ಹೊಸವರ್ಷಕ್ಕೆ ಏನಾದರೂ ಹೊಸದಾಗಿ ಯೋಚಿಸುವುದಿದ್ದರೆ ಅದಕ್ಕೆ ಇಕಿಗಾಯ್ ನಿಮಗೆ ಸ್ಫೂರ್ತಿ ನೀಡಬಹುದು.
ಹೊಸವರ್ಷ ಎಂಬುದು.. ಹೊಸ ಭರವಸೆ, ನಂಬಿಕೆ, ಆರೋಗ್ಯ, ಆಲೋಚನೆ ಮತ್ತು ನೆಮ್ಮದಿ ಎಂಬ ಹಕ್ಕಿಗಳೆಲ್ಲ ಬಂದು ನೆಲೆಸುವ ಆಲದ ಮರವಾಗಲಿ ಎಂದು ಹಾರೈಸುತ್ತಾ ಇಕಿಗಾಯ್ ಪರಿಚಯ ಮಾಡಿಕೊಡಲು ಯತ್ನಿಸುತ್ತೇನೆ.
ಈ ಜಪಾನಿ ಪದದ ಆಳ ಅರ್ಥ “ಸತತವಾಗಿ ಕಾರ್ಯನಿರತವಾಗಿರುವುದರ ಸಂತೋಷ”. ಸುದೀರ್ಘ ಸಂತಸ ಭರಿತ ಯಾನಕ್ಕೆ ನೀನೇನಾದರೂ ಮಾಡು, ಆದರೆ ನಿವೃತ್ತಿ ಹೊಂದದಿರು. ಆರೋಗ್ಯ, ದೇಹಸ್ಥಿತಿ ಅವಕಾಶ ನೀಡುವವರೆಗೆ ಇಷ್ಟಪಡುವ ಯಾವುದಾದರು ಕೆಲಸವನ್ನು ಮಾಡುತ್ತಲೇ ಇರಬೇಕು ಎಂಬುದೇ ಆಗಿದೆ. ನೀರು ಹರಿಯುತಿದ್ದರೆ ಮಾತ್ರ ತಾಜಾ ಮತ್ತು ನಿರ್ಮಲವಾಗಿರುತ್ತದೆ, ನಿಂತ ನೀರಾದರೆ ನಾರುತ್ತದೆ. ಜೀವನಪೂರ್ತಿ ಚಲನಶೀಲವಾಗಿರಬೇಕಾದ
ಶರೀರವು ನಿರ್ವಹಣೆ ಕೇಳುತ್ತದೆ ಮತ್ತು ವ್ಯಾಯಾಮ ನಮ್ಮನ್ನು ಸಂತಸದಲ್ಲಿರಿಸುವಂತಹ ಹಾರ್ಮೋನ್ ಗಳನ್ನು ಬಿಡುಗಡೆಗೊಳಿಸುತ್ತದೆ. ಆರೋಗ್ಯವಂತ ಶರೀರದಲ್ಲಿ ಆರೋಗ್ಯವಂತ ಮನಸ್ಸು ಮುಖ್ಯ. ಒಂದರ ಆರೋಗ್ಯ ಮತ್ತೊಂದರ ಜೊತೆ ತಳುಕು ಹಾಕಿಕೊಂಡಿದೆ.ನಿಮ್ಮ ನಿಮ್ಮ ಕಂಫರ್ಟ್ ಝೋನ್ದಿಂದಾಚೆಗೆ ನೀವು ನಿಮ್ಮ ಹೆಜ್ಜೆ ಇರಿಸುವುದಕ್ಕೆ, ನಿಮ್ಮನ್ನು ನೀವು ಬದಲಾವಣೆಗೆ ಒಡ್ಡಿಕೊಳ್ಳುವುದು ಬಹಳ ಅನಿವಾರ್ಯವಾಗಿದೆ.
ಒತ್ತಡ : ಹೆಚ್ಚಿನ ಆರೋಗ್ಯ ಸಮಸ್ಯೆಗಳಿಗೆ ಒತ್ತಡವೇ ಕಾರಣ.
