ಎಂತಾ ಮಾರಾಯಾ, ಪಂಕ್ತಿಯಲ್ಲಿ ಊಟಕ್ಕೆ ಕೂತವರನ್ನ, ಜಾತಿಯವ ಅಲ್ಲ ಅಂತೇಳಿ ಎಬ್ಬಿಸಿಬಿಟ್ರಂತೆ ನೋಡು ಆ ಮನುಷ್ಯ..’
ಸರಿಸುಮಾರು ಐದು ವರ್ಷಗಳ ಹಿಂದೆ ಹೀಗೊಂದು ಮಾತು ಅನಿರೀಕ್ಷಿತವಾಗಿ ನಾನು ಕೇಳಬೇಕಾಗಿ ಬಂದಿತ್ತು. ಊರಿನ ಕಾರವಾರ್ ರಸ್ತೆಯಲ್ಲಿರುವ ಕ್ಷೌರಿಕನಂಗಡಿಯಲ್ಲಿ ಕ್ಷೌರ ಮುಗಿಸಿ ನೂರು ರೂಪಾಯಿಗಳನ್ನು ನಾಪಿತನಿಗೆ ಕೊಟ್ಟು, ಚಿಲ್ಲರೆಗಾಗಿ ನಿಂತಿದ್ದಾಗ, ಗಡಿಬಿಡಿಯಲ್ಲಿ ಅಂಗಡಿಯನ್ನು ಹೊಕ್ಕ ಗಿರಾಕಿಯೊಬ್ಬ, ಅಂಗಡಿಯ ಕ್ಷೌರದ ಕುರ್ಚಿಯ ಮೇಲೆ ಕೂತು ತನ್ನ ಕೂದಲುಗಳ ಮೇಲೆ ಕೈಯಾಡಿಸುತ್ತ ಆಡಿದ್ದ ಮಾತಿದು. ಒಮ್ಮೆ ಸರಕ್ಕನೇ ಅವನತ್ತ ತಿರುಗಿ ನೋಡಿದ್ದೆ. ಅವನ
ಪರಿಚಯ ನನಗಿಲ್ಲ. ಆದರೆ ಆತ ‘ಆ ಮನುಷ್ಯ’ ಎಂದ ಸಂಭೋದಿಸಿದ್ದ ವ್ಯಕ್ತಿಯ ಪರಿಚಯ ನನಗೆ ಚೆನ್ನಾಗಿಯೇ ಇತ್ತು. ಹಾಗಾಗಿ ಹೊಸ ಗಿರಾಕಿಯ ಮಾತುಗಳನ್ನು ಕೇಳಿದ ನನಗೆ ಒಟ್ಟೊಟ್ಟಿಗೆ ಆಶ್ಚರ್ಯ ಆತಂಕಗಳ ಅನುಭವ.
ಅಷ್ಟೊತ್ತಿಗಾಗಲೇ ನಾನು ಪದವಿ ಮುಗಿಸಿ ಎಂಟು ವರ್ಷಗಳಷ್ಟು ಸಮಯವಾಗಿತ್ತು. ‘ಆ ಮನುಷ್ಯ’ ಎಂದು ಉಲ್ಲೇಖಿತನಾದ ವ್ಯಕ್ತಿ ನನ್ನ ವಿದ್ಯಾರ್ಥಿ ಜೀವನದ ಒಂದು ಹಂತದ ಶಿಕ್ಷಕ. ವಿದ್ಯೆ ಕಲಿಸಿದವರ ಪೈಕಿ ನಾ ಕಂಡ ಅತ್ಯಂತ ಸರಳ ಬದುಕಿನ ಶಿಕ್ಷಕರೂ ಹೌದು. ಎದುರಿಗೆ ಸಿಕ್ಕಾಗ ನಮಸ್ಕರಿಸಿದರೇ, ‘ಏನೋ ಕೊಡ್ಕಣಿ, ಚೆನ್ನಾಗಿ ಓದ್ತಾ ಇದ್ದಿಯೇನೊ’ ಎಂದು ಪ್ರೀತಿಯಿಂದ ಬೆನ್ನು ಸವರುತ್ತಿದ್ದವರು. ತುಂಬ ಅಚ್ಚುಕಟ್ಟಾಗಿ ಪಾಠ ಮಾಡುತ್ತಿದ್ದ ಶಿಕ್ಷಕ. ವಿದ್ಯಾರ್ಥಿಗಳ ಮೇಲೆ ತೀರ ಶಿಸ್ತು ಹೇರುತ್ತಿದ್ದವರೂ ಅಲ್ಲ. ಕೆಲವು ಶಿಕ್ಷಕರ ಸ್ವಜಾತಿ ಪ್ರೇಮದ ಬಗ್ಗೆ ಅಲ್ಲಲ್ಲಿ ವದಂತಿಗಳಿದ್ದವಾದರೂ ಈ ಶಿಕ್ಷಕರ ಮೇಲೆ ಅಂಥದ್ದೊoದು ಮಾತನ್ನು ಯಾವತ್ತಿಗೂ ಕೇಳಿರಲಿಲ್ಲ. ಅಂಥವರು ಹೀಗೆ ಮಾಡಿದ್ದರು ಎಂದು ನಂಬುವುದು ಕಷ್ಟವಾಗಿತ್ತು. ತಕ್ಷಣಕ್ಕೆ ಮನಸ್ಸಿಗೇನೋ ಖೇದವೆನ್ನಿಸಿ ಅಂಗಡಿಯಿAದ ಹೊರಬಿದ್ದಿದ್ದೆ.
