ಸಂಜೆಯೆಂದರೆ ನನಗಿನ್ನೂ ಅರ್ಥವಾಗದ ಸೋಜಿಗ! ಒಂದು ಸಂಜೆಯಂತೆ ಮತ್ತೊಂದಿಲ್ಲ. ಎಷ್ಟು ಮರೆತೇನೆಂದರೂ ಆ ಸಂಜೆ ಮತ್ತೆ ಬರುತ್ತದೆ. ಅಷ್ಟೂ ನೆನಹುಗಳ ಚಿಪ್ಪನ್ನು ಮನದ ಕಿನಾರೆಗೆ ತಂದು ಒಡ್ಡುತ್ತದೆ. ಕೆಲವೊಂದು ನೆನಪುಗಳಲ್ಲಿ ತೋಯಿಸಿ ಮೀಯಿಸಿದರೆ, ಮತ್ತೆ ಕೆಲವು ಕಲಕಿ ಕನಲುವಂತೆ ಮಾಡುತ್ತದೆ, ಕಣ್ಣಂಚಿನಲ್ಲಿ ತೇವ ಆರದಂತೆ ಉಳಿಸಿ ಬಿಡುತ್ತದೆ. ಸಂಜೆ ಕವಿಯುವಾಗ ನಿರಾಶವಾದಿ ಆ ದಿನ ಮುಗಿದೇ ಹೋಯಿತು ಅಂದುಕೊಂಡರೆ, ಆಶಾವಾದಿಗೆ ಆದು ಬರುವ ಮರುಬೆಳಗಿಗೆ ಸಿದ್ಧತೆಯಂತೆ ತೋರುತ್ತದೆ. ನನ್ನದೂ ಇದುವೇ ದ್ವಂದ್ವ. ದಿನ ಮುಗಿದೇ ಹೋಯಿತೆನ್ನುವ ಸಂಕಟ ಒಂದು ಕಡೆಯಾದರೆ, ಮತ್ತೊಂದು ಕಡೆ ನಾಳಿನ ಬೆಳಗು ಹೊಸತನ್ನು ಏನೋ ತರುತ್ತದೆ ಅನ್ನುವ ಹುಂಬ ನಿರೀಕ್ಷೆ. ಇಂತಹ ನಿರೀಕ್ಷೆಗಳೇ ತಾನೇ ಬದುಕನ್ನ ಹಸನಾಗಿಸುವುದು. ಈ ನಿರೀಕ್ಷೆಗಳನ್ನು ಉಡಿಯೊಳಗೆ ಕಟ್ಟಿಕೊಂಡು ಏಕಾಂತ ಸಂಜೆಯೊಂದಿಗೆ ಮುಖಾಮುಖಿಯಾಗುವ ಕ್ಷಣಗಳಿಂದ, ಅವು ಕಟ್ಟಿಕೊಡುವ ಸುಖದಿಂದ ನಾನು ವಂಚಿತಳಾಗಲು ಇಚ್ಛಿಸುವುದಿಲ್ಲ.
ತರಾತುರಿಯಲ್ಲಿ ಸಂಜೆ ಕೆಲಸ ಮುಗಿಸಿ ದಿಗಂತಕ್ಕೆ ಮುಖ ಮಾಡಿ ಕೂರುತ್ತೇನೆ. ಚದುರಿದ ಆಗಸದ ಮೋಡಗಳು ಮನದ ಭಾವಗಳಿಗೆ ಅನೇಕ ರೂಪುಗಳನ್ನು ಕೊಡುತ್ತಾ ಹೋಗುತ್ತವೆ. ನಾನೂ ರೆಕ್ಕೆ ಕಟ್ಟಿ ಹಾರುತ್ತೇನೆ, ರೆಕ್ಕೆ ಸೋತಾಗ ನಡೆಯುತ್ತೇನೆ. ನೆನಪುಗಳೊಂದಿಗೆ ಸವಾರಿ ಮಾಡುತ್ತೇನೆ. ಅಸಲಿಗೆ ನಾನು ಒಂಟಿಯಾಗಿ ಸಾಗುತ್ತಿದ್ದರೂ, ಆ ಕ್ಷಣ ನಿಜಕ್ಕೂ ನಾನು ಒಂಟಿಯಾಗಿರುವುದಿಲ್ಲ. ಒಂದು ಸಂಜೆ ತೀರದ ಯಾನಕ್ಕೆ ನನ್ನ ಕರೆದೊಯುತ್ತದೆ.
