆ ಅಲ್ಲವಾ?
ಇನ್ನು ಕಾಕತಾಳಿಯವೋ, ನಿಜವೋ, ಸುಳ್ಳೋ, ಒಂದೂ ಗೊತ್ತಿಲ್ಲ. ಆದರೆ ಮನೆಯ ಬಳಿ ಬಂದು ಕಾಗೆ ಕಾ.. ಕಾ., ಅಂತ ಕರೆದರೆ ಸಾಕು ಯಾರಾದರೂ ನೆಂಟರು ಬರುತ್ತಾರೆ ಎಂಬುದು ವಾಡಿಕೆ. ಅದು ಕೆಲವೊಮ್ಮೆ ನಿಜವೇ ಆದದ್ದಕ್ಕೆ ಇರಬೇಕು ಕಾಗೆ ಕರೆಗೆ ಮನಸು ಮಾನಸಿಕವಾಗಿ ನೆಂಟರ ಬರುವಿಕೆಗೆ ತಯಾರಿ ನಡೆಸುತ್ತಿತ್ತು ಎಂಬುದು ನಿಜಕ್ಕೂ ಸತ್ಯ. ಇವೆಲ್ಲಾ ಕತೆಗಳನ್ನೂ ಕೇಳುತ್ತಾ, ನಂಬಿಕೆಗಳಿಗೆ ಒಡ್ಡಿಕೊಳ್ಳುತ್ತಾ ಬೆಳೆದ ನಮ್ಮ ಸಮಕಾಲೀನ ಮಕ್ಕಳು ಕಾಗೆ.. ಕಾಗೆ.. ಕವ್ವಾ.. ಯಾರೂ ಬಂದಾರವ್ವಾ.., ಕಕ್ಕೆ ಪಿಳ್ಳೆ ಕಾ..ಕಾ.. ಅಂತ ಪದ ಕಟ್ಟಿ ನಲಿಯುತ್ತಿದ್ದದು. ಮನೆಯಲ್ಲಿ ಅಡುಗೆ ಮಾಡುವಾಗ ಬೆಳಗ್ಗೆ ದೋಸೆಯನ್ನೋ, ರೊಟ್ಟಿಯನ್ನೋ ಕಾಗೆಗೆ ಕರೆದು ಹಾಕಿದರೆ ಒಳ್ಳೆಯದೆಂಬ ನಂಬಿಕೆ ಇನ್ನೂ ಕೆಲವು ಮನೆಗಳಲ್ಲಿ ಪ್ರಚಲಿತದಲ್ಲಿದೆ. ಅದಕ್ಕಾಗಿ ನನ್ನಮ್ಮ ದಿನಾ ಬೆಳಗ್ಗಿನ ತಿಂಡಿಯನ್ನು ಕಾಗೆಗೆ ಕರೆದು ಹಾಕುವುದನ್ನು ನಾನು ನೋಡಿದ್ದೇನೆ. ತದನಂತರ ಹೊತ್ತಿಗೆ ಸರಿಯಾಗಿ ಅದು ಕಾಯುತ್ತಾ ಕೂರುವುದೂ ಕೂಡ ಒಂದು ವಿಶೇಷವೇ. ಈ ಹೊತ್ತಿನಲ್ಲಿ ಕಾಗೆಯ ಸಂತತಿಯ ಉಳಿವಿಗೆ ಎಲ್ಲರೂ ಕಾಗೆಗೆ ಕರೆದು ಊಟ ಹಾಕಬೇಕಾದ ಅನಿವಾರ್ಯತೆ ಇದೆ ಅಂತ ನನಗನ್ನಿಸುತ್ತದೆ.
