‘ಮಾತು ಬಾರದ , ಸಕಲೈಶ್ವರ್ಯಕ್ಕೂ ಒಡತಿಯಾದ ರಾಜಕುಮಾರಿ. ಅವಳನ್ನ ಅಪಹರಿಸೋ ರಾಕ್ಷಸ. ಹುಡುಕಿ ತಂದವರಿಗೆ ಅರ್ಧರಾಜ್ಯವನ್ನೇ ಕೊಡುತ್ತೇನೆನ್ನುವ ರಾಜ. ಅರ್ಧರಾಜ್ಯ ಬೇಡ, ಅವಳನ್ನು ಹುಡುಕಿತಂದರೆ ಅವಳನ್ನು ನನಗೆ ಮದುವೆ ಮಾಡಿಕೊಡುತ್ತೀರಾ ಎಂದು ಕೇಳುವ ,ಹಿಂದೊಮ್ಮೆ ಪಲ್ಲಕ್ಕಿಯಲ್ಲಿ ಹೋಗುತಿದ್ದ ರಾಜಕುಮಾರಿಯನ್ನು ನೋಡಿ , ಮದುವೆಯಾದರೆ ಇವಳನ್ನೇ ಎಂಬ ಹುಚ್ಚು ಕನಸಕಂಡ ರಾಜ್ಯದ ಬಡಯುವಕ. ಸರಿ, ಆಯಿತು. ಮಗಳು ಬಂದರೆ ಸಾಕು ಉಳಿದೆದೆಲ್ಲ ಆಮೇಲೆ ನೋಡಿಕೊಳ್ಳುವ ಎನ್ನುವ ರಾಣಿ. ರಾಜ ರಾಣಿಯರಿಂದ ಮಾತು ತೆಗೆದುಕೊಂಡು, ಅತಳ ವಿತಳಗಳಲ್ಲಿ ಅಲೆದಾಡಿ ರಾಕ್ಷಸನನ್ನು ಹುಡುಕಿ ಅವನೊಟ್ಟಿಗೆ ಬಡಿದಾಡುವಾಗ , ರಾಕ್ಷಸನ ಜೀವ ಅವನ ದೇಹದಲಿಲ್ಲ. ಅದೆಲ್ಲೋ ದೂರದ ಮರವೊಂದರ ಪೊಟರೆಯ ಗಿಳಿಯಲ್ಲಿದೆ ಎನ್ನುವುದನ್ನ ತಿಳಿದುಕೂಳ್ಳುವ ಯುವಕ. ಏಳು ಸಮುದ್ರಗಳನ್ನ ದಾಟಿ, ಏಳು ಕಾಡುಗಳನ್ನ ದಾಟಿ ಕೊನೆಗೂ ಆ ಮರದ ಬಳಿ ನಿಲ್ಲುತ್ತಾನೆ. ಬೋಳು ಮರದ ಏಳನೇ ಪೊಟರೆಯಲ್ಲಿದ್ದ ಗಿಳಿಯ ಕುತ್ತಿಗೆ ಹಿಚ್ಚಿದ ಕೂಡಲೇ ಅತ್ತ ರಾಕ್ಷಸನ ಪ್ರಾಣಪಕ್ಷಿ ಹಾರುತ್ತದೆ. ರಾಜಕುಮಾರಿ ಬಡಯುವಕನ ಜೊತೆ ರಾಜ್ಯಕ್ಕೆ ಬರುತ್ತಾಳೆ. ಅವನನ್ನೇ ಮದುವೆಯಾಗಿ ನಾಲ್ಕು ಮಕ್ಕಳ ಹೆತ್ತು ಸುಖವಾಗಿರುತ್ತಾಳೆ.’ ಅಜ್ಜಿ ಎಂದ ಕೂಡಲೇ ನನಗೆ ನೆನಪಾಗುವುದೇ ಈತರಹದ ಸಾಸಿರ ಜಾನಪದ ಕಥೆಗಳು ಮತ್ತು ‘ ಎಳೆಗಾರು ಎತ್ತಲ್ಲ , ದಳವಾಯಿ ದೊರೆಯಲ್ಲ, ಮನೆಗೆ ಬಂದಳಿಯ ಮಗನಲ್ಲ. ಮನೆಗೆ ಬಂದಳಿಯ ಮಗನಲ್ಲ, ತವರಿಗೆ ಮಾತಾ ತಂದೊಳು ಮಗಳಲ್ಲ’ ತರಹದ ಜಾನಪದ ಗೀತೆಗಳ ಗುಚ್ಛಗಳು. ನನ್ನಜ್ಜಿ ಅವಳ ಎಲೆಅಡಿಕೆ ಚೀಲದಷ್ಟೇ ನಿಗೂಢ ಮತ್ತು ಅದರೊಳಗಿಂದ ಕೈ ಹಾಕಿದಷ್ಟು ಸಿಗುತ್ತಿದ್ದ ಒಂದು ರೂಪಾಯಿಯ ನಾಣ್ಯಗಳ ಹಾಗೆ ಅಕ್ಷಯ ಪಾತ್ರೆಯೇ. ಅಂದೊಮ್ಮೆ ಕಾಲು ಮುರಿದುಕೊಂಡು , ಮಾವನ ಕೈಯಲ್ಲಿ ಬೈಸಿಕೊಂಡು, ವಿಶ್ರಾಂತಿಗಾಗಿ ಒಂದು ವರುಷಗಳ ಕಾಲ ನಮ್ಮ ಮನೆಯಲ್ಲಿದಾಗಲಂತೂ , ಸ್ವರ್ಗದ ಅನುಭವ. ಆ ಒಂದು ವರ್ಷದ ಪ್ರತಿ ಸಂಜೆ-ರಾತ್ರಿಯನ್ನೂ ಅಜ್ಜಿಯೊಂದಿಗೆ ಕಳೆದ ನೆನಪುಗಳಿಗೆ ಸಮನಾದದ್ದು ಬದುಕಿನಲಿನ್ನೂ ಘಟಿಸಿಲ್ಲ.
ಅಜ್ಜಿ ಅಂದರೆ ಹಾಗೆಯೇ, ಅವಳೆಂದರೆ ಅಚ್ಚರಿ. ಏನು ಗೊತ್ತಿಲ್ಲದಂತಿರುವ ಅಜ್ಜಿಯರಿಗೆ ಎಲ್ಲವೂ ಗೊತ್ತಿರುತ್ತದೆ. ನನ್ನಜ್ಜಿ ಈಗಿಲ್ಲ. ಭೂಮಿ ಬಿಟ್ಟು ಹದಿನಾರು ವರ್ಷಗಳಾಗಿವೆ. ಇಂತಹ ಅಜ್ಜಿಯನ್ನು ಮತ್ತೆ ನೆನಪಿಸಿದ್ದು ಶೋಭಾರಾವ್ ರವರ ಮಲೆನಾಡ ಅಜ್ಜಿ. ಈ ಪುಸ್ತಕ ಕೈಗೆತ್ತಿಕೊಂಡಾಗಿನಿಂದ ಕೆಳಗಿಳಿಸುವವರೆಗು , ಪ್ರತಿಸಾಲುಗಳಲ್ಲೂ ಕಾಡಿದ್ದು ಅಜ್ಜಿಯ ನೆನಪುಗಳೇ. ಆ ಮಟ್ಟಿಗೆ ಶೋಭಾ ಅವರಜ್ಜಿಯ ಮೂಲಕ ನಮ್ಮನ್ನಾವರಿಸಿಕೊಂಡು ಹೋಗುತ್ತಾರೆ. ಕಾಲು ನೋವಿಗೂ, ಶೀತಕ್ಕೂ ಬಿಳಿ ಸೀಮೆಎಣ್ಣೆಯನ್ನು ಬಳಸುವ ಮಲೆನಾಡ ಅಜ್ಜಿ, ಒಬ್ಬಳು ಆಯುರ್ವೇದದ ವೈದ್ಯಳಾಗಿ, ಉದ್ಯಮಿಯಾಗಿ, ಮಾನವತವಾದಿಯಾಗಿ , ಬಿದ್ದಲ್ಲಿ ಸ್ಪೂರ್ತಿಯ ಸೆಲೆಯಾಗಿ, ಎದ್ದಲ್ಲಿ ಎಚ್ಚರಿಕೆಯ ಗಂಟೆಯಾಗಿ, ಓದಿನುದ್ದಕ್ಕೂ ಕಾಡುತ್ತಲೇ ಹೋಗುತ್ತಾಳೆ. ಬಳಸಿರುವ ಭಾಷೆ ಮತ್ತು ಅಜ್ಜಿಯೆನ್ನುವ ಮಮಕಾರ ಪುಸ್ತಕವನ್ನ ಸಲೀಸಾಗಿ ಓದಿಸಿಕೊಂಡು ಹೋಗುತ್ತದೆ. ಪ್ರತೀ ಬಾರಿ ಲೇಖಕಿ ಅವರಜ್ಜಿಯ ನೆನಪಿನ ಬುತ್ತಿ ಬಿಚ್ಚಿದಾಗಲೂ, ಘಮಘಮಿಸುವುದು ಮಾತ್ರ ಓದುಗನ್ನಜ್ಜಿಯ ನೆನಪುಗಳು. ಜಾಸ್ತಿ ಹೇಳುವುದಿಲ್ಲ. ಪುಸ್ತಕವನ್ನು ಓದಿನೋಡಿ. ಖಂಡಿತ ನಿಮ್ಮಜ್ಜಿಯ ನೆನಪಿನ ಮಳೆಯಲ್ಲಿ ಮಿಂದೇಳುತ್ತೀರಿ.
ಉಳಿದಹಾಗೆ, ಎಂದಿನಂತೆ ಶೋಭಾ ರಾವ್ ರವರ ಅಂದದ ಭಾಷೆಯ ಚಂದದ ಪದ ಪುಂಜಗಳ ಪರಿಚಯವಿದೆ. ಓದಿಸಿಕ್ಕೊಳ್ಳುವ ತಾಕತ್ತಿದೆ. ಓದಿ ಕೆಳಗಿಟ್ಟ ಮೇಲೂ ಕಾಡುವ ಭಾವವಿದೆ. ಎಲ್ಲೋ ಒಂದುಕಡೆ ಅನಿಸಿದ್ದು, ಲೇಖಕಿ ಅಜ್ಜಿಯ ಭಾವನಾತ್ಮಕ ಕ್ಷಣಗಳನ್ನ ಕಟ್ಟಿಕೊಡುವಲ್ಲಿ ಕಂಜೂಸುತನ ತೋರಿಸಿದ್ದಾರೆ ಎಂದು. ಯಾರಿಗೆ ಗೊತ್ತು, ಇದು ಸೀಕ್ವೆಲ್ , ಪ್ರೀಕ್ವೆಲ್ ಗಳ ಕಾಲ ‘ಮಲೆನಾಡ ಅಜ್ಜಿ – ೨’ ಗೆ ಅದನ್ನೆಲ್ಲಾ ಮೂಟೆಕಟ್ಟಿ ಬಚ್ಚಿಟ್ಟಿದ್ದರೂ ಇಟ್ಟಿರಬಹುದು. ಅದೇನೇ ಇರಲಿ, ವಾರಾಂತ್ಯದಲ್ಲಿ ಒಂದೊಳ್ಳೆ ಓದಿಗೆ , ಮರೆವಿನಂಗಳದ ನೆನಪಿನ ದೀವಟಿಗೆಯ ಬತ್ತಿ ಹೊಸೆದು , ಭಾವಗಳ ಎಣ್ಣೆಯೊಂದಿಗೆ ಮತ್ತೆ ಅಜ್ಜಿಯ ನೆನಪುಗಳನ್ನು ಝೇಂಕರಿಸಿದ್ದಕ್ಕೆ ಲೇಖಕಿಗೆ ವಂದಿಸುತ್ತಾ, ಮಲೆನಾಡ ಅಜ್ಜಿ ರಾಜ್ಯದ ಪ್ರತಿಯೊಬ್ಬರ ಮನೆ ಮನತಲುಪಲಿ ಎಂದು ಆಶಿಸುತ್ತೇನೆ. ಶುಭವಾಗಲಿ
– ಅರ್ಜುನ್ ದೇವಾಲದಕೆರೆ.