ಹಿತ್ತಲಿಗೆ ಹೋಗುತ್ತೇನೆ.. ಕನಕಾಂಬರ, ಮಲ್ಲಿಗೆ, ದಾಸವಾಳದ ಜೊತೆಗೆ ಮಾತಿಗಿಳಿಯುತ್ತೇನೆ. ನೀವೆಲ್ಲ ಬಾಡಿ ಹೋಗುತ್ತಿದ್ದೀರಿ, ಇನ್ನೇನು ತುಸು ಹೊತ್ತಿನಲಿ ನೀವೂ ತೊಟ್ಟು ಕಳಚಿ ಬೀಳುತ್ತೀರಿ, ಬೇಸರ ಆಗುವುದಿಲ್ಲವೇ ನಿಮಗೆ? ಕೇಳುತ್ತೇನೆ. ಮಲ್ಲಿಗೆ ಮತ್ತಷ್ಟು ಘಮಗುಡುತ್ತದೆ, ದಾಸವಾಳ ಮತ್ತಷ್ಟು ಹಿಗ್ಗಿಕೊಳ್ಳುತ್ತದೆ… ಬಿಟ್ಟರೆ ಬೇರೇನೂ ಆಡುವುದಿಲ್ಲ. ಅವುಗಳಿಗೆ ಸಂಕಟವೇ ಇಲ್ಲವೇ? ನನ್ನೊಳಗೆ ತಳಮಳ ಶುರುವಾಗಿ ಅವುಗಳು ತೊಟ್ಟು ಕಳಚಿ ಬೀಳುವುದನ್ನೇ ಕಾಯುತ್ತೇನೆ. ನಾನು ದಿಟ್ಟಿಸುವ ಅಷ್ಟೂ ಹೊತ್ತು ಅವುಗಳು ಕದಲುವುದಿಲ್ಲ. ಒಂದಷ್ಟು ಮಲ್ಲಿಗೆ ಮೊಗ್ಗುಗಳ ಕೊಯ್ದು, ನಾನೇ ಮಾರುದೂರ ಸರಿದು ಬಾಳೆ ನಾರು ಎಳೆದು ಮಲ್ಲಿಗೆಯನ್ನು ದಂಡೆಯೊಳಗೆ ಕೂಡಿಸುತ್ತಾ ಹೂ ಗಿಡಗಳಿಗೆ ಏಕಾಂತ ಒದಗಿಸಿ ಕೊಡುತ್ತೇನೆ. ಅವುಗಳ ಸಂಜೆಯ ಏಕಾಂತವನ್ನು ಕಸಿದುಕೊಳ್ಳುವ ಹಕ್ಕು ನನಗೆಲ್ಲಿದೆ? ಮಕ್ಕಳನ್ನೆಲಅವರವರ ಕೆಲಸಕ್ಕೆ ಹಚ್ಚಿ ನಾನೂ ಹಿತ್ತಲಿಗೆ ಧಾವಿಸಿ ಬಂದ ಉದ್ದೇಶ ಇದುವೇ ತಾನೇ? ದಂಡೆ ಕಟ್ಟಿ ಮುಗಿಸಿ, ಅಲ್ಲೇ ಅವರೆ ಚಪ್ಪರದ ಮೇಲೆ
ಇಬ್ಬನಿ ಕೂರಲು ಇಟ್ಟು, ಕುತೂಹಲಕ್ಕೆ ಮತ್ತೆ ತಿರುಗಿದರೆ ಗಿಡದ ಎಲ್ಲಾ ಹೂವುಗಳು ಮುದುಡಿ ತೊಟ್ಟು ಕಳಚಿಕೊಂಡು ಬಿದ್ದಿರುತ್ತದೆ. ಗಿಡ ಎಂದಿನಂತೆ ಅದೇ ಸಂತೃಪ್ತಿಯಲ್ಲಿ ಸಂಜೆಯ ಬಣ್ಣವನ್ನು ಹೀರಿಕೊಂಡು ನಾಳೆಯ ಹೂವಿಗಾಗಿ ಮೊಗ್ಗಿಗೆ ಉಣಬಡಿಸುತ್ತಿದೆ. ಎಲಾ! ಹೂವಿನ ಸ್ವಾಭಿಮಾನವೇ? ಗಿಡದ ಕಾರುಣ್ಯವೇ..? ಬಿದ್ದ ಹೂವನ್ನು ಹಾಗೆ ಮೆಲ್ಲ ಎತ್ತಿ ಕಣ್ಗೊತ್ತಿಕೊಳ್ಳುತ್ತೇನೆ. ಹೂ ಹೃದಯ ನನ್ನದಾಗಬಹುದೇ? ಕನವರಿಸುತ್ತೇನೆ.
ಅಲ್ಲೇ ಬದಿಯಲ್ಲಿ ನೆಟ್ಟ ಪಾರಿಜಾತ ಈಗ ಗೆಲ್ಲು ಗೆಲ್ಲುಗಳನ್ನು ಹರಡಿಕೊಂಡು ಸಣ್ಣ ಮರವೇ ಆಗಿದೆ. ಹೂಗಳು ಸಂಜೆ ಹೊತ್ತಿಗಷ್ಟೆ ಅರಳಲು ಸಿದ್ಧಗೊಳ್ಳುತ್ತಿದೆ. ನಾನು ನಡೆಯುವುದ ಬಿಟ್ಟು ಅದನ್ನೇ ನೋಡುತ್ತಾ ನಿಲ್ಲುತ್ತೇನೆ. ಗುಂಡು ಗುಂಡು ಕೆನೆ ಬಣ್ಣದ ಪಾರಿಜಾತದ ಮೊಗ್ಗಿಗೆ ಕೇಸರಿ ದಂಟು. ಇದು ಕೃಷ್ಣನ ಸೃಷ್ಟಿಯಾ? ಮುದಗೊಳ್ಳುತ್ತೇನೆ. ಎಷ್ಟು ಚೆಂದದ ಬಣ್ಣದ ಹೊಂದಿಕೆ ಅಲಾ?.. ಮನ ಸೂರೆಗೊಳ್ಳುತ್ತದೆ. ಒಂದಾದರೂ ಅರಳುವುದು ಕಣ್ಣಿಗೆ ಸಿಗುತ್ತದ? ನಾನು ಕಾಯುತ್ತೇನೆ. ಕಾಲು ಸೋತು ಕತ್ತಲು ಆವರಿಸಿಕೊಳ್ಳುತ್ತದೆ. ಮೊಗ್ಗು ಅರಳಿರುವುದಿಲ್ಲ. ಆದರೆ ಮರುದಿನ ನಸುಕು ಹರಿಯುವ ಮೊದಲೇ ಕೆನೆ ಬಣ್ಣ ಅಚ್ಚ ಬಿಳಿಗೆ ತಿರುಗಿ ಗಿಡದ ತುಂಬಾ ತುಂಬಿಕೊಂಡು, ಕೆಲವು ಜೋಲಿ ಆಡಿಕೊಂಡು, ಕೆಲವು ಹುಲ್ಲಹಾಸಿನ ಮೇಲೆ ಬಿದ್ದು ವಿಸ್ಮಯದ ರಂಗೋಲಿಯ ಬಿಡಿಸಿರುತ್ತವೆ. ಯಾವುದು ಸದ್ದು ಮಾಡದೇ, ಬೆಳಕಿಗೆ ಬೀಳದೇ ಬದುಕುತ್ತವೆಯಲ್ಲ? ನೂರು ಉತ್ತರಗಳನ್ನು ಮಾತಿಲ್ಲದೆ ಕೊಡುವಂತಿದೆ. ಈ ಪಾರಿಜಾತ ಸಂಜೆ ಮೊಗ್ಗು ತುಂಬಿಕೊoಡು
ನಿಂತಿರುವಾಗ ಅದು ಕೃಷ್ಣನನ್ನೇ ಧ್ಯಾನಿಸುವಂತೆ ನನಗೆ ಅನ್ನಿಸುತ್ತದೆ. ಕೃಷ್ಣ ದೇವಲೋಕದಲ್ಲಿ ನೆಟ್ಟ ಪಾರಿಜಾತ ಇಲ್ಲಿ ಭೂಲೋಕದಲ್ಲಿ ತಂದು ಊರಿದವರು ಯಾರು? ಹಾಗಾದರೆ ಕೃಷ್ಣ ಎಲ್ಲಿಗೆ ಸಂಬಂಧ ಪಟ್ಟವನು? ದೇವಲೋಕಕ್ಕಾ? ಭೂಲೋಕಕ್ಕಾ? ಈ ಸಂಜೆಯಲ್ಲಿ ಅದೆಷ್ಟೋ ಪ್ರಶ್ನೆಗಳು ಮುತ್ತಿಕೊಳ್ಳುತ್ತವೆ.