ಈಗ ಜಗತ್ತು ಮೊದಲಿನಂತಿಲ್ಲ ಅನ್ನುವುದನ್ನು ಬೇರೆ ಹೇಳಬೇಕಿಲ್ಲ. ಬೇರೆ ಬೇರೆ ರೀತಿಯಲ್ಲಿ ಅಭಿವೃದ್ಧಿಗಳು ಆಗುತ್ತಿವೆ ಅನ್ನುವುದು ಕೂಡ ಒಪ್ಪಿಕೊಳ್ಳಬೇಕಾದ ಸತ್ಯ. ಯಾಕೆಂದರೆ ಮಕ್ಕಳು ಬೆಳಗ್ಗೆಯದ್ದೋ,
ನಿನ್ನೆಯದ್ದೋ, ಮಾಡಿದ ಅಡುಗೆಯನ್ನು ಬುತ್ತಿ ಕಟ್ಟಿಕೊಂಡು ಬರುವ ಪ್ರಮೇಯವೇ ಇಲ್ಲ. ಇನ್ನು ಕೆಲವು ಮಕ್ಕಳು ಬಡತನದ ದೆಸೆಯಿಂದ ಬುತ್ತಿ ತರದೆ ಶಾಲೆ ಬಿಡುವ ಪ್ರಸಂಗ ಇಲ್ಲ. ಈಗ ಸರಕಾರ ಸರಕಾರಿ ಶಾಲೆಯಲ್ಲಿನ ಎಲ್ಲಾ ಮಕ್ಕಳಿಗೆ ಮಧ್ಯಾಹ್ನ ಹೊತ್ತಿನ ಬಿಸಿಯೂಟದ ವ್ಯವಸ್ಥೆಯಾಗಿ ನಿಜಕ್ಕೂ ಅನ್ನಭಾಗ್ಯ ದೊರಕಿದೆ. ಎಂದಿನoತೆ ಢಣ.. ಢಣ ಗಂಟೆ
ಭಾರಿಸುತ್ತದೆ. ಮಕ್ಕಳು ಅಂದಿನoತೆ ಇಂದೂ ಶ್ಲೋಕ ಹೇಳಿ ಊಟಕ್ಕೆ ಕುಳಿತುಕೊಳ್ಳುತ್ತಾರೆ. ಊಟ ಮುಗಿಸಿ ಅಳಿದುಳಿದದ್ದನ್ನು ಮೈದಾನದ ತುದಿಗೆ ಹೋಗಿ ಚೆಲ್ಲುತ್ತಾರೆ. ಎಲ್ಲೋ ಒಂದೆರಡು ಹಸಿದ ಬೀಡಾಡಿ ನಾಯಿಗಳು ಅದನ್ನು ತಿನ್ನಲು ಬರುವುದನ್ನು ಬಿಟ್ಟರೆ ಉಳಿದಂತೆ ಒಂದೇ ಒಂದು ಕಾಗೆಯ ಸುಳಿವಿಲ್ಲ. ಮನೆ ಮುಂದೆ, ಹಿತ್ತಲು ಎಲ್ಲೂ ಕಾಗೆಗಳು ಕಾಣುತ್ತಿಲ್ಲ. ಎಲ್ಲೋ ಅಪರೂಪಕ್ಕೆ ಒಮ್ಮೊಮ್ಮೆ ಹಾರಿ ಹೋಗುವುದು ಕಾಣ ಸಿಗುತ್ತದೆಯೇ ಬಿಟ್ಟರೆ ಉಳಿದಂತೆ ಅದರ ಪತ್ತೆಯಿಲ್ಲ.