ನೀವು ಸಾವಿರ ಕಾರಣಗಳನ್ನ ಕೊಡಬಹುದು, ಆದರೆ ಜಾತಿಯವನಲ್ಲ ಎನ್ನುವ ಕಾರಣಕ್ಕೆ ಹಸಿದವನೊಬ್ಬನಿಗೆ ಊಟವಿಲ್ಲವೆನ್ನುವುದು ನನ್ನ ಪ್ರಕಾರವಂತೂ ಅಕ್ಷಮ್ಯ. ಕೆಲವೊಮ್ಮೆ ಮೊದಲ ಬಾರಿ ಊಟಕ್ಕೆಂದು ಮಠಕ್ಕೆ ಹೋದವರಿಗೆ ಅದೊಂದು ಜಾತಿಯ ಮಠ ಮತ್ತು ಅಲ್ಲಿ ಆ ಜಾತಿಯ ಜನಕ್ಕೆ ಮಾತ್ರ ಊಟ ಎಂಬುದು ತಕ್ಷಣಕ್ಕೆ ಗೊತ್ತಾಗಲಿಕ್ಕಿಲ್ಲ. ಹಾಗಿರುವಾಗ ಸಾವಿರಾರು ಜನಕ್ಕೆ ಊಟ ಹಾಕುವ ಯೋಗ್ಯತೆ ಇರಬಹುದಾದ ದೇವಮಂದಿರವೊoದು ಊಟಕ್ಕೆ ಕೂತವನೊಬ್ಬನನ್ನು ಕೈ ಹಿಡಿದೆಳೆದು ಎಬ್ಬಿಸುವುದು ಇನ್ಯಾವ ಮಟ್ಟದ ನೀಚತನ..? ಅರಿವಿಲ್ಲದೇ ಕೂತವನಿಗಾಗಿರಬಹುದಾದ ಆಘಾತ, ಅವಮಾನಗಳೆಂಥವು..? ಎಂಬ ಪ್ರಶ್ನೆ ಮೂಡಿ ರೋಷವುಕ್ಕಿಸುವುದಂತೂ ಸುಳ್ಳಲ್ಲ. ಹೀಗಿರುವಾಗ ನೆಚ್ಚಿನ ಶಿಕ್ಷಕರ ಇಂಥದ್ದೊoದು ನಡೆ ನನಗೆ ತೀರ ಕಿರಿಕಿರಿಯುಂಟು ಮಾಡಿದ್ದಂತೂ ಸತ್ಯ. ಒಂದರ್ಧ ಗಂಟೆಗಳ ಕಾಲ ಆತ ಮಾಡಿದ್ದ ಚಂದದ ಪಾಠ, ಪಾಠದ ನಡುನಡುವಿನ ಹಾಸ್ಯ ಎಲ್ಲವನ್ನು ನೆನಪಿಸಿಕೊಂಡು, ಕೊನೆಗೊಂದು ನಿಡಿದಾದ ನಿಟ್ಟುಸಿರು ಹೊರಚೆಲ್ಲಿ, ‘ಯಾವ ಹುತ್ತದಲ್ಲಿ ಯಾವ ಹಾವೋ..’? ಎಂಬ ಗಾದೆಯನ್ನು ನನ್ನಷ್ಟಕ್ಕೆ ನಾನೇ ಗೊಣಗಿಕೊಳ್ಳುತ್ತ ಮನೆಯ ದಾರಿ ಹಿಡಿದ ಹೊತ್ತಿಗೆ ನನ್ನೊಳಗಿದ್ದ ಆ ಶಿಕ್ಷಕರ ಚಂದದ ಚಿತ್ರವೊಂದು ಚೂರುಚೂರಾಗಿತ್ತು. ಮುಂದೆoದಾದರೂ ಎದುರಾದರೇ ಅವರನ್ನು ಮಾತನಾಡಿಸದೇ ನಿರ್ಲಕ್ಷಿಸಿ ಬಿಡಬೇಕು ಎಂದು