ನನ್ನ ಯೋಚನಾ ಸರಣಿಯನ್ನು ತುಂಡರಿಸಿ ಬೇರೆ ಕಡೆಗೆ ಎಳೆಯಲೋ ಎಂಬಂತೆ ಕಪ್ಪು ಬಿಳುಪಿನ ಹಕ್ಕಿಯೊಂದು
ಪಾರಿಜಾತದ ಗೆಲ್ಲಿನಲ್ಲಿ ಬಂದು ಕೂರುತ್ತದೆ. ಚಿಂವ್ ಚಿಂವ್ ಸದ್ದು ಕೇಳುತ್ತದೆ. ಬಹುಶಃ ಅದು ಅಲ್ಲಿ ಗೂಡು ಮಾಡಿ ಸಂಸಾರ ಹೂಡಿರಬೇಕು. ಮರಿಗಳು ಕಾಣುವುದಿಲ್ಲ. ರೆಕ್ಕೆ ಬಲಿತಿರಲಾರದು ಅನ್ನಿಸುತ್ತದೆ. ಆಗಸ ದಿಟ್ಟಿಸಿದರೆ ಸಾಲು ಸಾಲಾಗಿ ಹಕ್ಕಿಗಳು ಹಾರುತ್ತಿವೆ. ಅವರ ಗೂಡುಗಳು ಎಲ್ಲಿರಬಹುದು? ಅಷ್ಟು ಪುಟಾಣಿ ಹೊಟ್ಟೆ ತುಂಬಿಸಲು ಅವು ಅದೆಷ್ಟು ದೂರ ಹಾರಿರಬಹುದು? ಮರಿಗಳಿಗೆ ಗುಟುಕು ರೆಕ್ಕೆ ಸಂದಿಯಲ್ಲಿ, ಕೊಕ್ಕ ನಡುವಲ್ಲಿ ಹೇಗೆ ಹೊಂದಿಸಿ ತರುತ್ತಿರಬಹುದು? ನನ್ನ ಪಾರಿಜಾತ ಗಿಡದ ಹಕ್ಕಿ ಹೀಗೆಯೇ ದೂರ ಸಾಗಿ ಬಂದಿರಬಹುದೇ? ಯಾವುದೋ ಹಕ್ಕಿ ಗೂಡಿನ ಮರದಲ್ಲಿ ಸಂಜೆ ತನಕ ಕೂತು ಬಂದಿರಬಹುದೇ? ಅವರಿಗೆಲ್ಲ ಮನೆಗೆ ಹಿಂತಿರುಗಿ ಹೇಳಲು ನೆನಪಿಸಲೋಸುಗ ಸಂಜೆಯಾಗಿರಬಹುದೇ? ಅಥವಾ ಅವುಗಳೇ ಬರುವಾಗ ಈ ಊರಿನ ಹಗಲನ್ನು ಅಲ್ಲಿ ಬಿಟ್ಟು, ಆ ಊರಿನ ಸಂಜೆಯನ್ನು ಕರೆತಂದಿರಬಹುದೇ? ಪಟಕ್ಕನೇ ಅಲ್ಲೇ ಇರುವ ಪಕ್ಕದ ಜಮ್ಮು ನೇರಳೆಗಿಡದಿಂದ ಹಣ್ಣೊಂದು ಟಪ್ಪನೆ ಬೀಳುತ್ತದೆ. ಈ ಸಲ ತುಂಬಾ ಹಣ್ಣಿನ ಗಿಡಗಳನ್ನು ನೆಡಬೇಕೆಂದು ಯೋಚಿಸುತ್ತೇನೆ. ಅಲ್ಲಾ, ಇಷ್ಟು ಪಕ್ಕದಲ್ಲಿ ಹಣ್ಣಿನ ಗಿಡ ಇದ್ದರೂ ಈ ಹಕ್ಕಿಗಳು ಯಾಕೆ ಅಷ್ಟು ದೂರ ಆಹಾರ ಹುಡುಕಿಕೊಂಡು ಹೋಗುವುದು? ಮತ್ತೊಂದು ಬಗೆಹರಿಯದ ಪ್ರಶ್ನೆ ಹಾಗೇ ಉಳಿಯುತ್ತದೆ. ಸುಲಭಕ್ಕೆ ದಕ್ಕುವುದು ಯಾವುದೂ ಬೇಡವೆಂಬ ಯೋಚನೆಯ? ಯಾರಲ್ಲಿ ಕೇಳುವುದು?