ಸಹಜ ವಯಸ್ಸಿಗಿಂತ ಹೆಚ್ಚು ಮುಪ್ಪಾದವರಂತೆ ಕಾಣುವುದು ಮತ್ತು ಅಕಾಲ ಮುಪ್ಪಿಗೆ ಒತ್ತಡ ಮುಖ್ಯ ಪಾತ್ರ ವಹಿಸುತ್ತದೆ. ಈಗಿನ ದಿನಗಳಲ್ಲಿ ಜನರು ಹತೋಟಿ ಮೀರಿದ ವೇಗ ಮತ್ತು ಹೆಚ್ಚು ಕಡಿಮೆ ಸದಾ ಸ್ಪರ್ಧಾತ್ಮಕವಾದ ಜೀವನವನ್ನೇ ನಡೆಸುತ್ತಾರೆ. ಕೊಂಚ ಮಟ್ಟಿನ ಒತ್ತಡ ಒಳ್ಳೆಯದೇ, ನಮ್ಮ ದೈನಂದಿನ ಬದುಕಿನ ಸವಾಲುಗಳನ್ನು ಎದುರಿಸಿ ಗೆಲ್ಲಲು ಬೇಕಾದ ಹಾರ್ಮೋನ್ಗಳನ್ನು ಉತ್ಪತ್ತಿ ಮಾಡುವಲ್ಲಿ ಸಹಾಯ ಮಾಡುತ್ತದೆ. ಧ್ಯಾನದ ಮುಖಾಂತರ ತೀವ್ರ ಒತ್ತಡದ ಸಮಸ್ಯೆಯಿಂದ ಹೊರಬಂದು ಮನಃಪೂರ್ವಕತೆಯನ್ನು ತಲುಪಲು ಪ್ರಯತ್ನಿಸಬೇಕು.
ಮನೆಯಲ್ಲಾಗಲಿ, ಕೆಲಸದ ಸ್ಥಳದಲ್ಲಾಗಲಿ ಹೆಚ್ಚು ವೇಳೆಯನ್ನು ಕುರ್ಚಿಗಂಟಿಕೊಂಡೆ ಕಳೆದರೆ ಅದು ಸ್ನಾಯುಗಳ ಮತ್ತು ಉಸಿರಾಟ, ಅಂಗಾಂಗಗಳ ಯುಕ್ತತೆಯನ್ನು ಕಡಿತಗೊಳಿಸುವುದರ ಜೊತೆಗೆ ಹೃದಯ ಸಂಬಂಧಿ ಖಾಯಿಲೆಗಳು, ಮೂಳೆ ಶಿಥಿಲತೆ, ಟೊಳ್ಳು ರೋಗ ಮತ್ತು ವಿವಿಧ ಕ್ಯಾನ್ಸರ್ ರೋಗಗಳಿಗೆ ದಾರಿ ಮಾಡಬಲ್ಲದು.
ಅದಕ್ಕಾಗಿ ನಾವು ನಮ್ಮ ದಿನನಿತ್ಯದ ಅಭ್ಯಾಸಗಳಿಗೆ ಕೆಲವೊಂದು ಅಂಶಗಳನ್ನು ಸೇರಿಸಿಕೊಳ್ಳಬೇಕು.
* ಹತ್ತಿರವಿರುವ ಸ್ಥಳಗಳಿಗೆ ಕಾಲು ನಡಿಗೆಯಲ್ಲೇ ಹೋಗಿ.
* ಎಲಿವೇಟರ್ ಎಸ್ಕಲೇಟರ್ ಬಿಟ್ಟು ಮೆಟ್ಟಿಲು ಹತ್ತಿ ಇಳಿಯಿರಿ.
* ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ.
* ಮಕ್ಕಳ ಜೊತೆಗೆ, ಸಾಕುಪ್ರಾಣಿಗಳೊಡನೆ ಆಟವಾಡಿ.