ನಿರ್ಧರಿಸಿಬಿಟ್ಟಿದ್ದೆ. ವಿಚಿತ್ರವೆಂದರೆ ಹಾಗೆ ನಿರ್ಧರಿಸಿದ್ದ ಎರಡೇ ದಿನಕ್ಕೆ ನಾನು ಮರಳಿ ಬೆಂಗಳೂರಿಗೆ ಬರುವ ಹೊತ್ತಿಗೆ ರಸ್ತೆಯಲ್ಲಿ ಎದುರಿಗೆ ಸಿಕ್ಕಿದ್ದರು ಅವರು. ಸಿಕ್ಕವರ ಮಾತಿನಲ್ಲಿ ಮತ್ತದೇ ಆತ್ಮೀಯತೆಯ ಧಾಟಿ. ‘ಏನೋ ಕೊಡ್ಕಣಿ,
ಹೇಗಿದ್ದಿಯೋ’ ಎಂಬ ಮಾತು. ಮಾತನಾಡಿಸಬೇಕೆನ್ನಿಸಿರಲಿಲ್ಲ. ಆದರೂ ‘ಚೆನ್ನಾಗಿದ್ದೀನಿ ಸರ್’ ಎಂದು ಅರೆಮನಸಿನಿಂದ ನಕ್ಕವನು ಬಸ್ಸಿಗೆ ತಡವಾದವರಂತೆ ಸರಸರನೇ ಮುಂದೆ ನಡೆದಿದ್ದೆ. ಒಂದು ಮಗ್ಗುಲಲ್ಲಿ ಹಾಗೆ ಸಂವೇದನಾಹೀನನಾಗಿ ವರ್ತಿಸಿದ ಮನುಷ್ಯ ಮತ್ತೊಂದು ಪಕ್ಕ ಹೀಗೆ ಸಭ್ಯನಂತೆ ತೋರಿಸಿಕೊಳ್ಳುವುದು ಹೇಗೆ ಸಾಧ್ಯ ಎಂಬ ಅಚ್ಚರಿ ನನಗೆ. ಮುಂದೆ ಸರಿಸುಮಾರು ಐದಾರು ವರ್ಷಗಳ ಕಾಲ ಆ ಶಿಕ್ಷಕರನ್ನು ಭೇಟಿಯಾಗುವ ಸಂದರ್ಭಗಳು ಎದುರಾಗಲಿಲ್ಲ. ಹೆಚ್ಚು ಕಡಿಮೆ ಮರೆತೇ ಹೋಗಿದ್ದ ಶಿಕ್ಷಕರ ನೆನಪಾದಾಗಲೆಲ್ಲ ಕಣ್ಮುಂದೆ ಸುಳಿಯುತ್ತಿದ್ದದ್ದು ಆತ ಹಸಿದವನ ಊಟ ಕಸಿದ ಕಾಲ್ಪನಿಕ ಚಿತ್ರಣವೇ.
ಈಗ ಎರಡು ವರ್ಷಗಳ ಹಿಂದೆ ಆಕಸ್ಮಿಕವಾಗಿ ಊರನಲ್ಲಿಯೇ ವಾಸವಿರುವ ಸ್ನೇಹಿತನೊಬ್ಬ ಭೇಟಿಯಾದ. ವರ್ಷಗಳ ನಂತರ ಭೇಟಿಯಾದ ಖುಷಿಗೊಂದು ಆಲಿಂಗನ. ರಸ್ತೆ ಪಕ್ಕದಲ್ಲಿಯೇ ನಿಂತು ಹರಟಲಾರಂಭಿಸಿದ ಇಬ್ಬರಿಗೂ ಶಾಲಾ ಕಾಲೇಜು ದಿನಗಳ ನಾಸ್ಟಾಲ್ಜಿಕ್ ನೆನಪುಗಳು. ಮಾತೇಕೊ ಶಿಕ್ಷಕರೆಡೆಗೆ ತಿರುಗಿತು. ನನಗೆ ನೆನಪಾಗಿದ್ದೇ ನಮ್ಮ ಆ ಶಿಕ್ಷಕರ ಜಾತಿವಾದ.