ಸಂಜೆ ಮತ್ತಷ್ಟು ಮೌನಿಯಾಗುತ್ತದೆ. ಈ ಸಂಜೆಯೊಂದಿಗೆ ಅಷ್ಟೆಲ್ಲ ಪ್ರಶ್ನೆಗಳನ್ನು ಕೇಳಿ ಅದರ ಮೌನವನ್ನು ಕದಡದುವುದು ಬೇಡ ಅನ್ನಿಸಿ ಅದರ ಧ್ಯಾನಕ್ಕೆ ಭಂಗ ತರದೆ ನಾನೂ ಜಿದ್ದಿಗೆ ಬಿದ್ದಂತೆ ಮೌನಿಯಾಗುತ್ತೇನೆ. ಆದರೆ ಒಳಗೊಳಗೆ ಸಂಜೆಯೊಂದಿಗೆ ಮೌನ ಸಂವಾದಕ್ಕೆ ತೊಡಗುತ್ತೇನೆ. ದಿಗಂತದಲ್ಲಿ ಕೆಂಪು ರಾಚಿಕೊಂಡoತೆ ಕಾಣುತ್ತದೆ. ಸೂರ್ಯ ಮರೆಯಾದ ದುಃಖವನ್ನು ಭರಿಸಲು ಅದು ಬಹಳ ತ್ರಾಸ ಪಡುತ್ತಿರುವಂತೆ ತೋರುತ್ತದೆ. ನಾಳೆ ಮತ್ತೆ ಮುಗಿಲಿಗೆ ಜೊತೆಯಾದರೂ ಅರೆಕ್ಷಣ ಬಿಟ್ಟಿರಲಾರದ ಅಗಲಿಕೆಯ ತೀವ್ರ ವೇದನೆ ಈ ಸಂಜೆಯಲ್ಲಿ ಢಾಳಾಗಿ ಗೋಚರಿಸುತ್ತದೆ. ಹಾಗೇ ಸಂತೈಸ ಬೇಕೆನ್ನಿಸುವ ಮನಸಾಗಿ ಕಲ್ಲು ಮಾಡಿಟ್ಟ ನನ್ನೊಳಗಿನ ಭಾವಗಳೂ ಮೃದುವಾಗಿ ಕಂಪಿಸತೊಡಗುತ್ತವೆ. ಎದೆಯಾಳದಿoದ ಹೆಸರಿಗೆ ದಕ್ಕದ ನೂರು ರಾಗಗಳು ಹೊಮ್ಮಿ ಬಯಲ ದಾಟಿ ಮುಗಿಲಿಗೆ ಜತೆಯಾಗುತ್ತವೆ.