ವಯಸ್ಸಾಗುವುದರ ವಿರುದ್ಧದ ಹೋರಾಟದ ಪ್ರಮುಖ ಸಾಧನವೆಂದರೆ ನಿದ್ರೆ. ನಿದ್ರಿಸುವಾಗ ಶರೀರ ಸ್ವಾಭಾವಿಕವಾಗಿ ಮೆಲಾಟೋನಿನ್ ಹಾರ್ಮೋನ್ ಉತ್ಪಾದಿಸುತ್ತದೆ. ಮೆಲಾಟೋನಿನ್ ಒಂದು ಬಲಯುತವಾದ ಆಂಟಿ ಆಕ್ಸಿಡಾAಟ್. ಇದು ದೀರ್ಘ ಕಾಲ ಬದುಕಲು ಸಹಾಯ ಮಾಡುತ್ತದೆ. “ನಾವು ಯಾವುದನ್ನು ಪದೇ ಪದೇ ಮಾಡುತ್ತೇವೆಯೋ ನಾವು ಅದೇ ಆಗುತ್ತೇವೆ. ಆಗ ಶ್ರೇಷ್ಠತೆ ಎಂಬುದು ಒಂದು ಕ್ರಿಯೆಯಲ್ಲ ಬದಲಿಗೆ ಅಭ್ಯಾಸವೇ ಆಗುತ್ತದೆ”
ನಮಗೆ ನಾವು ಯಾವುದು ಅರ್ಥಪೂರ್ಣ ಎಂದು ಭಾವಿಸಿ ಅದಕ್ಕೆ ಹೊಂದಿಕೊಂಡು ಹೋಗುತ್ತೇವೆಯೋ ಆಗ ಬದುಕನ್ನು ಪೂರ್ಣವಾಗಿ ಬದುಕಬಹುದು. ಆದ್ದರಿಂದಲೇ ಹೇಳುವುದು, ನೀವು ನಿಮಗೆ ಖುಷಿ ಕೊಡುವ ವಿಷಯಗಳನ್ನು ಅನುಸರಿಸಿ ಸಂತೋಷ ಪಡಿ. ಜೀವನವೆಂಬುದು ಬಿಡಿಸಬೇಕಾದ ಸಮಸ್ಯೆಯಲ್ಲ, ನಿಮ್ಮನ್ನು ಪ್ರೀತಿಸುವ ಜನರ ಮಧ್ಯೆ ಏನಾದರು ಒಳ್ಳೆಯದನ್ನೇ ಮಾಡುತ್ತಾ ಅದರಿಂದ ಬೇರೆ ಏನನ್ನೂ ನಿರೀಕ್ಷಿಸದೇ ಕಾರ್ಯನಿರತರಾಗಿರುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಎಲ್ಲವನ್ನು ಸಮಾಧಾನವಾಗಿ, ಹಗುರವಾಗಿ ತೆಗೆದುಕೊಳ್ಳಿ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದಿರಿ. ನಿಧಾನವಾಗಿ ಹೆಜ್ಜೆ ಹಾಕಿದರೆ ಬಹುದೂರ ಸಾಗಬಹುದು. ನಿಮ್ಮ ಹೊಟ್ಟೆಯನ್ನು ಪೂರಾ ತುಂಬಬೇಡಿ. ಉದರವನ್ನು ೮೦% ಭಾಗ ಮಾತ್ರ ತುಂಬಬೇಕು, ಹೊಟ್ಟೆಬಿರಿಯುವಷ್ಟು ತಿನ್ನಬಾರದು. ಸಿಹಿ, ಕುರುಕಲು ತಿಂಡಿ ಇವೆಲ್ಲಾ ಆ ಘಳಿಗೆಗೆ ಹಿಗ್ಗು ನೀಡಬಹುದಾದರೂ, ಸೇವಿಸದಿದ್ದರೆನೇ ಭವಿಷ್ಯದಲ್ಲಿ ಸಂತೋಷದಿಂದಿರಬಹುದು.ನಿಮ್ಮ ಗೆಳೆತನಗಳನ್ನು ಪೋಷಿಸಿ. ಸ್ನೇಹಿತರೇ ಉತ್ತಮ ಔಷಧ. ನಮ್ಮ ತಾಪತ್ರಯಗಳನ್ನು ಅವರಲ್ಲಿ ತೋಡಿಕೊಳ್ಳಲು ಒಳ್ಳೆಯ ಮಾತುಕತೆಯ ಜೊತೆಗೆ ಬದುಕಿರಲು ಸ್ನೇಹಿತ ವಲಯ ಇರುವುದು ಅತ್ಯಾವಶ್ಯಕ.
ಈ ಕ್ಷಣದಲ್ಲಿ ಬದುಕಿರಿ. ಕಳೆದುಹೋದ ಕಾಲಕ್ಕಾಗಿ ಮರುಗುವುದು ಮತ್ತು ಬರಲಿರುವ ಭವಿಷ್ಯತ್ ಕಾಲಕ್ಕಾಗಿ ಭಯಪಡುವುದು ಎರಡನ್ನು ನಿಲ್ಲಿಸಿ. ನಗುತ್ತಿರಿ, ಮಂದಹಾಸ ಬೀರುತ್ತಿರಿ. ಹರ್ಷ ಚಿತ್ತದ ಮನೋಭಾವ ಒಂದಿದ್ದರೆ ಅರ್ಧ ಸಮಸ್ಯೆ ಕಡಿಮೆಯಾದಂತೆ. ಆಶಾವಾದಿಗಳಾಗಿರಿ.
(ಕೃಪೆ – ಇಕಿಗಾಯ್ ಪುಸ್ತಕ)