‘ಊಟಕ್ಕೆ ಕೂತವರನ್ನ ಎಬ್ಬಿಸಿಬಿಟ್ರಂತಲ್ಲ ಮಾರಾಯಾ..’ ಎಂದೆ. ಅವನು ತಕ್ಷಣಕ್ಕೆ ಕಣ್ಣರಳಿಸಿ, ‘ಅದೊಂದು ಮಾತ್ರ ಬೆಸ್ಟ್ ಕೆಲಸ ಮಾಡಿದ್ರು ನೋಡು ಅವರು’ ಎಂದುಬಿಟ್ಟ. ಯಾರದ್ದೋ ಅನ್ನ ಕಸಿಯುವುದು ಬೆಸ್ಟ್ ಕೆಲಸವಾ? ಏನು ಅರ್ಥಹೀನ ಮಾತಿವನದ್ದು ಎನ್ನಿಸಿ ಕೋಪ ಬಂದಿತ್ತು. ‘ಅಲ್ವೋ, ಊಟಕ್ಕೆ ಕೂತವರನ್ನ ಎಬ್ಬಿಸುವುದು ಎಂಥಾ ಒಳ್ಳೆ ಕೆಲಸ
ಮಾರಾಯಾ, ನೀನೊಳ್ಳೆ’ ಎಂದರೆ ಅವನು ನನ್ನತ್ತ ಪಿಳಿಪಿಳಿ ನೋಡಿದ. ನಮ್ಮಿಬ್ಬರ ನಡುವೆ ಕ್ಷಣಕಾಲದ ಮೌನ. ‘ಓಹೋ..ಹಾಗಿದ್ರೆ ನಿನಗೆ ಪೂರ್ತಿ ವಿಷಯ ಗೊತ್ತಿಲ್ಲ’ ಎನ್ನುತ್ತ ಮಾತಿಗಾರಂಭಿಸಿದವನು ಅವನೇ. ನಾನು ಸುಮ್ಮನೇ ಕೇಳಸಿಕೊಂಡೆ.
‘ನಮ್ಮ ಸರ್ ಯಾರನ್ನೋ ಊಟದೆಲೆ ಎದುರಿನಿಂದ ಎಬ್ಬಿಸಿದರಲ್ಲ, ಅದೇ ಒಂದು ವಾರದ ಕೆಳಗೆ ಮತ್ತೊಂದು ಘಟನೆ ನಡೆದಿತ್ತು. ಇದೇ ಥರ ಮಠದಲ್ಲಿ ಊಟಕ್ಕೆ ಕೂತಿದ್ದೊಬ್ಬರನ್ನು ಜಾತಿ ಅಲ್ಲದ ಕಾರಣಕ್ಕೆ ಮಠದವರು
ಎಬ್ಬಿಸಿದ್ದರು. ಸರಿ ಅಲ್ಲ ಹೀಗೆಲ್ಲ ಭೇದ ಮಾಡುವುದು ಅಂತ ಆವತ್ತೇ ವಾದಿಸಿದ್ದರಂತೆ ಮೇಷ್ಟ್ರು. ಮಠದ್ದೇನೋ ಸಂಪ್ರದಾಯ ಅಂತ ಹೇಳಿ ಆವತ್ತು ಅವರ ಬಾಯಿ ಮುಚ್ಚಿಸಿದ್ದರಂತೆ ಒಂದಷ್ಟು ಜನ. ಆದರೆ ಒಂದು ವಾರದ ನಂತರ ಬೇರೆ ಜಾತಿಯವರನ್ನ ಆರಾಮಾಗಿ ಮಠದ ಊಟದ ಪಂಕ್ತಿಯಲ್ಲಿ ಕೂರಿಸಿದ್ದಾರೆ. ಕಾರಣ ಏನು ಗೊತ್ತಾ..? ಹಿಂದಿನ ವಾರ
ಕೂತವನು ಬಡವ, ಈ ಸಲ ಕೂತವನು ಊರಲ್ಲೇ ದೊಡ್ಡ ಸಿರಿವಂತರ ಪೈಕಿ ಒಬ್ಬ. ಆಗ ಮಾತ್ರ ಸರ್ಗೆ ಭಯಂಕರ ಸಿಟ್ಟು ಬಂದಿದೆ. ಜಾತಿ ಕಾರಣ ಇಟ್ಕೊಂಡು ಬಡವರಿಗೆ ಒಂಥರಾ ಶ್ರೀಮಂತರಿಗೆ ಒಂಥರಾ ಮಾಡ್ತಿರಾ ದೇವರ ಜಾಗದಲ್ಲಿ ಅಂತ ಹೇಳಿ, ಜಗಳ ಮಾಡಿ ಕೂತಿದ್ದ ಸಿರಿವಂತರ ಕೈ ಹಿಡಿದೇ ಎಬ್ಬಿಸಿಬಿಟ್ಟರಂತೆ. ಎಂಥಾ ಧೈರ್ಯ ಅಲ್ಲವಾ..? ಆಮೇಲೆ ದೊಡ್ಡ