ಸಂಜೆ ಎಂದರೆ ಮೌನವೇ? ದುಗುಡವೆ? ವಿರಹವೇ? ಎಂದೂ ಭರಿಸಲಾಗದ ಶೋಕವೇ? ನನ್ನೊಳಗೂ ಕದಲಿಕೆ ಶುರುವಾಗುತ್ತದೆ. ಗಾಢ ಮೌನವೊಂದು ಹಾಡಾಗಿ ಆವರಿಸಿಕೊಳ್ಳುತ್ತದೆ. ಯಾವುದೋ ಒಂದು ನೆನಪು ಪಕ್ಕಕ್ಕೆ ಬಂದು ಆತುಕೊಳ್ಳುತ್ತದೆ. ನಾನು ಜೋಕಾಲಿ ಆಡುತ್ತಾ ಮೆರವಣಿಗೆ ಹೊರಡುತ್ತೇನೆ. ಆ ಸಂಜೆ ಶಾಲೆಯಿಂದ ಮರಳಿಬಂದು ಲಗುಬಗೆಯಿಂದ ನದಿಗೆ ಹೋಗಿ ಕೊಡದಲ್ಲಿ ನೀರು ಹೊತ್ತು ತರುತ್ತೇನೆ, ಕುಂಟಾಬಿಲ್ಲೆ ಆಡುತ್ತೇನೆ. ಅದೊಂದು ಸಂಜೆಯಲ್ಲಿ ಅಪ್ಪ ನಕ್ಷತ್ರ ಲೋಕ ಸೇರಿದ ಸುದ್ದಿ ಕೇಳಿ ನಾನು ಬಿಕ್ಕಿ ಬಿಕ್ಕಿ ಅಳುತ್ತೇನೆ. ಸಂಜೆ ಎಂದರೆ ಮತ್ತೆ ಬರುವುದು ಕತ್ತಲು. ಅಲ್ಲಿ ನಕ್ಷತ್ರಗಳೆಲ್ಲ ಮಿನುಗುತ್ತವೆ. ಸತ್ತವರೆಲ್ಲ ನಕ್ಷತ್ರಗಳಾಗುತ್ತಾರಂತೆ. ಯಾವ ನಕ್ಷತ್ರ ನನ್ನ ಅಪ್ಪನಿರಬಹುದು? ಯಾಕೋ ಭಯವಾಗುತ್ತದೆ, ದುಃಖವೂ ಆಗುತ್ತದೆ. ಒಳಗೋಡುತ್ತೇನೆ. ಎಲ್ಲ ಮರೆತು ಮತ್ತೆ ಮರುದಿನ ಸಂಜೆ ಬಾನಂಚಿಗೆ ಮುಖ ಮಾಡಿ ಕೂರುತ್ತೇನೆ. ಪಾರಿಜಾತ ಮೊಗ್ಗುಗಳನ್ನ ದಿಟ್ಟಿಸುತ್ತೇನೆ. ನಿನ್ನೆಗಿಂತಲೂ ಗೊಂಚಲು ಗೊಂಚಲು ಮೊಗ್ಗು ಕೇಸರಿ ಸಲಾಕೆಗೆ ತೂಗಿಕೊಂಡಿದೆ. ರುಕ್ಮಿಣಿ, ಸತ್ಯಭಾಮೆಯರು ಈಗ ಪಾರಿಜಾತದ ಗಿಡದ ಬುಡದಲ್ಲಿ ಕುಳಿತಿರಬಹುದೇ? ಕೃಷ್ಣ ರಾಧೆಯ ಅಂಗಳದಲ್ಲೂ ಊರಿಟ್ಟ ಪಾರಿಜಾತ ಗಿಡದ ಬಗ್ಗೆ ಅವರಿಗೆ ಸುಳಿವು ಇರಲಾರದು ಅನ್ನಿಸುತ್ತದೆ. ರಾಧೆ ಕೊಟ್ಟ ಪಾರಿಜಾತದ ಗೆಲ್ಲು ಇಲ್ಲಿ ಎಲ್ಲರ ಅಂಗಳದಲ್ಲಿ ಕವಲೊಡೆದು, ಈ ಸಂಜೆ ಹೊತ್ತಿಗೆ ಮೊಗ್ಗು ಬಿರಿಯುವ ಪರಿಮಳ ಕೃಷ್ಣನಿಗೆ ತಾಕುತ್ತಿರಬಹುದೇ? ಇಲ್ಲಿಯ ಪಾರಿಜಾತ ಗೆಲ್ಲು ಯಾರು ಕೊಟ್ಟದ್ದು? ಕೃಷ್ಣನಾ? ರಾಧೆಯಾ..? ಸಂಜೆಯೊಂದು ನೆನಪಾಗಿ ನೇವರಿಸಲು ಇಲ್ಲಿ ಬಂದು ಕೂತಿತಾ?
ಪಾರಿಜಾತ ಗಿಡ ಬೆಳಗಿನಲ್ಲಿ ಹೂ ಕಂಪು ಕೊಟ್ಟು, ಹಗಲಿಗೆ ನೆರಳಾಗಿ, ಸಂಜೆಗೆ ನೆನಪಾಗಿ ಯಾವ ಪರಿಯಲ್ಲಿ ಕಾಡಿಸುತ್ತದೆ. ಸಣ್ಣಗೆ ಇಬ್ಬನಿ ಹನಿಯುತ್ತದೆ. ನೆತ್ತಿ ತೇವಗೊಳ್ಳುತ್ತದೆ. ಸಂಜೆಯೊಂದು ಸಹ್ಯಗೊಳ್ಳುತ್ತಿದೆ