ಮೊನ್ನೆ ಯಾವುದೋ ದೊಡ್ಡ ಹಕ್ಕಿಯೊಂದು ಕಾಗೆ ಮರಿಯನ್ನು ದಾಳಿ ಮಾಡಿದರ ಫಲವಾಗಿ ಅದು ಯಾರದೋ ಮನೆಯ ಅಂಗಳದಲ್ಲಿ ಉರುಳಿ ಬಿದ್ದಿತಂತೆ. ಮನೆಯವರು ಅದನ್ನು ಶುಶ್ರೂಷೆ ಮಾಡಿ ಅದನ್ನು ಹೊರಗೆ ಹಾರಲು ಬಿಡಬೇಕು ಅಂದುಕೊಳ್ಳುವಾಗ, ಇದನ್ನು ಗಮನಿಸಿದವರೊಬ್ಬರು, ಯಾಕೆ ಇದನ್ನು ಹೊರಗೆ ಬಿಡ್ತೀರಾ? ಈಗ ಶ್ರಾದ್ಧಕ್ಕೆ ಕಾಗೆಗಳು ಬರದೆ ಭಾರಿ ಪಡಿಪಾಟಲು ಪಡುವ ಸ್ಥಿತಿ ನಮ್ಮದಾಗಿದೆ. ಅದಕಾರಣ ಈ ಕಾಗೆಯನ್ನು ಹಾಗೇ ಸಾಕಿ ಅದನ್ನು ಇಂತಹ ಹೊತ್ತಿನಲ್ಲಿ ಉಪಯೋಗಿಸಿಕೊಳ್ಳುವುದು ಒಳ್ಳೆಯದು. ಅವರಿಗೂ ಲಾಭ, ನಿಮಗೂ ಲಾಭ ಅಂತ ಉಚಿತ ಸಲಹೆಯನ್ನು ಕೂಡ ಕೊಟ್ಟಿದ್ದರ ಮೇರೆಗೆ ಒಂದಷ್ಟು ದಿನ ಆ ಕೆಲಸಕ್ಕೆ ನೆರವಾಗಿ ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಆ ಕೆಲಸ ಅವರಿಗೇ ಮುಳುವಾಯಿತಂತೆ. ಕಾಗೆ ಮುಟ್ಟಿದರೆ ಮಡಿಯಾಗುವ,
ಹೊರಗೆ ನಿಲ್ಲುವ ಸ್ಥಿತಿಯಿಂದ ಈಗ ಕಾಗೆಯನ್ನೇ ಒಳ ಸಾಕುವ ಪರಿಸ್ಥಿತಿ. ಕಾಲ ತಿರುವು ಮುರುವಾಗುವುದೆಂದರೆ ಹೀಗೇನಾ?!
ಈಗ ಶ್ರಾದ್ಧದ ದಿನ ಕರೆದೂ ಕರೆದೂ ಸುಸ್ತಾದರೂ ಬಾರದ ಕಾಗೆಯ ನಿರೀಕ್ಷೆಯಲ್ಲೇ ಹೊತ್ತು ಮೀರಿ ತಣ್ಣಾಗಾಗುವ ಭೋಜನ. ನೆಂಟರು ಬರುತ್ತಾರೆoದು ಕರೆದು ಕೂಗಿ ಹೇಳದ ಕಾಗೆ ಮುನಿಸಿಕೊಂಡು ಹೋದದ್ದಾದರೂ ಎಲ್ಲಿಗೆ? ಈಗ ದೊಡ್ಡ ದೊಡ್ಡ ಮನೆಗಳಲ್ಲಿ ಸಾಕಷ್ಟು ಸ್ಥಳ ಇದ್ದರೂ ನೆಂಟರು ಬರುವುದಿಲ್ಲ, ಹಾಗೂ ದಿನವಿಡೀ ಹೊರಗೆ ಕುಳಿತರೂ ಅಮ್ಮಂದಿರನ್ನು ಕಕ್ಕೆ ಮುಟ್ಟುವದಿಲ್ಲ. ಕತೆ ಹುಟ್ಟುವದಿಲ್ಲ. ಮನೆ ಮಕ್ಕಳು ಮೊಬೈಲಿನ ಪರದೆಯೊಳಗೆ ಆಟದಲ್ಲಿ ಮಗ್ನರಾಗಿರುವಾಗ, ಅಮ್ಮ, ಅಜ್ಜಿಯಂದಿರು ಸಿನೇಮಾ, ಧಾರವಾಹಿಗಳಲ್ಲಿ ಕಣ್ಣು ಕೀಲಿಸಿರುವಾಗ, ಅಕ್ಷರಶ: ಕಾಗೆ ಪುರಾಣ ಮರೆತೇ ಬಿಟ್ಟಿರುವಾಗ ಇನ್ನು ಕತೆ ಮುಂದುವರೆಯುವ ಮಾತೆಲ್ಲಿ?