ಗಲಾಟೆಯಾಗಿ, ಇನ್ಮೇಲೆ ಯಾವ ಜಾತಿಯವನಾದರೂ ಸರಿ, ಊಟದೆಲೆಯಿಂದ ಎಬ್ಬಿಸುವ ಹಾಗಿಲ್ಲ ಅಂತ ತಿರ್ಮಾನಕ್ಕೆ ಬಂದಿದ್ದಾರೆ ಮಠದವರು. ಈಗ ಅಲ್ಲಿ ಎಲ್ಲರೂ ಒಂದೇ, ಪಂಕ್ತಿ ಗಿಂಕ್ತಿ ಭೇದವಿಲ್ಲ. ದೊಡ್ಡ ಬದಲಾವಣೆ ತಂದರು ಮಾಸ್ಟರ್ ಅಲ್ಲಿ..’ ಎಂದವನು ಸುಮ್ಮನಾದ
ದೊಡ್ಡದ್ದೊಂದು ಮುಷ್ಟಿ ಕಟ್ಟಿ ಯಾರೋ ಮುಖದ ಮೇಲೆ ಬಲವಾಗಿ ಗುದ್ದಿದ ಅನುಭವ ನನಗೆ ಆ ಕ್ಷಣಕ್ಕೆ. ಹೀರೋ ಎಂದುಕೊಳ್ಳಬೇಕಿದ್ದ ಗುರುಗಳನ್ನು ಅಕಾರಣವಾಗಿ ವರ್ಷಗಟ್ಟಲೇ ಖಳನಾಯಕನೆಂದುಕೊoಡಿದ್ದೆ ಮನದಲ್ಲಿ. ಪಶ್ಚಾತ್ತಾಪದ ಭಾವವೊಂದು ಕಾಡಿಬಿಟ್ಟಿತ್ತು ತುಂಬ ಹೊತ್ತು. ನನ್ನ ಭಾವನೆಯಿಂದ. ಅವರ ಬದುಕಲ್ಲೇನೂ ವ್ಯತ್ಯಾಸವಾಗಲಿಲ್ಲ ನಿಜ, ಆದರೆ ವಿನಾಕಾರಣ ಪ್ರಜ್ಞಾವಂತ ವ್ಯಕ್ತಿಯೊಬ್ಬನನ್ನು ಎರಡು ಮೂರು ವರ್ಷಗಳ ಕಾಲ ಕೆಟ್ಟವರೆನ್ನುವಂತೆ ಭಾವಿಸಿಕೊಂಡು ಬಿಟ್ಟ ನನ್ನ ಭಾವಕ್ಕೆ ಏನೆನ್ನುವುದು..? ಮಾತು ಮುಗಿಸಿ ಮನೆಯತ್ತ ನಡೆದಿದ್ದೆ. ವಿಷಯಗಳ ಸ್ಪಷ್ಟ ಅರಿವಿಲ್ಲದೇ ಅಭಿಪ್ರಾಯಗಳನ್ನು ರೂಪಿಸಿಕೊಂಡು ಬಿಡುವುದು ಎಷ್ಟು ಅರ್ಥಹೀನ ಮತ್ತು ಎಂಥಹ ದಡ್ಡತನ ಎನ್ನುವುದನ್ನು ಬದುಕು ಹೇಳಿಕೊಟ್ಟ ಹೊತ್ತು ಅದು. ವಿದ್ಯೆ ಕಲಿಸಿದ ಗುರುಗಳೇ ಯಾರದ್ದೋ ವ್ಯಕ್ತಿತ್ವವನ್ನು ವ್ಯಾಖ್ಯಾನಿಸುವ ಮುನ್ನ ಹತ್ತು ಸಾರಿ ಆಲೋಚಿಸಬೇಕು ಎಂಬ ಪಾಠ ಮಾಡಿಬಿಟ್ಟರಾ ಎನ್ನಿಸಿತು. ಫೇಸ್ಬುಕ್ನಲ್ಲಿ ಗುರುಗಳ ಹೆಸರಿನ ಐಡಿಯೊಂದನ್ನು ನೋಡಿದಾಗ ಈ ಕತೆಯೆಲ್ಲ ನೆನಪಾಯಿತು ನೋಡಿ.